- ರಾಮಲಿಂಗಾರೆಡ್ಡಿ ಅವರಲ್ಲಿ ಯಾವುದೇ ಅಸಮಾಧಾವಿಲ್ಲ, ಸುಳ್ಳು ಸುದ್ದಿ ಬೇಡ
- ‘ಒಂದು ಅಕೌಂಟ್ ಮಾಡಿಸಿ ಎಲ್ಲ ತಾಯಂದಿರಿಗೂ 2000 ಹಣ ಹಾಕುತ್ತೇವೆ’
ನಮ್ಮ ಗ್ಯಾರಂಟಿ ಯೋಜನೆಗಳ ಬಗ್ಗೆ ಟೀಕೆ ಮಾಡಿದ್ರೆ ತಾನೇ ಆ ಯೋಜನೆಗಳು ಪ್ರಚಾರ ಆಗೋದು. ಟೀಕಿಸುವವರ ದುಃಖ, ದುಮ್ಮಾನ ಅರ್ಥವಾಗುತ್ತದೆ. ನಾನು ಬಿಜೆಪಿ ಗೆಳೆಯರಿಗೆ ಕೇಳಲು ಇಷ್ಟಪಡುವೆ; ಮೊದಲು ನಮಗೆ 15 ಲಕ್ಷ ಕೊಡಿ ಸಾಕು ಎಂದು ಡಿಸಿಎಂ ಡಿಕೆ ಶಿವಕುಮಾರ್ ಆಗ್ರಹಿಸಿದರು.
ರಾಮಲಿಂಗಾರೆಡ್ಡಿ ಅವರನ್ನು ಭೇಟಿಯಾದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿ, “15 ಲಕ್ಷ ಪ್ರತಿಯೊಬ್ಬರ ಅಕೌಂಟ್ಗೆ ಮೋದಿ ಹಾಕುತ್ತೇನೆ ಎಂದು ಹೇಳಿದ್ದರಲ್ಲ, ಆ ಮಾತು ಎಲ್ಲಿ ಹೋಯಿತು? ಮೊದಲು ಆ ಬಗ್ಗೆ ಬಿಜೆಪಿಯವರು ಮಾತನಾಡಲಿ. ಮಿಕ್ಕ ಮಾತು ಬೇಡ. ಬರುವ ಪಾರ್ಲಿಮೆಂಟ್ ಚುನಾವಣೆಯೊಳಗೆ ಪ್ರತಿಯೊಬ್ಬರಿಗೆ 15 ಲಕ್ಷ ಹಾಕಲಿ” ಎಂದು ಒತ್ತಾಯಿಸಿದರು.
“ಬಿಜೆಪಿ ಅವರೇ ಹೇಳಿದ್ದರು, ಸಾಲ ಮನ್ನಾ ವಿಚಾರ ಏನಾಯ್ತು? ರೈತರಿಗೆ ಉಚಿತ ವಿದ್ಯುತ ಕೊಡ್ತೀವಿ ಎಂದಿದ್ದರು ಅದೇನಾಯ್ತು? ಮೊದಲು ತಮ್ಮ ಭರವಸೆ ಬಗ್ಗೆ ಮಾತನಾಡಲಿ ಬಿಜೆಪಿ ನಾಯಕರು. ಆಮೇಲೆ ಪ್ರತಿಭಟನೆ, ಆವೇಶದ ಮಾತುಗಳು ಇರಲಿ” ಎಂದರು.
ಈ ಸುದ್ದಿ ಓದಿದ್ದೀರಾ? ಚುನಾವಣೆಯಲ್ಲಿ ಗೆದ್ದು ಮಂತ್ರಿಗಳಾಗಬೇಕಿದ್ದವರು ಸೋಲಿನ ಗಾಯ ಕೆರೆಯುತ್ತಾ ಕೂತಾಗ..
“ಮನೆಯ ಯಜಮಾನತಿಗೆ 2000 ಕೊಡ್ತೀವಿ ಎಂದಿದ್ದೇವೆ. ನಾವು ಇದರಿಂದ ಹಿಂದೆ ಸರಿಯಲ್ಲ. ಒಂದು ಮನೆಯಲ್ಲಿ ಸೊಸೆ ಇದ್ದು, ಅತ್ತೆ ಇದ್ದರೆ ಯಾರು ಯಜಮಾನತಿ? ಒಂದು ವೇಳೆ ನಾವು ಕೊಡುವ ದುಡ್ಡಿಗೆ ಯಾವುದೇ ಗಂಡಸರು ಕೈ ಹಾಕಿದರೆ ಹೇಗೆ? ಅವಿದ್ಯಾವಂತ ಮಹಿಳೆಯರನ್ನು ಯಾಮಾರಿಸುವ ಗಂಡಂದಿರು ಇದ್ದಾರೆ. ಅದಕ್ಕೆ ನೀತಿ ನಿಯಮ ರೂಪಿಸುತ್ತಿದ್ದೇವೆ. ಒಂದು ಅಕೌಂಟ್ ಮಾಡಿಸಿ ಎಲ್ಲ ತಾಯಂದಿರಿಗೂ ಹಣ ಹಾಕುತ್ತೇವೆ” ಎಂದು ತಿಳಿಸಿದರು.
“ಒಂದನೇ ತಾರೀಕೆಗೆ ಕ್ಯಾಬಿನೆಟ್ ಇದೆ. ಎಲ್ಲ ರೀತಿಯಲ್ಲೂ ಸಲಹೆ ಸೂಚನೆ ತರಲು ಹೇಳಿದ್ದೇವೆ. ಯಾರು ಪ್ರತಿಭಟನೆ ಮಾಡ್ತಾರೋ ಮಾಡಲಿ. ಇದು ಪ್ರಜಾಪ್ರಭುತ್ವ” ಎಂದರು.
ರಾಮಲಿಂಗಾರೆಡ್ಡಿ ಅವರ ಮುನಿಸಿಕೊಂಡಿದ್ದು ನಿಜವೇ ಎಂದು ಪ್ರಶ್ನಿಸಿದಾಗ, “ನಾವು ಬೇರೆ ಪಾರ್ಟಿಗೆ ಹೋಗಿದ್ದರೆ ನಾವು ಏನೇನೋ ಆಗ್ತಿದ್ವಿ. ಸ್ವಾಭಾವಿಕವಾಗಿ ಅಸಮಾಧಾನ ಇರುತ್ತದೆ. ಈಗ ಯಾವ ಗೊಂದಲವು ಇಲ್ಲ. ರಾಮಲಿಗಾರೆಡ್ಡಿ ಈಗ ಎಲ್ಲವನ್ನು ಒಪ್ಪಿಕೊಂಡಿದ್ದಾರೆ” ಎಂದರು.