ನಗರದಲ್ಲಿ ಶುಕ್ರವಾರ ಸಿದ್ದಾರ್ಥ ಬುದ್ಧ ವಿಹಾರದಲ್ಲಿ 2570ನೇ ವೈಶಾಖ ಬುದ್ಧ ಪೂರ್ಣಿಮಾ ದಿನಾಚರಣೆಯನ್ನು ಪೂಜ್ಯ ಭಂತೇಜಿಯವರಿಂದ ಬುದ್ಧ ವಂದನೆ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು. ವಿವಿಧ ಭಾಗಗಳಿಂದ ಆಗಮಿಸಿದ ಭಕ್ತರು ಮತ್ತು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿ ಬುದ್ಧನ ತತ್ವಗಳನ್ನು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸಕರಾಗಿ ಮಾತನಾಡಿದ ಪ್ರೋ. ಪುರುಷೋತ್ತಮ ಬಿಳಿಮಲೆ ಅವರು, ಬುದ್ಧನ ತತ್ವಗಳನ್ನು ಕೇವಲ ಪೂಜೆಗೆ ಸೀಮಿತಗೊಳಿಸದೇ ಜೀವನದಲ್ಲಿ ಅಳವಡಿಸಿಕೊಳ್ಳುವುದು ಅತ್ಯಗತ್ಯ ಎಂದು ಹೇಳಿದರು. ಕ್ರಿ.ಪೂ. 5–6ನೇ ಶತಮಾನದಲ್ಲಿ ಭಾರತೀಯ ಚಿಂತನೆಗಳಲ್ಲಿ ಲೌಕಿಕ ಹಾಗೂ ಆಲೌಕಿಕ ಧೋರಣೆಗಳು ರೂಪುಗೊಳ್ಳುತ್ತಿದ್ದ ಸಂದರ್ಭದಲ್ಲಿ ಬುದ್ಧನು ವೈಜ್ಞಾನಿಕ ಹಾಗೂ ಜ್ಞಾನಾಧಾರಿತ ಮಾರ್ಗವನ್ನು ತೋರಿಸಿ ಸಮಾಜದಲ್ಲಿ ಹೊಸ ದಿಕ್ಕು ನೀಡಿದನು ಎಂದು ವಿವರಿಸಿದರು.

ಭಾರತದ ಜ್ಞಾನ ಪರಂಪರೆಯನ್ನು ಲೌಕಿಕ ದೃಷ್ಟಿಯಲ್ಲಿ ಮುಂದುವರಿಸಿದ ಬುದ್ಧನ ಚಿಂತನೆಗಳನ್ನು ಸಂವಿಧಾನದ ಮೂಲಕ ವ್ಯವಸ್ಥಿತವಾಗಿ ಸಮಾಜಕ್ಕೆ ತಂದುಕೊಟ್ಟವರು ಬಾಬಾ ಸಾಹೇಬ್ ಅಂಬೇಡ್ಕರ್ ಎಂದು ಹೇಳಿದರು. ಸಮಾಜದ ಭವಿಷ್ಯ ನಿರ್ಮಾಣಕ್ಕಾಗಿ ಬುದ್ಧನ ಮಾನವೀಯ ಮೌಲ್ಯಗಳು, ವಿವೇಕ ಮತ್ತು ಸಮಾನತೆಯ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.
ಭಾರತವು ಕರುಣೆಗೆ ಹೆಸರುವಾಸಿಯಾದ ದೇಶವಾಗಿದ್ದು, ಬುದ್ಧನ ಕಾಲದಿಂದಲೇ ಕರುಣೆಯ ತತ್ವ ಸಮಾಜದಲ್ಲಿ ಬಲವತ್ತಾಗಿದೆ. ಬೌದ್ಧ ಧರ್ಮವು ಮಾನವೀಯತೆ, ಶಾಂತಿ ಮತ್ತು ಸಹಾನುಭೂತಿಯನ್ನು ಸಾರುವ ಮಹತ್ವದ ಮಾರ್ಗವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು. ದೇಶದ ಜನರಿಗೆ ಜ್ಞಾನ ಪರಂಪರೆಯ ಮಹತ್ವವನ್ನು ಹೆಚ್ಚು ಹೆಚ್ಚು ತಿಳಿಸುವ ಕಾರ್ಯಗಳನ್ನು ಕೈಗೊಳ್ಳಬೇಕಾಗಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮಲ್ಲಿಕಾರ್ಜುನ ಖರ್ಗೆ ಅವರು ಮಾತನಾಡಿ, ಇಂದಿನ ಸಮಾಜದಲ್ಲಿ ಬುದ್ಧನ ತತ್ವಗಳು ಅತ್ಯಂತ ಅಗತ್ಯವಾಗಿವೆ ಎಂದು ಹೇಳಿದರು. ಪ್ರಜ್ಞೆ ಮತ್ತು ಕರುಣೆಯ ಆಧಾರದ ಮೇಲೆ ಬುದ್ಧನು ಜಗತ್ತಿಗೆ ನೀಡಿದ ಸಂದೇಶವು ವಿಶ್ವಶಾಂತಿಗೆ ದಾರಿ ತೋರಿಸುತ್ತದೆ ಎಂದರು.
ಬುದ್ಧ, ಬಸವ ಹಾಗೂ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಚಿಂತನೆಗಳನ್ನು ಸಮಾಜಕ್ಕೆ ತಲುಪಿಸುವುದು ಇಂದಿನ ಅಗತ್ಯವಾಗಿದೆ. ಮನುಷ್ಯನ ಏಳಿಗೆಗಾಗಿ ಧರ್ಮ ಹುಟ್ಟಿದೆ ಹೊರತು ಮನುಷ್ಯ ಧರ್ಮಕ್ಕಾಗಿ ಹುಟ್ಟಿಲ್ಲ ಎಂಬುದನ್ನು ಅರಿತುಕೊಳ್ಳಬೇಕು ಎಂದು ಹೇಳಿದರು.

ಭಾರತದ ಏಕತೆಯನ್ನು ಯಾವುದೇ ವೇದ-ಪುರಾಣಗಳು ಸಾಧಿಸಿಲ್ಲ, ದೇಶದ ಸಂವಿಧಾನವೇ ನಮ್ಮನ್ನು ಒಂದಾಗಿಸಿದೆ. ಮತದಾನದ ಹಕ್ಕು ಸೇರಿದಂತೆ ಅನೇಕ ಮೂಲಭೂತ ಹಕ್ಕುಗಳನ್ನು ಅಂಬೇಡ್ಕರ್ ಅವರ ಸಂವಿಧಾನ ನೀಡಿದೆ ಎಂದು ಅವರು ಅಭಿಪ್ರಾಯಪಟ್ಟರು. ಬುದ್ಧನ ದಮ್ಮವು ಶಾಂತಿ ಮತ್ತು ಸತ್ಯದ ಮಾರ್ಗವನ್ನು ಜಗತ್ತಿಗೆ ತೋರಿಸಿದ್ದು, ಅಶೋಕ ಚಕ್ರದ ಮೂಲಕ ಭಾರತದ ತ್ರಿವರ್ಣ ಧ್ವಜದಲ್ಲಿಯೂ ಆ ತತ್ವ ಪ್ರತಿಬಿಂಬಿತವಾಗಿದೆ ಎಂದು ಹೇಳಿದರು.
ಬುದ್ಧ ವಿಹಾರಗಳ ನಿರ್ಮಾಣದ ಉದ್ದೇಶವೇ ಜನರಿಗೆ ಸತ್ಯದ ಮಾರ್ಗವನ್ನು ತಿಳಿಸುವುದು ಎಂದು ಅವರು ಹೇಳಿದರು. ಸಮಾಜದಲ್ಲಿ ಸಮಾನತೆ ಮತ್ತು ಶಾಂತಿ ಸ್ಥಾಪಿಸಲು ಬುದ್ಧನ ಮಾರ್ಗವನ್ನು ಅನುಸರಿಸುವುದು ಅಗತ್ಯ ಎಂದು ಅಭಿಪ್ರಾಯಪಟ್ಟರು.
ಇದನ್ನು ಓದಿದ್ದೀರಾ? ಯಾದಗಿರಿ | ಬಿಸಿಲಿನ ತಾಪಕ್ಕೆ ಕುಸಿದು ಬಿದ್ದು ಕಾರ್ಮಿಕ ಸಾವು
ಕಾರ್ಯಕ್ರಮವನ್ನು ಡಾ. ಎಂ.ಬಿ. ಒಟ್ಟಿ ನಿರೂಪಿಸಿದರು. ಪ್ರೋ. ಅಪ್ಪುಗಿರಿ ಸೋಮಶೇಖರ್ ಸ್ವಾಗತಿಸಿದರು. ಚಂದ್ರಶೇಖರ ದೊಡ್ಡಮನಿ ವಂದಿಸಿದರು.
ಈ ಸಂದರ್ಭದಲ್ಲಿ ಶಾಸಕ ಬಿ.ಆರ್. ಪಾಟೀಲ್, ಎಂ.ವೈ. ಪಾಟೀಲ, ಅಲ್ಲಮಪ್ರಭು ಪಾಟೀಲ್, ಸಚಿವ ಶರಣಪ್ರಕಾಶ ಪಾಟೀಲ್, ತಿಪ್ಪಣ್ಣಪ್ಪ ಕಮಕನೂರ್, ಸುರೇಶ್ ಕನೆಕರ್, ಲಕ್ಷ್ಮೀ ಕಾಂತ ಹುಬಳಿ, ಸೇರಿದಂತೆ ಅನೇಕ ಗಣ್ಯರು ಹಾಗೂ ದಮ್ಮ ಉಪಸಾಕ, ಉಪಾಸಕಿಯರು ಪಾಲ್ಗೊಂಡಿದರು.





