ಕೊಪ್ಪಳ ಜಿಲ್ಲೆಯಾದ್ಯಂತ ವಾಂತಿ-ಭೇದಿ ಪ್ರಕರಣಗಳು ಹೆಚ್ಚಾಗಿವೆ. ಕಳೆದ ಒಂದು ವಾರದಿಂದ ಕುಕನೂರು ತಾಲೂಕಿನ ಗಾವರಾಳ ಗ್ರಾಮದಲ್ಲಿ ವಾಂತಿ-ಭೇದಿ ಪ್ರಕರಣಗಳು ಯಥೇಚ್ಛವಾಗಿ ಕಾಣಿಸಿಕೊಂಡಿದ್ದು, ಈವರೆಗೆ ಒಟ್ಟು 19 ವಾಂತಿ ಭೇದಿ ಪ್ರಕರಣಗಳು ದಾಖಲಾಗಿವೆ.
ಆರೋಗ್ಯ ಇಲಾಖೆಯ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಕುಡಿಯುವ ನೀರಿನ ಪರೀಕ್ಷೆ ನಡೆಸಿ ಗ್ರಾಮದಲ್ಲಿ ತಾತ್ಕಾಲಿಕ ಆರೋಗ್ಯ ಕೇಂದ್ರವನ್ನು ತೆರೆಯುವಂತೆ ಸೂಚಿಸಿದ್ದು, ದಿನದ 24 ಗಂಟೆಯೂ ರೋಗಿಗಳಿಗೆ ಚಿಕಿತ್ಸೆ ನೀಡಬೇಕೆಂದು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನುರಿತ ವೈದ್ಯರು, ಸಿಬ್ಬಂದಿಗಳು ಹಗಲು ರಾತ್ರಿ ಗ್ರಾಮಗಳಲ್ಲಿ ಬೀಡುಬಿಟ್ಟು ರೋಗಿಗಳಿಗೆ ಬೇಕಾದ ಚಿಕಿತ್ಸೆಯನ್ನು ನೀಡುತ್ತಿದ್ದಾರೆ.
ಸಮುದಾಯ ಆರೋಗ್ಯ ಕೇಂದ್ರದ ವೈದ್ಯ ಪ್ರಕಾಶ್ ಮಾತನಾಡಿ, “ಕಲುಷಿತ ನೀರು, ಆಹಾರ ಸೇವನೆಯಿಂದ ವಾಂತಿಭೇದಿ ಪ್ರಕರಣಗಳು ದಾಖಲಾಗಿವೆ. ಹಾಗಾಗಿ ರೋಗಿಗಳಿಗೆ ಬೇಕಾಗಿರುವ ಚಿಕಿತ್ಸೆಯನ್ನು ಗ್ರಾಮದಲ್ಲೇ ನೀಡುತ್ತಿದ್ದು, ಆರೋಗ್ಯ ಇಲಾಖೆ ಗಾವರಾಳ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ತೆರೆದಿರುವ ತಾತ್ಕಾಲಿಕ ಆರೋಗ್ಯ ಕೇಂದ್ರಕ್ಕೆ ಬಂದು ರೋಗಿಗಳು ತಪಾಸಣೆ ಮಾಡಿಸಿಕೊಳ್ಳಬೇಕು” ಎಂದು ಹೇಳಿದರು.
“ರೋಗಿಗಳಿಗೆ ಬೇಕಾದ ಎಲ್ಲ ವ್ಯವಸ್ಥೆಯನ್ನು ಇಲಾಖೆಯಿಂದ ಮಾಡಲಾಗಿದ್ದು, ಆ್ಯಂಬುಲೆನ್ಸ್ ವ್ಯವಸ್ಥೆಯನ್ನೂ ಮಾಡಲಾಗಿದೆ. ಗ್ರಾಮಸ್ಥರು ಪರಿಸರದ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಕಾಯಿಸಿದ ನೀರನ್ನು ಕುಡಿಯಬೇಕು, ಹಣ್ಣು ಹಂಪಲುಗಳನ್ನು ತಿನ್ನಬೇಕು, ತಂಗಳು ಆಹಾರ ತಿನ್ನುವುದನ್ನು ನಿಲ್ಲಿಸಬೇಕು” ಎಂದು ಸಲಹೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಕೊಪ್ಪಳ | ಕುಲುಷಿತ ನೀರು ಕುಡಿದು ವೃದ್ಧೆ ಸಾವು
ಸ್ಥಳಕ್ಕೆ ಡಿಎಚ್ಒ ಭೇಟಿ
ಗಾವರಾಳ ಗ್ರಾಮಕ್ಕೆ ಡಿಎಚ್ಒ ಡಾ. ಅಲಕಾನಂದ ಮಳಗಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ರೋಗಿಗಳಿಗೆ ಬೇಕಾದಂತ ಚಿಕಿತ್ಸೆ ನೀಡುವುದರ ಜೊತೆಗೆ ಅವರಿಗೆ ಬೇಕಾದಂತ ಸಲಹೆ ಸೂಚನೆಗಳನ್ನು ನೀಡಿ ಆರೋಗ್ಯದ ಬಗ್ಗೆ ಗಮನ ಹರಿಸಲು ಸುತ್ತ ಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವಂತೆ ಸಲಹೆ ನೀಡಿದರು.
“ಯಾರಿಗಾದರೂ ವಾಂತಿಭೇದಿ ಕಾಣಿಸಿಕೊಂಡರೆ ಕೂಡಲೇ ಅವರನ್ನು ತಾತ್ಕಾಲಿಕ ಆರೋಗ್ಯ ಕೇಂದ್ರಕ್ಕೆ ಕರೆತರಬೇಕು. ತ್ವರಿತ ಚಿಕಿತ್ಸೆ ನೀಡಬೇಕು. ರೋಗದ ತೀವ್ರತೆ ಹೆಚ್ಚಾದಾಗ ಕೊಪ್ಪಳಕ್ಕೆ ಕಳುಹಿಸಿ” ಎಂದು ತಿಳಿಸಿದರು.