- ಸರ್ಕಾರಿ ಶಾಲೆಯಲ್ಲಿ ವಿಶ್ವ ರಂಗಭೂಮಿ ದಿನದ ಆಚರಣೆ
- ಸಂತಸ ಮತ್ತು ಸಡಗರದಿಂದ ಪಾಲ್ಗೊಂಡ ಶಾಲಾ ವಿದ್ಯಾರ್ಥಿಗಳು
ಯುವ ಪೀಳಿಗೆಯು ರಂಗಭೂಮಿ ಪ್ರವೇಶಿಸಬೇಕು. ಆ ಮೂಲಕ ಸಮೃದ್ಧ ಸಮಾಜ ಕಟ್ಟುವಂತಾಗಬೇಕು. ಯುವ ಸಮುದಾಯದ ಮುಂದಾಳತ್ವದಲ್ಲಿ ಈ ನಾಡನ್ನ ಕಟ್ಟಬೇಕಾದ ಅವಶ್ಯಕತೆ ಇದೆ” ಎಂದು ರಂಗ ಶಿಕ್ಷಕ ಗುರುರಾಜ್ ಸಲಹೆ ನೀಡಿದರು.
ವಿಶ್ವ ರಂಗಭೂಮಿ ದಿನಾಚರಣೆ ಅಂಗವಾಗಿ ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಜಹಗೀರ ಗುಡದೂರಿನ ಸರ್ಕಾರಿ ಪ್ರೌಢಶಾಲೆಯಲ್ಲಿ ‘ಪದ್ಯ ರಂಗ ಪ್ರಸ್ತುತಿ’ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ರಂಗ ಶಿಕ್ಷಕ ಗುರುರಾಜ್ ಮಾತನಾಡಿದರು.
“ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆ ಹಾಗೂ ರಂಗಭೂಮಿಯ ಒಡನಾಟದಿಂದ ಜಗತ್ತಿಗೆ ಹೊಸ ಅರ್ಥ ನೀಡಬೇಕು. ವಿದ್ಯಾರ್ಥಿಗಳು ರಂಗ ಪ್ರವೇಶಿಕೆ ಮಾಡುವುದರಿಂದ ಕಲಿಕೆಯಲ್ಲಿ ಹಿಂದುಳಿದ ಮಕ್ಕಳು ಶೈಕ್ಷಣಿಕವಾಗಿ ತಮ್ಮನ್ನು ತಾವು ಕಟ್ಟಿಕೊಳ್ಳುವ ಹೊಸ ಭರವಸೆಗೆ ಸಿದ್ದರಾಗುವಂತಾಗುತ್ತದೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಶಾಲೆಯ ವಿದ್ಯಾರ್ಥಿಗಳು ಸಂಭ್ರಮ ಮತ್ತು ಸಡಗರದಿಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪದ್ಯಗಳ ವಾಚನ ಹಾಗೂ ಗಾಯನ ಮಾಡಿದರು. ಕಾರ್ಯಕ್ರಮದಲ್ಲಿ ‘ಈಜಿಪ್ಟ್ ರಂಗಕರ್ಮಿ ಸಮಿಹಾ ಆಯೌಬ್’ ನೀಡಿದ ರಂಗ ಸಂದೇಶವನ್ನು ಕನ್ನಡದಲ್ಲಿ ಶಿಕ್ಷಕಿ ಶ್ರೀಮತಿ ತನುಜಾ ಪೊಲೀಸ್ ವಾಚನ ಮಾಡಿದರು.
10ನೇ ತರಗತಿ ವಿದ್ಯಾರ್ಥಿಗಳು ತಮ್ಮ ಪದ್ಯ ರಂಗ ಪ್ರಸ್ತುತಿ ಕಾರ್ಯಕ್ರಮದಲ್ಲಿ ಕೌರವೇಂದ್ರನ ಕೊಂದೆ ನೀನು, ಹಲಗಲಿ ಬೇಡರು, ಹಸುರು, ಹಕ್ಕಿಹಾರುತಿದೆ ನೋಡಿದಿರಾ, ಸಂಕಲ್ಪ ಗೀತೆ ಹಾಗೂ ವೀರಲವ ಪದ್ಯಗಳನ್ನು ಪ್ರಸ್ತುತಿ ಪಡಿಸಿದರು.
ಈ ಸುದ್ದಿ ಓದಿದ್ದೀರಾ? : ಹಾಸನ | ಕುರಾನ್ ಪಠಣ ವಿವಾದದಿಂದ ರಥೋತ್ಸವಕ್ಕೆ ಅಡ್ಡಿಯಾಗದು; ವಿದ್ಯುಲ್ಲತಾ ಸ್ಪಷ್ಟನೆ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮುಖ್ಯೋಪಾಧ್ಯಾ ಸತ್ಯಪ್ಪ ಯಲಬುರ್ಗಿ ಮಾತನಾಡಿ, “ನಮ್ಮ ಶಾಲೆಯಲ್ಲಿ ವಿಶ್ವ ರಂಗಭೂಮಿ ದಿನಾಚರಣೆಯನ್ನು ನಿರಂತರವಾಗಿ ಆಯೋಜಿಸುತ್ತಾ ಬಂದಿದ್ದೇವೆ. ರಂಗ ಶಿಕ್ಷಕರ ಇರುವಿಕೆಯಿಂದ ಮಕ್ಕಳಲ್ಲಿ ರಂಗ ಭಯ ದೂರಾಗಿದೆ” ಎಂದು ಅಭಿಪ್ರಾಯ ಪಟ್ಟರು.
“ಬಹುತೇಕ ವಿದ್ಯಾರ್ಥಿಗಳು ಆಸಕ್ತಿ, ಕೌಶಲ್ಯದಿಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅನೇಕ ಪ್ರಯೋಗಗಳನ್ನು ಮಾಡಿದ್ದಾರೆ. ರಂಗಭೂಮಿಯ ಚಟುವಟಿಕೆಗಳಲ್ಲಿ ಮಕ್ಕಳು ಭಾಗವಹಿಸುವುದರಿಂದ ಮಕ್ಕಳು ನಿರಂತರವಾಗಿ ಕಲಿಕೆಯಲ್ಲಿ ತೊಡಗಿಕೊಳ್ಳಲು ಸಾಧ್ಯವಾಗುತ್ತದೆ” ಎಂದು ತಿಳಿಸಿದರು.
ತಮ್ಮ ಕಲೆ ಪ್ರದರ್ಶಿಸಿದ ಎಲ್ಲ ಮಕ್ಕಳಿಗೂ ಬಹುಮಾನ ವಿತರಿಸಿ, ಸ್ಥಳೀಯ ಅತಿಥಿ ಶಿಕ್ಷಕರಿಗೆ ಶಾಲೆ ವತಿಯಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷ ಭೀಮರಾವ್ ಸಾಳಂಕಿ, ಶಿವಪ್ಪ ಇಲಾಳ, ಬಸಪ್ಪ ಹಿರೇಮನಿ, ಶರಣಪ್ಪ ರಾಂಪುರ್, ಸುಮಿತ್ರ ಭಂಡಾರಿ, ರಮೇಶ್ ಚವಾನ್, ಜಗದೀಶ್ ಬಾಸಿಂಗದ, ಅತಿಥಿ ಶಿಕ್ಷಕ ಶರಣಪ್ಪ ಗೋಡೆಕರ್, ಮಹಬೂಬ್ ಸಾಬ್ ಘೋರಿ, ರವಿಕುಮಾರ ರಾಜೂರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Good decision sir super 👌👌👌
Very good decision sir 👌👌👌👌