- ಪ್ರಮೋದ್ ಮುತಾಲಿಕ್ ಒಬ್ಬ ಡೀಲ್ ಮಾಸ್ಟರ್: ಸುನಿಲ್ ಕುಮಾರ್
- ಟೈಗರ್ ಗ್ಯಾಂಗ್ ಹೆಸರಿನಲ್ಲಿ ಎಷ್ಟು ಹಿಂದೂಗಳ ಹತ್ಯೆ ಮಾಡಿಸಿದ್ದೀರಿ
ಕಾರ್ಕಳ ಕ್ಷೇತ್ರದ ಬಿಜೆಪಿ ಶಾಸಕ ಸುನಿಲ್ ಕುಮಾರ್ ವಿರುದ್ಧ ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ದೂರು ದಾಖಲಿಸಿದ್ದಾರೆ.
ಕಾರ್ಕಳ ನಗರದ ಠಾಣೆಗೆ ಬೆಂಬಲಿಗರೊಂದಿಗೆ ತೆರಳಿದ ಪ್ರಮೋದ್ ಮುತಾಲಿಕ್, ಶಾಸಕರ ವಿರುದ್ಧ ಮಾನಹಾನಿ ಕೇಸ್ ದಾಖಲಿಸಿದ್ದಾರೆ. ಬಿಜೆಪಿ ವಿಜಯೋತ್ಸವ ಸಭೆಯಲ್ಲಿ ಮುತಾಲಿಕ್ ವಿರುದ್ಧ ಸುನಿಲ್ ಕುಮಾರ್ ವಾಗ್ದಾಳಿ ನಡೆಸಿದ್ದರು. “ಮುತಾಲಿಕ್ ಒಬ್ಬ ಡೀಲ್ ಮಾಸ್ಟರ್” ಎಂದು ನೇರ ಆರೋಪ ಮಾಡಿದ್ದರು.
ಈ ಹಿನ್ನೆಲೆ ಪ್ರಮೋದ್ ಮುತಾಲಿಕ್ ಸೋಮವಾರ ದೂರು ದಾಖಲಿಸಿದ್ದಾರೆ. ಇತ್ತೀಚೆಗೆ ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಸುನಿಲ್ ಕುಮಾರ್ ಮತ್ತು ಪ್ರಮೋದ್ ಮುತಾಲಿಕ್ ಮುಖಾಮುಖಿಯಾಗಿದ್ದರು. ಚುನಾವಣೆಯಲ್ಲಿ ಪ್ರಮೋದ್ ಮುತಾಲಿಕ್ ಕೇವಲ ಸುಮಾರು 4 ಸಾವಿರ ಮತಗಳನ್ನು ಪಡೆದುಕೊಂಡಿದ್ದರು.
ಸುನಿಲ್ ಕುಮಾರ ಏನು ಹೇಳಿದ್ದರು?
“ನೈಜ ಹಿಂದುತ್ವದ ಹೆಸರಲ್ಲಿ ಡೀಲ್ ಮಾಸ್ಟರ್ ಬಂದ್ರು, ಮೊದಲ ಬಾರಿಗೆ ಪ್ರಮೋದ್ ಮುತಾಲಿಕ್ ಹೆಸರು ಬಳಸುತ್ತಿದ್ದೇನೆ. ಯಾಕೆ ಇಲ್ಲಿಗೆ ಬಂದ್ರಿ ನೀವು? ಮುಂದಿನ ಲೋಕಸಭೆಗೆ ಎಲ್ಲಿಗೆ ಡೀಲ್ ಮಾಡಲು ಹೊರಟಿದ್ದೀರಾ? ಉತ್ತರ ಕರ್ನಾಟಕದಲ್ಲಿ ಟೈಗರ್ ಗ್ಯಾಂಗ್ ಹೆಸರಿನಲ್ಲಿ ಎಷ್ಟು ಹಿಂದೂಗಳ ಹತ್ಯೆ ಮಾಡಿಸಿದ್ದೀರಿ” ಎಂದು ಸುನಿಲ್ ಕುಮಾರ್ ಪ್ರಶ್ನೆ ಮಾಡಿದ್ದರು.
ಈ ಸುದ್ದಿ ಓದಿದ್ದೀರಾ? ಯು ಟಿ ಖಾದರ್ ವಿಧಾನಸಭಾ ನೂತನ ಸ್ವೀಕರ್; ಮಂಗಳವಾರ ನಾಮಪತ್ರ ಸಲ್ಲಿಕೆ
“ನಾನು ಹತ್ತು ಬಾರಿ ಹೇಳುತ್ತಿದ್ದೇನೆ ಪ್ರಮೋದ್ ಮುತಾಲಿಕ್ ಒಬ್ಬ ಡೀಲ್ ಮಾಸ್ಟರ್ ಎಂದು ಹತ್ತು ಬಾರಿ ಹೇಳಲು ಸಿದ್ಧ. ಹಣ ಸಿಗುತ್ತೆ ಅಂದ್ರೆ ಏನು ಬೇಕಾದರೂ ಮಾಡಬಲ್ಲರು. ಅಭಿವೃದ್ಧಿಯನ್ನು ಅಪಹಾಸ್ಯ, ಅವಮಾನ ಮಾಡಿದ್ರು. ಪರಶುರಾಮ ಕ್ಷೇತ್ರದ ಅಣೆಕಟ್ಟು ಜಾಗದಲ್ಲಿ ನೀರಿಲ್ಲ ಎಂದು ಮುತಾಲಿಕ್ ಹಾಗೂ ಬೆಂಬಲಿಗರು ಕ್ರಿಕೆಟ್ ಆಡಿದ್ರು, ಅಣೆಕಟ್ಟು ಮೇಲಿಂದ ಹಾರಿ ಎತ್ತರವೂ ಗೊತ್ತಾಗತ್ತೆ” ಎಂದು ವ್ಯಂತ್ಯವಾಡಿದ್ದರು.