ಭಾರತೀಯ ವೈದ್ಯಕೀಯ ಸಂಘದ ಹಿರಿಯ ಸದಸ್ಯ ಡಾ ಜಯಪ್ರಕಾಶ ಪಾಟಿಲ್ ಬೆಟ್ಟದೂರು ಇವರ ಮೇಲೆ ಗುಂಡಿನ ದಾಳಿ ನಡೆಸಿರುವ ಘಟನೆಯನ್ನು ಖಂಡಿಸಿ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಿ ಭಯಮುಕ್ತ ವ್ಯವಸ್ಥೆ ರೂಪಿಸಬೇಕು ಎಂದು ಐಎಂಎ ಸಂಘದ ಕಾರ್ಯಕರ್ತರು ಆಗ್ರಹಿಸಿದರು.
ವೈದ್ಯರು ಪ್ರತಿಭಟನೆ ನಡೆಸಿದ್ದು, ದುಷ್ಕರ್ಮಿಗಳನ್ನು ಬಂಧಿಸುವಂತೆ ರಾಯಚೂರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
“ಗುರುವಾರ ಮಧ್ಯಾಹ್ನ ಮಾನ್ವಿಗೆ ತೆರಳುತ್ತಿದ್ದಾಗ ಬೈಕ್ ನಲ್ಲಿ ಬಂದಿದ್ದ ಇಬ್ಬರು ಅನಾಮಿಕರು ಗುಂಡಿನ ದಾಳಿ ನಡೆಸಿದ್ದು, ಜೀವಾಪಾಯದಿಂದ ಪಾರಾಗಿದ್ದಾರೆ. ಘಟನೆಯಿಂದ ರಾಜ್ಯಾದ್ಯಂತ ವೈದ್ಯರು ಆಘಾತಕ್ಕೆ ಒಳಗಾಗಿದ್ದಾರೆ” ಎಂದರು.
“ಕಳೆದ ಮೂರು ತಿಂಗಳ ಹಿಂದೆಯೇ ಡಾ.ಜಯಪ್ರಕಾಶ ಪಾಟೀಲ್ರಿಗೆ ಬೆದರಿಕೆ ಕರೆ ಬಂದಿದ್ದು, ನೇತಾಜಿನಗರ ಠಾಣೆಯಲ್ಲಿ ಪ್ರಕರಣವನ್ನೂ ದಾಖಲಿಸಿದ್ದಾರೆ. ಘಟನೆಯಿಂದ ನಗರದ ಜನತೆ ಅದರಲ್ಲಿಯೂ ವೈದ್ಯರು ಭಯದ ಭೀತಿಗೆ ಒಳಗಾಗಿದ್ದಾರೆ. ಕೂಡಲೇ ಸಂಬಂಧಿಸಿದ ಆರೋಪಿಗಳನ್ನು ಬಂಧಿಸಿ ವೈದ್ಯರ ಕುಟುಂಬಕ್ಕೆ ರಕ್ಷಣೆ ನೀಡಬೇಕು. ಜಿಲ್ಲಾಡಳಿತ ಕೂಡಲೇ ಕ್ರಮಕ್ಕೆ ಮುಂದಾಗಬೇಕು. ಇಲ್ಲದಿದ್ದಲ್ಲಿ ವೈದ್ಯಕೀಯ ಸೇವೆ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಬೇಕಾಗುತ್ತದೆ” ಎಂದು ಎಚ್ಚರಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಸೂಕ್ತ ಸೌಲಭ್ಯ, ಗೌರವಧನ ಒದಗಿಸಲು ಬೆಳೆ ಸಮೀಕ್ಷೆದಾರರ ಒಕ್ಕೂಟ ಒತ್ತಾಯ
ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಡಾ.ಪ್ರಭುರಾಜ ಗದ್ದಿಕೇರಿ, ಉಪಾಧ್ಯಕ್ಷ ಡಾ.ಅನಿರುದ್ದ ಕುಲಕರ್ಣಿ, ಕಾರ್ಯದರ್ಶಿ ಹರ್ಷ ಪಾಟೀಲ್, ಡಾ ರಾಮಪ್ಪ, ಡಾ ವಿ ಎ ಮಾಲಿಪಾಟೀಲ್, ಡಾ.ನಾರಾಯಣ, ಡಾ.ನಾಗರಾಜ, ಡಾ.ಸುರೇಶ ಸಗರದ, ಡಾ.ಅಮರೇಶ ಪಾಟೀಲ್, ಡಾ. ಮನೋಹರ ಪತ್ತಾರ ಸೇರಿದಂತೆ ಮಹಿಳಾ ವೈದ್ಯರು ಸೇರಿದಂತೆ ಅನೇಕ ವೈದ್ಯರು ಇದ್ದರು.