ಉತ್ತರ ಕನ್ನಡ: ಪಶ್ಚಿಮ ಘಟ್ಟದ ಮಡಿಲಿನಲ್ಲಿರುವ, ಒಂದು ಕಾಲದಲ್ಲಿ ಅತೀ ಹೆಚ್ಚು ಮಳೆ ಸುರಿಯುವ ಪ್ರದೇಶವೆಂದು ಖ್ಯಾತಿ ಪಡೆದಿದ್ದ ಕ್ಯಾಸಲ್ ರಾಕ್ ಇದೀಗ ಮಳೆಯ ಅಭಾವದಿಂದ ಕಂಗೆಟ್ಟಿದೆ. ಭೋರ್ಗರೆವ ಮಳೆಗೆ ಹೆಸರಾಗಿದ್ದ ಈ ಪ್ರದೇಶದಲ್ಲಿ ಬದಲಾದ ಹವಾಮಾನ ಮತ್ತು ಪರಿಸರ ಅಸಮತೋಲನದಿಂದ ಮಳೆಗಾಲದ ಲಕ್ಷಣಗಳೇ ಬದಲಾಗಿವೆ.
ಹಿಂದೆ ಇಲ್ಲಿ ವರ್ಷಕ್ಕೆ ಸುಮಾರು 6,000 ದಿಂದ 7,000 ಮಿ.ಮೀ. ವರೆಗೆ ಮಳೆ ದಾಖಲಾಗುತ್ತಿತ್ತು. ದಶಕದ ಹಿಂದೆ, ಅಂದರೆ 2011ರಲ್ಲಿ 7,000 ಮಿ.ಮೀ. ಗೂ ಅಧಿಕ ಮಳೆ ಸುರಿದಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಮಳೆಯ ಪ್ರಮಾಣ ಗಣನೀಯವಾಗಿ ಕುಸಿದಿದೆ.
ಅಷ್ಟೇ ಅಲ್ಲದೆ, ಮಳೆ ಬೀಳುವ ದಿನಗಳ ಸಂಖ್ಯೆಯೂ ಕಡಿಮೆಯಾಗಿದೆ. ಮಳೆಗಾಲದ ಆರಂಭದಿಂದ ಅಂತ್ಯದವರೆಗೆ ನಿರಂತರವಾಗಿ ಸುರಿಯುತ್ತಿದ್ದ ಮಳೆಯ ಬದಲು, ಈಗ ಕೆಲವೇ ದಿನಗಳಲ್ಲಿ ಅತಿಯಾಗಿ ಸುರಿದು, ಉಳಿದ ದಿನಗಳಲ್ಲಿ ದೀರ್ಘಕಾಲದ ಮಳೆರಹಿತ ಸ್ಥಿತಿ ಮುಂದುವರಿಯುತ್ತಿದೆ.
ಈ ಸುದ್ದಿ ಓದಿದ್ದೀರಾ? ಮುಂಡಗೋಡ | ಜೇನುನೊಣ ದಾಳಿಗಿಂತ ಭಯಾನಕ ಅವ್ಯವಸ್ಥೆ: ಮೊರಾರ್ಜಿ ವಸತಿ ಶಾಲೆ ವಿರುದ್ಧ ಗಂಭೀರ ಆರೋಪ
ಕ್ಯಾಸಲ್ ರಾಕ್ನಲ್ಲಿ ಸುರಿಯುವ ಮಳೆ ನೀರೇ ಕಾಳಿ ನದಿಯ ಜೀವನಾಡಿ. ಇಲ್ಲಿನ ಮಳೆಯು ಸುಪಾ ಜಲಾಶಯದ ನೀರಿನ ಮಟ್ಟವನ್ನು ಕಾಯ್ದುಕೊಳ್ಳಲು ಅತ್ಯಂತ ನಿರ್ಣಾಯಕ ಪಾತ್ರ ವಹಿಸುತ್ತದೆ. ಆದರೆ ಮಳೆಯ ಈ ಏರುಪೇರು, ಸುಪಾ ಜಲಾಶಯದ ನೀರಿನ ಸಂಗ್ರಹಣೆಯ ಮೇಲೂ ನೇರ ಪರಿಣಾಮ ಬೀರುತ್ತಿದೆ.
ಮಳೆಯ ಅಭಾವದಿಂದಾಗಿ ಸ್ಥಳೀಯ ಹೊಳೆಗಳ ನೀರಿನ ಹರಿವು ತಗ್ಗಿದೆ. ಇದು ಕೃಷಿಕರ ನಿದ್ದೆಗೆಡಿಸಿದೆ. ಅಡಿಕೆ, ಕಾಳುಮೆಣಸಿನಂತಹ ಮಳೆ ಆಧಾರಿತ ಬೆಳೆಗಳಿಗೆ ನೀರಿನ ಕೊರತೆ ಕಾಡಲಾರಂಭಿಸಿದೆ. ಇಷ್ಟೇ ಅಲ್ಲದೆ, ಅರಣ್ಯದ ಒಳಭಾಗದಲ್ಲಿ ನೀರಿನ ಮೂಲಗಳು ಬತ್ತಿ ಹೋಗುತ್ತಿರುವುದರಿಂದ, ವನ್ಯಜೀವಿಗಳು ನೀರನ್ನು ಹುಡುಕಿಕೊಂಡು ಮಾನವ ವಸತಿ ಪ್ರದೇಶಗಳಿಗೆ ಬರುವ ಪ್ರಕರಣಗಳು ಹೆಚ್ಚಾಗುತ್ತಿವೆ.
ಹವಾಮಾನ ವೈಪರೀತ್ಯ, ಅರಣ್ಯನಾಶ ಮತ್ತು ಭೂ ಬಳಕೆಯಲ್ಲಿನ ಬದಲಾವಣೆಗಳೇ ಈ ಪರಿಸ್ಥಿತಿಗೆ ಕಾರಣ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಒಂದು ಕಾಲದಲ್ಲಿ ‘ಮೋಡಗಳ ತವರೂರು’ ಎಂದು ಕರೆಯಲ್ಪಡುತ್ತಿದ್ದ ಈ ಪ್ರದೇಶದಲ್ಲಿ ಮಳೆಯ ವೈಭವ ಕ್ಷೀಣಿಸುತ್ತಿರುವುದು ಕೇವಲ ಸ್ಥಳೀಯ ಸಮಸ್ಯೆಯಲ್ಲ, ಬದಲಾಗಿ ಇಡೀ ಕಾಳಿ ನದಿ ಜಲಾನಯನ ಪ್ರದೇಶದ ಪರಿಸರ ಸಮತೋಲನದ ದೃಷ್ಟಿಯಿಂದ ಗಂಭೀರ ವಿಷಯವಾಗಿದೆ. ಈ ಬಗ್ಗೆ ಸೂಕ್ತ ಪರಿಸರ ಸಂರಕ್ಷಣಾ ಕ್ರಮಗಳನ್ನು ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವ ಸಾಧ್ಯತೆಯಿದೆ.




