ಬೇಸಿಗೆಯಲ್ಲಿ ಕುಡಿಯುವ ನೀರು ಸಮಸ್ಯೆ ಕಂಡು ಬಂದ ಗ್ರಾಮಗಳಿಗೆ 24 ಗಂಟೆಯೊಳಗೆ ಟ್ಯಾಂಕರ್ ಮೂಲಕ ನೀರು ವ್ಯವಸ್ಥೆ ಮಾಡಬೇಕು. ಕೊಳವೆಬಾವಿ ಬತ್ತಿದರೆ ಕೂಡಲೇ ಮತ್ತೊಂದು ಬೋರ್ ವ್ಯವಸ್ಥೆ ಅಥವಾ ಖಾಸಗಿ ಬೋರ್ ವ್ಯವಸ್ಥೆ ಮಾಡಬೇಕು. ನೀರಿಗೆ ಮೊದಲ ಆದ್ಯತೆ ನೀಡಿ, ಈ ಕಾರ್ಯಕ್ಕೆ ನಿಮ್ಮಲ್ಲೇ ತೆರಿಗೆ ಸಂಗ್ರಹ ಮಾಡಿ ವ್ಯವಸ್ಥೆ ಮಾಡಬೇಕು. ತೆರಿಗೆ ವಸೂಲಿ ಬಗ್ಗೆ ನಿರ್ಲಕ್ಷ್ಯ ಬೇಡ ಎಂದು ಪಿಡಿಒಗಳಿಗೆ ತುಮಕೂರು ಜಿಪಂ ಸಿಇಒ ಜಿ.ಪ್ರಭು ಎಚ್ಚರಿಕೆ ನೀಡಿದರು.
ಗುಬ್ಬಿ ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಜೆಜೆಎಂ ಕಾಮಗಾರಿ ನಡೆಯುತ್ತಿದ್ದು, ನೀರಿನ ಸಮಸ್ಯೆ ಬರುವ ಗ್ರಾಮದಲ್ಲಿ 580 ರೂ.ಗಳ ನಿಗದಿ ಮಾಡಿ ಟ್ಯಾಂಕರ್ ಮೂಲಕ ನೀರು ಒದಗಿಸಬೇಕು. ಒಂದು ತಿಂಗಳಲ್ಲಿ ಜೆಜೆಎಂ ಕಾಮಗಾರಿ ಪೂರ್ಣಗೊಳಿಸಿ ನೀರು ಸರಬರಾಜು ಮಾಡಬೇಕು ಎಂದು ತಿಳಿಸಿದರು.
ತೆರಿಗೆ ವಸೂಲಿ ಮಾಡುವಲ್ಲಿ ತಾಲೂಕಿನ ಗ್ರಾಮ ಪಂಚಾಯತಿಗಳು ಹಿಂದುಳಿದಿದೆ. ಶೇ.10ರಿಂದ 40ರೊಳಗೆ ಮಾತ್ರ ಮಾಡಿದ್ದೀರಿ. ತೆರಿಗೆ ಬಗ್ಗೆ ಈ ಮಟ್ಟದ ನಿರ್ಲಕ್ಷ್ಯ ಸರಿಯಲ್ಲ. ಸಣ್ಣ ಪುಟ್ಟ ಕೆಲಸಕ್ಕೂ ಜಿ.ಪಂನತ್ತ ಮುಖ ಮಾಡುತ್ತೀರಿ. ಪಂಚಾಯಿತಿಯ ಮೂಲಭೂತ ಕೆಲಸಕ್ಕೆ ತೆರಿಗೆ ವಸೂಲಿ ಮಾಡಬೇಕು. ನರೇಗಾ ಜೊತೆ ಸೇರಿಸಿದರೆ ಸಾಕಷ್ಟು ಕೆಲಸ ಅಭಿವೃದ್ದಿ ಆಗಲಿದೆ. ಪಿಡಿಒ ಸೇರಿದಂತೆ ಸಿಬ್ಬಂದಿಗೆ ವೇತನ ನೀಡಲು ಹಣವಿಲ್ಲ. ಮಾರ್ಚ್ ತಿಂಗಳಲ್ಲಿ ತೆರಿಗೆ ವಸೂಲಿ ಮಾಡಿಲ್ಲ. ಇದಕ್ಕೆ ಹೊಣೆ ಹೊತ್ತ ತಾಪಂ ಇಒ ಅವರ ಮೇಲೆ ಕ್ರಮ ವಹಿಸಲಾಗುವುದು. ಸರ್ಕಾರದ ಗಮನಕ್ಕೆ ಈ ಬಗ್ಗೆ ಕಡತ ಕಳುಹಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸಂಪನ್ಮೂಲದ ಮೇಲೆ ಪಂಚಾಯಿತಿ ನಡೆಯಬೇಕು. ಆದರೆ, ತೆರಿಗೆ ಹತ್ತರಿಂದ ಇಪ್ಪತ್ತು ಕೋಟಿ ಬಾಕಿ ಆಗಿದೆ. ನಗರ ಪ್ರದೇಶದ ಸಮೀಪದ ಪಂಚಾಯಿತಿಯಲ್ಲಿ ಹೊಸ ಬಡಾವಣೆ ಮೂಲಕವೇ ತೆರಿಗೆ ವಸೂಲಿ ಮಾಡಬಹುದು. ಆದರೆ, ಕಾಲಹರಣ ಮಾಡುತ್ತಿರುವ ಪಿಡಿಒ ಬಗ್ಗೆ ದೂರು ಇವೆ. ಕಚೇರಿಗೆ ಸರಿಯಾದ ಸಮಯಕ್ಕೆ ಬಂದಿಲ್ಲ ಎಂಬ ದೂರು ಸಾಕಷ್ಟಿದೆ. ಸಲ್ಲದ ಕಾರಣ ನೀಡಬೇಡಿ. ಮೊದಲ ಎಚ್ಚರಿಕೆ ಇದು ಎಂದು ಸೂಚಿಸಿದ ಅವರು ಹಾಜರಾತಿ, ಹೆಬ್ಬೆಟ್ಟು ಗುರುತು ಮನಬಂದಂತೆ ಹಾಕಿರುವ ಮಾಹಿತಿ ಇದೆ. ಕಾಟಾಚಾರದ ಕೆಲಸ ಮಾಡುತ್ತಿದ್ದೀರಿ. ತೆರಿಗೆ ವಸೂಲಿ ಬಗ್ಗೆ ತಾತ್ಸಾರ ಮಾಡುತ್ತಿರುವ ಬಗ್ಗೆ ಇನ್ಮುಂದೆ ಕಚೇರಿಗೆ ಸರಿಯಾದ ವೇಳೆಗೆ ಬಂದು ಸಾರ್ವಜನಿಕರ ಕೆಲಸ ಮಾಡಬೇಕು ಎಂದು ಸೂಚಿಸಿದರು.
ತಾಲೂಕಿನ 380 ಜೆಜೆಎಂ ಕಾಮಗಾರಿಗಳ ಪೈಕಿ 340 ಕಾಮಗಾರಿ ಚಾಲ್ತಿಯಲ್ಲಿದೆ. ಸದ್ಯದ ಸ್ಥಿತಿಯಲ್ಲಿ ನೀರಿನ ಸಮಸ್ಯೆ ಬಂದ ಗ್ರಾಮಗಳಿಗೆ 231 ಬೋರ್ ವೆಲ್ ಮಂಜೂರಾತಿ ಸಿಕ್ಕಿದೆ. ಟ್ಯಾಂಕರ್ ಖರೀದಿಯನ್ನು ಅಪ್ಲಿಕೇಶನ್ ಮೂಲಕ ಮಾಡಬೇಕು ಎಂದ ಅವರು, ಕುಡಿಯುವ ನೀರು ಒದಗಿಸುವ ಕೆಲಸಕ್ಕೆ ಬೆಸ್ಕಾಂ ವಿದ್ಯುತ್ ಸಂಪರ್ಕ ನೀಡುವಲ್ಲಿ ವಿಳಂಬ ಮಾಡುವಂತಿಲ್ಲ. ಪಿಡಿಒಗಳು ಪತ್ರ ವ್ಯವಹಾರ ಮೂಲಕ ಕೆಲಸ ಮಾಡಿಸಬೇಕು. ಮೌಖಿಕ ವ್ಯವಹಾರ ಬಿಟ್ಟು ಯಾವುದೇ ಇಲಾಖೆ ಮೂಲಕ ಕೆಲಸಕ್ಕೆ ಬರವಣಿಗೆ ರೂಪದಲ್ಲಿ ಕೆಲಸ ಮಾಡಬೇಕು ಎಂದರು.
ಜಿಲ್ಲೆಯಲ್ಲಿ ಮೇಲ್ಮೈ ನೀರು ಬಳಸಿಕೊಳ್ಳಲು ಸೂಚಿಸಲಾಗಿದೆ. ಹೇಮಾವತಿ ನೀರು ಜೊತೆಗೆ ಕೆರೆ ನೀರು ಬಳಕೆ ಮಾಡಲಾಗುತ್ತಿದೆ. ನಂತರದಲ್ಲಿ ಕೊಳವೆಬಾವಿ ಆದ್ಯತೆ ನೀಡಲಾಗುತ್ತಿದೆ. ಈ ಜೊತೆಗೆ ನೀರು ಪೋಲು ಮಾಡುವ ದೂರುಗಳು ಬರುತ್ತಿವೆ. ಸರಿಪಡಿಸದಿದ್ದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಇದೇ ಸಂದರ್ಭದಲ್ಲಿ ತಾಲ್ಲೂಕಿನ 34 ಗ್ರಾಮ ಪಂಚಾಯಿತಿಯಲ್ಲಿ ಕುಡಿಯುವ ನೀರು ಹಾಗೂ ವಸತಿ ಯೋಜನೆಯ ಪ್ರಗತಿ ಪರಿಶೀಲನೆ ನಡೆಸಿದರು. ಜಿಲ್ಲಾ ಮುಖ್ಯ ಯೋಜನಾಧಿಕಾರಿ ಸಣ್ಣ ಮಸಿಯಪ್ಪ, ತಾಪಂ ಇಒ ವಿ.ಪರಮೇಶ್ ಕುಮಾರ್ ಇದ್ದರು.