ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ವಿರುದ್ಧ ಶಿವಸೇನೆ ವಕ್ತಾರ ಸಂಜಯ್ ನಿರುಪಮ್ ಮತ್ತೆ ವಾಗ್ದಾಳಿ ನಡೆಸಿದ್ದಾರೆ. “ನಾಯಕರಲ್ಲಿರುವ ದುರಹಂಕಾರ ಪಕ್ಷವನ್ನೇ ನಾಶ ಮಾಡುತ್ತದೆ. ಕಾರ್ಯಕರ್ತರು ಮತ್ತು ಚುನಾಯಿತ ಪ್ರತಿನಿಧಿಗಳೊಂದಿಗಿನ ಸಂಪರ್ಕ ಕಡಿತವಾಗಿರುವುದು ಪಕ್ಷವನ್ನು ಮತ್ತಷ್ಟು ಅವನತಿಯತ್ತ ತಳ್ಳುತ್ತಿದೆ” ಎಂದು ಹೇಳಿದ್ದಾರೆ.
ಮಹಾರಾಷ್ಟ್ರ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿರುವ “ಆಪರೇಷನ್ ಟೈಗರ್” ಊಹಾಪೋಹಗಳಿಂದಾಗಿ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ) ಪಕ್ಷವು ಪ್ರಸ್ತುತ ಅತ್ಯಂತ ಅತಂತ್ರ ಸ್ಥಿತಿಯಲ್ಲಿದೆ. ಪಕ್ಷದ ಲೋಕಸಭಾ ಸಂಸದರು ಮತ್ತು ಶಾಸಕರು ಮುಖ್ಯಮಂತ್ರಿ ಏಕನಾಥ್ ಶಿಂದೆ ನೇತೃತ್ವದ ಆಡಳಿತಾರೂಢ ಶಿವಸೇನೆ ಬಣಕ್ಕೆ ಸೇರ್ಪಡೆಯಾಗಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿದೆ. ಈ ನಡುವೆ ಶಿವಸೇನೆ ವಕ್ತಾರ, ಉದ್ಧವ್ ಠಾಕ್ರೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇದನ್ನು ಓದಿದ್ದೀರಾ? ಮಹಾರಾಷ್ಟ್ರ | ಶಿಂದೆ ಬಣದಿಂದ ‘ಆಪರೇಷನ್ ಟೈಗರ್’ – ಸಂಸದರ ಸಭೆ ಕರೆದ ಉದ್ಧವ್ ಠಾಕ್ರೆ
“ಇತ್ತೀಚೆಗೆ ಶಿವಸೇನೆ(ಯುಬಿಟಿ)ಯ ಹಲವಾರು ಸಂಸದರು ಮತ್ತು ಕಾರ್ಯಕರ್ತರು ನಾಯಕರ ಬಗ್ಗೆ ಸಾರ್ವಜನಿಕವಾಗಿ ಅತೃಪ್ತಿಯನ್ನು ವ್ಯಕ್ತಪಡಿಸಿದ್ದಾರೆ. ಉದ್ಧವ್ ಠಾಕ್ರೆ ಮತ್ತು ಆದಿತ್ಯ ಠಾಕ್ರೆ ಅವರು ಪಕ್ಷದ ನಾಯಕರು. ಆದರೆ ಕಾರ್ಯಕರ್ತರಿಗೆ ಮಾತ್ರ ಸಿಗುತ್ತಿಲ್ಲ” ಎಂದು ಆರೋಪಿಸಿದ್ದಾರೆ.
ಇತ್ತೀಚಿನ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಸಹ ನಿರುಪಮ್ ಉಲ್ಲೇಖಿಸಿ, “ಶಿವಸೇನೆ (ಯುಬಿಟಿ) ನಾಯಕತ್ವವು ತಳಮಟ್ಟದ ಕಾರ್ಯಕರ್ತರನ್ನು ಸಕ್ರಿಯವಾಗಿ ತಲುಪುವಲ್ಲಿ ಅಥವಾ ಬೆಂಬಲಿಸಲು ವಿಫಲವಾಗಿದೆ. ಇದು ಪಕ್ಷದ ಕಾರ್ಯಕರ್ತರು, ಶಾಸಕರು ಮತ್ತು ಪದಾಧಿಕಾರಿಗಳಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ” ಎಂದು ಹೇಳಿದ್ದಾರೆ.
ಇನ್ನು ಆಪರೇಷನ್ ಟೈಗರ್ ಬಗ್ಗೆಯೂ ನಿರುಪಮ್ ಮಾತನಾಡಿದ್ದು, ಅದು ಬರೀ ರಾಜಕೀಯ. ಈ ಊಹಾಪೋಹದಿಂದಾಗಿ ಶಿವಸೇನೆ (ಯುಬಿಟಿ) ನಾಯಕತ್ವ ಅಸ್ಥಿರಗೊಂಡಿದೆ ಎಂದು ಪ್ರತಿಪಾದಿಸಿದರು.




