- ಅಶ್ಲೀಲ ಸಂದೇಶಗಳು ಟೆಲಿಗ್ರಾಂನಲ್ಲಿ ಹಂಚಿಕೆಯಾಗುತ್ತಿವೆ ಎಂದು ಆರೋಪ
- ನ್ಯಾ. ಎಸ್ ಮಣಿಕುಮಾರ್, ನ್ಯಾ. ಮುರಳಿ ಪುರುಷೋತ್ತಮನ್ ಪೀಠ ವಿಚಾರಣೆ
ಭಾರತದಲ್ಲಿ ತ್ವರಿತ ಸಂದೇಶ ನೀಡುವ ಟೆಲಿಗ್ರಾಂ ಸೇವೆಗೆ ನಿರ್ಬಂಧ ವಿಧಿಸುವಂತೆ ಕೋರಿದ್ದ ಅರ್ಜಿಯನ್ನು ಕೇರಳ ಹೈಕೋರ್ಟ್ ಬುಧವಾರ (ಮಾರ್ಚ್ 23) ವಜಾಗೊಳಿಸಿದೆ.
ಈ ಸಂಬಂಧ ಸಲ್ಲಿಸಿದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಎಸ್ ಮಣಿಕುಮಾರ್ ಮತ್ತು ಮುರಳಿ ಪುರುಷೋತ್ತಮನ್ ಅವರ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಆಕ್ಷೇಪಾರ್ಹ ಸಂಗತಿಗಳನ್ನು ತೆರವುಗೊಳಿಸುವುದಕ್ಕೆ ಸಂಬಂಧಿಸಿ ಮಾಹಿತಿ ತಂತ್ರಜ್ಞಾನ ನಿಯಮಗಳು, 2021 (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ನೀತಿ ಸಂಹಿತೆ) ಅಡಿಯಲ್ಲಿ ನೇಮಕಗೊಂಡಿರುವ ಕುಂದು ಕೊರತೆ ಅಧಿಕಾರಿಗೆ ಅರ್ಜಿದಾರರು ಮನವಿ ಸಲ್ಲಿಸಬಹುದು ಎಂದು ಸೂಚಿಸಿ ಪೀಠ ಅರ್ಜಿ ವಿಲೇವಾರಿ ಮಾಡಿತು.
ಕೇಂದ್ರ ಸರ್ಕಾರದ ಪರ ವಕೀಲರ ಮೂಲಕ ಮಹಿಳೆಯೊಬ್ಬರು ಅರ್ಜಿ ಸಲ್ಲಿಸಿದ್ದರು. ಮಹಿಳೆಯರು ಮತ್ತು ಮಕ್ಕಳ ಕುರಿತ ಅಶ್ಲೀಲ ಸಂಗತಿಗಳು ಟೆಲಿಗ್ರಾಂ ಸಂದೇಶದಲ್ಲಿ ಹಂಚಿಕೆಯಾಗುತ್ತಿವೆ ಎಂದು ಮಹಿಳೆ ಅರ್ಜಿಯಲ್ಲಿ ದೂರಿದ್ದರು.
“ಭಯೋತ್ಪಾದನೆ ಪ್ರಸಾರ ಮಾಡಲು ಮತ್ತು ಸಮಾಜದಲ್ಲಿ ಅನಿಶ್ಚಿತ ವಾತಾವರಣ ಸೃಷ್ಟಿಸಲು ಟೆಲಿಗ್ರಾಂ ವೇದಿಕೆಯನ್ನು ಬಳಸಿಕೊಳ್ಳಲಾಗುತ್ತಿದೆ. ಭಾರತದಲ್ಲಿ ಟೆಲಿಗ್ರಾಂಗೆ ನಿರ್ದಿಷ್ಟ ಯೋಜನಾ ಅಧಿಕಾರಿ ಅಥವಾ ನೋಂದಾಯಿತ ಕಚೇರಿ ಇಲ್ಲ. ಇದರಲ್ಲಿ ಬಳಕೆದಾರರು ತಮ್ಮ ಗುರುತು ಬಹಿರಂಗಪಡಿಸುವ ಅಗತ್ಯವಿಲ್ಲದ ಕಾರಣ ತನಿಖಾ ಸಂಸ್ಥೆಗಳು ಸೂಕ್ತ ತನಿಖೆ ನಡೆಸಿಲ್ಲ” ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ಮಹಿಳೆ ಕುಂದು ಕೊರತೆ ಅಧಿಕಾರಿಗೆ ದೂರು ಸಲ್ಲಿಸುವ ಬದಲಿಗೆ ಸೈಬರ್ ಕ್ರೈಂ ಘಟಕ ಅಥವಾ ಸಂಬಂಧಿತ ಸೂಕ್ತ ಕಾನೂನಿನಡಿ ದೂರು ದಾಖಲಿಸಬಹುದು ಎಂದು ಕೇಂದ್ರ ಸರ್ಕಾರದ ಪರ ವಕೀಲರು ತಿಳಿಸಿದರು.