ಬಿಹಾರ ಲೋಕಸಭಾ ಚುನಾವಣೆಯ ಕ್ಷೇತ್ರ ಹಂಚಿಕೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿ ಪ್ರಧಾನಿ ನರೇಂದ್ರ ಮೋದಿ ಸಂಪುಟಕ್ಕೆ ಕೇಂದ್ರ ಸಚಿವ ಹಾಗೂ ಆರ್ಎಲ್ಜೆಪಿ ಅಧ್ಯಕ್ಷ ಪಶುಪತಿ ಪಾರಸ್ ರಾಜೀನಾಮೆ ನೀಡಿದ್ದಾರೆ.
ನಿನ್ನೆ(ಮಾ.19) ಬಿಹಾರ ಲೋಕಸಭಾ ಸ್ಥಾನಗಳಿಗೆ ಎನ್ಡಿಎ ಒಕ್ಕೂಟ ಕ್ಷೇತ್ರ ಹಂಚಿಕೆ ಪ್ರಕಟಿಸಿತ್ತು. ಹಂಚಿಕೆಯ ಪ್ರಕಾರ ಬಿಜೆಪಿ 17, ಜೆಡಿಯು 16, ಚಿರಾಗ್ ಪಾಸ್ವಾನ್ ಬಣದ ಎಲ್ಜೆಪಿ 5 ಹಾಗೂ ಎನ್ಡಿಎ ಇತರ ಮಿತ್ರ ಪಕ್ಷಗಳಾದ ಹೆಚ್ಎಎಂ ಹಾಗೂ ಆರ್ಎಲ್ಪಿ ಪಕ್ಷಗಳಿಗೆ ತಲಾ ಒಂದು ಕ್ಷೇತ್ರವನ್ನು ನೀಡಲಾಗಿತ್ತು.
ರಾಜೀನಾಮೆ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಪಶುಪತಿ, “ಕ್ಷೇತ್ರ ಹಂಚಿಕೆಯಲ್ಲಿ ನಮ್ಮ ಪಕ್ಷಕ್ಕೆ ಅನ್ಯಾಯವಾದ ಕಾರಣ ನಾನು ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ” ಎಂದು ತಿಳಿಸಿದ್ದಾರೆ.
ಮುಂದಿನ ಲೋಕಸಭಾ ಚುನಾವಣೆಯಲ್ಲಿ ಪಶುಪತಿ ಬಣದ ಎಲ್ಜೆಪಿ ಬಣಕ್ಕೆ ಒಂದೂ ಸ್ಥಾನವನ್ನು ನೀಡಿಲ್ಲ. ಆದಾಗ್ಯೂ ಬಿಹಾರ ಬಿಜೆಪಿ ಮುಖ್ಯಸ್ಥ ಸಾಮ್ರಾಟ್ ಚೌಧರಿ ಮಾತುಕತೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಹೇಳುವುದು ಹಬ್ಬ, ಮಾಡುವುದು ಯುದ್ಧ, ಸಾಯುವುದು ಸೈನಿಕರು
ತಮ್ಮ ಬಣಕ್ಕೆ ಸರಿಯಾಗಿ ಕ್ಷೇತ್ರ ಹಂಚಿಕೆ ನೀಡಲಿಲ್ಲದಿದ್ದರೆ ತಾವು ಎನ್ಡಿಎ ಬಣದಿಂದ ಹೊರಹೋಗುವುದಾಗಿ ಪಾರಸ್ ಅವರು ಈ ಮೊದಲು ತಿಳಿಸಿದ್ದರು. ಪ್ರಸ್ತುತ ಸೀಟು ಹಂಚಿಕೆಯಲ್ಲಿ ಆರ್ಎಲ್ಜೆಪಿ ಪಕ್ಷವನ್ನು ಕಡೆಗಣಿಸಲಾಗಿದೆ. ಪಾರಸ್ ಪ್ರತಿನಿಧಿಸುವ ಹಾಜಿಪುರ ಕ್ಷೇತ್ರವನ್ನು ಕೂಡ ನೀಡಲಾಗಿಲ್ಲ. ಕ್ಷೇತ್ರ ಹಂಚಿಕೆಯಲ್ಲಿ ಹಾಜಿಪುರ ಕ್ಷೇತ್ರವನ್ನು ಚಿರಾಗ್ ಪಾಸ್ವಾನ್ ಬಣಕ್ಕೆ ನೀಡಿರುವುದು ಪಶುಪತಿ ಅವರ ಅಸಮಾಧಾನಕ್ಕೆ ಕಾರಣವಾಗಿದೆ.
ರಾಮ್ ವಿಲಾಸ್ ಪಾಸ್ವಾನ್ ನೇತೃತ್ವದ ಲೋಕ ಜನ ಶಕ್ತಿ ಪಕ್ಷವು ಪಾಸ್ವಾನ್ ಮೃತಪಟ್ಟ 2020ರ ನಂತರ ಎರಡು ಬಣಗಳಾಗಿ ಇಬ್ಬಾಗವಾಯಿತು. ಪಾಸ್ವಾನ್ ಸಹೋದರ ಆರ್ಎಲ್ಜೆಪಿ ಪಕ್ಷವನ್ನು ಮುನ್ನಡೆಸಿದರೆ, ಪಾಸ್ವಾನ್ ಪುತ್ರ ಎಲ್ಜೆಪಿ(ಆರ್ವಿ) ಬಣದ ಅಧ್ಯಕ್ಷರಾಗಿದ್ದಾರೆ. ಎರಡೂ ಪಕ್ಷಗಳು ಎನ್ಡಿಎ ಮಿತ್ರ ಪಕ್ಷಗಳಾಗಿವೆ.
2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಯು ತಲಾ 17 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದವು. ಅವಿಭಜಿತ ಎಲ್ಜೆಪಿ ಪಕ್ಷ 6 ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತು. ಬಿಜೆಪಿ ಹಾಗೂ ಎಲ್ಜೆಪಿ ಎಲ್ಲ ಪಕ್ಷಗಳಲ್ಲಿ ಗೆಲುವು ಸಾಧಿಸಿದರೆ, ಜೆಡಿಯು 16 ಕ್ಷೇತ್ರಗಳಲ್ಲಿ ಜಯಗಳಿಸಿತ್ತು.