- 4,444 ವಿದ್ಯಾರ್ಥಿಗಳು ಐಐಟಿ ಮತ್ತು 336 ವಿದ್ಯಾರ್ಥಿಗಳು ಐಐಎಂ ತೊರೆದಿದ್ದಾರೆ
- ಉನ್ನತ ಶಿಕ್ಷಣಕ್ಕೆ ಶುಲ್ಕ ಕಡಿತ, ವಿದ್ಯಾರ್ಥಿವೇತನ ಸೌಲಭ್ಯ ಒದಗಿಸಲಾಗಿದೆ ಎಂದ ಸಚಿವ
2018ರಿಂದ ಇಲ್ಲಿಯವರೆಗೂ 19 ಸಾವಿರಕ್ಕೂ ಅಧಿಕ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗದ ವಿದ್ಯಾರ್ಥಿಗಳು ಉನ್ನತ ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಿದ್ದಾರೆ ಎಂದು ಕೇಂದ್ರ ಶಿಕ್ಷಣ ಸಚಿವಾಲಯ ಹೇಳಿದೆ.
ಕೇಂದ್ರ ಶಿಕ್ಷಣ ಸಚಿವಾಲಯದ ರಾಜ್ಯ ಖಾತೆ ಸಚಿವ ಸುಭಾಶ್ ಸರ್ಕಾರ್ ಅವರು ಈ ಕುರಿತು ರಾಜ್ಯ ಸಭೆಯಲ್ಲಿ ಲಿಖಿತ ಉತ್ತರ ನೀಡಿದ್ದಾರೆ. “ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಮತ್ತು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ (ಐಐಎಂ) ವಿದ್ಯಾಲಯಗಳಲ್ಲಿ ವಿದ್ಯಾಭ್ಯಾಸವನ್ನು ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಅರ್ಧಕ್ಕೆ ತೊರೆದಿದ್ದಾರೆ. ಕಳೆದ ಐದು ವರ್ಷದಲ್ಲಿ ವಿವಿಧ ಕೋರ್ಸ್ಗಳಲ್ಲಿ 19,256 ವಿದ್ಯಾರ್ಥಿಗಳು ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸಿದ್ದಾರೆ” ಎಂದು ಅವರು ವಿವರಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಮಾರ್ಚ್ 31ರಿಂದ ಎಸ್ಎಸ್ಎಲ್ಸಿ ಪರೀಕ್ಷೆ ಆರಂಭ
“ಐದು ವರ್ಷಗಳಲ್ಲಿ ಮೂರು ಕೇಂದ್ರಿಯ ವಿಶ್ವ ವಿದ್ಯಾಲಯಗಳಿಂದ 14,446 ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಅರ್ಧಕ್ಕೆ ತೊರೆದಿದ್ದಾರೆ. ಅದರಲ್ಲಿ 4,444 ವಿದ್ಯಾರ್ಥಿಗಳು ಐಐಟಿ ವಿದ್ಯಾಭ್ಯಾಸ ನಿಲ್ಲಿಸಿದ್ದರೆ, 336 ವಿದ್ಯಾರ್ಥಿಗಳು ಐಐಎಂ ಶಿಕ್ಷಣ ತೊರೆದಿದ್ದಾರೆ. ಮತ್ತಿತ್ತರ ಕೋರ್ಸ್ಗಳಿಂದ ಒಟ್ಟು 19,256 ವಿದ್ಯಾರ್ಥಿಗಳು ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸಿದ್ದಾರೆ” ಎಂದು ಅವರು ತಿಳಿಸಿದ್ದಾರೆ.
“ಅರ್ಧಕ್ಕೆ ವಿದ್ಯಾಭ್ಯಾಸ ನಿಲ್ಲಿಸುವವರು ಒಂದಡೆಯಾದರೆ, ಒಂದು ಕೋರ್ಸ್ನಿಂದ ಮತ್ತೊಂದಕ್ಕೆ ವರ್ಗಾವಣೆಯಾಗಿರುವವರ ಸಂಖ್ಯೆಯೂ ಅಧಿಕವಾಗಿದೆ” ಎಂದು ಸಚಿವ ಸುಭಾಶ್ ಸರ್ಕಾರ್ ಹೇಳಿದ್ದಾರೆ.
“ಸರ್ಕಾರದಿಂದ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗಾಗಿ ವಿದ್ಯಾರ್ಥಿ ವೇತನ, ವಿವಿಗಳ ಶುಲ್ಕ ಕಡಿತ, ಹೆಚ್ಚಿನ ಸಂಸ್ಥೆಗಳ ಸ್ಥಾಪನೆ, ರಾಷ್ಟ್ರೀಯ ಮಟ್ಟದ ವಿದ್ಯಾರ್ಥಿವೇತನಕ್ಕೆ ಆದ್ಯತೆಯ ಪ್ರವೇಶದಂತಹ ವಿವಿಧ ಕ್ರಮಗಳನ್ನು ಕೈಗೊಂಡಿದೆ. ಬಡ ಆರ್ಥಿಕ ಹಿನ್ನೆಲೆ ಹೊಂದಿರುವ ವಿದ್ಯಾರ್ಥಿಗಳಿಗೆ ಅವರ ಶಿಕ್ಷಣವನ್ನು ಮುಂದುವರಿಸಲು ಸಹಾಯ ಮಾಡುತ್ತಿದೆ” ಎಂದು ಸಚಿವ ಸುಭಾಶ್ ಸರ್ಕಾರ್ ಹೇಳಿದ್ದಾರೆ.