ಇತ್ತೀಚಿನ ದಿನಗಳಲ್ಲಿ ಕೆಲವು ಅವಿವೇಕಿಗಳು ಮತ್ತು ಜಾತಿವಾದಿಗಳು ಡಾ ಮಂಜುನಾಥ್ ಅವರು ರಾಜಕೀಯಕ್ಕೆ ಬರಬೇಕು, ಸಂಸದರಾಗಬೇಕು ಮತ್ತು ಮತ್ತಷ್ಟು ಬೆಳಗಬೇಕೆಂಬ ಬೇಡಿಕೆಯನ್ನು ಮಂಡಿಸುತ್ತಿರುವುದು ವೃತ್ತಿಧರ್ಮ ಪರಿಪಾಲನೆ ದೃಷ್ಟಿಯಿಂದ ಅಸಮರ್ಥನೀಯವಾಗಿದೆ.
ವಿಶ್ವ ಕಂಡ ಹೃದಯ ತಜ್ಞ, ಹೃದಯವಂತ ಧನ್ವಂತರಿ ಮತ್ತು ಲಕ್ಷಾಂತರ ಹೃದಯಗಳ ರಕ್ಷಕ ಡಾ ಸಿ ಎನ್ ಮಂಜುನಾಥ್ ಕೃಷಿ ಸಂಸ್ಕೃತಿಯಲ್ಲಿ ಅರಳಿ ಬೆಂಗಳೂರಿನ ಜಯದೇವ ಹೃದ್ರೋಗ ಸಂಸ್ಥೆಯನ್ನು ಇಡೀ ದಕ್ಷಿಣ ಏಷ್ಯಾದಲ್ಲಿ ಅತಿ ದೊಡ್ಡ ಹೃದ್ರೋಗ ಸಂಸ್ಥೆಯಾಗಿ ಬೆಳೆಸಿದ ಧನ್ಯಜೀವಿ. ತಮ್ಮ ಸೇವಾವಧಿಯಲ್ಲಿ 75ಲಕ್ಷ ಮಂದಿ ಹೊರ ರೋಗಿಗಳಿಗೆ ಚಿಕಿತ್ಸೆ ಹಾಗೂ 8ಲಕ್ಷ ಮಂದಿಗೆ ಹೃದಯ ಶಸ್ತ್ರಚಿಕಿತ್ಸೆ ನಡೆಸಿ ಆಧುನಿಕ ಧನ್ವಂತರಿ ಎಂಬ ಜನಮನ್ನಣೆಗೆ ಡಾ ಮಂಜುನಾಥ್ ಪಾತ್ರರಾಗಿದ್ದಾರೆ. ಜಯದೇವ ಹೃದ್ರೋಗ ಸಂಸ್ಥೆ ನಿರ್ವಹಣೆಗೆ ಕಾಯಕಲ್ಪ ಹಾಗೂ ಮಾನವ ಸ್ಪರ್ಶ ನೀಡಿದ ಇವರು ನಮ್ಮ ಕಾಲದ ಬಹುದೊಡ್ಡ ಮಾನವತಾವಾದಿ ಮತ್ತು ವೈದ್ಯರತ್ನ ಎಂಬುದರಲ್ಲಿ ಎರಡು ಮಾತಿಲ್ಲ.
ಮಂಜುನಾಥ್ ಜಯದೇವ ಹೃದ್ರೋಗ ಸಂಸ್ಥೆಯಲ್ಲಿ ನಿರ್ದೇಶಕರಾಗಿ ಸತತ ಹದಿನೆಂಟು ವರ್ಷಗಳ ಸಾರ್ಥಕ ಹಾಗೂ ನಿಸ್ವಾರ್ಥ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಇವರನ್ನು ಬೆಂಗಳೂರು, ಮೈಸೂರು ಮೊದಲಾದೆಡೆ ಅತ್ಯಂತ ಪ್ರೀತಿಪೂರ್ವಕವಾಗಿ ನಾಡಿನ ಜನರು ಸನ್ಮಾನಿಸಿದ್ದಾರೆ. ಹಣ ಮತ್ತು ಅಧಿಕಾರಕ್ಕಾಗಿ ಹಪಹಪಿಸುವ ಬಹಳಷ್ಟು ವೈದ್ಯರ ಮಧ್ಯೆ ಮಂಜುನಾಥ್ ತಮ್ಮದೇ ಆದ ವ್ಯಕ್ತಿತ್ವ, ಸಾಧನೆ ಮತ್ತು ಕೊಡುಗೆಗಳಿಂದ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧರಾಗಿದ್ದಾರೆ. ಇವರನ್ನು ಸನ್ಮಾನಿಸಿದ ಮಠಾಧೀಶರು, ಹಿರಿಯ ರಾಜಕಾರಣಿಗಳು ಮತ್ತು ಅಭಿಮಾನಿಗಳು ಡಾ ಸಿ ಎನ್ ಮಂಜುನಾಥ್ ವೃತ್ತಿಪರ ಮೌಲ್ಯಗಳು, ಸಾಮಾಜಿಕ ಜವಾಬ್ದಾರಿ ಮತ್ತು ಉತ್ತರದಾಯಿತ್ವಗಳಿಂದ ಹಿಮಾಲಯ ಸದೃಶ ವ್ಯಕ್ತಿತ್ವ ಹೊಂದಿರುವುದನ್ನು ಮುಕ್ತಕಂಠದಿಂದ ಹೊಗಳಿದ್ದಾರೆ.
ಬಡವರು ಮತ್ತು ಅಲಕ್ಷಿತ ಜನವರ್ಗಗಳಿಗೆ ಕೈಗೆಟುಕುವ ದರದಲ್ಲಿ ಉತ್ತಮ ಚಿಕಿತ್ಸೆ ನೀಡಬೇಕೆಂಬ ಕನಸನ್ನು ನನಸು ಮಾಡುವಲ್ಲಿ ಇವರು ಪಟ್ಟ ಶ್ರಮ ಅಪಾರವಾದದ್ದೆಂದು ಶ್ಲಾಘಿಸಿದ್ದಾರೆ. ಇವರು ವೈದ್ಯ ಸಮೂಹಕ್ಕೆ ಮಾದರಿ ಎಂದು ಎಲ್ಲೆಡೆ ಪ್ರಶಂಸೆಯ ಸುರಿಮಳೆ ಹರಿದಿರುವುದು ಇವರ ಘನ ವ್ಯಕ್ತಿತ್ವಕ್ಕೆ ಸಾಕ್ಷಿಯಾಗಿದೆ.
‘ವೈದ್ಯ ದೇವೋಭವ’ ಎಂಬ ನಾಣ್ಣುಡಿಗೆ ತಕ್ಕಂತೆ ಬದುಕಿರುವ ಮಂಜುನಾಥ್ ವಿಶೇಷವಾಗಿ ಯುವ ವೈದ್ಯ ಸಮೂಹಕ್ಕೆ ಅತ್ಯಂತ ಅನುಕರಣೀಯ ವ್ಯಕ್ತಿ. ಇವರನ್ನು ಭಾರತ ಸರ್ಕಾರ ಅತ್ಯಂತ ಕೃತಜ್ಞತೆ ಮತ್ತು ಗೌರವದಿಂದ ರಾಷ್ಟ್ರಮಟ್ಟದಲ್ಲಿ ಉನ್ನತ ಹುದ್ದೆಗೆ ನೇಮಿಸಿ ಇವರ ಸೇವೆ ಮಾನವ ಕುಲಕ್ಕೆ ಹೆಚ್ಚಿನ ಮಟ್ಟದಲ್ಲಿ ಲಭಿಸುವಂತೆ ನೋಡಿಕೊಳ್ಳಬೇಕು. ಇಂತಹ ಸಾರ್ಥಕ ತಜ್ಞ ವೈದ್ಯರ ಸೇವೆಯನ್ನು ಪ್ರಧಾನಿ ಮೋದಿ ಸದ್ಬಳಕೆ ಮಾಡಿಕೊಳ್ಳುವ ಬಹುದೊಡ್ಡ ಜವಾಬ್ದಾರಿ ಹೊಂದಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಕೆಲವು ಅವಿವೇಕಿಗಳು ಮತ್ತು ಜಾತಿವಾದಿಗಳು ಡಾ ಮಂಜುನಾಥ್ ಅವರು ರಾಜಕೀಯಕ್ಕೆ ಬರಬೇಕು, ಸಂಸದರಾಗಬೇಕು ಮತ್ತು ಮತ್ತಷ್ಟು ಬೆಳಗಬೇಕೆಂಬ ಬೇಡಿಕೆಯನ್ನು ಮಂಡಿಸುತ್ತಿರುವುದು ವೃತ್ತಿಧರ್ಮ ಪರಿಪಾಲನೆ ದೃಷ್ಟಿಯಿಂದ ಅಸಮರ್ಥನೀಯವಾಗಿದೆ.
ಕರ್ನಾಟಕದಿಂದ ಒಂದು ಲೋಕಸಭಾ ಸ್ಥಾನವನ್ನು ಗೆಲ್ಲಬಹುದೆಂಬ ದುರಾಸೆಯಿಂದ ಇವರನ್ನು ಚುನಾವಣ ಕಣಕ್ಕೆ ಇಳಿಸಬೇಕೆಂಬ ರಾಜಕೀಯ ಸಂಚನ್ನು ಕೋಮುವಾದಿಗಳು ಮತ್ತು ಜಾತಿವಾದಿಗಳ ಕೂಟ ರೂಪಿಸಿದೆ. ಬದುಕಿನುದ್ದಕ್ಕೂ ಜಾತ್ಯತೀತ ಎಂದು ಗಂಟೆ ಬಾರಿಸಿ ಕೊನೆ ಗಳಿಗೆಯಲ್ಲಿ ಕುಟುಂಬ ರಾಜಕಾರಣದ ಹಿತದೃಷ್ಟಿಯಿಂದ ಕೋಮುವಾದಿಗಳ ಜೊತೆ ಕೈ ಜೋಡಿಸಿದ ದೇವೇಗೌಡರು ತಮ್ಮ ಜೀವಮಾನ ಪೂರ್ತಿ ಸಂಪಾದಿಸಿದ ಸಾರ್ವಜನಿಕ ವಿಶ್ವಾಸವನ್ನು ಕಳೆದುಕೊಂಡಿದ್ದಾರೆ.
ಇದನ್ನೂ ಓದಿ ಬಿಜೆಪಿ & ಗೋದಿ ಮೀಡಿಯಾ ʼಪಾಕಿಸ್ತಾನ್ ಜಿಂದಾಬಾದ್ ಎಂದರುʼ ಎಂಬ ಸುಳ್ಳನ್ನು ಹಬ್ಬಿಸಿದ 22+ ಪ್ರಕರಣಗಳು
ಮಂಜುನಾಥ್ ಪರೋಕ್ಷವಾಗಿ ತಮಗೆ ರಾಜಕೀಯ ಒಲವಿರುವುದನ್ನು ಖಚಿತಪಡಿಸಿದ್ದಾರೆ. ಇವರಂತಹ ಶ್ರೇಷ್ಟ ವೈದ್ಯರನ್ನು ದೇಶ ಕಳೆದುಕೊಳ್ಳಬಾರದು. ಇವರು ಮುಂಬರುವ ಸಂಸತ್ತಿನ ಚುನಾವಣೆಗೆ ಕೋಮುವಾದಿಗಳು ಮತ್ತು ಜಾತಿವಾದಿಗಳ ವಕ್ತಾರರಾಗಿ ಸ್ಪರ್ಧಿಸಿದರೆ ಇಷ್ಟು ವರ್ಷ ಸಂಪಾದಿಸಿರುವ ಪ್ರೀತ್ಯಾದರಗಳು ಖಂಡಿತ ಮರೆಯಾಗುತ್ತವೆ. ಇವರು ಸೂಕ್ತ ಆತ್ಮಾವಲೋಕನ ಮಾಡಿಕೊಂಡು ಇಷ್ಟು ವರ್ಷ ಅನುಸರಿಸಿದ ಘನತೆಯ ಹೆದ್ದಾರಿಯಲ್ಲಿ ಮುಂದೆ ಸಾಗಬೇಕೆಂಬುದು ಪ್ರಜ್ಞಾವಂತರ ಅನಿಸಿಕೆಯಾಗಿದೆ. ಡಾ ಮಂಜುನಾಥ್ ವೈದ್ಯಲೋಕವೆಂಬ ಅರಮನೆಯಿಂದ ರಾಜಕಾರಣವೆಂಬ ಕೊಚ್ಚೆಗೆ ಬಂದು ದೇಶದ ಜನತೆಗೆ ದ್ರೋಹ ಮಾಡಬಾರದು.
ಡಾ. ಮಹೇಶ್ ಚಂದ್ರ ಗುರು
ನಿವೃತ್ತ ಪ್ರಾಧ್ಯಾಪಕ, ಮೈಸೂರು ವಿಶ್ವವಿದ್ಯಾಲಯ