- ಐವರು ಆಕಾಂಕ್ಷಿಗಳಿಗೆ ಟಿಕೆಟ್ ನೀಡುವಂತೆ ಆಗ್ರಹ
- ಜನಪ್ರತಿನಿಧಿಗಳಿಲ್ಲದ ಕುರಿತು ವಿಷಾಧಿಸಿದ ಸಂಘ
ಈ ಬಾರಿಯ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರಗಳಿಂದ ಸ್ಪರ್ಧೆ ಮಾಡಲು ಕೊರಮ – ಕೊರಚ (ಕುಳುವ) ಸಮಾಜದ ಆಕಾಂಕ್ಷಿಗಳಿಗೆ ರಾಜಕೀಯ ಪಕ್ಷಗಳು ಟಿಕೆಟ್ ನೀಡಬೇಕೆಂದು ಸಮುದಾಯ ಆಗ್ರಹಿಸಿದೆ.
ಈ ಕುರಿತು ಅಖಿಲ ಕರ್ನಾಟಕ ಕುಳುವ ಮಹಾ ಸಂಘದ ಅಧ್ಯಕ್ಷ ಶಿವಾನಂದ ಎಂ ಭಜಂತ್ರಿ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಈ ಮೂಲಕ ಎಲ್ಲ ರಾಜಕೀಯ ಪಕ್ಷಗಳು ಸಮುದಾಯದ ಆಕಾಂಕ್ಷಿಗಳಿಗೆ ಟಿಕೆಟ್ ನೀಡುವಂತೆ ಕೋರಿದ್ದಾರೆ.
ರಾಜ್ಯ ಪರಿಶಿಷ್ಟ ಜಾತಿಯ 5ನೇ ಅತಿ ದೊಡ್ಡ ಜನಸಂಖ್ಯೆ ಇರುವ ಕೊರಮ – ಕೊರಚ ಸಮುದಾಯವನ್ನು ಪ್ರತಿನಿಧಿಸಲು ಪ್ರಸ್ತುತ ಯಾವುದೇ ಜನಪ್ರತಿನಿಧಿಯೂ ಇರದ ಕುರಿತು ಸಂಘ ವಿಷಾಧಿಸಿದ್ದಾರೆ.
ಕೊರಮ – ಕೊರಚ ಅಲೆಮಾರಿ ಅಸಂಘಟಿತ ಸಮುದಾಯವಾಗಿದ್ದು, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಅತ್ಯಂತ ಹಿಂದುಳಿದಿದೆ ಎಂದು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮೈಯೆಲ್ಲ ಕಾಲು | ಬಸವಣ್ಣನವರ ‘ಕೊಲುವವನೇ ಮಾದಿಗ, ಹೊಲಸು ತಿಂಬವನೇ ಹೊಲೆಯ’ ಸಾಲು ನಿಜಕ್ಕೂ ಹೇಳುವುದೇನು?
“ರಾಜಕೀಯ ಕ್ಷೇತ್ರದಲ್ಲಿ ಈ ಸಮುದಾಯವನ್ನು ಪ್ರತಿನಿಧಿಸಲು ರಾಜ್ಯದಲ್ಲಿ ಪ್ರಸ್ತುತ ಯಾವುದೇ ಸಂಸದರು, ರಾಜ್ಯಸಭಾ ಸದಸ್ಯರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ನಿಗಮ ಮಂಡಳಿ ಅಧ್ಯಕ್ಷರು / ನಿರ್ದೇಶಕರು ಸಹ ಇಲ್ಲ” ಎಂದು ತಿಳಿಸಿದ್ದಾರೆ.
“ಜಿಲ್ಲಾ / ತಾಲ್ಲೂಕು ಪಂಚಾಯತ್ ಅಧ್ಯಕ್ಷರು / ಸದಸ್ಯರು, ಕನಿಷ್ಟ ಪಕ್ಷ ಕೆಪಿಎಸ್ಸಿ ಸದಸ್ಯರಾಗಲು ಇದುವರೆಗೂ ಯಾವೊಬ್ಬ ಪ್ರತಿನಿಧಿಗೂ ಪ್ರಾತಿನಿಧ್ಯ ದೊರಕದಿರುವುದು ಅತ್ಯಂತ ಶೋಷನೀಯ ಸಂಗತಿ” ಎಂದು ವಿಷಾಧಿಸಿದ್ದಾರೆ.
“70ರ ದಶಕದಿಂದ 2014ರವರೆಗೆ ಸಮುದಾಯವನ್ನು ಪ್ರತಿನಿಧಿಸಲು ನಾಲ್ಕು ಶಾಸಕರು, ಒಬ್ಬರು ಸಚಿವರು ಮತ್ತು ವಿಧಾನ ಪರಿಷತ್ ಸದಸ್ಯರಾಗಲು ರಾಜಕೀಯ ಪಕ್ಷಗಳು ಅವಕಾಶಗಳನ್ನು ಕಲ್ಪಿಸಿದ್ದವು” ಎಂದು ಸಂಘ ತಿಳಿಸಿದ್ದಾರೆ.
ಆದರೆ, ಇತ್ತೀಚಿನ ರಾಜಕೀಯ ಮೇಲಾಟದಿಂದ ಬದಲಾದ ಸನ್ನಿವೇಶದಲ್ಲಿ ಸಮುದಾಯವನ್ನು ಎಲ್ಲ ರಾಜಕೀಯ ಪಕ್ಷಗಳು ನಿರ್ಲಕ್ಷ್ಯ ಮಾಡಿವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
“ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ 36 ಮೀಸಲು ಕ್ಷೇತ್ರಗಳ ಪೈಕಿ ಎಲ್ಲ ರಾಜಕೀಯ ಪಕ್ಷಗಳು ತಮ್ಮ ಪಕ್ಷದಲ್ಲಿನ ಐವರು ಆಕಾಂಕ್ಷಿಗಳಿಗೆ ಟಿಕೆಟ್ ನೀಡಬೇಕು” ಎಂದು ಆಗ್ರಹಿಸಿದ್ದಾರೆ.