ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ನೇತೃತ್ವದ ಸರ್ಕಾರದಲ್ಲಿ ಸಚಿವ ಸಂಪುಟ ವಿಸ್ತರಣೆಯಾಗಿದೆ. ಪೂರ್ಣ ಕ್ಯಾಬಿನೆಟ್ ರಚನೆಯಾಗಿದೆ. ಈ ಸಂಪುಟ ಪುನರ್ರಚನೆಯು ಹಲವು ರಾಜಕೀಯ ಸಂದೇಶಗಳನ್ನು ಹೊತ್ತಿದೆ. ಸಂಪುಟದಲ್ಲಿ ಒಟ್ಟು 33 ಸಚಿವರಿದ್ದು, ಒಂದೆಡೆ ಹಲವು ಬಾರಿ ಸಚಿವರಾಗಿರುವ ಹಿರಿಯ ನಾಯಕರಿಗೆ ಮತ್ತೆ ಅವಕಾಶ ನೀಡಲಾಗಿದ್ದರೆ, ಮತ್ತೊಂದೆಡೆ ಹೊಸ ಮುಖಗಳಿಗೂ ಜವಾಬ್ದಾರಿ ನೀಡಲಾಗಿದೆ. ಅನುಭವ ಮತ್ತು ಹೊಸ ನಾಯಕತ್ವದ ನಡುವೆ ಸಮತೋಲನ ಸಾಧಿಸಲು ಕಾಂಗ್ರೆಸ್ ಪ್ರಯತ್ನಿಸಿದೆ.
ಸಚಿವ ಸಂಪುಟದ ಅಂಕಿ-ಅಂಶಗಳನ್ನು ಗಮನಿಸಿದರೆ, ಹಿರಿಯ ನಾಯಕರ ಪ್ರಾಬಲ್ಯ ಇನ್ನೂ ಮುಂದುವರಿದಿರುವುದು ಸ್ಪಷ್ಟವಾಗುತ್ತದೆ. ಡಾ. ಜಿ. ಪರಮೇಶ್ವರ್, ಕೆ.ಎಚ್. ಮುನಿಯಪ್ಪ, ಕೆ.ಜೆ. ಜಾರ್ಜ್, ರಾಮಲಿಂಗಾ ರೆಡ್ಡಿ ಹಾಗೂ ಶರಣ ಪ್ರಕಾಶ್ ಪಾಟೀಲ ಅವರು ತಲಾ ಆರನೇ ಬಾರಿ ಸಚಿವರಾಗಿದ್ದಾರೆ.
ಎಂ.ಬಿ. ಪಾಟೀಲ ಮತ್ತು ಸತೀಶ್ ಜಾರಕಿಹೊಳಿ ಅವರು ಐದನೇ ಬಾರಿ ಸಚಿವರಾಗಿದ್ದರೆ, ಶಿವರಾಜ ತಂಗಡಗಿ, ಜಮೀರ್ ಅಹಮದ್ ಖಾನ್, ಕೃಷ್ಣ ಬೈರೇಗೌಡ, ಪ್ರಿಯಾಂಕ್ ಖರ್ಗೆ, ಈಶ್ವರ್ ಖಂಡ್ರೆ ಹಾಗೂ ಬಸವರಾಜ್ ರಾಯರೆಡ್ಡಿ ನಾಲ್ಕನೇ ಬಾರಿ ಸಚಿವ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
ಇನ್ನೊಂದೆಡೆ, ಯು.ಟಿ. ಖಾದರ್, ಸಂತೋಷ್ ಲಾಡ್, ಎನ್. ಚಲುವರಾಯಸ್ವಾಮಿ ಹಾಗೂ ಲಕ್ಷ್ಮಣ ಸವದಿ ಮೂರನೇ ಬಾರಿ ಸಚಿವರಾಗಿದ್ದಾರೆ. ಬೈರತಿ ಸುರೇಶ್, ಪಿ.ಎಂ. ನರೇಂದ್ರಸ್ವಾಮಿ, ಬಿ. ನಾಗೇಂದ್ರ, ಮಧು ಬಂಗಾರಪ್ಪ, ಸಿ ಪುಟ್ಟರಂಗಶೆಟ್ಟಿ ಹಾಗೂ ಮಂಕಾಳ ವೈದ್ಯ ಅವರು ಎರಡನೇ ಬಾರಿ ಸಚಿವರಾಗುವ ಅವಕಾಶ ಪಡೆದಿದ್ದಾರೆ.
ಈ ಸಂಪುಟದ ಮತ್ತೊಂದು ವಿಶೇಷವೆಂದರೆ 10 ಮಂದಿ ಮೊದಲ ಬಾರಿಗೆ ಸಚಿವರಾಗಿದ್ದಾರೆ. ಅಂದರೆ, 1:3 ಅನುಪಾತದಲ್ಲಿ ಹೊಸಬರಿಗೆ ಅವಕಾಶ ನೀಡಲಾಗಿದೆ. ಡಾ. ಯತೀಂದ್ರ ಸಿದ್ದರಾಮಯ್ಯ, ರುದ್ರಪ್ಪ ಲಮಾಣಿ, ಕೆ.ಎಸ್. ಬಸವಂತಪ್ಪ, ಟಿ. ರಘುಮೂರ್ತಿ, ರಿಜ್ವಾನ್ ಅರ್ಷದ್, ಅಜಯ್ ಸಿಂಗ್, ಕೆ.ಎಂ. ಶಿವಲಿಂಗೇಗೌಡ, ಎಚ್.ಸಿ. ಬಾಲಕೃಷ್ಣ, ವಿಜಯಾನಂದ ಕಾಶಪ್ಪನವರ್ ಹಾಗೂ ವಿಧಾನ ಪರಿಷತ್ ಸದಸ್ಯೆ ಗಾಯತ್ರಿ ಶಾಂತೇಗೌಡ ಮೊದಲ ಬಾರಿಗೆ ಸಚಿವ ಸಂಪುಟ ಪ್ರವೇಶಿಸಿದ್ದಾರೆ. ಈ ಮೂಲಕ ಹೊಸ ಸಾಮಾಜಿಕ ಮತ್ತು ಪ್ರಾದೇಶಿಕ ಸಮೀಕರಣಗಳಿಗೆ ಆದ್ಯತೆ ನೀಡುವ ಪ್ರಯತ್ನ ನಡೆದಂತೆ ಕಾಣುತ್ತಿದೆ.
ಸಂಕ್ಷಿಪ್ತವಾಗಿ ನೋಡುವುದಾದರೆ; ಸಂಪುಟದ ಒಟ್ಟು ಸಚಿವರು: 33
ಆರನೇ ಬಾರಿ ಸಚಿವರು: 5
ಐದನೇ ಬಾರಿ ಸಚಿವರು: 2
ನಾಲ್ಕನೇ ಬಾರಿ ಸಚಿವರು: 6
ಮೂರನೇ ಬಾರಿ ಸಚಿವರು: 4
ಎರಡನೇ ಬಾರಿ ಸಚಿವರು: 6
ಮೊದಲ ಬಾರಿ ಸಚಿವರು: 10
ಸಂಪುಟದ ರಚನೆ ನೋಡಿದರೆ ಕಾಂಗ್ರೆಸ್ ನಾಯಕತ್ವವು ಎರಡು ಪ್ರಮುಖ ಗುರಿಗಳನ್ನು ಸಾಧಿಸಲು ಪ್ರಯತ್ನಿಸಿರುವುದು ಗೋಚರಿಸುತ್ತದೆ. ಮೊದಲನೆಯದಾಗಿ, ಆಡಳಿತದ ಅನುಭವ ಹೊಂದಿರುವ ಹಿರಿಯ ನಾಯಕರನ್ನು ಮುಂದುವರಿಸುವ ಮೂಲಕ ಸರ್ಕಾರದ ಕಾರ್ಯಕ್ಷಮತೆಯನ್ನು ಕಾಪಾಡುವುದು. ಎರಡನೆಯದಾಗಿ, ಹೊಸ ತಲೆಮಾರಿನ ನಾಯಕರು ಮತ್ತು ವಿವಿಧ ಪ್ರದೇಶಗಳು ಹಾಗೂ ಸಮುದಾಯಗಳಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡುವ ಮೂಲಕ ಪಕ್ಷದ ರಾಜಕೀಯ ನೆಲೆಯನ್ನು ವಿಸ್ತರಿಸುವ ಪ್ರಯತ್ನವೂ ನಡೆದಿದೆ.



