- ಒಆರ್ಒಪಿ ಬಾಕಿ ಪ್ರಕರಣ ವಿಚಾರಣೆ ನಡೆಸಿದ ತ್ರಿಸದಸ್ಯ ಪೀಠ
- ಮುಚ್ಚಿದ ಲಕೋಟೆಯಲ್ಲಿ ಸರ್ಕಾರದ ಪ್ರತಿಕ್ರಿಯೆ ತಿರಸ್ಕಾರ
ಒಂದು ಶ್ರೇಣಿ ಒಂದು ಪಿಂಚಣಿ (ಒಆರ್ಒಪಿ) ಯೋಜನೆಯಡಿ ಸುಮಾರು 10-11 ಲಕ್ಷ ಪಿಂಚಣಿದಾರರ ಬಾಕಿಯನ್ನು 2024ರ ಫೆಬ್ರವರಿ 28ರೊಳಗೆ ಮೂರು ಸಮಾನ ಕಂತುಗಳಲ್ಲಿ ಪಾವತಿಸುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೋಮವಾರ (ಮಾರ್ಚ್ 20) ನಿರ್ದೇಶನ ನೀಡಿದೆ.
ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಪಿ ಎಸ್ ನರಸಿಂಹ ಹಾಗೂ ಜೆ ಬಿ ಪರ್ದಿವಾಲಾ ಅವರ ತ್ರಿಸದಸ್ಯ ಪೀಠ, ಪ್ರಸ್ತುತ ಭಾರತೀಯ ಮಾಜಿ ಸೈನಿಕ ಚಳವಳಿಯ (ಐಇಎಸ್ಎಂ) ಒಆರ್ಒಪಿ ಬಾಕಿ ಪಾವತಿಗೆ ಸಂಬಂಧಿಸಿದ ಅರ್ಜಿಯನ್ನು ವಿಚಾರಣೆ ನಡೆಸಿತು.
“ಒಆರ್ಒಪಿ ಯೋಜನೆಗೆ ಸಂಬಂಧಿಸಿದಂತೆ ನ್ಯಾಯಾಲಯವು ನೀಡಿರುವ ತೀರ್ಪನ್ನು ಅನುಸರಿಸಲು ಕೇಂದ್ರ ಸರ್ಕಾರ ಕರ್ತವ್ಯ ಬದ್ಧವಾಗಿದೆ” ಎಂದು ಪೀಠ ಉಲ್ಲೇಖಿಸಿತು.
ಪ್ರಸಕ್ತ ವರ್ಷದ ಜೂನ್ 30 ರೊಳಗೆ 70 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯೋಮಾನದ ನಿವೃತ್ತ ಸೈನಿಕರಿಗೆ ಮತ್ತು ಒಆರ್ಒಪಿ ಬಾಕಿ ಇರುವ ಆರು ಲಕ್ಷ ಕುಟುಂಬ ಪಿಂಚಣಿದಾರರು ಮತ್ತು ಶೌರ್ಯ ಪ್ರಶಸ್ತಿ ವಿಜೇತರಿಗೆ ಏಪ್ರಿಲ್ 30 ರೊಳಗೆ ಬಾಕಿ ಇರುವ ಒಆರ್ಒಪಿ ಪಿಂಚಣಿಯನ್ನು ಒಂದು ಅಥವಾ ಹೆಚ್ಚಿನ ಕಂತುಗಳಲ್ಲಿ ಪಾವತಿಸಬೇಕೆಂದು ನ್ಯಾಯಪೀಠ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ.
ಒಂದು ಶ್ರೇಣಿ ಒಂದು ಪಿಂಚಣಿ ಬಾಕಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ವೇಳೆ ಅಟಾರ್ನಿ ಜನರಲ್ ಆರ್ ವಂಕಟರಮಣಿ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿದ ಕೇಂದ್ರದ ರಕ್ಷಣಾ ಸಚಿವಾಲಯದ ನಿರ್ಧಾರವನ್ನು ನ್ಯಾಯಪೀಠ ನಿರಾಕರಿಸಿತು. “ನಾನು ಈ ಮುಚ್ಚಿದ ಲಕೋಟೆಗಳಿಗೆ ವಿಮುಖನಾಗಿದ್ದೇನೆ. ನ್ಯಾಯಾಲಯದಲ್ಲಿ ಪಾರದರ್ಶಕತೆಯಿರಬೇಕು. ಇಲ್ಲಿ ಆದೇಶಗಳನ್ನು ಅನುಷ್ಠಾನಗೊಳಿಸಲಾಗುತ್ತದೆ. ಆದ್ದರಿಂದ ಇಲ್ಲಿ ಗೋಪ್ಯತೆಗೆ ಸ್ಥಳವಿಲ್ಲ” ಎಂದು ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಅಭಿಪ್ರಾಯಪಟ್ಟರು.
“ಮುಚ್ಚಿದ ಲಕೋಟೆಗಳಲ್ಲಿ ಟಿಪ್ಪಣಿ, ಪ್ರತಿಕ್ರಿಯೆ ಸಲ್ಲಿಸುವ ಪರಿಪಾಠ ಕೊನೆಯಾಗಬೇಕು. ಇದು ಮೂಲಭೂತ ನ್ಯಾಯದ ಪ್ರಕ್ರಿಯೆಗೆ ವಿರುದ್ಧವಾಗಿದೆ” ಎಂದು ನ್ಯಾಯಪೀಠ ಉಲ್ಲೇಖಿಸಿದೆ.
“ರಕ್ಷಣಾ ಸಚಿವಾಲಯವು ಕಾನೂನನ್ನು ತನ್ನ ಇಚ್ಛೆಯಂತೆ ಬಳಸಲಾಗುವುದಿಲ್ಲ. ನ್ಯಾಯಾಲಯದ ಆದೇಶಕ್ಕೆ ವಿರುದ್ಧವಾದ ಜನವರಿ 20ರ ಪ್ರತಿಕ್ರಿಯೆಯನ್ನು ಹಿಂಪಡೆಯಬೇಕು ಇಲ್ಲವೇ ರಕ್ಷಣಾ ಕಾರ್ಯದರ್ಶಿ ಅವರನ್ನು ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚಿಸಲಾಗುತ್ತದೆ” ಎಂದು ನ್ಯಾಯಪೀಠ ಎಚ್ಚರಿಕೆ ನೀಡಿದೆ.
ಅಟಾರ್ನಿ ಜನರಲ್ ಆರ್. ವೆಂಕಟರಮಣಿ, ಮುಚ್ಚಿದ ಲಕೋಟೆಯಲ್ಲಿದ್ದ ವರದಿಯನ್ನು ಓದಿ ಹೇಳಿದರು. “ಬಜೆಟ್ ವೆಚ್ಚವು ಈ ಬೃಹತ್ ವೆಚ್ಚವನ್ನು ಒಂದೇ ಬಾರಿಗೆ ಪೂರೈಸಲು ಸಾಧ್ಯವಾಗುವುದಿಲ್ಲ. ಸಂಪನ್ಮೂಲವು ಸೀಮಿತವಾಗಿದೆ ಮತ್ತು ವೆಚ್ಚವನ್ನು ನಿಯಂತ್ರಿಸುವ ಅಗತ್ಯವಿದೆ. ಹಣಕಾಸು ಸಚಿವಾಲಯವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಾಗಿದ್ದು ಈ ವೆಚ್ಚವನ್ನು ಒಂದೇ ಬಾರಿಗೆ ಪೂರೈಸಲು ಸಾಧ್ಯವಿಲ್ಲ ಎಂದು ಅದು ಹೇಳಿದೆ” ಎಂದು ತಿಳಿಸಿದರು.
ಒಆರ್ಒಪಿ ಬಾಕಿ ಪಾವತಿಯನ್ನು ನಾಲ್ಕು ಕಂತುಗಳಲ್ಲಿ ಪಾವತಿಸಲು ಏಕಪಕ್ಷೀಯವಾಗಿ ನಿರ್ಧರಿಸಿದ್ದಕ್ಕಾಗಿ ಸುಪ್ರೀಂ ಕೋರ್ಟ್ ಮಾರ್ಚ್ 13ರಂದು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು.
ರಕ್ಷಣಾ ಸಚಿವಾಲಯವು ಇತ್ತೀಚೆಗೆ ಸುಪ್ರೀಂ ಕೋರ್ಟ್ನಲ್ಲಿ ಪ್ರಮಾಣಪತ್ರ ಮತ್ತು ಅನುಸರಣೆ ಟಿಪ್ಪಣಿಯನ್ನು ಸಲ್ಲಿಸಿದೆ. 2019-22 ರಲ್ಲಿ ಮಾಜಿ ಸೈನಿಕರಿಗೆ ₹ 28,000 ಕೋಟಿಗಳ ಬಾಕಿ ಪಾವತಿಗೆ ಸಮಯ ವೇಳಾಪಟ್ಟಿಯನ್ನು ನೀಡಲಾಗಿದೆ ಎಂದು ಹೇಳಿದೆ.