ವಿಶ್ವಸಂಸ್ಥೆ ಯ ಪ್ರಧಾನ ಕಾರ್ಯದರ್ಶಿ ಆನ್ಟೊನಿಯೋ ಗುಟೆರ್ರಸ್ ಅವರ ವಕ್ತಾರರು ಅರವಿಂದ್ ಕೇಜ್ರಿವಾಲ್ ಬಂಧನದ ನಂತರ ಭಾರತದಲ್ಲಿ ಉಂಟಾಗುತ್ತಿರುವ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
“ಭಾರತದಲ್ಲಿ ನಾವು ಏನು ಆಶಿಸುತ್ತೇವೆ ಎಂದರೆ ಚುನಾವಣೆಗಳನ್ನು ಹೊಂದಿರುವ ಯಾವುದೇ ದೇಶದಲ್ಲಿ ರಾಜಕೀಯ ನಾಯಕರು ಹಾಗೂ ನಾಗರಿಕರ ಹಕ್ಕುಗಳನ್ನು ಒಳಗೊಂಡು ಪ್ರತಿಯೊಬ್ಬರ ಹಕ್ಕುಗಳನ್ನು ರಕ್ಷಿಸಬೇಕಾಗಿದೆ ಹಾಗೂ ಪ್ರತಿಯೊಬ್ಬರಿಗೂ ಮುಕ್ತ ಹಾಗೂ ನ್ಯಾಯಸಮ್ಮತವಾಗಿ ಮತದಾನ ಮಾಡುವ ವಾತಾವರಣವನ್ನು ಕಲ್ಪಿಸಬೇಕು” ಎಂದು ಆನ್ಟೊನಿಯೋ ಗುಟೆರ್ರಸ್ ಅವರ ವಕ್ತಾರರಾದ ದುಜರ್ರಿಕ್ ತಿಳಿಸಿದ್ದಾರೆ.
ಲೋಕಸಭೆ ಚುನಾವಣೆಗಳು ಕೆಲವೇ ದಿನ ಇರುವ ಹಿನ್ನೆಲೆಯಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಬಂಧನ ಹಾಗೂ ವಿಪಕ್ಷ ಕಾಂಗ್ರೆಸ್ನ ಬ್ಯಾಂಕ್ ಖಾತೆಗಳನ್ನು ರದ್ದುಗೊಳಿಸಿದ ನಂತರ ಉಂಟಾದ ರಾಜಕೀಯ ಅಶಾಂತಿಯ ಬೆನ್ನಲ್ಲೆ ವಿಶ್ವಸಂಸ್ಥೆಯಿಂದ ಪ್ರತಿಕ್ರಿಯೆ ಬಂದಿದೆ.
ಕೇಜ್ರಿವಾಲ್ ಬಂಧನ ಹಾಗೂ ಕಾಂಗ್ರೆಸ್ ಪಕ್ಷದ ಬ್ಯಾಂಕ್ ಖಾತೆಗಳನ್ನು ರದ್ದುಗೊಳಿಸಿದ ನಂತರ ಅಮೆರಿಕ ಹೇಳಿಕೆ ನೀಡಿದ ಒಂದು ದಿನದ ನಂತರದಲ್ಲಿ ವಿಶ್ವಸಂಸ್ಥೆಯು ಪ್ರತಿಕ್ರಿಯೆ ನೀಡಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಪೌರತ್ವ ಪ್ರಮಾಣಪತ್ರ ಪೂಜಾರಿ ಕೊಡುವುದಾದರೆ ಪ್ರಜಾಪ್ರಭುತ್ವಕ್ಕೆ ಅರ್ಥವಿದೆಯೇ?
ಕೇಜ್ರಿವಾಲ್ ಬಂಧನಕ್ಕೆ ಸಂಬಂಧಿಸಿದಂತೆ, ಅಮೆರಿಕವು ನ್ಯಾಯಸಮ್ಮತ, ಪಾರದರ್ಶಕತೆ ಕಾನೂನು ಪ್ರಕ್ರಿಯೆಗಳನ್ನು ನಾವು ಪ್ರೋತ್ಸಾಹಿಸುತ್ತೇವೆ ಎಂದು ಹೇಳಿಕೆ ನೀಡಿತ್ತು. ಇದಾದ ನಂತರ ಭಾರತವು ಸಮನ್ಸ್ ನೀಡಿ ಹೇಳಿಕೆಯ ಬಗ್ಗೆ ವಿರೋಧ ವ್ಯಕ್ತಪಡಿಸಿತ್ತು.
ಭಾರತ ಸಮನ್ಸ್ ನೀಡಿರುವ ಬಗ್ಗೆ ಹೇಳಿಕೆ ನೀಡಿರುವ ಅಮೆರಿಕದ ವಕ್ತಾರರಾದ ಮ್ಯಾಥ್ಯೋ ಮಿಲ್ಲರ್,”ನಾನು ಯಾವುದೇ ಖಾಸಗಿ ರಾಜತಾಂತ್ರಿಕತೆಯ ಸಂವಾದಗಳ ಬಗ್ಗೆ ಮಾತನಾಡುವುದಿಲ್ಲ. ಆದರೆ ನಾವು ಸಾರ್ವಜನಿಕವಾಗಿ ನ್ಯಾಯಸಮ್ಮತ, ಪಾರದರ್ಶಕತೆ ಕಾನೂನು ಪ್ರಕ್ರಿಯೆಗಳನ್ನು ನಾವು ಪ್ರೋತ್ಸಾಹಿಸುತ್ತೇವೆ ಎಂದು ಹೇಳಿದ್ದೆವು. ಯಾರು ಅದನ್ನು ವಿರೋಧಿಸಬಾರದು ಎಂದು ಅಪೇಕ್ಷಿಸುತ್ತೇವೆ ಹಾಗೂ ಇದನ್ನು ನಾವು ಖಾಸಗಿಯಾಗಿ ಸ್ಪಷ್ಟಪಡಿಸುತ್ತೇವೆ” ಎಂದು ತಿಳಿಸಿದರು.
ಅಮೆರಿಕ ಹೇಳಿಕೆಯ ನಂತರ ಭಾರತದ ವಿದೇಶಾಂಗ ಇಲಾಖೆ ಭಾರತದ ಅಮೆರಿಕದ ರಾಯಭಾರಿ ಕಚೇರಿಯ ಉಸ್ತುವಾರಿ ಉಪ ಮುಖ್ಯ ಅಧಿಕಾರಿ ಗ್ಲೋರಿಯಾ ಬೆರ್ಬೆನಾ ಅವರನ್ನು ಕರೆಸಿಕೊಂಡು ಟೀಕೆ ವ್ಯಕ್ತಪಡಿಸಿತ್ತು.
“ಕೇಜ್ರಿವಾಲ್ ವಿಷಯದ ಪ್ರಸ್ತಾಪ ಅನಗತ್ಯವಾಗಿದ್ದು, ನಮ್ಮ ದೇಶದ ಸ್ವತಂತ್ರ ಮತ್ತು ದೃಢವಾದ ಪ್ರಜಾಸತ್ತಾತ್ಮಕವಾದ ಸಂಸ್ಥೆಗಳ ಬಗ್ಗೆ ಹೆಮ್ಮೆಯಿದೆ. ಭಾರತದ ಚುನಾಯಿತ ಹಾಗೂ ಕಾನೂನು ಪ್ರಕ್ರಿಯೆಗಳಿಗೆ ಯಾವುದೇ ಬಾಹ್ಯ ಪ್ರಭಾವ ಬೀರುವುದನ್ನು ನಾವು ಸಂಪೂರ್ಣವಾಗಿ ತಿರಸ್ಕರಿಸುತ್ತೇವೆ. ಭಾರತದಲ್ಲಿ ಕಾನೂನಿನ ಮೂಲಕವಾಗಿ ಕಾನೂನು ಪ್ರಕ್ರಿಯೆ ನಡೆಯುತ್ತದೆ” ಎಂದು ವಿದೇಶಾಂಗ ಇಲಾಖೆಯ ವಕ್ತಾರರಾದ ರಣಧೀರ್ ಜೈಸ್ವಾಲ್ ತಿಳಿಸಿದ್ದರು.