ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) 2,000 ರೂ. ಮುಖಬೆಲೆಯ ನೋಟುಗಳನ್ನು ಹಿಂಪಡೆಯುವುದಾಗಿ ಘೋಷಿಸಿದೆ. ಇಂದಿನಿಂದ (ಮಂಗಳವಾರ) ಸಾರ್ವಜನಿಕರು 2,000 ರೂ. ನೋಟುಗಳನ್ನು ಬದಲಾವಣೆ ಮಾಡಿಕೊಳ್ಳಲು ಅವಕಾಶ ನೀಡಿರುವುದಾಗಿ ಹೇಳಿದೆ.
ಎಲ್ಲ ರಾಷ್ಟ್ರೀಕೃತ ಮತ್ತು ಖಾಸಗಿ ಬ್ಯಾಂಕ್ಗಳಲ್ಲಿ ಜನರು 2,000 ರೂ. ನೋಟುಗಳನ್ನು ನೀಡಿ, 500, 200, 100 ರೂ. ಮುಖಬೆಲೆಯ ನೋಟುಗಳನ್ನು ಪಡೆದುಕೊಳ್ಳಬಹುದಾಗಿದೆ. ನೋಟು ಬದಲಾವಣೆಗೆ ಜನರು ಯಾವ ರೀತಿಯ ಕ್ರಮಗಳನ್ನು ಅನುಸರಿಸಬೇಕು ಎಂದೂ ಆರ್ಬಿಐ ಹೇಳಿದೆ.
ನೋಟು ಬದಲಾವಣೆಗಾಗಿ ಆರ್ಬಿಐ ಅರ್ಜಿ ಬಿಡುಗಡೆ ಮಾಡಿದೆ. ಎಲ್ಲ ಬ್ಯಾಂಕ್ಗಳಲ್ಲಿಯೂ ಈ ಅರ್ಜಿ ದೊರೆಯಲಿದೆ. ಹಣ ಬದಲಾವಣೆ ಮಾಡಬಯಸುವವರು ಅರ್ಜಿಯನ್ನು ಭರ್ತಿ ಮಾಡಿ, ಅರ್ಜಿ ಮತ್ತು 2,000 ರೂ. ನೋಟುಗಳನ್ನು ಬ್ಯಾಂಕ್ಗಳಿಗೆ ಸಲ್ಲಿಸಿ, ನೋಟುಗಳನ್ನು ಬದಲಿಸಿಕೊಳ್ಳಬಹುದು ಎಂದು ಆರ್ಬಿಐ ಹೇಳಿದೆ.
ಹಣವನ್ನು ಠೇವಣಿ ಇಡುವವರು ಅಥವಾ ತಮ್ಮ ಖಾತೆಗಳಿಗೆ ಜಮೆ ಮಾಡುವವರು ಈ ಅರ್ಜಿಯನ್ನು ಭರ್ತಿ ಮಾಡಬೇಕಿಲ್ಲ. ಅಂತಹವರು ತಾವು ಖಾತೆ ಹೊಂದಿರುವ ಬ್ಯಾಂಕ್ಗಳಿಗೆ ಹೋಗಿ, ಚಲನ್ ಭರ್ತಿ ಮಾಡಿ, 2,000 ರೂ. ನೋಟುಗಳನ್ನು ಜಮೆ ಮಾಡಿಕೊಳ್ಳಬಹುದು ಎಂದು ಆರ್ಬಿಐ ತಿಳಿಸಿದೆ.
ಈ ನಡುವೆ, ನೋಟು ಬದಲಾವಣೆಗೆ ಆಧಾರ್ ಕಾರ್ಡ್ ಕಡ್ಡಾಯವಾ ಎಂಬ ಚರ್ಚೆಯೂ ಸಾರ್ವಜನಿಕ ವಲಯದಲ್ಲಿ ನಡೆಯುತ್ತಿದೆ. ಈ ಬಗ್ಗೆ ಎಸ್ಬಿಐ ಸ್ಪಷ್ಟನೆ ನೀಡಿದ್ದು, ಹಣ ಬದಲಾವಣೆಗೆ ಯಾವುದೇ ದಾಖಲೆ ಬೇಕಿಲ್ಲವೆಂದು ಹೇಳಿದೆ.
ಒಬ್ಬ ವ್ಯಕ್ತಿ ಒಮ್ಮೆಗೆ 10 ನೋಟುಗಳನ್ನು ಬದಲಿಸಿಕೊಳ್ಳಬಹುದು ಎಂದು ಆರ್ಬಿಐ ಹೇಳಿದೆ. ಅಲ್ಲದೆ, ಆರ್ಬಿಐ ಹೊರಡಿಸಿರುವ ಸೂಚನೆಯಂತೆ ಸೆಪ್ಟೆಂಬರ್ 30ರವರೆಗೆ ನೋಟು ಬದಲಾವಣೆಗೆ ಅವಕಾಶವಿದೆ.
ಈ ಸುದ್ದಿ ಓದಿದ್ದೀರಾ?: ಕೇಜ್ರಿವಾಲ್ ನಿಯಂತ್ರಿಸಲು ‘ಸುಪ್ರೀಂ’ ಆದೇಶ ಧಿಕ್ಕರಿಸಿ ಸುಗ್ರೀವಾಜ್ಞೆ ಹೊರಡಿಸಿದ ಮೋದಿ ಸರ್ಕಾರ
ಆರ್ಬಿಐ ನಿರ್ಧಾರ ವಿರುದ್ಧ ಸಾರ್ವಜನಿಕ ಮತ್ತು ರಾಜಕೀಯ ವಲಯದಲ್ಲಿ ಟೀಕೆಗಳು, ವಿರೋಧಗಳು ವ್ಯಕ್ತವಾಗುತ್ತಿವೆ. ಕೇಂದ್ರ ಸರ್ಕಾರದ ನಡೆಯು ಮೂರ್ಖತನದ್ದು ಎಂದಿರುವ ಕಾಂಗ್ರೆಸ್ ಹಿರಿಯ ನಾಯಕ ಪಿ ಚಿದಂಬರಂ, ”ಕಪ್ಪುಹಣ ಹೊಂದಿರುವವರಿಗೆ ಸುಲಭವಾಗಿ ಹಣ ಕೂಡಿಡಲು ಈ 2,000 ಮುಖಬೆಲೆಯು ನೋಟುಗಳು ಸಹಾಯ ಮಾಡಿವೆ. ಅಲ್ಲದೆ, ಈಗ ಮತ್ತೆ 2,000 ಮುಖಬೆಲೆಯ ನೋಟು ಬ್ಯಾನ್ ಮಾಡಿ ಆ ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ಅವರಿಗೆ ‘ರತ್ನಗಂಬಳಿ ಹಾಸಿ ಸ್ವಾಗತ ಮಾಡಲಾಗಿದೆ” ಎಂದು ಆರೋಪಿಸಿದ್ದಾರೆ.