ಹೊಸ ಓದು | ಎಸ್. ಗಂಗಾಧರಯ್ಯರ ‘ಗಂಗಪಾಣಿ’ : ಅಜ್ಜಿಯ ಹಾಳು ಮಂಟಪವೂ ಗದ್ದಿಗಪ್ಪನ ತತ್ವ ಮಂಟಪವೂ

Date:

ಊರವರ ಬಾಯಲ್ಲಿ ‘ಹಾಳು ಮಂಟಪ’ವಾಗಿತ್ತು. ಆದರೆ ಗದ್ದಿಗಪ್ಪನಿಗೆ ಅದು ‘ತತ್ವ ಮಂಟಪ’ವಾಗಿತ್ತು. ಸುಮಾರು ಮುನ್ನೂರು ವರ್ಷಗಳ ಹಿಂದೆ ಆ ಹಳ್ಳಿಯ ಅಜ್ಜಿಯೊಂದು ಆ ಕಲ್ಲು ಬಾವಿ ಹಾಗೂ ಕಲ್ಲಿನ ಮಂಟಪವನ್ನು ಕಟ್ಟಿಸಿತ್ತಂತೆ. ದೈವಭಕ್ತೆಯಾಗಿದ್ದ ಅಜ್ಜಿ ಹಬ್ಬ ಹರಿದಿನ ಜಾತ್ರೆಗಳಲ್ಲಿ ಪರೇವಿನ ರೀತಿಯಲ್ಲಿ ಅನ್ನ ಸಂತರ್ಪಣೆ ಮಾಡಿಸುತ್ತಿತ್ತಂತೆ. ಇರುಳಿನಲ್ಲಿ ಸುತ್ತೇಳು ಹಳ್ಳಿಗಳಿಂದ ತತ್ವ ಪದ ಹಾಡುವ ಗುಂಪುಗಳನ್ನು ಕರೆಸಿ ಬೆಳಕರಿಯುವ ತನಕತತ್ವ ಪದಗಳನ್ನು ಹಾಡಿಸುತ್ತಿತ್ತಂತೆ. ಹಂಗಂಥ ಊರಿನ ಹಿರಿಯ ತಲೆಗಳಿಂದ ಕೇಳಿ ತಿಳುಕಂಡಿದ್ದ ಗದ್ದಿಗಪ್ಪ…
ನೆಲದ ನುಡಿಯ ಕತೆಗಾರ ಎಸ್. ಗಂಗಾಧರಯ್ಯ ಅವರ ‘ಗಂಗಪಾಣಿ’ ಎಂಬ ಹೊಸ ಕಾದಂಬರಿಯ ಆಯ್ದ ಭಾಗ, ನಿಮ್ಮ ಓದಿಗಾಗಿ…

ಬಾವಿಯೊಳಗಿಳಿದವನು ತಿರುಗಿ ಬರುವಷ್ಟರಲ್ಲಿ ತಾನು ಅಲ್ಲಿಂದ ಕಾಲು ಕೀಳಬೇಕು. ಇಲ್ಲದೇ ಹೋದಲ್ಲಿ ಅವನ ಪ್ರಶ್ನೆಗಳಿಗೆ ಉತ್ತರಿಸುವ ಮುಲಾಜಿಗೆ ಬೀಳಬೇಕು. ಇದು ಮನಸ್ಸಿಗೆ ಬಂದೊಡನೆ ಗದ್ದಿಗಪ್ಪ ಚಕ್ಕನೆ ಕೂತಲ್ಲಿಂದ ಎದ್ದು ಮಂಟಪದತ್ತ ನಡೆಯತೊಡಗಿದ. ಮಂಟಪದಿಂದ ಬಾವಿಗೆ ಇಂಥದೇ ದಾರಿ ಅಂತ ಇರಲಿಲ್ಲ. ಮಂಟಪಕ್ಕೆ ಹೇಗೆ ಹತ್ತಾರು ಕಾಲು ದಾರಿಗಳು ಸುತ್ತಲಿಂದಲೂ ಬಂದು ಸೇರುತ್ತಿದ್ದವೋ ಹಾಗೆಯೇ ಬಾವಿಯೆಡೆಗೂ ಮಂಟಪದಿಂದಲೂ ನಾಕೈದು ಕಾಲು ದಾರಿಗಳಿದ್ದವು. ಮಂಟಪದ ಜಾಗ ಒಂದು ಕಾಲಕ್ಕೆ ದೊಡ್ಡದೊಂದು ‘ತೋಪು’ ಆಗಿತ್ತು ಎಂಬುದಕ್ಕೆ ಅದರ ಸುತ್ತಲೂ ಇದ್ದ ಎರಡಾಳು ಅವುಚಿದರೂ ತಬ್ಬಲಾರದಷ್ಟು ದಪ್ಪಗಿದ್ದ ಮರದ ಬೊಡ್ಡೆಗಳು ಎದ್ದು ಕಾಣುತ್ತಿದ್ದವು. ತುಂಬಾ ವರ್ಷಗಳಿಂದ ತಮ್ಮ ಮೇಲೆ ನಡೆದಿದ್ದ ಸಕಲ ದಾಳಿಗಳನ್ನೂ ತಾಳಿಕೊಂಡು ಬದುಕಿದ್ದವರುಗಳಂತೆ ಗೋಚರಿಸುತ್ತಿದ್ದವು. ಕೆಲವು ಬೊಡ್ಡೆಗಳನ್ನು ಬೆಂಕಿಯಿಟ್ಟು ಸೂಡಾಡಲಾಗಿತ್ತು. ಮತ್ತೆ ಕೆಲವನ್ನು ಸೌದೆಗಾಗಿ ಸೀಳಲಾಗಿತ್ತು. ಕೆಲವರಲ್ಲಿ ಆ ಬೊಡ್ಡೆಗಳ ಮರಿ ಮೊಮ್ಮಕ್ಕಳಂತೆ ಅವುಗಳೊಳಗಿಂದ ಹಲವು ಜಾತಿಯ ಗಿಡಗೆಂಟೆಗಳು ಬೆಳಕಂಡಿದ್ದವು. ಕೆಲವು ಬೊಡ್ಡೆಗಳ ಮೇಲೆ ಕಲ್ಲು ಮಂಟಪದ ವಾಸಿಗಳು ಒಗೆದು ಹಾರಾಕಿದ್ದ ಥರಂಥರ ಜಾತಿ ಬಣ್ಣಗಳ ಬಟ್ಟೆಗಳು ಹಾರೊಡೆದುಕೊಂಡಿದ್ದವು.  ನಿಮ್ಮಂಥ ನರ ಮನುಷ್ಯ ಏನೆಲ್ಲಾ ಮಾಡಿದರೂ ನಾವು ಇದ್ದೆವು ಅನ್ನುವುದನ್ನು ನಿಮ್ಮಿಂದ ಅಳಿಸಲಾಗದು ಎಂಬಂತೆ ನೋಡಿದವರೊಳಗೆ ಒಂದು ರೀತಿಯ ವಿಷಾದ ಭಾವವನ್ನು ಬಿತ್ತುವಲ್ಲಿ ಆ ಬೊಡ್ಡೆಗಳು ಸಫಲವಾಗಿದ್ದವು.

ಅನ್ಯ ಮನಸ್ಕನಾಗಿದ್ದ ಗದ್ದಿಗಪ್ಪ ಅಂಥ ಬೊಡ್ಡೆಗಳನ್ನು ಬಳಸಿಕೊಂಡು ಈ ಮುಂಚಿನ ಯಾವುದೇ ಕಾಲು ದಾರಿಯಲ್ಲಿ ನಡೆಯದೆ ಅಡ್ಡಂಬಡ್ಡ ನಡೆದ. ಅಲ್ಲಿ ಮಂಡಿ ಎತ್ತರಕ್ಕೆ ಥರಾವರಿ ಕಳೆ ಗಿಡಗಳು ಬೆಳಕಂಡಿದ್ದವು. ಚಡಾವುಗಳಿಲ್ಲದ ಕಾಲಿಗೆ ಚುಚ್ಚುತ್ತಿದ್ದ ನಗ್ಗಿ ಮುಂತಾದ ಮುಳ್ಳುಗಳು ಅವನ ಶತ ಒರಟು ಅಂಗಾಲುಗಳಿಗೆ ಮುತ್ತಿಕ್ಕುತ್ತಿದ್ದವು. ಅವುಗಳು ಆ ಅಂಗಾಲುಗಳನ್ನು ಕಿಂಚಿತ್ತೂ ಚುಳ್ಳೆನ್ನಿಸಲಾಗದೆ ಅಸಹಾಯಕವಾಗಿ ಹಂಗಂಗೇ ಮಡುಕೊಳ್ಳುತ್ತಿದ್ದವು. ನಿನ್ನೆ ಊರಾಡಿಕೊಂಡು ಬರುವಾಗ ಮುರುಕಂಡಿದ್ದ ಜಾಲಿ ಮುಳ್ಳಿನಂಥದ್ದನ್ನು ಚಿಮುಟದಿಂದ ತೆಗೆದಿದ್ದ. ಆದರೆ ನೋವು ಮಾತ್ರ ಇನ್ನೂ ಹಂಗೇ ಇತ್ತು. ಪುಟ್ಟಂಪರ‍್ಲೆ ಥರದ ನಿರುಪದ್ರವಿ ಮುಳ್ಳುಗಳು ಮಂಡಿಯವರೆಗೂ ಎತ್ತಿ ಕಟ್ಟಿದ್ದ ಲುಂಗಿಗೆ ಗಂಟುಬಿದ್ದಿದ್ದವು. ಇದಾವುದನ್ನೂ ಲೆಕ್ಕಿಸದೆ ನಡೆದು ಮಂಟಪದ ಉದ್ದನೆಯ ಹಾಸುಕಲ್ಲಿನ ಮೇಲೆ ಕೂತ. ತನ್ನ ಜತೆಗಿದ್ದ ಇತರರು ಆಗಲೇ ಕಕ್ಕಸ್ಸಿಗೆಂದು ಬಯಲಲ್ಲಿ ಕರಗಿಹೋಗಿದ್ದರು. ಅವರಲ್ಲಿ ಒಂದಿಬ್ಬರು ಕೊಂಚ ದೂರದಲ್ಲಿದ್ದ ಬೇವಿನ ಗಿಡದ ರೆಕ್ಕೆಗಳನ್ನು ಬಗ್ಗಿಸಿಕೊಂಡು ಹಲ್ಲುಜ್ಜುವ ಸಲುವಾಗಿ ಕಡ್ಡಿಗಳನ್ನು ಮುರುಕೊಳ್ಳುತ್ತಿದ್ದರು.

ಅವನು ಉಳುಕಂಡಿದ್ದ ಮಂಟಪ ಊರವರ ಬಾಯಲ್ಲಿ ‘ಹಾಳು ಮಂಟಪ’ವಾಗಿತ್ತು. ಆದರೆ ಗದ್ದಿಗಪ್ಪನಿಗೆ ಅದು ‘ತತ್ವ ಮಂಟಪ’ವಾಗಿತ್ತು. ಸುಮಾರು ಮುನ್ನೂರು ವರ್ಷಗಳ ಹಿಂದೆ ಆ ಹಳ್ಳಿಯ ಅಜ್ಜಿಯೊಂದು ಆ ಕಲ್ಲು ಬಾವಿ ಹಾಗೂ ಕಲ್ಲಿನ ಮಂಟಪವನ್ನು ಕಟ್ಟಿಸಿತ್ತಂತೆ. ಹಂಗಂಥ ಊರಿನ ಹಿರಿಯ ತಲೆಗಳಿಂದ ಕೇಳಿ ತಿಳುಕಂಡಿದ್ದ ಗದ್ದಿಗಪ್ಪ. ಅದು ಆ ಹಿರೀಕರಿಗೆ ಅವರ ತಾತಂದಿರಿಂದಲೋ ಮುತ್ತಾತಂದಿರಿಂದಲೋ ಬಂದ ತಿಳಿವಳಿಕೆಯಾಗಿತ್ತು. ಆ ಮಂಟಪ ಎಂಥದೇ ಮಳೆ ಗಾಳಿಗೆ ಜಗ್ಗದೆ ಇನ್ನೂ ನೂರಾರು ವರ್ಷ ಉಳಿಯುವ ಸ್ಥಿತಿಯಲ್ಲಿತ್ತು. ಚಚ್ಚೌಕವಾಗಿ ಸುಮಾರು ಹದಿನೈದು ಅಡಿಗಳಷ್ಟು ಅಗಲಕ್ಕಿದ್ದ ಅದರ ನೆಲಹಾಸು ಸೊಂಟದೆತ್ತರಕ್ಕಿತ್ತು. ಅದಕ್ಕೆ ಹತ್ತಾಳು ತಿಣುಕಾಡಿದರೂ ಅಲುಗಾಡಿಸಲಾರದಂಥ ಚಾಣದಿಂದ ಚಾಪಿಸಿ ನುಣುಪು ಮಾಡಿದ್ದ ಉದ್ದನೆಯ ದಪ್ಪದ ಚಪ್ಪಡಿ ಕಲ್ಲುಗಳನ್ನು ಅದಿಯಲಾಗಿತ್ತು. ಅವುಗಳ ಸಂಧುಗಳನ್ನು ಗಾರೆಯಿಂದ ನೊರೆಯಲಾಗಿತ್ತು. ಅವುಗಳು ಅಲುಗಾಡಿ ಜರುಗದಂತೆ ತಡೆಗಲ್ಲುಳಾಗಿ ಆ ಚಪ್ಪಡಿಗಳ ಸುತ್ತಲೂ ನೆಡುಗಲ್ಲುಗಳನ್ನು ನೆಡಲಾಗಿತ್ತು. ನಾಲ್ಕು ಮೂಲೆಗೂ ನಾಲ್ಕು ಕೆತ್ತನೆಯಿದ್ದ ಕಂಬಗಳು. ಅವುಗಳು ಆತಿಡಿದಿದ್ದ ಚಪ್ಪಟ್ಟೆ ಮಾಡಿಗೂ ಕಲ್ಲು ಚಪ್ಪಡಿಗಳನ್ನು ಹಾಸಲಾಗಿತ್ತು. ಅವುಗಳ ಸಂಧುಗಳನ್ನು ಗಾರೆಯಿಂದ ನೊರೆದಿದ್ದರೂ ಒಡೆ ಬಂದಿದ್ದೆಡೆಯಲ್ಲಿ ಪುಟ್ಟ ಪುಟ್ಟ ಗಿಡಗಳು ಬೆಳಕಂಡಿದ್ದವು. ದೂರದಿಂದ ನೋಡಿದವರಿಗೆ ಅವು ಭಯಕ್ಕೆ ನಿಮಿರಿ ನಿಂತ ಕೂದಲುಗಳಂತೆ ಕಾಣುತ್ತಿದ್ದವು. ಮಾಡಿನ ನಡೂ ಮಧ್ಯೆ ಕಲ್ಲಿನಿಂದ ಕೆತ್ತಿದ್ದ ಕಲ್ಲಿನ ಕಳಶ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಮಂಟಪದೊಳಗೆ ಕೂರುತ್ತಲೇ ಗದ್ದಿಗಪ್ಪನೊಳಗೆ ತಾನು ಮಂಟಪದ ಬಗ್ಗೆ ಕೇಳಿದ್ದ ಸಂಗತಿಗಳು, ಹೂಳು ಮುಚ್ಚಿಕೊಂಡು ಹೂತೋಗಿದ್ದ ಬಾವಿಗೆ ಮತ್ತೆ ಜೀವ ತುಂಬಿದ್ದು ಮನದ ಮುಡುಕಿನಲ್ಲಿ ಮುಕ್ಕಿರಿಯತೊಡಗಿದವು. ಕಲ್ಲು ಬಾವಿಯನ್ನು ಹಾದಿಹೋಕರ ದಣಿವನ್ನು ತಣಿಸುವ ಸಲುವಾಗಿ ಕಟ್ಟಿಸಿದ್ದಂತೆ. ಅದೇ ದಾರಿಹೋಕರು ಒಂಚೂರು ಕುಂತೋ ನಿಂತೋ ಆಯಾಸವನ್ನು ನೀಗಿಸುವ ಸಲುವಾಗಿ ಮಂಟಪವನ್ನು ಕಟ್ಟಿಸಲಾಗಿತ್ತಂತೆ. ಅಂತೆಯೇ ಅದರ ಸುತ್ತಲೂ ಥರಾವರಿ ಮರಗಳನ್ನು ನೆಡಿಸಿತ್ತಂತೆ. ಆ ಮರಗಳು ಬೆಳೆಯುತ್ತಾ ಹೋದಂತೆ ದೊಡ್ಡದೊಂದು ತೋಪು ನಿರ್ಮಾಣವಾಗಿತ್ತಂತೆ. ದೈವಭಕ್ತೆಯಾಗಿದ್ದ ಅಜ್ಜಿ ಹಬ್ಬ ಹರಿದಿನ ಜಾತ್ರೆಗಳಲ್ಲಿ ಪರೇವಿನ ರೀತಿಯಲ್ಲಿ ಅನ್ನ ಸಂತರ್ಪಣೆ ಮಾಡಿಸುತ್ತಿತ್ತಂತೆ. ಇರುಳಿನಲ್ಲಿ ಸುತ್ತೇಳು ಹಳ್ಳಿಗಳಿಂದ ತತ್ವ ಪದ ಹಾಡುವ ಗುಂಪುಗಳನ್ನು ಕರೆಸಿ ಬೆಳಕರಿಯುವ ತನಕತತ್ವ ಪದಗಳನ್ನು ಹಾಡಿಸುತ್ತಿತ್ತಂತೆ. ಹಳ್ಳಿಗೆ ಬಂದ ಹೊಸತರಲ್ಲಿ ಇದನ್ನು ಕೇಳಿ ಗದ್ದಿಗಪ್ಪನ ಮನಸ್ಸು ಪೂರಾ ರೋಮಾಂಚಿತಗೊಂಡಿತ್ತು. ಹಂಗಾಗಿ ಮೊದಲ ಕೆಲ ದಿನ ಹಳ್ಳಿಯೊಳಗಿನ ದೇವಸ್ಥಾನದ ಪಡಸಾಲೆಯೊಂದರಲ್ಲಿ ಮಲಗುತ್ತಿದ್ದ ಅವನು ಅದೊಂದು ದಿನ ಸೀದಾ ಆ ಕಲ್ಲಿನ ಮಂಟಪಕ್ಕೆ ತನ್ನ ವಾಸ್ತವ್ಯವನ್ನು ಬದಲಿಸಿದ್ದ. ಇವನ ಹಾಗೆ ದಿಕ್ಕು ದೆಸೆಯಿಲ್ಲದೆ ಅಲ್ಲಿ ಉಳಿದಿದ್ದ ಕೆಲವರು ಗದ್ದಿಗಪ್ಪನ ಧೈರ್ಯಕ್ಕೆ ಮೆಚ್ಚಿ ಅವರುಗಳೂ ಅವನನ್ನು ಒಡಗೂಡಿದ್ದರು. ಅಲ್ಲಿ ಯಾವಾಗ ಅಂದರೆ ಆವಾಗ ತಂಬೂರಿಯ ಝೇಂಕವಿರುತ್ತಿತ್ತು. ಹಾಡುಗಳು ನಿನಾದಿಸುತಿದ್ದವು. ಅವೆರಡೂ ಒಡಗೂಡಿದ ನಾದದಾ ನದಿ ಮೈದಾಳುತ್ತಿತ್ತು.

ಇದನ್ನು ಓದಿದ್ದೀರಾ?: ಹೊಸ ಓದು | ನೆಲದ ನುಡಿ ದುಡಿಸಿಕೊಂಡ ತುಂಬಾಡಿ ರಾಮಯ್ಯರ ‘ಜಾಲ್ಗಿರಿ’- ಸಾಮಾನ್ಯರ ಅಸಾಮಾನ್ಯ ಕೃತಿ

ಅಜ್ಜಿಯ ಕಾಲಾ ನಂತರ ತೋಪಿನ ಮರಗಳೆಲ್ಲಾ ಕೊಲೆಗೀಡಾಗಿದ್ದವು. ಮಂಟಪ ಕಳೆಗುಂದಿತ್ತು. ಕಲ್ಲು ಬಾವಿಯ ಸುತ್ತಲೂ ಗಿಡಮರ ಸೆತ್ತೆ ಸೆದೆ ಬೆಳಕಂಡಿದ್ದವು. ತಟ್ಟಂಥ ನೋಡಿದರೆ ಕಾಣದಂತೆ ಅವುಗಳೆಲ್ಲಾ ಬಾವಿಯನ್ನು ಪೂರಾ ಮುಚ್ಚಾಕಿದ್ದವು. ಗದ್ದಿಗಪ್ಪನ ವಾಸ್ತವ್ಯ ಮಂಟಪಕ್ಕೆ ಕಳೆ ತಂದಿತ್ತು. ಅದರ ಸುತ್ತಣ ಅಂಗಣವೆಲ್ಲಾ ಸಿಸ್ತಾಗಿ ಚೊಕ್ಕಗೊಂಡಿತ್ತು. ಸಣ್ಣಪುಟ್ಟ ಗಿಡಗಳು, ಮುಳ್ಳುಗಂಟಿಗಳನ್ನು ಕೀಳುವುದಕ್ಕಾಗಿ ಗದ್ದಿಗಪ್ಪ ದಿನವೂ ಬಿಡುವಿನ ವೇಳೆಯನ್ನು ಬಳಸಿಕೊಳ್ಳುತ್ತಿದ್ದ. ಕ್ರಮೇಣ ಅವನಿಗೆ ಅದೇ ನೆಮ್ಮದಿಯ ತಾಣವಾಗಿಹೋಯ್ತು. ಅವನೊಂದಿಗೆ ಇದ್ದವರೂ ಗದ್ದಿಗಪ್ಪನ ಅಚ್ಚುಕಟ್ಟಿನ ಕೆಲಸದಲ್ಲಿ ಕೈಜೋಡಿಸಿದ್ದರು. ಹಿಂಗೆ ಮಂಟಪದ ಆಸುಪಾಸಿನದೆಲ್ಲಾ ಚೊಕ್ಕಗೊಂಡು ಮದವೀಯುತ್ತಿರುವಂಥ ಹೊತ್ತಲ್ಲಿ ಅದೊಂದು ದಿನ ಗದ್ದಿಗಪ್ಪನಿಗೆ ಆ ಕಲ್ಲು ಬಾವಿಯನ್ನೂ ಯಾಕೆ ಅಚ್ಚುಕಟ್ಟು ಬಾರದು ಅಂತ ಮನಸ್ಸಿಗೆ ಬಂದಿತ್ತು. ಬಂದದ್ದೇ ತಡ ತನ್ನ ಜೊತೆಗಾರರಿಗೂ ಅದನ್ನು ಹೇಳಿದ್ದ. ಅವರೂ ಅದಕ್ಕೆ ಹೂಗುಟ್ಟಿದ್ದರು. ದಿನದಲ್ಲಿ ಒಂದಷ್ಟತ್ತು ಬಾವಿಯ ಕೆಲಸಕ್ಕೆ ಮುಡುಪಾಗಿಟ್ಟರು. ತಿಂಗಳು ಕಳೆಯುವುದರೊಳಗೆ ಬಾವಿಯ ಸುತ್ತಮುತ್ತ ಹಾಗೂ ಒಳಗೆಲ್ಲಾ ಬೆಳಕಂಡಿದ್ದ ಗಿಡಗಳೆಲ್ಲಾ ಕಣ್ಮರೆಯಾದವು. ಅವುಗಳ ಜೊತೆಗೆ ಸೆತ್ತೆ ಸೆದೆ ಕೂಡಾ.

ಅದಕ್ಕೆ ಯಾವಾಗ ನಿಜವಾದ ಬಾವಿಯ ರೂಪ ಸಿಕ್ಕತೊಡಗಿತೋ ಗದ್ದಿಗಪ್ಪನಿಗೆ ಅದು ಥೇಟ್ ತನ್ನೂರಿನ ತೋಟದಲ್ಲಿ ತಾನು ತೋಡಿಸಿದ್ದ ಬಾವಿಯ ಥರವೇ ಕಾಣತೊಡಗಿತ್ತು. ದಿನದಿಂದ ದಿನಕ್ಕೆ ಅದು ಎದೆಗೆ ಹತ್ತಿರವಾಗತೊಡಗಿತ್ತು. ಹಂಗಾಗಿ ಆ ಬಾವಿಯಲ್ಲಿ ನೂರಾರು ವರ್ಷಗಳಿಂದ ತುಂಬಿಕೊಂಡಿದ್ದ ಹೂಳನ್ನು ಹೆಂಗಾದರೂ ಮಾಡಿ ಎತ್ತಲೇಬೇಕು ಅನ್ನುವ ತೀರ್ಮಾನಕ್ಕೆ ಅವನನ್ನು ತಂದು ನಿಲಾಕಿತ್ತು. ಆದರೆ ಹೂಳೆತ್ತುವುದು ಅಷ್ಟು ಸುಲಭದ ಮಾತಾಗಿರಲಿಲ್ಲ. ಅದಕ್ಕಾಗಿ ತಾವು ತನ್ನ ಸಂಗಡಿಗರು ಎಷ್ಟೇ ತಿಣುಕಿದರೂ ಅದು ವರ್ಷಗಟ್ಟಲೆ ಹಿಡಿಯುತ್ತಿತ್ತು. ಆ ಕಾರಣಕ್ಕೇ ಗದ್ದಿಗಪ್ಪ ಒಂದು ತೀರ್ಮಾನಕ್ಕೆ ಬಂದಿದ್ದ. ಅದೆಂದರೆ ಈ ಬಗ್ಗೆ ಹಳ್ಳಿಯವರನ್ನೂ ಒಂದು ಮಾತು ಕೇಳುವುದು. ಅಂತೆಯೇ ಅವರ ನೆರವಿನೊಂದಿಗೆ ಕೆಲಸ ಮುಂದುವರೆಸುವುದು. ಈ ಸಲಹೆ ಹಳ್ಳಿಯವರಿಗೂ ಹಿಡಿಸಿತ್ತು. ಈಗಾಗಲೇ ತನ್ನ ಸಾತ್ವಿಕ ವ್ಯಕ್ತಿತ್ವದಿಂದ ಅವರ ಗಮನ ಸೆಳೆದಿದ್ದ ಗದ್ದಿಗಪ್ಪ. ಅವನ ಮಾತಿನಂತೆ ಇಡೀ ಹಳ್ಳಿಯೇ ಅದೊಂದು ಪುಣ್ಯದ ಕೆಲಸ ಎಂಬಂತೆ ಅದರಲ್ಲಿ ತೊಡಗಿಸಿಕೊಂಡಿತ್ತು. ಇದರ ಪರಿಣಾಮವಾಗಿ ತಿಂಗಳೊಪ್ಪತ್ತು ಅನ್ನುವುದರೊಳಗೆ ಬಾವಿಯೊಳಗಿನ ಹೂಳು ಕರಗತೊಡಗಿತು. ಬಾವಿಗೆ ಕಟ್ಟಿದ್ದ ಕಲ್ಲುಗಳ ಚಂದಕ್ಕೆ ಊರಿಗೆ ಊರೇ ಬೆಕ್ಕಸ ಬೆರಗಾಯಿತು. ಇಷ್ಟು ಚಂದದ ಬಾವಿಯನ್ನು ಹೀಗೆ ಹಾಳು ಬಿಟ್ಟಿದ್ದಕ್ಕೆ ಪಶ್ಚಾತ್ತಾಪ ಪಟ್ಟಿತು.

ಹೂಳೆತ್ತುವ ಕೆಲಸ ಹೆಚ್ಚೂ ಕಡಿಮೆ ಅರ್ಧ ಮುಗಿದಿತ್ತು. ಗದ್ದಿಗಪ್ಪ ಮತ್ತವನ ಸಂಗಡಿಗರು ಬಾವಿಯ ಕೆಲಸದಲ್ಲಿ ಪೂರಾ ಮುಳುಗಿದ್ದರಿಂದ ತಮ್ಮ ದೈನಂದಿನ ಕಾಯಕವನ್ನು ಸ್ವಲ್ಪ ದಿನಗಳ ಮಟ್ಟಿಗೆ ಮರೆತೇಬಿಟ್ಟದ್ದರು. ಆದರೆ ಅವರಿಗೆ ಊಟ ತಿಂಡಿಗೆ ಯಾವ ದಡಾಬಂದೂ ಆಗಿರಲಿಲ್ಲ. ಯಾಕೆಂದರೆ ಬಾವಿಯ ಕೆಲಸಕ್ಕೆ ಬರುತ್ತಿದ್ದವರ ಮನೆಗಳಿಂದ ಅವರಿಗಷ್ಟೇ ಅಲ್ಲದೆ ಗದ್ದಿಗಪ್ಪ ಮತ್ತವನ ಒಡನಾಡಿಗಳಿಗೂ ಆಗುವಷ್ಟು ಬರುತ್ತಿದ್ದವು. ಹೂಳೆತ್ತುವ ಕೆಲಸ ಭರದಿಂದ ಸಾಗಿತ್ತು. ಹೆಚ್ಚೂ ಕಡಿಮೆ ಮುಕ್ಕಾಲು ಭಾಗ ಕೆಲಸವೂ ಮುಗಿದಿತ್ತು. ನೂರಾರು ವರ್ಷಗಳಿಂದ ಸೆತ್ತೆ ಸೆದೆಗಳೆಲ್ಲಾ ಕಳಿತು ಒಂದೊಳ್ಳೆಯ ಗೊಬ್ಬರವಾಗಿತ್ತು. ಹಂಗಾಗಿ ಹಳ್ಳಿಯವರು ಪೈಪೋಟಿಯ ಮೇಲೆ ಅದನ್ನು ತಂತಮ್ಮ ಹೊಲ ಗದ್ದೆಗಳಿಗೆ ಸಾಗಿಸಿಕೊಂಡುಬಿಡುತ್ತಿದ್ದರು.

ಹಿಂಗಿರುವಾಗ ಅದೊಂದು ದಿನ ಅದುವರೆವಿಗೂ ಒಣಪಡಿಯಾಗಿರುತ್ತಿದ್ದ ಹೂಳಿನಲ್ಲಿ ಇದ್ದಕ್ಕಿದಂತೆ ಪಸೆ ಕಾಣಿಸಿಕೊಂಡಿತು. ಅದು ಹೂಳೆತ್ತುತ್ತಿದ್ದವರೊಳಗೆ ಹೊಸಾ ಹುಮ್ಮಸ್ಸನ್ನು ಹುಟ್ಟಾಕಿತು. ಮತ್ತೆ ಒಂದೆರಡು ಅಡಿ ಅನ್ನುವುದರೊಳಗೆ ಬಾವಿಯ ಈಶಾನ್ಯ ಮೂಲೆಯಿಂದ ಪಸೆಯಾಡುತ್ತಿದ್ದ ಹೂಳಿನೊಳಗಿಂದ ನೀರು ಜಿಲುಪತೊಡಗಿತು. ಅದೊಂದು ನೀರಿನ ಕಣ್ಣು ಅಂಥ ಗೊತ್ತಾಗುತ್ತಲೇ, ಆ ಕಣ್ಣನ್ನು ಕೊಂಚ ವಾರೆ ಮಾಡುತ್ತಲೇ ಒಮ್ಮೆಗೆ ನೀರು ಚಿಮ್ಮತೊಡಗಿತು. ಕೆಳಕ್ಕೆ ಸೋಸತೊಡಗಿದಂತೆ ಬಾವಿಯ ಇನ್ನೊಂದು ಮೂಲೆಯಿಂದಲೂ ಮತ್ತೊಂದು ನೀರಿನ ಕಣ್ಣು ತನ್ನಿರುವು ತೋರಿತು. ತದನಂತರ ಬಾವಿಯ ನಡೂ ಮಧ್ಯದಲ್ಲಿದ್ದ ಕಣ್ಣು. ಅದನ್ನು ಬಿಡಿಸಿದ್ದೇ ತಡ ನೀರು ಬುದುಗುಡತೊಡಗಿತು. ಇದರಿಂದ ಹೂಳೆತ್ತುವ ಕೆಲಸ ಕಷ್ಟವಾಗತೊಡಗಿತು. ಆದರೆ ಊರಿನವರಿಗೆ ಅದನ್ನು ಅಷ್ಟಕ್ಕೇ ಬಿಡಲು ಮನಸ್ಸಿಲ್ಲದೆ ಆಯಿಲ್ ಎಂಜಿನ್ನೊಂದನ್ನು ತರಿಸಿ ನೀರನ್ನು ಆಚೆ ಹೊಡೆಯತೊಡಗಿದರು. ಅದು ಆಚೆ ಉಗ್ಗುತ್ತಿದ್ದರೆ ಅದಕ್ಕೇ ಪೈಪೋಟಿಗಿಳಿದಂತೆ ನೀರಿನ ರಭಸ ಜೋರಾಗುತ್ತಲೇ ಇತ್ತು. ಅಂತು ಹಂಗೂ ಹಿಂಗೂ ಊರಿನವರೂ ಛಲ ಬಿಡದೆ ಹಿಡಿದ ಕೆಲಸವನ್ನು ಮುಗಿಸಿದರು.

ಇದನ್ನು ಓದಿದ್ದೀರಾ?: ಉ. ಪ್ರದೇಶ | ನಾಲ್ಕು ವರ್ಷದಿಂದ ಹಣ ನೀಡದ ಯೋಗಿ ಸರ್ಕಾರ: ಹೈಕೋರ್ಟ್‌ ಮೊರೆ ಹೋದ ದೇವಾಲಯಗಳು!

ದಿನವೊಂದು ಕಳೆಯುವುದರೊಳಗೆ ಬಾವಿಯಲ್ಲಿ ನೀರು ಹೆಚ್ಚೂ ಕಡಿಮೆ ಅರ್ಧ ಹಂಪಲಿನವರೆಗೂ ಹತ್ತಿತು. ಮತ್ತೊಂದೆರಡು ದಿನಕ್ಕೆ ಅದು ಮತ್ತೊಂದೆರಡು ಮೆಟ್ಟಿಲುಗಳನ್ನೂ ದಾಟಿ ಮೇಲೆ ಬಂದಿತ್ತು. ಇಂಥ ಬಾವಿಗಳು ಈಗಾಗಲೇ ಪೂರಾ ಇಲ್ಲದಿರುವಾಗ ಎಲ್ಲದೂ ಕೊಳವೆ ಬಾವಿಗಳ ಆಶ್ರಯದಲ್ಲೇ ನಡೆಯುತ್ತಿರುವಾಗ ಈ ಬಾವಿಯಲ್ಲಿ ಕಾಣಿಸಿಕೊಂಡ ನೀರು ಊರಿನ ಹಿರೀಕರನ್ನು ಒಳಗೊಂಡು ಎಲ್ಲರೊಳಗೂ ಚೋದ್ಯದ ಸಂಗತಿಯಾಗಿತ್ತು. ಒಂದು ವಾರ ಕಳೆಯುವುದರೊಳಗೆ ಬಾವಿಯ ನೀರು ಪೂರಾ ತಳ ಕಾಣುವಂತೆ ಪೂರಾಂದರೆ ಪೂರ ತಿಳಿತುಕೊಂಡಿತ್ತು. ಸುತ್ತಮುತ್ತಲ ಹಳ್ಳಿಗಳಿಂದ ಬಾವಿಯನ್ನು ನೋಡಲೆಂದೇ ಜನ ಬರತೊಡಗಿದರು. ಹಂಗೆ ಬಂದವರಲ್ಲಿ ಕೆಲವರು ಗಂಗಾ ಪೂಜೆಯನ್ನು ಮಾಡಿಕೊಂಡು ಹೋಗತೊಡಗಿದರು. ತಿಂಗಳುಗಳು ಕಳೆಯುವುದರೊಳಗೆ ಬಾವಿಗೆ ಹೊಸ ಕಳೆ ಬಂದಿತ್ತು. ‘ಅಲ್ಲಾ ಎಷ್ಟೋ ದಪ ಸಾವ್ರ ಅಡಿ ಕೊರುದ್ರೂ ಒಂತೊಟ್ಟೂ ನೀರು ಬೀಳಲ್ಲ. ಅಂತಾದ್ರಲ್ಲಿ ಹಿಂಗೆ ಬಾವಿಯಲ್ಲಿ ನೀರು ಬರುತ್ತೆ ಅಂದ್ರೆ, ಅದ್ಯಾವ ಪುಣ್ಯಾತ್ಮ ಹುಡುಕಿದ್ನೋ ಈ ನೀರಿನ ಕಣ್ಣನ್ನ,’ ಅಂತ ಗದ್ದಿಗಪ್ಪನಿಗೆ ಅನ್ನಿಸಿದಂತೆ ಊರಿನಲ್ಲಿ ಹಲವರಿಗೆ ಅನ್ನಿಸಿತ್ತು. ಆದರೆ ಗದ್ದಿಗಪ್ಪ ಮನಸ್ಸು ಮಾಡದೇ ಹೋಗಿದ್ದರೆ ಅದು ಹಂಗೇ ಮುಚ್ಚಿಕೊಂಡೇ ಹೋಗಿಬಿಡುತ್ತಿತ್ತು. ಈ ಕುರಿತು ಊರು ಗದ್ದಿಗಪ್ಪನ ಬಗ್ಗೆ ಮೆಚ್ಚಿಗೆ ಮಾತುಗಳನ್ನು ಆಡುತ್ತಿತ್ತು.

* * *

ಗದ್ದಿಗಪ್ಪ ಊರಿನಲ್ಲಿ ಕಿರುಬನ ಹೊಲದಲ್ಲಿ ಬಾವಿಯನ್ನು ತೆಗೆಯಬೇಕೆಂದು ಅಂದುಕೊಂಡು ತನ್ನೂರಿನಲ್ಲಿ ಕಡ್ಡಿ ಪಾಯಿಂಟ್ ಮಾಡುವ ಇರ್ಪಣ್ಣ ಮತ್ತು ಚಿಕ್ಕ ಇಬ್ಬರನ್ನೂ ಕರೆದು ನೀರಿರುವ ಜಾಗ ತೋರಿಸುವಂತೆ ಕೇಳಿದ್ದ. ಇಬ್ಬರೂ ಹೆಚ್ಚೂ ಕಡಿಮೆ ಒಂದೇ ಜಾಗಕ್ಕೆ ತೋರಿಸಿದ್ದರು. ಹೆಂಗೂ ಬಾವಿ ಒಂಚೂರು ಆ ಕಡೆ ಈ ಕಡೆಯಾದರೂ ತಡಕಣುತ್ತೆ ಅಂತ ಧೈರ್ಯಮಾಡಿ ಕೆಲಸ ಶುರು ಮಾಡಿಸಿದ್ದ. ಮುಂಚೆ ಆ ಜಾಗದಲ್ಲೊಂದು ಮೂಗುತ್ತವಿತ್ತು. ಅಂತೆಯೇ ಹೊಲದ ತಡಿಯಲ್ಲಿ ಕರಾಬಿನ ಹಳ್ಳವೊಂದಿತ್ತು. ಕಡ್ಡಿಪಾಯಿಂಟ್ ಮಾಡಿದ ಇಬ್ಬರೂ ಒಂದೇ ಕಡೆ ಪಾಯಿಂಟ್ ತೋರಿಸಲು ಅದೂ ಕಾರಣವಾಗಿತ್ತು. ಕೆಲಸ ಶುರು ಮಾಡಿದ ಕೆಲ ದಿನಗಳಲ್ಲಿ ಬರೀ ಒಣಪಡಿ. ಹತ್ತಾರು ಜನ ಬೆಳಗಿನಿಂದ ಸಂಜೆಯವರೆಗೂ ಮಾಡುತ್ತಿದ್ದ ಬಾವಿ ಕೆಲಸವನ್ನು ಊರಿಗೆ ಊರೇ ನಿಂತು ನೋಡುತ್ತಿತ್ತು. ಬಾವಿಯಲ್ಲಿ ಒಂಚೂರು ನೀರಿನ ಪಸೆಯಾಡಲು ಎರಡು ತಿಂಗಳುಗಳು ಹಿಡಿದಿದ್ದವು.

ಈ ಎರಡು ತಿಂಗಳುಗಳಲ್ಲಿ ಬಾವಿಯ ಕೆಲಸ ಇನ್ನೂ ನಡೆಯುತ್ತಿರುವಾಗಲೇ ಗದ್ದಿಗಪ್ಪ ಆ ಕಿರುಬನ ಹೊಲದ ಸುತ್ತ ಬೇಲಿಯೊಂದನ್ನು ಹಾಕಬೇಕೆಂಬ ತೀರ್ಮಾನಕ್ಕೆ ಬಂದಿದ್ದ. ಹಂಗಾಗಿ ಹಾಲವಾಣ, ತುರುಕತ್ತಿ, ಕಡ್ಡಿ ಕಳ್ಳಿ, ಊರು ಕಳ್ಳಿ ಮುಂತಾದ ಹಸಿರು ಕಡ್ಡಿಗಳನ್ನೂ, ಕತ್ತಾಳೆ ಮುಂತಾದ ಗೆಡ್ಡೆಗಳನ್ನೂ ತಂದು ಮೊದಲಿಗೆ ಮಾರು, ಅರೆ ಮಾರಿಗೆ ಅವುಗಳನ್ನು ನೆಟ್ಟ. ಅವುಗಳ ಮಧ್ಯಕ್ಕೆ ರೋಜಾಲ, ಜಾಲಗಿರಿ, ರಾತ್ರಿರಾಣಿ, ಪಾರಿಜಾತ, ಕಾಡು ಮಲ್ಲಿಗೆ, ಸುರಹೊನ್ನೆ ಮುಂತಾದ ಹೂವಿನ ಗಿಡಗಳನ್ನು ಇಟ್ಟ. ಹೊಲದ ತೆಂಕಣದಲ್ಲಿದ್ದ ಕರಾಬಿನ ಹಳ್ಳದಿಂದ ಎರಡು ಅಥವಾ ಮೂರು ದಿನಳಿಗೊಮ್ಮೆ ಈಟೀಟು ನೀರು ಹಾಕುತ್ತಿದ್ದ. ತಿಂಗಳೊಪ್ಪತ್ತು ಅನ್ನುವುದರೊಳಗೆ ಅವುಗಳು ಚಿಗುರಾಡಿದ್ದವು. ಬಾವಿಯ ಕೆಲಸ ಮುಗಿಯುವುದರೊಳಗೆ ಸೊಂಟದೆತ್ತರಕ್ಕೆ ಬೆಳೆದು ನಿಂತಿದ್ದವು. ಅವುಗಳ ನಡುವೆ ರೋಜಲ ಗಿಡಗಳಂತೂ ಆ ಬೆಳೆತಕ್ಕೇ ಹೂವರಳಿಸತೊಡಗಿದ್ದವು. ಮತ್ತೊಂದಷ್ಟು ದಿನಕ್ಕೆ ಗದ್ದಿಗಪ್ಪನ ಕಿರುಬನ ಹೊಲದ ಸುತ್ತಲೂ ಹಸಿರು ಬೇಲಿ ಎದೆಮಟ್ಟ ಬೆಳೆದಿತ್ತು. ಊರಕಡೆ ಮಕ ಮಾಡಿ ಹೊಳೆ ಬಾಗಿಲಿಗೆ ಜಾಗ ಬಿಟ್ಟಿದ್ದ. ಆ ಜಾಗದ ಇಕ್ಕೆಲಕ್ಕೂ ಒಂದೊಂದು ದಿಪ್ಪಾದ ಕೊಣಬೇವಿನ ಚಿಗುರು ಗುಜ್ಜುಗಳನ್ನು ನೆಟ್ಟಿದ್ದ. ಅವಾಗಲೇ ಚಿಗಿತುಕೊಂಡಿದ್ದವು. ಬಿದಿರು ಮೆಳೆಯ ಮುಳ್ಳಿನ ರೆಕ್ಕೆಗಳಿಂದ ತಡಿಕೆಯೊಂದನ್ನು ಕಟ್ಟಿದ್ದ. ನಂತರ ಅದನ್ನು ಒಂದು ಕೊಣಬೇವಿನ ಗುಜ್ಜಿಗೆ ಕಟ್ಟಿ ಮತ್ತೊಂದು ಕಡೆ ತೆಗೆಯುವಂತೆ ಮಾಡಿದ್ದ.

ಅವತ್ತು ಗದ್ದಿಗಪ್ಪನ ಹೆಂಡತಿ ಆಜಮ್ಮ ಊರಿನ ಇತರೆ ಹೆಂಗಸರೊಂದಿಗೆ ಮಣ್ಣಿನ ಮೆಟ್ಟಿಲುಗಳಲ್ಲಿ ಬಾವಿಯೊಳಕ್ಕಿಳಿದು ಗಂಗಾ ಪೂಜೆ ಮಾಡಿದ್ದು, ಅದಾದ ಕೆಲವು ದಿನಕ್ಕೆ ಇದೇ ತಾನೀಗ ಇರುವ ಬಾವಿಯಲ್ಲಿ ಹೂಳೆತ್ತುವಾಗ ಈಶಾನ್ಯ ಮೂಲೆಯಲ್ಲಿ ನೀರಿನ ಕಣ್ಣು ಸಿಕ್ಕಿದಂತೆ ಅಲ್ಲೂ ಸಿಕ್ಕಿದ್ದು, ಮತ್ತಂದಷ್ಟು ದಿನಕ್ಕೆ ದಿನವೂ ಆಯಿಲ್‌ಎಂಜಿನ್ ಇಟ್ಟು ನೀರನ್ನು ಆಚೆ ಹೊಡೆದು ಕೆಲಸ ಮಾಡುವಷ್ಟು ನೀರಿನ ಕಣ್ಣುಗಳು ಕಾಟ ಕೊಟ್ಟಿದ್ದು ಎಲ್ಲಾ ಕಣ್ಮುಂದೆ ತುಟುಕಾಡ ಹತ್ತಿದವು. ಆ ನಂತರ ನಾಲ್ಕೂ ಕಡೆ ಹತ್ತಿ ಇಳಿಯುವಂತೆ ಅದಕ್ಕೆ ಕಲ್ಲುಗಳನ್ನು ಕಟ್ಟಿಸಿದ್ದು, ಹಾಲಿನಂತೆ ತಿಳಿಯಾಗಿದ್ದ ಅದರಲ್ಲಿ ಗುಡಿಯ ದೇವರುಗಳಿಗೆ ದಿನವೂ ನೀರು ತಗಂಡು ಹೋಗುತ್ತಿದ್ದದ್ದು, ಅಂತೆಯೇ ಮಾರಿ ಹಬ್ಬ, ಕಾರಬ್ಬ, ಶಿವರಾತ್ರಿ ಮುಂತಾದ ಹಬ್ಬಗಳಲ್ಲಿ ಹುಳ್ಳಿಕಾಳು ಇಲ್ಲಾ ಇತರೆ ಬೇಳೆಗಳು ಚೆನ್ನಾಗಿ ಬೇಯುತ್ತವೆಂದೂ ಆ ಬಾವಿಯ ನೀರನ್ನು ಉಪಯೋಗಿಸುತ್ತಿದ್ದದ್ದು,ಇನ್ನು ಗಂಗಾ ಪೂಜೆ ಮಾಡುವವರು, ಶಾಸ್ತ್ರದವರು ಹೇಳಿದಂತೆ ಬಾವಿಗೆ ಪ್ರದಕ್ಷಿಣೆ ಹಾಕುತ್ತಿದ್ದದ್ದು ಹಾಗೂ ಇವೆಲ್ಲವುಗಳ ನಡುವೆ ಊರಿನ ಹುಡುಗರು ಕಣ್ಣಲ್ಲಿ ಕಣ್ಣಿಟ್ಟು ಕಾದರೂ ಅದಾವ ಮಾಯದಲ್ಲೋ ಹೋಗಿ ಈಜು ಬೀಳುತ್ತಿದ್ದದ್ದು…

ಇದನ್ನು ಓದಿದ್ದೀರಾ?: ಹೊಸ ಓದು | ನಡುಬಗ್ಗಿಸದ ಎದೆಯ ದನಿ: ಶೂದ್ರ ಯುವಕರು ಓದಬೇಕಾದ ಪುಸ್ತಕ

ಅಷ್ಟು ಅಕ್ಕರೆಯಿಂದ ಕಟ್ಟಿಸಿದ್ದ ಆ ಬಾವಿ ತಾನಿಲ್ಲದ ಈ ಇಪ್ಪತ್ತು ವರ್ಷಗಳಲ್ಲಿ ಏನಾಗಿದೆಯೋ? ಹಂಗೇ ಈ ಬಾವಿಯ ಥರವೇ ಹೂಳು ತುಂಬಿಕೊಂಡಿರಬಹುದೆ? ಅಥವಾ ಊರ ದೇವರುಗಳಿಗೆ ಹಾಗೂ ಹಬ್ಬಗಳಲ್ಲಿ ನೀರನ್ನು ತಗಂಡು ಹೋಗುತ್ತಿದ್ದ ಕಾರಣಕ್ಕೆ ಊರವರೇ ಅದನ್ನು ನಿಗಾ ಮಾಡಿ ಕಾಪಾಡಿಕೊಂಡಿರಬಹುದೆ? ಗದ್ದಿಗಪ್ಪನ ಕಣ್ಣುಗಳಲ್ಲಿ ಕಿರುಬನ ಹೊಲದ ಆ ಬಾವಿ ಮೂಡಿತು. ಅದರೊಳಗೆ ತುಂಬಿ ತುಟುಕಾಡುವ ನೀರು ಕಂಡಿತು. ಅದು ಅವನಿಗೆ ರವಷ್ಟು ಸಮಾಧಾನ ನೀಡಿತು. ಆ ಬಾವಿಯೇ ಈ ಬಾವಿಯಾಗಿ ಗದ್ದಿಗಪ್ಪನಿಗೆ ಹೆಚ್ಚೆಚ್ಚು ಹತ್ತಿರವಾಗತೊಡಗಿತು.

ಹಂಗೆ ನೋಡಿದರೆ ತನ್ನ ಮುತ್ತಾತ ಮೇಲಜ್ಜನ ಕಪಿಲೆ ಬಾವಿಯ ಬಗ್ಗೆ ಕೇಳಿದಾಗಿನಿಂದ ಅದೇ ತಾವಿನಲ್ಲಿ ಬಾವಿ ತೋಡಿಸಬೇಕೆಂಬ ತುಡಿತಕ್ಕೊಳಗಾಗಿದ್ದ ಗದ್ದಿಗಪ್ಪ. ಅಂತೆಯೇ ಮುತ್ತಾತ ಬೆಳೆದಿದ್ದ ಜಾಗದಲ್ಲಿ ಮತ್ತೊಮ್ಮೆ ಎಲೆ ಹಂಬನ್ನು ಬೆಳೆಯಬೇಕೆಂಬುದೂ ಅವನ ಆಸೆ ಆಗಿತ್ತು. ಕಪಿಲೆ ಬಾವಿ ಇದ್ದ ಜಾಗ ಮುಚ್ಚೋಗಿ ಹಾಳು ಬಾವಿಯಾಗಿತ್ತು. ಅದರ ನಡೂ ಮಧ್ಯೆ ಮೂಗತ್ತವೊಂದು ಬೆಳಕಂಡಿತ್ತು. ಒಂದು ಕಾಲದಲ್ಲಿ ಅದರ ಪಕ್ಕದಲ್ಲಿ ಅಂಬಿನ ದಿಬ್ಬವಿತ್ತು. ಅದರಲ್ಲಿ ವೀಳೆದೆಲೆಯ ಹಂಬು ಇತ್ತು. ಕೇವಲ ಎರಡಾಳಷ್ಟು ಆಳಕ್ಕಿದ್ದ ಸತೊಂಭತ್ತು ಕಾಲವೂ ನೀರಿರುತ್ತಿದ್ದ ಕಪಿಲೆ ಬಾವಿಯಿಂದ ಮೇಲಜ್ಜ ಎತ್ತುಗಳನ್ನು ಹೂಡಿ ಕಪಿಲೆಯಿಂದ ನೀರು ಹಾಯಿಸುತ್ತಿತ್ತು. ಮೇಲಜ್ಜ ಹಂಬಿನ ದಿಬ್ಬದಲ್ಲಿ ಮೂರ್ನಾಲ್ಕು ಬಗೆಯ ವೀಳೆಯದೆಲೆಗಳನ್ನು ಬೆಳೆದಿತ್ತು. ಚಗಚೆ ಗಿಡಗಳಿಗೆ ಹಬ್ಬಿಸಲಾಗಿದ್ದ ಅವುಗಳು ಮೇಲಜ್ಜನ ಅಕ್ಕರೆಯಿಂದಾಗಿ ವರ್ಷವಿಡೀ ಯಾವಾಗ ಬೇಕೆಂದರೆ ಆವಾಗ ಎಲೆಗಳು ಸಿಕ್ಕುತ್ತಿದ್ದವು. ಏನಾದರೂ ಸಣ್ಣಪುಟ್ಟ ಕಾರ್ಯಕ್ರಮಗಳಾದರೆ, ಹಬ್ಬ ಹರಿದಿನಗಳಲ್ಲಿ ಊರಿನ ಜನ ವೀಳೆದೆಲೆಗಾಗಿ ಮೇಲಜ್ಜನಿಗೆ ಹೇಳುತ್ತಿದ್ದರು. ಮೇಲಜ್ಜ ಖುದ್ದು ಎಲೆಗಳನ್ನು ಕುಯ್ದು ಅವರ ಮನೆಗಳಿಗೆ ತಲುಪಿಸುತ್ತಿತ್ತು. ಆ ಕಾರಣಕ್ಕೇ ಊರಿನಲ್ಲಿ ಮೇಲಜ್ಜನನ್ನು ‘ಹಂಬಿನ ಮೇಲಜ್ಜ’ ಅಂತಲೇ ಕರೆಯುತ್ತಿದ್ದರು. ಬರಬರುತ್ತಾ ಗದ್ದಿಗಪ್ಪನ ಮನೆತನಕ್ಕೆ ‘ಹಂಬಿನ ಮನೇವ್ರು’ ಅಂತಲೇ ಕರೆಯಲಾಗುತಿತ್ತು. ಏಕೆಂದರೆ ಆ ಸುತ್ತಿನಲ್ಲಿ ಯಾರೂ ಎಲೆ ಅಂಬನ್ನು ಬೆಳೆದಿರಲಿಲ್ಲ. ಮೇಲಜ್ಜ ಅಂಬನ್ನು ಬೆಳೆದೇ ಸಂಸಾರವನ್ನು ನಿಭಾಯಿಸುತ್ತಿತ್ತು. ಪ್ರತೀ ಶುಕ್ರವಾರ ನಡೆಯುತ್ತಿದ್ದ ತನ್ನೂರಿನ ಪಕ್ಕದ ಸಂತೆಗೆ ಅವುಗಳನ್ನು ಕುಯ್ದು ಮಾರುತ್ತಿತ್ತು. ಆ ವೀಳೆದೆಲೆಯ ಹಂಬುಗಳ ಹಾಳೆಗಳಲ್ಲಿ ತರಕಾರಿಗಳನ್ನೂ ಬೆಳೆಯುತ್ತಿತ್ತು.

ಕೇವಲ ಐದು ಕುಂಟೆಯಷ್ಟು ಜಾಗದಲ್ಲಿ ಅಂಬನ್ನು ಬೆಳೆದಿದ್ದ ಪರಿಗೆ ಊರಿನವರೂ ತಂತಮ್ಮ ತೋಟ, ಹೊಲಗಳಲ್ಲಿ ಮೇಲಜ್ಜನಿಂದ ಹಂಬಿನ ದಂಟುಗಳನ್ನು ಇಸುಕಂಡು ಹೋಗಿ ಹಚ್ಚಿದ್ದರು. ಆದರೆ ಅವುಗಳು ಹಂಗೇ ಕೊರಗುತ್ತಿದ್ದವು. ಕೊನೆಗೊಂದು ದಿನ ಹಂಗೇ ಒಣಗುತ್ತಿದ್ದವು. ಅದನ್ನು ಅವರು ಮೇಲಜ್ಜನ ಕೈಗುಣ ಮತ್ತು ನೆಲಗಟ್ಟಿಗೆ ತಾಳೆ ಹಾಕಿ ಸುಮ್ಮನಾಗಿದ್ದರು. ಅಲ್ಲಿ ಹಂಬನ್ನು ಬೆಳೆಯುವುದಕ್ಕೂ ಮುನ್ನ ಅದೊಂದು ಸಿಕ್ಕಾಪಟ್ಟೆ ಚೌಳು ಏಳುವ ನೆಲವಾಗಿತ್ತು. ಹಂಗೆ ಏಳುತ್ತಿದ್ದ ಅದು ನೆಲದ ಹೂವಿನಂತೆ ಕಾಣುತ್ತಿತ್ತು. ಚೌಳುಗಾಲದಲ್ಲಿ ಊರಿನವರೆಲ್ಲಾ ಬಟ್ಟೆ ಹೊಗೆಯಲು ಅಲ್ಲಿಂದ ಚೌಳನ್ನು ತುಂಬಿಸಿಕೊಂಡು ಹೋಗುತ್ತಿದ್ದರು. ಅಂಥ ಚೌಳು ನೆಲದಲ್ಲಿ ಒಂದು ಕೈ ಗುಂಡಿಯಿತ್ತು. ಕೇವಲ ಏಳೆಂಟು ಅಡಿಯಷ್ಟು ಆಳಕ್ಕಿದ್ದ ಅದರಲ್ಲಿ ಕೈಗೆಟಕುವಂತೆ ನೀರಿರುತ್ತಿತ್ತು. ಅದನ್ನು ಕಂಡ ಮೇಲಜ್ಜ ಆ ನೀರನ್ನು ಉಪಯೋಗಿಸಿಕೊಳ್ಳುವ ಸಲುವಾಗಿಯೇ ಅಲ್ಲಿ ಏನನ್ನಾದರೂ ಬೆಳೆಯುವ ತೀರ್ಮಾನಕ್ಕೆ ಬಂದಿತ್ತು. ಹಂಗಾಗಿ ಮುಂಚೆ ಸಪೂಟಾಗಿದ್ದ ಆ ಜಾಗಕ್ಕೆ ಪಕ್ಕದಲ್ಲಿದ್ದ ಕೆರೆಯಿಂದ ಜಲ್ಲೆ ಗಾಡಿಗಳಲ್ಲಿ ಮಣ್ಣು ಹೊಡೆಸಿ ಅದನ್ನು ಎತ್ತರ ಮಾಡಿತ್ತು. ಆ ಮಣ್ಣು ಕೂರಲು ಒಂದಷ್ಟು ದಿನ ಹಂಗೇ ಬಿಟ್ಟಿತ್ತು. ಆ ನಡುವೆ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದ್ದ ಕಾರಣಕ್ಕೆ ಬಂಧಿಸಲ್ಪಟ್ಟು ದೂರದ ಜೈಲಿನಲ್ಲಿ ಎರಡು ತಿಂಗಳು ಕಳೆಯಬೇಕಾಗಿ ಬಂದಿತ್ತು. ಅಲ್ಲಿಂದ ಬಿಡುಗಡೆಯಾಗಿ ಬರುವಂಥ ಹೊತ್ತಲ್ಲಿ ದಾರಿಯಲ್ಲಿ ಹಂಬಿನ ತೋಟವೊಂದು ಕಣ್ಣಿಗೆ ಬಿದ್ದಿತ್ತು. ತೋಟದವರಿಂದ ಕೆಲವು ಹಂಬಿನ ದಂಟುಗಳನ್ನು ಕೇಳಿ ಇಸುಕಂಡು ಬಂದು ತಾನು ಮಣ್ಣು ಹೊಡೆಸಿದ ಜಾಗದಲ್ಲಿ ಊರಿತ್ತು. ದಿನವೂ ಪಕ್ಕದಲ್ಲಿದ್ದ ಕೈ ಗುಂಡಿಯಿಂದ ನೀರುಯ್ಯುತ್ತಿತ್ತು. ಕೆಲವು ತಿಂಗಳು ಅನ್ನುವುದರೊಳಗೆ ಆ ದಂಟುಗಳು ನಾವು ನಾವೇ ಅನ್ನತೊಡಗಿದ್ದವು. ಅವುಗಳು ಬೆಳೆದಂತೆ ಕೈಗುಂಡಿಯ ನೀರು ಸಾಕಾಗುತ್ತಿಲ್ಲ ಅನಿಸಿದ್ದೇ ಮೇಲಜ್ಜ ಆ ಕೈಗುಂಡಿಯನ್ನು ಒಂದಷ್ಟು ಆಳಕ್ಕೆ ಸೋಸಿ ಕಪಿಲೆ ಬಾವಿ ಮಾಡಿಕೊಂಡಿತ್ತು. ಬಟಾಬಯಲಾಗಿದ್ದ ಹಂಬಿನ ದಿಬ್ಬದ ಸುತ್ತಲೂ ತೆಳ್ಳಗೆ ಬಳ್ಳಗೆ ಬೇಲಿಯೊಂದ್ನು ಮಾಡಿತ್ತು ಮೇಲಜ್ಜ. ಮೇಲಜ್ಜನ ಕಾಲಾನಂತರ ಒಂದೆರಡು ವರ್ಷಗಳ ಕಾಲ ಇಡೀ ನಾಡನ್ನು ಗೊಟ್ಟು ಹಿಡುಕಂಡು ಬಿಟ್ಟಿತ್ತು. ಮಳೆ ಬೆಳೆ ಇಲ್ಲದೆ ಜನರನ್ನು ಕಂಗೆಡಿಸಿತ್ತು. ಆಗ ಮೇಲಜ್ಜನ ಕಪಿಲೆ ಬಾವಿ ತಳ ಕಂಡಿತ್ತು. ಅದರ ಹಿಂದೆಯೇ ಹಂಬಿನ ದಿಬ್ಬದಲ್ಲಿದ್ದ ವೀಳೆದೆಲೆಯ ದಂಟುಗಳೂ ಅಸು ನೀಗಿದ್ದವು. ನಂತರ ಮಳೆಗಾಲ ಚೆನ್ನಾಗಿ ಆದರೂ ಗದ್ದಿಗಪ್ಪನ ತಾತ ಸಣ್ಣಿರಪ್ಪನಿಗೆ ಆ ಬಗ್ಗೆ ಅಷ್ಟು ಆಸಕ್ತಿ ಮೂಡಿರಲಿಲ್ಲ. ಹಂಗಾಗಿ ಆ ದಿಬ್ಬ ಹಂಬಿಲ್ಲದ ಹಂಬಿನ ದಿಬ್ಬವಾಗಿತ್ತು.

* * *

ನೆನಪುಗಳು ಗದ್ದಿಗಪ್ಪನನ್ನು ಜಪ್ಪತೊಡಗಿದವು. ಅಸಾಧ್ಯ ಸಂಕಟಕ್ಕೊಳಗಾದ ಅವನೊಳಗಿಂದ ದಬ್ಬಿಕೊಂಡು ಬಂದ ನಿಡಿದಾದ ನಿಟ್ಟುಸಿರು ಆ ಬೆಳಗಿನ ಚುಮುಚುಮು ಬಿಸಿಲಿನ ಏಕಾಂತದಲ್ಲಿ ಬಿದ್ದು ಉಲ್ಡಾಡತೊಡಗಿತು. ಹಿಂಗೆ ಮತ್ತೆ ಜೀವಕಂಡ ಬಾವಿ ಹಾಗೂ ಆ ತತ್ವ ಮಂಟಪ ಅವನನ್ನು ಮತ್ತೆಲ್ಲೂ ಅಳ್ಳಾಡದಂತೆ ಕಟ್ಟಾಕಿಬಿಟ್ಟಿತ್ತು. ಇದ್ದರೆ ಈ ಊರು ಎದ್ದರೆ ಮುಂದಿನ ಊರು ಅನ್ನುವಂತಿದ್ದ ಅವನ ಅಲೆಮಾರಿ ಬದುಕನ್ನು ನಿಲಾಕಿತ್ತು. ಆರು ತಿಂಗಳು. ಅಬ್ಬಬ್ಬಾ ಅಂದರೆ ವರ್ಷದ ಮೇಲೆ ಯಾವ ಊರಿನಲ್ಲೂ ಅವನು ನಿಂತವನಲ್ಲ. ಆದರೆ ಆ ಹಳ್ಳಿಗೆ ಬಂದು ಎರಡು ವರ್ಷಗಳು ಕಳೆದಿದ್ದವು.

ಇದನ್ನು ಓದಿದ್ದೀರಾ?: ಒಂದು ನೆನಪು | ಲಂಕೇಶರಿಗೆ ‘ಪತ್ರಿಕೆ’ ಜೀವನ್ಮರಣದ ಪ್ರಶ್ನೆಯಾಗಿತ್ತೇ?

‘ಅಯ್ಯೋ ಶಿವ್ನೆ ಅದೇಟು ದಪಾವಾ ಅಂದ್ಕಂಡುದೀನಿ ಕಳ್ದೋಗಿದ್ನ ಮತ್ಮತ್ತೆ ಮುಂದ್ಕೆ ತಂದ್ಕಾಬರ‍್ದು ಅಂತಾವ’ ಅಂತ ಅಂದುಕೊಂಡು ಒಂದು ಚಣ ಮತ್ತಷ್ಟು ಸಂಕಟಕ್ಕೊಳಗಾದ ಗದ್ದಿಗಪ್ಪ. ಮರುಚಣವೇ, ‘ಇದು ಯಾರುನ್ನ ತಾನೇ ಬಿಟೈತಪ್ಪಾ,’ ಅಂತ ಬಾಯ್ಬಿಟ್ಟು ಜೋರಾಗಿ ಅಂದುಕೊಂಡವನೇ ಚಕ್ಕನೆದ್ದು ಪಕ್ಕದಲ್ಲಿದ್ದ ಮಿಳ್ಳೆಯಿಂದ ಎರಡು ಗುಟುಕು ನೀರು ಕುಡಿದು ಮಂಟಪದ ಕಂಬಕ್ಕೆ ನೇತಾಕಿದ್ದ ತಂಬೂರಿಯನ್ನು ಎತ್ತಿಕೊಂಡವನೇ ಶನಿ ಮಹಾತ್ಮೆಯಲ್ಲಿ ಬರುವ ವಿಕ್ರಮರಾಜ ಶನಿಯಿಂದಾಗಿ ತನ್ನೆರಡೂ ಕಾಲಗಳನ್ನೂ ಕಳಕಂಡು ಗಾಣ ಹೊಡೆಯುವಾಗಿನ ದೀಪಕಮಾಲಾ ರಾಗವನ್ನು ಹಾಡತೊಡಗಿದ. ಅಷ್ಟೊತ್ತಿಗೆ ಅಲ್ಲಿಗೆ ಬಂದ ಅವನ ಸಹವಾಸಿಗಳು, ‘ಇದ್ಯಾಕಪ್ಪ ಇವ್ನಿಗೆ ಏನಾಗೈತೆ ಇವತ್ತ ಹಿಂಗೆ ಬೆಳಿಗ್ಗೆ ಬೆಳಿಗ್ಗೇನೇ ತಂಬೂರಿ ಮೀಟ್ತಾ ಕುಂತವ್ನಲ್ಲಾ,’ ಅಂತ ಸೋಜಿಗಕ್ಕೆ ಒಳಗಾದರೂ ಗದ್ದಿಗಪ್ಪನ ಹಾಡಿನ ತನ್ಮಯತೆಗೆ ತಲೆದೂಗುತ್ತಾ ನಿಂತರು. ಬಿಸಿಲು ಬಲಿಯತೊಡಗಿತು. ಹಾಡು ಮುಗಿಯಿತು. ಗದ್ದಿಗಪ್ಪನೊಳಗಿನ ಸಂಕಟ ಕರಗತೊಡಗಿತು. ಕಣ್ಣು ಬಿಟ್ಟ ಗದ್ದಿಗಪ್ಪ ತನ್ನೆದುರು ನಿಂತಿದ್ದವರನ್ನು ಕಾಣುತ್ತಲೇ ಸಂಕೋಚಕ್ಕೊಳಗಾದ. ಮತ್ತೆ ತಂಬೂರಿಯನ್ನು ಪಕ್ಕಕ್ಕಿಟ್ಟುಕೊಂಡು ಬಟ್ಟೆಯ ಗಂಟನ್ನು ಬಿಚ್ಚಿ ಅವತ್ತಿನ ಕಾಯಕದ ಧಿರಿಸಿಗಾಗಿ ಸಿದುಕತೊಡಗಿದ.

ಪುಸ್ತಕಗಳಿಗಾಗಿ : 94482 50969, 79751 77642 ಸಂಪರ್ಕಿಸಿ

ಗಂಗಪಾಣಿ ಗಂಗಾಧರಯ್ಯ
ಗಂಗಪಾಣಿ ಗಂಗಾಧರಯ್ಯ
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈದಿನ ಸಂದರ್ಶನ | ಬದ್ಧತೆ ಮೈಗೂಡಿಸಿಕೊಂಡು ಓದಿದರೆ ಕೋಚಿಂಗ್‌ ಅಗತ್ಯವಿಲ್ಲ

ಕೇಂದ್ರ ಲೋಕ ಸೇವಾ ಆಯೋಗವು (ಯುಪಿಎಸ್‌ಸಿ) 2023ನೇ ಸಾಲಿನಲ್ಲಿ ನಡೆಸಿದ್ದ ನಾಗರಿಕ...

ಕೊಲೆಗಾರ ಮುಸ್ಲಿಂ; ಬಿಜೆಪಿಯ ತಟ್ಟೆಗೆ ಮೃಷ್ಟಾನ್ನ

ಹುಬ್ಬಳ್ಳಿಯ ಘಟನೆಯಲ್ಲಿ ಎರಡು ಯುವ ಜೀವಗಳು ತಮ್ಮ ಬದುಕನ್ನು ಕಳೆದುಕೊಂಡಿವೆ. ಕೊಲೆಗಾರ...

ಸೌಜನ್ಯ ಹೋರಾಟಗಾರರಿಂದ NOTA ಅಭಿಯಾನ ; ಯಾರಾಗಲಿದ್ದಾರೆ ನೋಟಾದ ಫಲಾನುಭವಿ ?

ನೋಟಾ ಅಭಿಯಾನ ನಡೆಸುತ್ತಿರುವವರು ಸೌಜನ್ಯಪರ ಹೋರಾಟಗಾರರು. ಇವರೆಲ್ಲರೂ ಬಿಜೆಪಿ,ಆರೆಸ್ಸೆಸ್‌, ಭಜರಂಗದಳ, ವಿಎಚ್‌ಪಿ...

ಬ್ರಾಹ್ಮಣರಿಂದ ಬ್ರಾಹ್ಮಣರಿಗೆ ಮೋಸ: 24 ಲಕ್ಷ ಕಳೆದುಕೊಂಡು ಭಿಕ್ಷೆ ಬೇಡುತ್ತಿರುವ ಹೆಬ್ಬಾರ್

ಹೆಬ್ಬಾರ್ ಒಬ್ಬರೇ ಅಲ್ಲ, ಬೆಂಗಳೂರಿನ ಬಸವನಗುಡಿಯ ಬ್ರಾಹ್ಮಣರೆಲ್ಲರೂ ಗುರುರಾಘವೇಂದ್ರ ಬ್ಯಾಂಕಿನ ಗ್ರಾಹಕರೇ...