ಕುಸ್ತಿಪಟುಗಳೊಂದಿಗೆ ಅವರ ಸಮಸ್ಯೆಗಳನ್ನು ಚರ್ಚಿಸಲು ಸರ್ಕಾರ ಸಿದ್ಧವಿದೆ. ಇದಕ್ಕಾಗಿ ಮತ್ತೊಮ್ಮೆ ಕುಸ್ತಿಪಟುಗಳನ್ನು ಆಹ್ವಾನಿಸಿದ್ದೇನೆ ಎಂದು ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ತಿಳಿಸಿದ್ಧಾರೆ.
ಈ ಕುರಿತು ಅನುರಾಗ್ ಠಾಕೂರ್ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ. ಇದಕ್ಕೂ ಮುನ್ನ, ಕುಸ್ತಿಪಟುಗಳು ಮತ್ತು ಅವರ ತರಬೇತುದಾರರು ಶನಿವಾರ (ಜೂನ್ 3) ರಾತ್ರಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಮಾತುಕತೆ ನಡೆಸಿ, ಸಮಸ್ಯೆಯನ್ನು ಬಗೆಹರಿಸುವುದಾಗಿ ತಿಳಿಸಿದ್ದರು. ಮಾತುಕತೆಯ ಬಗ್ಗೆ ಒಲಿಂಪಿಕ್ ಪದಕ ವಿಜೇತ ಬಜರಂಗ್ ಪುನಿಯಾ ಮಾಧ್ಯಮಗಳಿಗೆ ತಿಳಿಸಿದ್ದರು.
ಸೋಮವಾರ (ಜೂನ್ 5) ಪ್ರಮುಖ ಕುಸ್ತಿಪಟುಗಳಾದ ಬಜರಂಗ್ ಪುನಿಯಾ, ಸಾಕ್ಷಿ ಮಲಿಕ್ ಹಾಗೂ ವಿನೇಶ್ ಫೋಗಟ್ ರೈಲ್ವೆಯಲ್ಲಿ ತಮ್ಮ ಕೆಲಸಕ್ಕೆ ಮರಳಿದ್ದರೆ. ತಾವು ಕೆಲಸ ಮುಂದುವರಿಸಿಕೊಮಡು ಹೋರಾಟ ಮುಂದುವರೆಸುವುದಾಗಿ ತಿಳಿಸಿದ್ದರು.
“ನಾವು ಪ್ರತಿಭಟನೆ ಕೈಬಿಡುವುದಿಲ್ಲ ಎಂಬ ಯಾವುದೇ ವದಂತಿಗಳಿಗೆ ಕಿವಿಗೊಡಬೇಡಿ ಎಂದು ಜನರಲ್ಲಿ ಮನವಿ ಮಾಡಿದ್ದಾರೆ, ನ್ಯಾಯ ಸಿಗುವವರೆಗೆ ಹೋರಾಟ (ಚಳವಳಿ) ಮುಂದುವರಿಯುತ್ತದೆ ಎಂದು ಕುಸ್ತಿಪಟು ಬಜರಂಗ್ ಪುನಿಯಾ ಹೇಳಿದ್ದಾರೆ.
ಈ ವರ್ಷದ ಏಪ್ರಿಲ್ನಿಂದ ಬಜರಂಗ್ ಪುನಿಯಾ, ಸಾಕ್ಷಿ ಮಲಿಕ್ ಮತ್ತು ವಿನೇಶ್ ಫೋಗಟ್ ಸೇರಿದಂತೆ ಸುಮಾರು 30 ಕುಸ್ತಿಪಟುಗಳು ದೆಹಲಿಯ ಜಂತರ್ ಮಂತರ್ನಲ್ಲಿ ಧರಣಿ ನಡೆಸುತ್ತಿದ್ದು, ಲೈಂಗಿಕ ಕಿರುಕುಳದ ಆರೋಪದಡಿ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಏತನ್ಮಧ್ಯೆ, ದೆಹಲಿ ಪೊಲೀಸರು ಬ್ರಿಜ್ ಭೂಷಣ್ ವಿರುದ್ಧ ಎರಡು ಎಫ್ಐಆರ್ಗಳನ್ನು ದಾಖಲಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮಣಿಪುರ ಹಿಂಸಾಚಾರ: ರಾಜ್ಯದಲ್ಲಿ ಇಂಟರ್ನೆಟ್ ನಿಷೇಧ ಪ್ರಶ್ನಿಸಿ ಸುಪ್ರೀಂ ಕೋರ್ಟ್ಗೆ ಅರ್ಜಿ
ಪ್ರತಿಭಟನೆ ಕೈ ಬಿಡುವುದಿಲ್ಲ ಎಂದ ರಾಕೇಶ್ ಟೀಕಾಯತ್
ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ನಾಯಕ ರಾಕೇಶ್ ಟೀಕಾಯತ್, ಪ್ರತಿಭಟನಾ ನಿರತ ಕುಸ್ತಿಪಟುಗಳಿಗೆ ತಮ್ಮ ಬೆಂಬಲವನ್ನು ಹಿಂಪಡೆದಿಲ್ಲ ಮತ್ತು ಕುಸ್ತಿಪಟುಗಳ ಕೋರಿಕೆಯ ಮೇರೆಗೆ ಭಾರತೀಯ ಕುಸ್ತಿ ಫೆಡರೇಷನ್ ಮುಖ್ಯಸ್ಥ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಜೂನ್ 9 ರ ಆಂದೋಲನವನ್ನು ಮುಂದೂಡಿದ್ದೇವೆ ಎಂದು ತಿಳಿಸಿದ್ದಾರೆ.
ಈ ಬಗ್ಗೆ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅವರು, ಜೂನ್ 9 ರಂದು ದೆಹಲಿಯಲ್ಲಿ ನಡೆಸಬೇಕಿದ್ದ ನಮ್ಮ ಹೋರಾಟವನ್ನು ಸದ್ಯಕ್ಕೆ ಮುಂದೂಡಿದ್ದೇವೆ. ಸರ್ಕಾರಿ ಅಧಿಕಾರಿಗಳು ಮತ್ತು ಪ್ರತಿಭಟನಾನಿರತ ಕುಸ್ತಿಪಟುಗಳ ನಡುವಿನ ಸಭೆಯ ಫಲಿತಾಂಶಕ್ಕಾಗಿ ನಾವು ಕಾಯುತ್ತಿದ್ದೇವೆ. ರೈತರ ಸಂಘ ಕುಸ್ತಿಪಟುಗಳನ್ನು ಬೆಂಬಲಿಸಲಿದೆ ಮತ್ತು ಅವರಿಗೆ ನಮ್ಮ ಬೆಂಬಲವನ್ನು ಮುಂದುವರಿಸುತ್ತೇವೆ. ಕುಸ್ತಿಪಟುಗಳೊಂದಿಗೆ ಸಮನ್ವಯವನ್ನು ಹೊಂದಿದ್ದೇವೆ. ಯಾವುದೇ ಪ್ರಮುಖ ಹೋರಾಟವನ್ನು ತಡೆಹಿಡಿಯುವುದಿಲ್ಲ. ಕುಸ್ತಿಪಟುಗಳೊಂದಿಗೆ ಮಾತುಕತೆ ಮುಂದುವರೆಸಿ ನಮ್ಮ ಹೋರಾಟದ ಮುಂದಿನ ಕಾರ್ಯತಂತ್ರಗಳನ್ನು ಮುಂದುವರೆಸಲಿದ್ದೇವೆ” ಎಂದು ಟೀಕಾಯತ್ ತಿಳಿಸಿದರು.