ಯುವ ಆಟಗಾರ ಸಾಯಿ ಸುದರ್ಶನ್ ಅವರ ತಾಳ್ಮೆಯ ಆಟ ಹಾಗೂ ರಶೀದ್, ಶಮಿ ಅವರ ಬೌಲಿಂಗ್ ದಾಳಿಯ ಪರಿಣಾಮ ಗುಜರಾತ್ ಟೈಟಾನ್ಸ್ ತಂಡ, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 6 ವಿಕೆಟ್ ಗೆಲುವು ಸಾಧಿಸಿತು. ಟೂರ್ನಿಯಲ್ಲಿ ಹಾರ್ದಿಕ್ ಪಡೆಯ ಸತತ ಎರಡನೆಯ ಗೆಲುವಾಗಿದೆ.
ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 16ನೇ ಆವೃತ್ತಿಯ 7ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ನೀಡಿದ 163 ರನ್ಗಳ ಗುರಿಯನ್ನು ಬೆನ್ನಟ್ಟಿದ ಗುಜರಾತ್ 4 ವಿಕೆಟ್ ನಷ್ಟದೊಂದಿಗೆ 18.2 ಓವರ್ನಲ್ಲಿ ಜಯಗಳಿಸಿತು.
ಪ್ರಮುಖ ಆಟಗಾರರಾದ ವೃದ್ಧಿಮಾನ್ ಸಾಹ, ಶುಭಮನ್ ಗಿಲ್, ನಾಯಕ ಹಾರ್ದಿಕ್ ಪಾಂಡ್ಯ ವಿಕೆಟ್ ಕಳೆದುಕೊಂಡರೂ ಸಾಯಿ ಸುದರ್ಶನ್ ತಾಳ್ಮೆಯ ಅರ್ಧ ಶತಕ (62),ವಿಜಯ್ ಶಂಕರ್ (29) ಹಾಗೂ ಡೇವಿಡ್ ಮಿಲ್ಲರ್ (31) ಸಮಯೋಚಿತ ಆಟದಿಂದ ತಂಡವು ಗೆಲುವಿನ ಗುರಿ ಮುಟ್ಟಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ, ಗುಜರಾತ್ ಟೈಟಾನ್ಸ್ ಬೌಲರ್ಗಳಾದ ರಶೀದ್ ಖಾನ್, ಮೊಹಮ್ಮದ್ ಶಮಿ ಹಾಗೂ ಅಲ್ಜಾರಿ ಜೆಸೋಫ್ ದಾಳಿಗೆ ಸಿಲುಕಿ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 162 ರನ್ ಸಾಧಾರಣ ಮೊತ್ತ ದಾಖಲಿಸಿತ್ತು.
ನಾಯಕ ಡೇವಿಡ್ ವಾರ್ನರ್ 37 (32 ಎಸೆತ, 7 ಬೌಂಡರಿ), ಸರ್ಫರಾಜ್ ಖಾನ್ 30 (34 ಎಸೆತ, 2 ಬೌಂಡರಿ), 11 ಎಸೆತಗಳಲ್ಲಿ 2 ಸಿಕ್ಸರ್ನೊಂದಿಗೆ 20 ರನ್ ಸಿಡಿಸಿದ ಅಭಿಷೇಕ್ ಪೊರೆಲ್, ಸ್ಪಿನ್ನರ್ ಅಕ್ಷರ್ ಪಟೇಲ್ 22 ಚಂಡುಗಳಲ್ಲಿ 2 ಬೌಂಡರಿ ಹಾಗೂ 3 ಸಿಕ್ಸರ್ನೊಂದಿಗೆ 36 ರನ್ ಬಾರಿಸಿದ್ದು, ಗೌರವಾನ್ವಿತ ಮೊತ್ತ ಕಲೆ ಹಾಕಲು ಕಾರಣವಾಯಿತು.
ಸ್ಪಿನ್ನರ್ ರಶೀದ್ ಖಾನ್ 31/3, ಮೊಹಮ್ಮದ್ ಶಮಿ 41/3 ಹಾಗೂ ಅಲ್ಜಾರಿ ಜೆಸೋಫ್ 29/2 ವಿಕೆಟ್ ಪಡೆದು ಉತ್ತಮ ಬೌಲರ್ಗಳೆನಿಸಿದರು.
ಪಂತ್ ಅನಿರೀಕ್ಷಿತ ಆಗಮನ; ಪ್ರೇಕ್ಷಕರಗೆ ಅಚ್ಚರಿ
ಕಳೆದ ವರ್ಷ ಡಿಸೆಂಬರ್ 30 ರಂದು ಭೀಕರ ಅಪಘಾತಕ್ಕೆ ಒಳಗಾಗಿ ಗಂಭೀರವಾಗಿ ಗಾಯಗೊಂಡಿದ್ದ ಭಾರತದ ಯುವ ಸ್ಟಾರ್ ಕ್ರಿಕೆಟಿಗ ರಿಷಭ್ ಪಂತ್ ತವರು ಕ್ರೀಡಾಂಗಣಕ್ಕೆ ಆಗಮಿಸಿ ಪ್ರೇಕ್ಷಕರಿಗೆ ಅಚ್ಚರಿ ಮೂಡಿಸಿದರು. ರಿಷಭ್ ಪಂತ್ ಕ್ರೀಡಾಂಗಣಕ್ಕೆ ಮರಳುತ್ತಿದ್ದಂತೆ, ಅಭಿಮಾನಿಗಳು ಅವರನ್ನು ನೋಡಿತ್ತಿದ್ದಂತೆ ಹರ್ಷೋದ್ಘಾರ ಕೂಗಿದರು.
ಅಪಘಾತದಲ್ಲಿ ರಿಷಬ್ ಪಂತ್ ಗಂಭೀರವಾಗಿ ಗಾಯಗೊಂಡ ಬಳಿಕ ಅವರ ಕಾಲಿಗೆ 2 ಸರ್ಜರಿ ಕೂಡ ಮಾಡಲಾಗಿತ್ತು. ಈ ಹಿಂದೆ ದೆಹಲಿ ಕ್ಯಾಪಿಟಲ್ಸ್ ತಂಡ ರಿಷಭ್ ಅನುಪಸ್ಥಿತಿಯ ಮೊದಲ ಪಂದ್ಯದಲ್ಲಿ, ಅವರ ಜರ್ಸಿಯನ್ನು ಡಗೌಟ್ನಲ್ಲಿ ಇರಿಸಿದ್ದರು. ಆಗ ಡೆಲ್ಲಿ ತಂಡದ ಈ ಕ್ರಮ ಎಲ್ಲರ ಮನಗೆದ್ದಿತ್ತು.