ನಾಟಕೀಯ ತಿರುವು ಪಡೆದ ಜಿದ್ದಾಜಿದ್ದಿನ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಹೈದರಾಬಾದ್ 4 ವಿಕೆಟ್ಗಳ ವೀರೋಚಿತ ಜಯ ಸಾಧಿಸಿದೆ.
ಜೈಪುರದಲ್ಲಿ ಭಾನುವಾರ ನಡೆದ ಡಬಲ್ ಹೆಡ್ಡರ್ʼನ ಎರಡನೇ ಪಂದ್ಯ ಆತಿಥೇಯ ರಾಜಸ್ಥಾನ ರಾಯಲ್ಸ್ ತಂಡದ ಪಾಲಿಗೆ ʻಕೈಗೆ ಬಂದ ತುತ್ತು ಬಾಯಿಗೆ ಇಲ್ಲʼ ಎಂಬಂತಾಯಿತು.
ವಿಕೆಟ್-ನೋಬಾಲ್-ಸಿಕ್ಸರ್!
215 ರನ್ ಗುರಿ ಬೆನ್ನಟ್ಟುವ ವೇಳೆ ಹೈದರಾಬಾದ್ ಗೆಲುವಿಗೆ ಅಂತಿಮ ಎಸೆತದಲ್ಲಿ 5 ರನ್ಗಳ ಅಗತ್ಯವಿತ್ತು. ಸ್ಟ್ರೈಕ್ನಲ್ಲಿದ್ದ ಸಮದ್ ಲಾಂಗ್ ಆಫ್ಗೆ ಬಾರಿಸಿದ್ದ ಚೆಂಡನ್ನು ಕ್ಷೇತ್ರರಕ್ಷಣೆಯಲ್ಲಿದ್ದ ಜಾಸ್ ಬಟ್ಲರ್ ಸುಲಭವಾಗಿಯೇ ಕ್ಯಾಚ್ ಹಿಡಿದಿದ್ದರು.
ರಾಯಲ್ಸ್ ಪಾಳಯದಲ್ಲಿ ವಿಜಯೋತ್ಸವ ಪ್ರಾರಂಭವಾಗುತ್ತಲೇ ಮೈದಾನದಲ್ಲಿ ʻನೋ ಬಾಲ್ ಸೈರನ್ʼ ಮೊಳಗಿತ್ತು. ಸಂದೀಪ್ ಶರ್ಮಾ ಎಸೆದ ಅಂತಿಮ ಎಸೆತ ನೋ ಬಾಲ್ ಏಂಬುದು ರೀಪ್ಲೇನಲ್ಲಿ ಸ್ಪಷ್ಟವಾಗಿತ್ತು. ಹೀಗಾಗಿ ಶರ್ಮಾ ಹೆಚ್ಚುವರಿಯಾಗಿ ಬೌಲ್ ಮಾಡಬೇಕಾಯಿತು.
ಫ್ರೀ ಹಿಟ್ ಅವಕಾಶವಿದ್ದ ಎಸೆತದಲ್ಲಿ ಹೈದರಾಬಾದ್ ಗೆಲುವಿಗೆ 4 ರನ್ಗಳ ಅಗತ್ಯವಿತ್ತು. ಮೂರು ರನ್ ಪಡೆದರೆ ಪಂದ್ಯ ಟೈ ಆಗುತ್ತಿತ್ತು. ಆದರೆ ಯಾವುದರ ತೆಲನೋವು ಬೇಡ ಎಂಬಂತೆ ಸಂದೀಪ್ ಶರ್ಮಾ ಎಸೆದ ಬಹುತೇಕ ಯಾರ್ಕರ್ ಎಸೆತವನ್ನು ಸಮದ್ ಸುಂದರವಾಗಿ ಸಿಕ್ಸರ್ಗೆ ಅಟ್ಟಿದರು. ಅಲ್ಲಿಗೆ ರಾಜಸ್ಥಾನ ‘ಗೆದ್ದ’ ಪಂದ್ಯವನ್ನು ಯಾರೂ ನಿರೀಕ್ಷಿಸದ ರೀತಿಯಲ್ಲಿ ಹೈದರಾಬಾದ್ ತನ್ನದಾಗಿಸಿಕೊಂಡಿತು.
ಅಂತಿಮ ಎಸೆತ ನೋಬಾಲ್ ಅಲ್ಲದೆ ಒಂದು ರನೌಟ್ ಅವಕಾಶ ಮತ್ತು ಎರಡು ಸುಲಭ ಕ್ಯಾಚ್ (ಮೆಕಾಯ್ ಮತ್ತು ಸಂಜು ಸ್ಯಾಮ್ಸನ್) ಅವಕಾಶಗಳನ್ನು ಕೈಚೆಲ್ಲಿದ್ದು ರಾಜಸ್ಥಾನ ಪಾಲಿಗೆ ಮುಳುವಾಯಿತು.
ಅಂತಿಮ ಎರಡು ಓವರ್ಗಳಲ್ಲಿ 43 ರನ್!
18 ಓವರ್ಗಳ ಮುಕ್ತಾಯಕ್ಕೆ ಹೈದರಾಬಾದ್ ತಂಡ 5 ವಿಕೆಟ್ ನಷ್ಟದಲ್ಲಿ 174 ರನ್ಗಳಿಸಿತ್ತು. ಇನ್ನುಳಿದ ಕೊನೆಯ 12 ಎಸೆತಗಳಲ್ಲಿ 41 ರನ್ಗಳಿಸಬೇಕಾದ ಕಠಿಣ ಗುರಿ ಎಸ್ಆರ್ಎಚ್ ಮುಂದಿತ್ತು. ಆದರೆ 19ನೇ ಓವರ್ ಎಸೆದ ಕುಲ್ದಿಪ್ ಯಾದವ್ ಅವರ ಮೊದಲ ಮೂರು ಎಸೆತಗಳನ್ನು ಫಿಲಿಪ್ಸ್ ಹ್ಯಾಟ್ರಿಕ್ ಸಿಕ್ಸರ್ಗೆ ಟ್ಟಿದರು. ನಂತರದ ಎಸೆತದಲ್ಲಿ ಬೌಂಡರಿಯೂ ದಾಖಲಾಯಿತು. ಹೀಗಾಗಿ ಕೊನೆಯ ಓವರ್ನಲ್ಲಿ ಗೆಲುವಿನ ಗುರಿ 17 ಆಗಿತ್ತು.
ಇದಕ್ಕೂ ಮೊದಲು ತವರು ಅಭಿಮಾನಿಗಳೆದುರು ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ್ದ ಆರ್ಆರ್ ತಂಡ ಆರಂಭಿಕ ಜಾಸ್ ಬಟ್ಲರ್ 95 ರನ್ (59 ಎಸೆತ 4×10, 6×4) ಮತ್ತು ನಾಯಕ ಸಂಜು ಸ್ಯಾಮ್ಸನ್ ಗಳಿಸಿದ ಬಿರುಸಿನ ಅರ್ಧಶತಕಗಳ (66 ರನ್, 38 ಎಸೆತ, 4×4, 6×5) ನೆರವಿನಿಂದ ನಿಗದಿತ 20 ಓವರ್ಗಳಲ್ಲಿ 4 ವಿಕೆಟ್ ನಷ್ಟದಲ್ಲಿ 214 ರನ್ ಗಳಿಸಿತ್ತು.