ಸ್ಫೋಟಕ ಬ್ಯಾಟರ್ಗಳು ವಿಫಲರಾದರೂ ಆಲ್ರೌಂಡರ್ ಶಾರ್ದೂಲ್ ಠಾಕೂರ್ ಹಾಗೂ ಆರಂಭಿಕ ಆಟಗಾರ ರಹ್ಮಾಮಾನುಲ್ಲಾ ಗುರ್ಬಾಜ್ ಅರ್ಧ ಶತಕದ ನೆರವಿನಿಂದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ 205 ರನ್ಗಳ ಕಠಿಣ ಸವಾಲು ನೀಡಿದೆ.
ಕೋಲ್ಕತ್ತಾದ ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್ ಟೂರ್ನಿಯ 16ನೇ ಆವೃತ್ತಿಯ 9ನೇ ಪಂದ್ಯದಲ್ಲಿ ಟಾಸ್ ಸೋತ ಕೆಕೆಆರ್ ನಾಲ್ಕು ಓವರ್ಗಳಾಗುವಷ್ಟರಲ್ಲೇ ಮೂರು ವಿಕೆಟ್ಗಳನ್ನು ಕಳೆದುಕೊಂಡಿತು.ಆರಂಭಿಕ ಆಟಗಾರ ರಹ್ಮಾಮಾನುಲ್ಲಾ ಮಾತ್ರ ಬ್ಯಾಟ್ ಬೀಸುತ್ತಿದ್ದರೆ, ನಾಯಕ ನಿತೀಶ್ ರಾಣಾ,ಆಂಡ್ರೆ ರಸೆಲ್ ಸೇರಿ ಪ್ರಮುಖ ಬ್ಯಾಟರ್ಗಳು ಪೆವಿಲಿಯನ್ ಸೇರುತ್ತಿದ್ದರು.
ಹನ್ನೆರಡನೇ ಓವರ್ನಲ್ಲಿ 44 ಎಸೆತಗಳಲ್ಲಿ 57 ರನ್ ಗಳಿಸಿ ರಹ್ಮಾಮಾನುಲ್ಲಾ ಔಟಾದ ನಂತರ ಸ್ಫೋಟಕ ಆಟವನ್ನು ಆರಂಭಿಸಿದವರು ಆಲ್ರೌಂಡರ್ ಶಾರ್ದೂಲ್ ಠಾಕೂರ್. ಶಾರ್ದೂಲ್ಗೆ ತಾಳ್ಮೆಯ ಆಟವಾಡಿ ರಿಂಕು ಸಿಂಗ್ ಜೊತೆಯಾದರು. ಕೇವಲ 29 ಚಂಡುಗಳಲ್ಲಿ 3 ಭರ್ಜರಿ ಸಿಕ್ಸರ್ ಹಾಗೂ 9 ಆಕರ್ಷಕ ಬೌಂಡರಿಗಳ ಮೂಲಕ 69 ರನ್ ಸ್ಫೋಟಿಸಿದರು. ಇವರಿಬ್ಬರು 45 ಚಂಡುಗಳಲ್ಲಿ 103 ರನ್ ಜೊತೆಯಾಟವಾಡಿ ತಂಡದ ಮೊತ್ತವನ್ನು 20 ಓವರ್ಗಳಲ್ಲಿ 204 ರನ್ಗೆ ಕೊಂಡೊಯ್ದರು.
ರಿಂಕು ಸಿಂಗ್ ಕೂಡ 33 ಎಸೆತಗಳಲ್ಲಿ 2 ಬಾಂಡರಿ ಹಾಗೂ 3 ಸಿಕ್ಸರ್ನೊಂದಿಗೆ 46 ರನ್ ಗಳಿಸಿದರು. ಆರ್ಸಿಬಿ ಪರ ಕರಣ್ ಶರ್ಮಾ , ಡೇವಿಡ್ ವಿಲ್ಲಿ ತಲಾ 2 ವಿಕೆಟ್ ಪಡೆದರೆ, ಮೈಕಲ್ ಬ್ರೇಸ್ವೆಲ್, ಹರ್ಷಲ್ ಪಟೇಲ್ ತಲಾ ಒಂದೊಂದು ವಿಕೆಟ್ ಕಬಳಿಸಿದರು.
ಆಟವಾಡುತ್ತಿರುವ ಹನ್ನೊಂದರ ಬಳಗ
ರಾಯಲ್ ಚಾಲೆಂಜರ್ಸ್ ಬೆಂಗಳೂರು : ಫಾಫ್ ಡುಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್ವೆಲ್, ಮೈಕಲ್ ಬ್ರೇಸ್ವೆಲ್, ಶಹಬಾಜ್ ಅಹ್ಮದ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಕರಣ್ ಶರ್ಮಾ, ಹರ್ಷಲ್ ಪಟೇಲ್, ಆಕಾಶ್ ದೀಪ್, ಡೇವಿಡ್ ವಿಲ್ಲಿ, ಮೊಹಮ್ಮದ್ ಸಿರಾಜ್.
ಕೋಲ್ಕತ್ತಾ ನೈಟ್ ರೈಡರ್ಸ್ : ಮನ್ದೀಪ್ ಸಿಂಗ್, ರಹಮಾನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್), ನಿತೀಶ್ ರಾಣಾ (ನಾಯಕ), ರಿಂಕು ಸಿಂಗ್, ಆಂಡ್ರೆ ರಸೆಲ್, ಶಾರ್ದೂಲ್ ಠಾಕೂರ್, ಸುನಿಲ್ ನರೈನ್, ಸುಯಶ್ ಶರ್ಮಾ, ಟಿಮ್ ಸೌಥಿ, ಉಮೇಶ್ ಯಾದವ್, ವರುಣ್ ಚಕ್ರವರ್ತಿ.