ಸದ್ಯ ಅಕಾಲಿಕ ಮಳೆಯ ಕಾರಣ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನೀರಿನ ಕೊರತೆ ಎದುರಾಗಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಹಾಗೂ ಬೆಂಗಳೂರು ಜಲಮಂಡಳಿ ಅಧಿಕಾರಿಗಳು ಸದ್ಯ ನೀರಿನ ಅಗತ್ಯತೆಯನ್ನು ಪೂರೈಕೆ ಮಾಡುವತ್ತ ಗಮನ ಹರಿಸಿದ್ದಾರೆ. ಈ ಸಮಸ್ಯೆ ಒಂದೆಡೆಯಾದರೆ, ಬೇಸಿಗೆ ಕಳೆದು ಮಳೆಗಾಲ ಬಂದರೆ, ಆಗ ಪ್ರವಾಹದ ಭೀತಿ ಎದುರಾಗುತ್ತದೆ. ಪಾಲಿಕೆ ಅಧಿಕಾರಿಗಳು ಕೂಡಲೇ ಎಚ್ಚೆತ್ತು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕಿದೆ.
ಹೌದು, ಪ್ರತಿ ವರ್ಷ ಮಾನ್ಸೂನ್ ಸಮಯದಲ್ಲಿ ನಗರದಲ್ಲಿ ಪ್ರವಾಹದ ಸ್ಥಿತಿ ನಿರ್ಮಾಣವಾಗುತ್ತದೆ. ಈ ವರ್ಷ ಪ್ರವಾಹ ಉಂಟಾಗದೇ ಇರುವ ರೀತಿ ನೋಡಿಕ್ಕೊಳ್ಳಲು ಪಾಲಿಕೆ ಅಧಿಕಾರಿಗಳು ಮುಂದಾಗಬೇಕಿದೆ. ನಗರದಲ್ಲಿರುವ ಒಳಚರಂಡಿಗಳ ನಿರ್ಮಾಣ, ಒಳಚರಂಡಿ ವಿಸ್ತರಣೆ, ಹೂಳು ತೆಗೆಯುವುದು ಸೇರಿದಂತೆ ಹಲವಾರು ಕೆಲಸಗಳು ಬಾಕಿ ಉಳಿದಿವೆ. ಸದ್ಯ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಧಿಕಾರಿಗಳು ಕೆಲಸ ಮಾಡುವ ಸಮಯ ಬಂದಿದೆ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನಗರದ ಒಳಚರಂಡಿ ಮೂಲಸೌಕರ್ಯಗಳ ಸಂಪೂರ್ಣ ಪುನರ್ ನಿರ್ಮಾಣ ದೀರ್ಘಾವಧಿಯ ಯೋಜನೆಯಾಗಿದ್ದರೂ, ಪಾಲಿಕೆಯೂ ಕನಿಷ್ಠ ಒತ್ತುವರಿಗಳನ್ನು ತೆರವುಗೊಳಿಸಬೇಕಿದೆ. ಕಿರಿದಾದ ಮಳೆನೀರು ಚರಂಡಿಗಳನ್ನು ವಿಸ್ತರಣೆ ಮಾಡಬೇಕು. ನಗರದ ಹಲವಾರು ನಾಗರಿಕರು, ವಿಶೇಷವಾಗಿ ವೈಟ್ಫೀಲ್ಡ್ ಮತ್ತು ಮಹದೇವಪುರ ಪ್ರದೇಶಗಳಲ್ಲಿನ ಜನರು ಮನೆಯ ಅವಶೇಷಗಳು ಮತ್ತು ಮಣ್ಣನ್ನು ಅಜಾಗರೂಕತೆಯಿಂದ ಚರಂಡಿಗೆ ಎಸೆಯುತ್ತಾರೆ. ಒಳಚರಂಡಿ ನೀರಿನ ಹರಿವಿಗೆ ಅಡಚಣೆ ಉಂಟಾಗುವುದಕ್ಕೆ ಇದು ಮುಖ್ಯ ಕಾರಣವಾಗಿದೆ. ಇದು ಅಂತಿಮವಾಗಿ ಮಳೆಗಾಲದಲ್ಲಿ ಪ್ರವಾಹಕ್ಕೆ ಕಾರಣವಾಗುತ್ತದೆ.
ಹೆಮ್ಮಿಗೆಪುರದಲ್ಲಿ ಎಸ್ಡಬ್ಲ್ಯುಡಿ ನಿರ್ಮಾಣಕ್ಕೆ ಬಿಬಿಎಂಪಿ ಇತ್ತೀಚೆಗೆ ಅನುಮೋದನೆ ನೀಡಿದೆ ಎಂದು ನಿವಾಸಿಗಳು ಆರೋಪಿಸಿದ್ದಾರೆ.
ವೈಟ್ಫೀಲ್ಡ್ನ ವಾರ್ಡ್ ಸಮಿತಿ ಸದಸ್ಯ ಮುರಳಿ ಗೋವಿಂದರಾಜುಲು ಮಾತನಾಡಿ, “ಚರಂಡಿಗಳು ಕಿರಿದಾಗುತ್ತಿರುವ ಪರಿಣಾಮ ಮಳೆ ನೀರು ಮಣ್ಣಿಗೆ ಸೇರುತ್ತಿದೆ. ಈ ಮಳೆ ನೀರು ಚರಂಡಿಗಳ ಕಾಂಕ್ರೀಟ್ ಬಾಕ್ಸಿಂಗ್ ದೊಡ್ಡ ಸಮಸ್ಯೆಯಾಗಿದೆ. ಇದು ನೀರಿನ ಹರಿವನ್ನು ತಡೆಯುತ್ತದೆ” ಎಂದು ಅವರು ಹೇಳಿದರು.
“ಮಳೆನೀರು ಚರಂಡಿಗಳ ಗುಣಮಟ್ಟವನ್ನು ಖಚಿತಪಡಿಸಿಕೊಳ್ಳುವುದು ಪಾಲಿಕೆಯ ಜವಾಬ್ದಾರಿಯಾಗಿದೆ” ಎಂದು ಅವರು ಹೇಳಿದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಹಣಕ್ಕಾಗಿ ಸಾಕು ಮಕ್ಕಳಿಂದಲೇ ಮಹಿಳೆ ಕೊಲೆಗೆ ಯತ್ನ
”ಮಳೆ ನೀರಿನ ಚರಂಡಿಗಳಿಗೆ ಕೊಳಚೆ ನೀರು ಸೇರುವುದನ್ನು ತಡೆಯಲು ಕಟ್ಟುನಿಟ್ಟಿನ ಕ್ರಮ ಜಾರಿಯಾಗಬೇಕು. ಯಾವುದೇ ಬೆಲೆ ತೆತ್ತಾದರೂ ಕಸ ಮತ್ತು ಕೊಳಚೆ ನೀರನ್ನು ನಿಯಂತ್ರಿಸಬೇಕು” ಎಂದರು.
“ಫುಟ್ಪಾತ್ಗಳು ಮತ್ತು ಮಳೆನೀರು ಚರಂಡಿ ಒತ್ತುವರಿ ಕುರಿತು ಯಾವುದೇ ಮಾರ್ಗಸೂಚಿಗಳನ್ನು ಉಲ್ಲಂಘಿಸುವ ಜನರ ವಿರುದ್ಧ ತಕ್ಷಣದ ಕ್ರಮ ತೆಗೆದುಕೊಳ್ಳಲಾಗುವುದು” ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ಹೇಳಿದರು.