ಬಿಜೆಪಿ ನೇತೃತ್ವದ ಕೇಂದ್ರವು ಪ್ರಜಾಪ್ರಭುತ್ವವನ್ನು ಬುಡಮೇಲು ಮಾಡಲು ಮತ್ತು ಸಂವಿಧಾನವನ್ನು ಕೀಳಾಗಿ ಕಾಣಲು ಆದಾಯ ತೆರಿಗೆ ಇಲಾಖೆ, ಇಡಿ ಮತ್ತು ಸಿಬಿಐನಂತಹ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.
ಬಿಜೆಪಿ ಇಂತಹ ಕ್ರಮಗಳನ್ನು ಕೈಗೊಳ್ಳುವುದರಿಂದ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪರ್ಧಿಸುವುದನ್ನು ತಡೆಯಲು ಸಾಧ್ಯವಿಲ್ಲವೆಂದು ಪ್ರತಿಪಾದಿಸಿದ ಅವರು, “ತಮ್ಮ ಪಕ್ಷವು ದೇಶದ ಸಂಸ್ಥೆಗಳನ್ನು ಭಾರತೀಯ ಜನತಾ ಪಕ್ಷದ (ಬಿಜೆಪಿ) ಸರ್ವಾಧಿಕಾರದಿಂದ ಮುಕ್ತಗೊಳಿಸುತ್ತದೆ” ಎಂದು ಪ್ರತಿಜ್ಞೆ ಮಾಡಿದ್ದಾರೆ.
“ಬಿಜೆಪಿಯ 42 ಕೋಟಿ ರೂ.ಗಳ ಲೆಕ್ಕವಿಲ್ಲದ ಠೇವಣಿಗಳಿಗೆ 4,600 ಕೋಟಿ ರೂ.ಗಳ ದಂಡವನ್ನು ನಿರ್ಲಕ್ಷಿಸಲಾಗಿದೆ. ಆದರೆ ಕಾಂಗ್ರೆಸ್ನ 14 ಲಕ್ಷ ರೂ.ಗಳ ನಗದು ಠೇವಣಿಗೆ ₹135 ಕೋಟಿ ದಂಡ ವಿಧಿಸುವಂತೆ ಶಾಸಕರು ಮತ್ತು ಸಂಸದರು ಒತ್ತಾಯಿಸುತ್ತಿದ್ದಾರೆ” ಎಂದರು.
₹4,600 Cr penalty overlooked for BJP’s ₹42 Cr unaccounted deposit, while ₹135 Cr penalty is demanded for Congress’ for ₹14 lakh cash deposits by MLAs & MPs!
Who is pressurising the Income Tax Department to act in this unjustified manner only against the Opposition?
Why is…
— Mallikarjun Kharge (@kharge) March 29, 2024
“ಪ್ರತಿಪಕ್ಷಗಳ ವಿರುದ್ಧ ಮಾತ್ರ ಈ ರೀತಿ ನ್ಯಾಯ ಸಮ್ಮತವಲ್ಲದ ರೀತಿಯಲ್ಲಿ ವರ್ತಿಸುವಂತೆ ಆದಾಯ ತೆರಿಗೆ ಇಲಾಖೆಯ ಮೇಲೆ ಯಾರು ಒತ್ತಡ ಹೇರುತ್ತಿದ್ದಾರೆ? ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್ಗೆ ಕಿರುಕುಳ ನೀಡಲು ಐಟಿ ಇಲಾಖೆಯನ್ನು ಅಸ್ತ್ರವಾಗಿ ಬಳಸಲು ಏಕೆ ಅನುಮತಿಸಲಾಗುತ್ತಿದೆ. ಪ್ರಜಾಪ್ರಭುತ್ವವನ್ನು ಬುಡಮೇಲು ಮಾಡಲು ಮತ್ತು ಸಂವಿಧಾನವನ್ನು ಕೀಳಾಗಿ ಕಾಣಲು ಬಿಜೆಪಿ ಐಟಿ, ಇಡಿ, ಸಿಬಿಐನಂತಹ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ” ಎಂದು ಆರೋಪಿಸಿದ್ದಾರೆ.
“ಆದಾಯ ತೆರಿಗೆ ಇಲಾಖೆ ಈಗ ಒಟ್ಟು 1,823 ಕೋಟಿ ರೂ.ಗಳ ಮೊತ್ತಕ್ಕೆ ಕಾಂಗ್ರೆಸ್ಗೆ ನೋಟಿಸ್ ನೀಡಿದ್ದು, ಈಗಾಗಲೇ ಪಕ್ಷದ ಖಾತೆಗಳಿಂದ ₹135 ಕೋಟಿಯನ್ನು ಹಿಂತೆಗೆದುಕೊಂಡಿದೆ. ಆದರೆ ಐಟಿ ಇಲಾಖೆ ಬಿಜೆಪಿಗೆ ಯಾವುದೇ ನೋಟಿಸ್ ನೀಡಿಲ್ಲ. 2017-18ರಲ್ಲಿ 1,297 ಮಂದಿ ತಮ್ಮ ಹೆಸರು ಮತ್ತು ವಿಳಾಸವನ್ನು ಉಲ್ಲೇಖಿಸದೆ ಬಿಜೆಪಿಗೆ ₹42 ಕೋಟಿ ಠೇವಣಿ ಇಟ್ಟಿದ್ದಾರೆಂಬುದನ್ನು ಚುನಾವಣಾ ಆಯೋಗದ ಸಾರ್ವಜನಿಕ ಮಾಹಿತಿಯು ಸ್ಪಷ್ಟವಾಗಿ ತೋರಿಸುತ್ತದೆ” ಎಂದು ಖರ್ಗೆ ಹೇಳಿದ್ದಾರೆ.
“₹14 ಲಕ್ಷ ಠೇವಣಿ ಇಟ್ಟಿದ್ದಕ್ಕಾಗಿ ತಮ್ಮ ಪಕ್ಷಕ್ಕೆ ₹135 ಕೋಟಿ ದಂಡ ವಿಧಿಸಿದ್ದು, ಅದರ ಖಾತೆಯನ್ನು ಸ್ಥಗಿತಗೊಳಿಸಲಾಗಿದೆ. ಕಳೆದ 7 ವರ್ಷಗಳಲ್ಲಿ ಬಿಜೆಪಿಗೆ ಈ ದಂಡ ₹4,600 ಕೋಟಿ ಆಗಿದೆ” ಎಂದು ಹೇಳಿಕೊಂಡರು.
“ನಮ್ಮ ನೇರ ಪ್ರಶ್ನೆ ಏನೆಂದರೆ., ಬಿಜೆಪಿ ಈ ದಂಡದ ವಿನಾಯಿತಿಯನ್ನು ಏಕೆ ಪಡೆಯುತ್ತಿದೆ. ಲೋಕಸಭಾ ಚುನಾವಣೆಗೂ ಮುನ್ನ ಹಲವು ವರ್ಷಗಳ ಹಿಂದೆ ನೀಡಲಾದ ಈ ಐಟಿ ನೋಟಿಸ್ಗಳು ಬಿಜೆಪಿಯನ್ನು ಅಧಿಕಾರದ ಚುಕ್ಕಾಣಿ ಹಿಡಿಯುವ ಪಿತೂರಿಯನ್ನು ಸಾಬೀತುಪಡಿಸುತ್ತವೆಯೇ” ಎಂದು ಅವರು ಪ್ರಶ್ನಿಸಿದ್ದಾರೆ.
“ಐಟಿ ಅಧಿಕಾರಿಗಳು 1993-94ರಲ್ಲಿ ₹54 ಕೋಟಿ, 2016-17ರಲ್ಲಿ ₹182 ಕೋಟಿ, 2017-18ರಲ್ಲಿ ₹179 ಕೋಟಿ, 2018-19ರಲ್ಲಿ ₹918 ಕೋಟಿ, 2019-20ರಲ್ಲಿ ₹480 ಕೋಟಿ ದಂಡವನ್ನು ವಿಧಿಸಿದ್ದಾರೆ” ಎಂದು ಖರ್ಗೆ ಹೇಳಿದರು.
“ಕಾಂಗ್ರೆಸ್ಸಿಗರು ಎಂದಿಗೂ ಹೆದರುವುದಿಲ್ಲ. ನಾವು ನಮ್ಮ ಸಂಪೂರ್ಣ ಶಕ್ತಿಯೊಂದಿಗೆ ಚುನಾವಣೆಯನ್ನು ಎದುರಿಸುತ್ತೇವೆ. ನಾವು ದೇಶದ ಸಂಸ್ಥೆಗಳನ್ನು ಬಿಜೆಪಿ ಸರ್ವಾಧಿಕಾರದಿಂದ ಮುಕ್ತಗೊಳಿಸುತ್ತೇವೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದು, ಬಿಜೆಪಿ ತೆರಿಗೆ ಭಯೋತ್ಪಾದನೆʼಯಲ್ಲಿ ತೊಡಗಿದೆ ಎಂದು ಆರೋಪಿಸಿದ್ದಾರೆ.
“ಸರ್ಕಾರ ಬದಲಾದಾಗ, ಪ್ರಜಾಪ್ರಭುತ್ವವನ್ನು ಕಸಿದುಕೊಂಡವರ ವಿರುದ್ಧ ಖಂಡಿತವಾಗಿಯೂ ಕ್ರಮ ಕೈಗೊಳ್ಳಲಾಗುವುದು. ಅಂತಹ ಅನುಕರಣೀಯ ಕ್ರಮವನ್ನು ತೆಗೆದುಕೊಳ್ಳಲಾಗುವುದು. ಆಗ ಮಾತ್ರ ಯಾರೂ ಮತ್ತೆ ಇಂತಹ ಕುತಂತ್ರಗಳನ್ನು ನಡೆಸಲು ಧೈರ್ಯ ಮಾಡುವುದಿಲ್ಲ. ಇದು ನನ್ನ “ಗ್ಯಾರಂಟಿ” ಎಂದು ರಾಹುಲ್ ಗಾಂಧಿ ತಮ್ಮ X ಖಾತೆಯಲ್ಲಿ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮಣಿಪುರ ಹಿಂಸಾಚಾರ | ಸ್ಥಳಾಂತರಗೊಂಡ ಮತದಾರರಿಗೆ ʼಚುನಾವಣೆʼಗಳು ಅರ್ಥಹೀನ
ʼಕೇಂದ್ರ ಸರ್ಕಾರವು ತೆರಿಗೆ ಭಯೋತ್ಪಾದನೆಯಲ್ಲಿ ತೊಡಗಿದೆʼ ಎಂದು ಆರೋಪಿಸಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, “ಕಳೆದ ಆರು ವರ್ಷಗಳಲ್ಲಿ ಮಾಡಿದ ಉಲ್ಲಂಘನೆಗಳಿಗಾಗಿ ವಿರೋಧ ಪಕ್ಷಕ್ಕೆ ₹1,823 ಕೋಟಿ ನೋಟಿಸ್ ನೀಡಲಾಗಿದೆ. ಅದೇ ಉಲ್ಲಂಘನೆಗಾಗಿ, ಅದೇ ಅವಧಿಯಲ್ಲಿ, ಬಿಜೆಪಿಗೆ ₹4,600 ಕೋಟಿ ನೋಟಿಸ್ ನೀಡಬೇಕಾಗಿತ್ತು” ಎಂದು ಕಿಡಿಕಾರಿದ್ದಾರೆ.
“ಕಾಂಗ್ರೆಸ್ ಖಾತೆಗಳಲ್ಲಿನ ಖಾತಾಬಂಧಿಯು ನ್ಯಾಯಸಮ್ಮತವಲ್ಲ. ಸರ್ಕಾರಿ ಸಂಸ್ಥೆಗಳ ದುರುಪಯೋಗವಾಗಿದೆ. ಐಟಿ ಇಲಾಖೆ ಬಿಜೆಪಿಯ ಮೋಸದ ಅಭ್ಯಾಸಗಳನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸುತ್ತಿದೆ” ಎಂದು ಜೈರಾಮ್ ರಮೇಶ್ ತಿಳಿಸಿದ್ದಾರೆ.