- ಆರ್ ಅಶೋಕ್ ವಿರುದ್ಧ ಗೆದ್ದು ಬೀಗಿದ ಡಿ.ಕೆ ಶಿವಕುಮಾರ್
- ಸತತ ನಾಲ್ಕು ಬಾರಿ ಕನಕಪುರ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆ
ರಾಜ್ಯದಲ್ಲಿ 2023ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, 224 ವಿಧಾನಸಭಾ ಕ್ಷೇತ್ರಗಳ ಪೈಕಿ 130ಕ್ಕೂ ಹೆಚ್ಚು ಸ್ಥಾನಗಳಲ್ಲಿ ಕಾಂಗ್ರೆಸ್ ಮುನ್ನಡೆಯಲ್ಲಿದೆ. ಕಾಂಗ್ರೆಸ್ ಅಭ್ಯರ್ಥಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಕನಕಪುರ ವಿಧಾನಸಭಾ ಕ್ಷೇತ್ರದಲ್ಲಿ 1 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಜಯಭೇರಿ ಬಾರಿಸಿದ್ದಾರೆ.
ಕನಕಪುರ ವಿಧಾನಸಭಾ ಕ್ಷೇತ್ರದಲ್ಲಿ ಸತತವಾಗಿ ನಾಲ್ಕು ಬಾರಿ ಡಿ.ಕೆ ಶಿವಕುಮಾರ್ ಗೆಲವು ಸಾಧಿಸಿದ್ದಾರೆ. ಈ ಬಾರಿ 2023ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಆರ್ ಅಶೋಕ್ ಅವರನ್ನು ಮುಂದಿಟ್ಟುಕೊಂಡು ಕನಕಪುರ ಗೆಲ್ಲಲು ಬಲೆ ಬೀಸಿತ್ತು. ಆದರೆ, ಈಗ ಜನಭಿಪ್ರಾಯ ಹೊರಬಿದ್ದಿದ್ದು, ಬರೋಬ್ಬರಿ 1ಲಕ್ಷಕ್ಕೂ ಅಧಿಕ ಮತಗಳಿಂದ ಡಿ.ಕೆ ಶಿವಕುಮಾರ್ ಜಯ ಸಾಧಿಸಿದ್ದಾರೆ.
ಸಾತನೂರು ವಿಧಾನಸಭಾ ಕ್ಷೇತ್ರದಲ್ಲಿ ಡಿ.ಕೆ.ಶಿವಕುಮಾರ್ ಅವರು ಸತತ ನಾಲ್ಕು ಬಾರಿ ಗೆಲುವು ದಾಖಲಿಸಿದ್ದರು. ಕನಕಪುರ ಲೋಕಸಭಾ ಕ್ಷೇತ್ರದಲ್ಲಿದ್ದ ಸಾತನೂರು ವಿಧಾನಸಭಾ ಕ್ಷೇತ್ರ 2008ರ ಕ್ಷೇತ್ರ ವಿಂಗಡಣೆ ವೇಳೆ ಸಾತನೂರು ಕ್ಷೇತ್ರವು ಕನಕಪುರ ಮತ್ತು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಗಳೊಂದಿಗೆ ವಿಲೀನವಾಯಿತು. ಈ ವೇಳೆ, ಕನಕಪುರಕ್ಕೆ ಬಂದ ಡಿ.ಕೆ ಶಿವಕುಮಾರ್ ಪಿಜಿಆರ್ ಸಿಂಧಿಯಾ ಅವರ ಭದ್ರ ಕೋಟೆಯನ್ನು ತಮ್ಮದಾಗಿಸಿಕೊಂಡರು.ಬಳಿಕ ಸತತವಾಗಿ ನಾಲ್ಕು ಬಾರಿ ಕನಕಪುರ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮತ ಎಣಿಕೆ ಆರಂಭ: ಇಂದು 2,615 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ
ಕನಕಪುರ ಕ್ಷೇತ್ರದಲ್ಲಿ ಶೇ.84.52ರಷ್ಟು ಮತದಾನವಾಗಿತ್ತು. 1 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಲ್ಲಿ ಆರ್.ಅಶೋಕ್ ವಿರುದ್ಧ ಡಿ.ಕೆ.ಶಿವಕುಮಾರ್ ಗೆದ್ದು ಬೀಗಿದ್ದಾರೆ.