- ಚಿಂಚನಸೂರ್ ಪರವಾಗಿ ಸ್ಥಳೀಯ ಮುಖಂಡರ ಭರ್ಜರಿ ಪ್ರಚಾರ
- ಆಸ್ಪತ್ರೆಯ ಹಾಸಿಗೆಯಲ್ಲಿದ್ದರೂ ಖರ್ಗೆಯನ್ನು ಹೊಗಳಿದ ಬಾಬುರಾವ್
ಅಪಘಾತದಿಂದಾಗಿ ಆಸ್ಪತ್ರೆ ಪಾಲಾಗಿರುವ ಕಾಂಗ್ರೆಸ್ ಅಭ್ಯರ್ಥಿ ಬಾಬುರಾವ್ ಚಿಂಚನಸೂರ್ ಅವರು ಆಸ್ಪತ್ರೆಯಿಂದಲೇ ಕ್ಷೇತ್ರದ ಜನರಿಗೆ ಮತಯಾಚನೆ ಮಾಡಿದ್ದಾರೆ.
ರಾಜ್ಯ ವಿಧಾನಸಭಾ ಚುನಾವಣೆಗೆ ದಿನಗಣನೆ ಶುರುವಾದ ಹೊತ್ತಲ್ಲೇ ನಾನಾ ರಾಜಕೀಯ ವಿದ್ಯಮಾನಗಳಿಗೆ ನಾಡು ಸಾಕ್ಷಿಯಾಗುತ್ತಿದೆ. ಇದೀಗ ಗುರುಮಿಠಕಲ್ ಕಾಂಗ್ರೆಸ್ ಅಭ್ಯರ್ಥಿ ಬಾಬುರಾವ್ ಚಿಂಚನಸೂರ್ ಆಸ್ಪತ್ರೆಯಿಂದ ಮತ ಕೇಳಿದ್ದಾರೆ.
ಯಾದಗಿರಿಯಿಂದ ಕಲಬುರಗಿ ತೆರಳುತ್ತಿದ್ದ ವೇಳೆ, ಬಾಬುರಾವ್ ಚಿಂಚನಸೂರ್ ಅವರ ಕಾರು ಅಪಘಾತಕ್ಕೀಡಾಗಿತ್ತು. ಬಾಬುರಾವ್ ಚಿಂಚನಸೂರ್ ಅವರ ಕಾಲು ಮತ್ತು ತಲೆಗೆ ಗಂಭೀರ ಗಾಯಗಳಾಗಿದ್ದವು. ಈಗ ಅವರು ಕಲಬುರಗಿ ಯುನೈಟೆಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅವರ ಪರವಾಗಿ ಅವರ ಪತ್ನಿ ಸೋಮವಾರ ನಾಮಪತ್ರ ಸಲ್ಲಿಸಿದ್ದರು. ಚಿಂಚನಸೂರ್ ಪರವಾಗಿ ಕ್ಷೇತ್ರದಲ್ಲಿ ಸ್ಥಳೀಯ ಮುಖಂಡರು ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ.
ಈ ನಡುವೆ ಆಸ್ಪತ್ರೆಯ ಹಾಸಿಗೆಯಿಂದಲೇ ಬಾಬುರಾವ್ ಚಿಂಚನಸೂರ್ ಮತಯಾಚನೆ ಮಾಡಿರುವ ವಿಡಿಯೋ ಕ್ಷೇತ್ರದಲ್ಲಿ ಹರಿದಾಡುತ್ತಿದೆ.
ಈ ಸುದ್ದಿ ಓದಿದ್ದೀರಾ? ನನಗೆ ಟಿಕೆಟ್ ತಪ್ಪಲು ಬಿ ಎಲ್ ಸಂತೋಷ್ ಕಾರಣ : ಜಗದೀಶ್ ಶೆಟ್ಟರ್
ವಿಡಿಯೋದಲ್ಲಿ, “ಮಲ್ಲಿಕಾರ್ಜುನ ಖರ್ಗೆ ಅವರು ಆಶೀರ್ವಾದ ಮಾಡಿ ನನ್ನನ್ನು ಗುರುಮಿಠಕಲ್ ಮತಕ್ಷೇತ್ರದಲ್ಲಿ ನಿಲ್ಲಿಸಿದ್ದಾರೆ. ಮತಕ್ಷೇತ್ರದ ಜನರಿಗೆ ನಾನು ವಿನಂತಿ, ನಾನು ಇಂದಲ್ಲ ನಾಳೆ ಸಾಯುವ ಶರೀರ ಹೀಗೆ ಸಾಯುವುದಕ್ಕೆ ಜನರ ಸೇವೆ ಮಾಡಿ ಸಾಯುತ್ತೇನೆ” ಎಂದು ಬಾಬುರಾವ್ ಚಿಂಚನಸೂರ್ ಮತಯಾಚಿಸಿದ್ದಾರೆ.
“ನನ್ನ ಆರೋಗ್ಯ ಸರಿಯಾಗಿದೆ. ಮತದಾರರ ದೇವರುಗಳು ನನಗೆ ಆಶೀರ್ವಾದ ಮಾಡಬೇಕಾಗಿದೆ ವಿನಂತಿಸುತ್ತೇನೆ” ಎಂದು ಹೇಳಿದ್ದಾರೆ.
ಅಪಘಾತವಾಗಿ ಹಾಸ್ಪತ್ರೆಯ ಹಾಸಿಗೆಯಲ್ಲಿದ್ದರೂ ಬಾಬುರಾವ್ ಚಿಂಚನಸೂರ್ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಹೊಗಳುವುದು ಬಿಟ್ಟಿಲ್ಲ. “ಮಲ್ಲಿಕಾರ್ಜುನ ಖರ್ಗೆ ಅವರು ಹಳ್ಳಿಯಿಂದ ದಿಲ್ಲಿವರೆಗೆ ತಮ್ಮದೇ ಛಾಪು ಮೂಡಿಸಿದ್ದಾರೆ. ಅವರು ಆಶೀರ್ವಾದ ಮಾಡಿ ನನಗೆ ಟಿಕೆಟ್ ನೀಡಿದ್ದಾರೆ” ಎಂದು ಹೇಳಿದ್ದಾರೆ.
ಈ ನಡುವೆ, ಸಾಮಾಜಿಕ ಜಾಲತಾಣಗಳಲ್ಲಿ ಬಾಬುರಾವ್ ಚಿಂಚನಸೂರ್ ಅವರ ಪರವಾಗಿ ಅಭಿಯಾನ ಶುರುವಾಗಿವೆ. ‘ಅಭ್ಯರ್ಥಿ ಪ್ರಚಾರಕ್ಕೆ ಇಲ್ಲದೆಯೇ ಪಕ್ಷದ ಚಿಹ್ನೆಯ ಮೂಲಕ ಗೆಲ್ಲಿಸುವ ಮೂಲಕ ಹೊಸ ಇತಿಹಾಸ ನಿರ್ಮಿಸುತ್ತೇವೆ’ ಎಂದು ಕಾರ್ಯಕರ್ತರು ಪೋಸ್ಟ್ ಮಾಡುತ್ತಿದ್ದಾರೆ.
ಬಾಬುರಾವ್ ಚಿಂಚನಸೂರ್ ಅವರಿಗೆ ಎದುರಾಳಿಯಾಗಿ, ಜೆಡಿಎಸ್ನಿಂದ ಶರಣಗೌಡ ಕಂದಕೂರ್, ಬಿಜೆಪಿಯಿಂದ ಲಲಿತಾ ಅನಪುರ್ ಸ್ಪರ್ಧಿಸಿದ್ದಾರೆ.
ಬಾಬುರಾವ್ ಚಿಂಚನಸೂರ್ ಆಸ್ಪತ್ರೆಯಿಂದ ಮತಯಾಚಿಸಿರುವುದು…