- ಜೆಡಿಎಸ್ ಅಧಿಕಾರಕ್ಕೆ ಬಂದರೆ ವರ್ಷಕ್ಕೆ ಐದು ಸಿಲಿಂಡರ್ ಉಚಿತ
- ಬಡವರ, ರೈತರ ಹಾಗೂ ಶ್ರಮಿಕರ ಪರವಾಗಿರುವ ಪಕ್ಷ ಜೆಡಿಎಸ್
ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ರಾಜಗೇರಾ, ಸಿಂದೋಲ್ ತಾಂಡಗಳಲ್ಲಿ ಮಾಜಿ ಸಚಿವ ಬೀದರ್ ದಕ್ಷಿಣ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಬಂಡೆಪ್ಪ ಖಾಶೆಂಪುರ್ ಮತಯಾಚಿಸಿದರು.
ಬೀದರ್ ದಕ್ಷಿಣ ಕ್ಷೇತ್ರದ ರಾಜಗೇರಾ ಗ್ರಾಮದ ಹನುಮಾನ್ ಮಂದಿರಕ್ಕೆ ಭೇಟಿ ನೀಡಿ ದರ್ಶನ ಪಡೆದು ಪ್ರಚಾರ ಆರಂಭಿಸಿದ ಅವರು, ರಾಜಗೇರಾ, ಸಿಂದೋಲ್ ತಾಂಡಗಳ ಹಲವು ಪ್ರದೇಶಗಳಲ್ಲಿ ಮತಯಾಚಿಸಿದರು. ಬಾಜಾ ಭಜಂತ್ರಿಯೊಂದಿಗೆ ಅದ್ದೂರಿಯಾಗಿ ಸ್ವಾಗತಿಸಿದರು. ರಾಜಗೇರಾ, ಸಿಂದೋಲ್ ತಾಂಡಗಳ ದೇವಸ್ಥಾನ, ಚರ್ಚ್ಗಳಿಗೆ ಭೇಟಿ ನೀಡಿ ಪೂಜೆ, ಪ್ರಾರ್ಥನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಬಂಡೆಪ್ಪ ಖಾಶೆಂಪೂರ್ ಮಾತನಾಡಿ, ನಮ್ಮ ಪಕ್ಷ ಬಡವರ, ರೈತರ, ಶ್ರಮಿಕರ ಪರವಾಗಿರುವ ಪಕ್ಷವಾಗಿದೆ. ನಾಡಿನ ಬಡವರ, ರೈತರ, ಶ್ರಮಿಕರ ಒಳಿತಿಗಾಗಿ ಅನೇಕ ಮಹತ್ವದ ಯೋಜನೆಗಳನ್ನು ನಮ್ಮ ಪ್ರಣಾಳಿಕೆಯಲ್ಲಿ ತಿಳಿಸಿದ್ದೇವೆ. ಮಹಿಳಾ ಸಹಕಾರ ಸಂಘಗಳ ಸಾಲಮನ್ನಾ, ರೈತರ ಕೃಷಿ ಖರ್ಚಿಗಾಗಿ ಸಹಾಯಧನ ನೀಡುವುದು ಸೇರಿದಂತೆ ಅನೇಕ ಯೋಜನೆಗಳನ್ನು ನಾವು ಜಾರಿಗೆ ತರುತ್ತೇವೆ ಎಂದರು.
ಈಗ ಗ್ಯಾಸ್ ಸಿಲಿಂಡರ್ 1,200 ರೂ. ಏರಿಕೆ ಆಗಿದೆ. ನಮ್ಮ ಸರ್ಕಾರ ಬಂದ ಕೂಡಲೇ ನಾವು ವರ್ಷಕ್ಕೆ ಐದು ಸಿಲಿಂಡರ್ ಗಳನ್ನು ಉಚಿತವಾಗಿ ನೀಡುತ್ತೇವೆ. ಕ್ಷೇತ್ರದ ಜನರು ಇವೆಲ್ಲವೂಗಳನ್ನು ಗಮನಿಸಬೇಕು. ಜೆಡಿಎಸ್ ಪಕ್ಷಕ್ಕೆ ಮತ ನೀಡಬೇಕು. ಕ್ರಮ ಸಂಖ್ಯೆ ನಾಲ್ಕರ ಹೊರೆ ಹೊತ್ತ ಮಹಿಳೆಯ ಗುರುತಿಗೆ ಮತ ನೀಡಬೇಕು ಎಂದು ಶಾಸಕ ಬಂಡೆಪ್ಪ ಖಾಶೆಂಪುರ್ ಮನವಿ ಮಾಡಿದರು.
ಈ ಸುದ್ದಿ ಓದಿದ್ದೀರಾ? ಹೊಳೆನರಸೀಪುರ ಕ್ಷೇತ್ರ | ರೇವಣ್ಣರ ಗೆಲುವಿಗೆ ಅವರ `ಬಾಯಿ’ ತೊಡಕಾಗಲಿದೆಯೇ?
ಬಿಜೆಪಿ ಗೆದ್ದರೆ ನಮಗೆ ಉಳಿಗಾಲವಿಲ್ಲ
ಜೆಡಿಎಸ್ ರಾಜ್ಯ ಮುಖಂಡ ಮಾರುತಿ ಬೌದ್ಧೆ ಮಾತನಾಡಿ, ಬಂಡೆಪ್ಪ ಖಾಶೆಂಪುರ್ ಕ್ರೈಸ್ತರ ಪರವಾಗಿ ಸದನದಲ್ಲಿ ಧ್ವನಿ ಎತ್ತಿದ್ದಾರೆ. ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಗಳಾಗಿ ಸ್ಪರ್ಧಿಸಿರುವ ಚಂದ್ರಾಸಿಂಗ್ ಮತ್ತು ನಸಿಮೋದ್ದೀನ್ ಪಟೇಲ್ ಬಿಜೆಪಿ ಜೊತೆಗೆ ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.
ಯಾವುದೇ ಕಾರಣಕ್ಕೂ ಬಿಜೆಪಿಗೆ ಮತ ನೀಡಬಾರದು. ಬಿಜೆಪಿ ಗೆದ್ದರೆ ನಮಗೆ ಉಳಿಗಾಲವಿಲ್ಲ. ಅವರು ಸಂವಿಧಾನ ಬದಲಿಸುವ ಮನಸ್ಥಿತಿಯವರಾಗಿದ್ದಾರೆ. ನಾವೆಲ್ಲರೂ ಬಂಡೆಪ್ಪ ಖಾಶೆಂಪುರ್ ಅವರಿಗೆ ಮತ ನೀಡೋಣ ಎಂದು ಮನವಿ ಮಾಡಿದರು.