ರಾಜ್ಯಾದ್ಯಂತ ಇಂದು (ಬುಧವಾರ) ಮತದಾನ ನಡೆಯುತ್ತಿದೆ. ಇದೇ ಸಮಯದಲ್ಲಿ, ಕಲಬುರಗಿಯ ಸಂಗಮ ಕಾಂಪ್ಲೆಕ್ಸ್ನಲ್ಲಿರುವ ಬಿಜೆಪಿ ಡೇಟಾ ಕಾಲ್ ಸೆಂಟರ್ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಹಲವರನ್ನು ವಶಕ್ಕೆ ಪಡೆದಿದ್ದಾರೆ.
ಕಲಬುರಗಿ ನಗರ ಪೊಲೀಸ್ ಕಮಿಷನರ್ ಚೇತನ್ ಆರ್ ಅವರ ನೇತೃತ್ವದಲ್ಲಿ ದಾಳಿ ನಡೆದಿದ್ದು ಯುವತಿ ಸೇರಿ ಹಲವರನ್ನು ಬಂಧಿಸಲಾಗಿದ್ದು, ಕೆಲವರು ಪರಾರಿ ಆಗಿದ್ದಾರೆ ಎಂದು ವರದಿಯಾಗಿದೆ.
“ಕಳೆದ ಮೂರು ತಿಂಗಳಿಂದ ಸಕ್ರಿಯವಾಗಿ ಈ ಕಾಲ್ ಸೆಂಟರ್ ಮತದಾರರಿಗೆ ನಿರಂತರವಾಗಿ ಕರೆ ಮಾಡಿ ಬಿಜೆಪಿಗೆ ಮತ ಹಾಕುವಂತೆ ಮನವೊಲಿಕೆ ಮಾಡುತ್ತಿತ್ತು. ಮತದಾನದ ದಿನವಾದ ಬುಧವಾರ ಮುಂಜಾನೆ 4 ಗಂಟೆ ಸುಮಾರಿಗೆ ಯುವತಿಯರನ್ನು ಸೆಂಟರ್ಗೆ ಕರೆ ತಂದು ಅವರಿಂದ ಮತದಾರರಿಗೆ ಕರೆ ಮಾಡಿಸಲಾಗಿದೆ. ಕಾಂಗ್ರೆಸ್ಗೆ ಮತ ಹಾಕುವುದನ್ನು ತಪ್ಪಿಸುವುದನ್ನೇ ಟಾರ್ಗೆಟ್ ಮಾಡಿಕೊಂಡು ಮನವೊಲಿಕೆ ಮಾಡಲಾಗುತ್ತಿತ್ತು” ಎಂದು ಕಾಂಗ್ರೆಸ್ ಮುಖಂಡರು ಆರೋಪಿಸಿದ್ದಾರೆ.
ಕಾಲ್ ಸೆಂಟರ್ನಲ್ಲಿ ಕೆಲಸ ಮಾಡುತ್ತಿದ್ದ ಯುವತಿಯರು ಮತದಾನದ ಕಾರಣ ಕೆಲಸಕ್ಕೆ ಬರಲು ಹಿಂದೇಟು ಹಾಕಿ, ಮತಚಲಾಯಿಸಲು ಹೋಗುವುದಾಗಿ ಹೇಳಿದ್ದರು. ಕಾಲ್ ಸೆಂಟರ್ನಲ್ಲಿಯೇ ಮತ ಹಾಕುವ ವ್ಯವಸ್ಥೆ ಮಾಡಲಾಗಿದೆ ಎಂದು ನಂಬಿಸಿ ಕರೆ ತರಲಾಗಿತ್ತು. ಆ ಬಳಿಕ ಅವರಿಂದ ಕರೆ ಮಾಡಿಸಿದ್ದಾರೆ ಎಂದು ಕಾಂಗ್ರೆಸ್ಸಿಗರು ದೂರಿದ್ದಾರೆ.