ಅಭಿವೃದ್ಧಿಗೆ ಪೂರಕವಾಗಿರುವ ನನಗೆ ಮತ್ತೆ ಅವಕಾಶ ಕೊಡಬೇಕು. ಕ್ಷೇತ್ರದಲ್ಲಿ ಶೇ.80ರಷ್ಟು ಮಂದಿ ಅಭಿವೃದ್ಧಿ ನೋಡಿ ಮತ ನೀಡುತ್ತಾರೆ ಎಂದು ಬಿಜೆಪಿ ಅಭ್ಯರ್ಥಿ ಪ್ರೀತಂ ಜೆ ಗೌಡ ಹೇಳಿದರು.
ಹಾಸನದ ಹಲವು ಭಾಗಗಳಲ್ಲಿ ಬೈಕ್ ರ್ಯಾಲಿ ನಡೆಸಿ ಅವರು ಮಾತನಾಡಿದರು. “ಚುನಾವಣೆ ಸಂದರ್ಭದಲ್ಲಿ ಬಂದ ದೊಡ್ಡ ನಾಯಕರು ಪ್ರೀತಂಗೌಡನನ್ನು ತೆಗೀತಿವಿ. ಓಡಿಸುತ್ತೇವೆ ಎಂದು ಏನೇನೋ ಮಾತನಾಡುತ್ತಾರೆ” ಎಂದರು.
“ಮಾಜಿ ಪ್ರಧಾನಿ ದೇವೇಗೌಡರು ನಗರದಲ್ಲಿ ಪ್ರಚಾರಕ್ಕೆ ಬಂದ ವೇಳೆ ಅಷ್ಟೊಂದು ಸಂಖ್ಯೆಯಲ್ಲಿ ಜನ ಇರಲಿಲ್ಲ. ಅದೇ ಕಾರಣಕ್ಕೆ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ಅವರನ್ನು ಮತಯಾಚನೆ ಮಾಡಲು ಮೊಹಲ್ಲಾ ಬಡಾವಣೆಗೆ ಕಳುಹಿಸಿದ್ದರು. ಜೆಡಿಎಸ್ಗೆ ಇಂತಹ ಸ್ಥಿತಿ ಬಂದಿದೆ” ಎಂದು ವ್ಯಂಗ್ಯವಾಡಿದರು.

“ಐದು ವರ್ಷಗಳ ಕಾಲ ಯಾರು ಜನಸಾಮಾನ್ಯರ ನಡುವೆ ಇರುತ್ತಾರೋ ಅವರಿಗೆ ಒಲವು ಸಿಗುತ್ತದೆ. ಕೋವಿಡ್ ಸಮಯದಲ್ಲಿ ನಾನು ಜನರ ನಡುವೆ ಇದ್ದೆ. ನಮ್ಮ ತಂಡ ಮನೆ ಮನೆಗೆ ಹೋಗಿ ಆಹಾರದ ಕಿಟ್ ಕೊಡುವ ಕೆಲಸ ಮಾಡಿದೆ. ನಾನು 1 ಗಂಟೆ ರ್ಯಾಲಿ ಮಾಡಲು ಕೇಳಿದಾಗ ಇಷ್ಟೊಂದು ಜನ ಸೇರಿದ್ದಾರೆ” ಎಂದರು.
“ಜೆಡಿಎಸ್ ಒಂದು ವಾರ ಪ್ರಚಾರ ಮಾಡಿ 3 ಗಂಟೆ ಕಾದರೂ 80 ಅಡಿ ರಸ್ತೆಯಲ್ಲಿ ಜನ ಸೇರಲಿಲ್ಲ. ಮೇ 13 ಮಧ್ಯಾಹ್ನ ಇಂಜಿನಿಯರಿಂಗ್ ಕಾಲೇಜು ಬಳಿಯಿಂದ ಇದೇ ಮಹಾವೀರ ವೃತ್ತದಲ್ಲಿ ಜೋರಾದ ಸಂಭ್ರಮಾಚರಣೆ ಮಾಡೋಣ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಚುನಾವಣೆ 2023 | ಮತ ಎಣಿಕೆ ದಿನ ಸಂಭ್ರಮಾಚರಣೆಯಲ್ಲಿ ಪಟಾಕಿ ನಿಷೇಧ