ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ನೈತಿಕ ಪೊಲೀಸ್ಗಿರಿ ಪ್ರಕರಣವೊಂದರಲ್ಲಿ ಪೊಲೀಸರು 12 ಮಂದಿಯನ್ನು ಬಂಧಿಸಿದ್ದಾರೆ.
ಜುಲೈ 26ರಂದು ಸಂಜೆ ಸುಮಾರು 6.30ಕ್ಕೆ ಘಟನೆ ನಡೆದಿದೆ. ಬ್ಯಾಟರಿ ತಯಾರಿಕಾ ಘಟಕದ ಮಾಲೀಕ ಅರವಿಂದ್ ಭಾರದ್ವಾಜ್ ಮತ್ತು ಅವರ ಮಹಿಳಾ ಸ್ನೇಹಿತೆ, ಕೆ.ಜಿ. ಕುಂಟನಹಳ್ಳಿ ಕೆರೆಯ ಬಳಿ ಕಾರಿನಲ್ಲಿ ಕುಳಿತಿದ್ದಾಗ, ಕೆಲವು ಯುವಕರು ಅವರ ಇರುವಿಕೆಯನ್ನು ಪ್ರಶ್ನಿಸಿ ಆಕ್ಷೇಪಿಸಿದ್ದರು. ಇಬ್ಬರೂ ಅಲ್ಲಿಂದ ಹೊರಟು ಬ್ಯಾಟರಿ ಫ್ಯಾಕ್ಟರಿಯತ್ತ ಹೊರಟಾಗ, ಹಿಂಬಾಲಿಸಿ ಬಂದ ಸುಮಾರು 30-40 ಜನರ ಗುಂಪು ನೇರವಾಗಿ ಬ್ಯಾಟರಿ ತಯಾರಿಕಾ ಘಟಕದ ಒಳಗೆ ನುಗ್ಗಿದೆ.
ಗುಂಪಿನಲ್ಲಿ ಬಂದವರು ಕಾರಿನ ಕಿಟಕಿಗಳನ್ನು ಒಡೆದು ಫ್ಯಾಕ್ಟರಿ ಆವರಣಕ್ಕೆ ನುಗ್ಗಿ ಹಲ್ಲೆ ನಡೆಸಿದ್ದಾರೆ. ಕಂಪನಿ ಮಾಲೀಕ ಅರವಿಂದ್ ಭಾರದ್ವಾಜ್ಗೆ ದೊಣ್ಣೆ, ಗದೆ ಮತ್ತು ಚಾಕುವಿನಿಂದ ಹಲ್ಲೆ ಮಾಡಿದ್ದು, ಅವರ ತಲೆ, ಬಲಗೈ ಹಾಗೂ ಕಾಲಿಗೆ ಗಂಭೀರ ಗಾಯಗಳಾಗಿವೆ. ಜೊತೆಗಿದ್ದ ಬಿಸಿನೆಸ್ ಪಾರ್ಟ್ನರ್ ಅನುಪಮ್ ಕುಮಾರ್ ಕೂಡ ಗುಂಪಿನಿಂದ ಹಲ್ಲೆಗೊಳಗಾಗಿದ್ದಾರೆ. ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಉದ್ಯೋಗಿಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ದೂರಿನಲ್ಲಿ ಉಲ್ಲೇಖಿಸಿರುವಂತೆ, ಭಾರದ್ವಾಜ್ ಜೊತೆಗಿದ್ದ ಮಹಿಳೆಯನ್ನು ಅವಾಚ್ಯ ಮಾತುಗಳಿಂದ ನಿಂದಿಸಿ ಅವಮಾನಿಸಿದ್ದಲ್ಲದೆ, ಸಿಸಿಟಿವಿ ಕ್ಯಾಮೆರಾಗಳು ಮತ್ತು ಮಾನಿಟರ್ಗಳನ್ನು ಹಾಳುಗೆಡಹಿ, ಕಂಪನಿಯಲ್ಲಿದ್ದ ಉದ್ಯೋಗಿಗಳಿಗೆ ಜೀವ ಬೆದರಿಕೆ ಹಾಕಿ ಪರಾರಿಯಾಗಿದ್ದಾರೆ.
ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ 12 ಆರೋಪಿಗಳನ್ನು ಬಂಧಿಸಿದ್ದಾರೆ. ಉಳಿದವರನ್ನು ಪತ್ತೆಹಚ್ಚುವ ಕಾರ್ಯ ಮುಂದುವರಿದಿದೆ.




