- ʼಮತ ಬ್ಯಾಂಕ್ ರಾಜಕೀಯಕ್ಕಾಗಿ ಮುಸ್ಲಿಂ ಸಮುದಾಯಕ್ಕೆ ಮೋಸ ಮಾಡುತ್ತಿರುವ ಬಿಜೆಪಿʼ
- ಅಲ್ಪಸಂಖ್ಯಾತರ ಮೀಸಲಾತಿ ರದ್ದು ಮಾಡಿರುವುದನ್ನು ಹಿಂಪಡೆಯಬೇಕು
ಮುಸ್ಲಿಮರಿಗೆ 2ಬಿ ಅಡಿಯಲ್ಲಿ ನೀಡಲಾಗುತ್ತಿದ್ದ ಮೀಸಲಾತಿಯನ್ನು ರಾಜ್ಯ ಸರ್ಕಾರ ರದ್ದು ಮಾಡಿರುವುದನ್ನು ವಿರೋಧಿಸಿ, ಮುಸ್ಲಿಂ ಮೀಸಲಾತಿ ಮುಂದುವರೆಸುವಂತೆ ಆಗ್ರಹಿಸಿ ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಬಂಡೆಪ್ಪ ಖಾಶೆಂಪುರ್ ಹಾಗೂ ಜೆಡಿಎಸ್ ಕಾರ್ಯಕರ್ತರು ಪ್ರತಿಭಟನಾ ರ್ಯಾಲಿ ನಡೆಸಿದ್ದಾರೆ.
ಬೀದರ್ನಲ್ಲಿರುವ ಜೆಡಿಎಸ್ ಜಿಲ್ಲಾ ಕಚೇರಿಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಶಾಸಕರು ಮತ್ತು ಕಾರ್ಯಕರ್ತರು ಜಿಲ್ಲಾಧಿಕಾರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದ್ದಾರೆ.
ಪ್ರತಿಭಟನೆಯಲ್ಲಿ ಮಾತನಾಡಿದ ಶಾಸಕ ಬಂಡೆಪ್ಪ ಖಾಶೆಂಪುರ್, “1995ರಲ್ಲಿ ದೇವೇಗೌಡರು ಮುಖ್ಯಮಂತ್ರಿಯಾಗಿದ್ದಾಗ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯಕ್ಕೆ ಶೇ.04ರಷ್ಟು ಮೀಸಲಾತಿ ಕಲ್ಪಿಸಿದ್ದರು. ಅಂದಿನಿಂದ ಇಂದಿನವರೆಗೂ ಮೀಸಲಾತಿ ಸಿಗುತ್ತಿತ್ತು. ಈಗ ಬಿಜೆಪಿ ಸರ್ಕಾರ ಮೀಸಲಾತಿ ರದ್ದು ಮಾಡಿದೆ. ಬಿಜೆಪಿಯವರು ಮತ ಬ್ಯಾಂಕ್ ರಾಜಕೀಯಕ್ಕಾಗಿ ಆ ಸಮುದಾಯಕ್ಕೆ ಮೋಸ ಮಾಡುತ್ತಿದ್ದಾರೆ” ಎಂದು ಆರೋಪಿಸಿದರು.
“ದೇವೇಗೌಡರು ಜಾರಿಗೊಳಿಸಿದ್ದ ಮೀಸಲಾತಿಯನ್ನು ಇವರು ರದ್ದು ಮಾಡಿದ್ದಾರೆ. ಇದು ಖಂಡನಿಯವಾಗಿದೆ. ಕೂಡಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಅಲ್ಪಸಂಖ್ಯಾತರ ಮೀಸಲಾತಿ ರದ್ದು ಮಾಡಿರುವ ನಿರ್ಧಾರವನ್ನು ಹಿಂಪಡೆಯಬೇಕು. ಮೊದಲಿನಂತೆಯೇ ಅಲ್ಪಸಂಖ್ಯಾತರ ಮೀಸಲಾತಿಯನ್ನು ಮುಂದುವರೆಸಬೇಕು” ಎಂದು ಶಾಸಕ ಬಂಡೆಪ್ಪ ಖಾಶೆಂಪುರ್ ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಧಾರವಾಡ | ಸುಪ್ರೀಂ ಕೋರ್ಟ್ ಎತ್ತಿಹಿಡಿದಿದ್ದ ಧರ್ಮಾಧಾರಿತ ಮೀಸಲಾತಿ ರದ್ದು: ಪ್ರಲ್ಹಾದ್ ಜೋಶಿ ಸಂವಿಧಾನ ವಿರೋಧಿ ಹೇಳಿಕೆ
ಪ್ರತಿಭಟನೆಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ರಮೇಶ್ ಪಾಟೀಲ್ ಸೋಲಪೂರ್, ಪ್ರಮುಖರು ಸಜ್ಜದ್ ಸಾಹೇಬ್, ಸಿಎಂ ಫೈಜ್, ಬಾಬಾ ಬುಕಾರಿ, ಐಲಿಂಜಾನ್ ಮಠಪತಿ, ಎಮ್.ಡಿ ಅಸೋದ್ದೀನ್, ಎಮ್.ಡಿ ನಬಿ ಖುರೇಷಿ, ರಾಜು ಕಡ್ಯಾಳ್, ಮಾರುತಿ ಬೌದ್ಧೆ, ಸೈಯದ್ ಸರ್ಪರಾಜ್ ಹಸ್ಮಿ, ಅಬ್ದುಲ್ ಸಮ್ಮದ್, ಇಸ್ಲಾಯಿಲ್ ಅಹಮದ್, ಸಂಗಮ್ಮ ವಿ ಪಾಟೀಲ್, ಲಲಿತಾ ಕರಂಜೆ, ವಸಿಮ್, ದೇವೇಂದ್ರ ಸೋನಿ, ಎಮ್.ಡಿ ಸಲಿಂ, ರಾಜಶೇಖರ ಜವಳೆ, ಸೈಖ್, ಸೈಯದ್ ಇಸ್ಮಾಯಿಲ್, ಶಮ್ಮಿ ಶೇಖ್, ಅಶೋಕ್ ಕೊಡ್ಗೆ, ಸೈಯದ್ ಬಿಲಾಲ್, ಮಿರಾಜ್ ಪೈಮ್ ಬೇಗ್ ಸೇರಿದಂತೆ ಇತರರು ಇದ್ದರು.