ರಾ.ಹೆ. ಇಲಾಖೆಯು ವಾಮಂಜೂರು ಜಂಕ್ಷನ್ನಲ್ಲಿ ಅವೈಜ್ಞ್ಞಾನಿಕ ಚರಂಡಿ ಕಾಮಗಾರಿ ಮಾಡುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಇಲ್ಲಿನ ವಸತಿಪ್ರದೇಶ, ಅಂಗಡಿ-ಮುಂಗಟ್ಟುಗಳ ತ್ಯಾಜ್ಯ ನೀರು ಹರಿಯಲು ರಾಜಕಾಲುವೆಯಲ್ಲೇ ರಾ.ಹೆ. ಇಲಾಖೆಯು ಹೊಸದಾಗಿ ಚರಂಡಿ ಕಾಮಗಾರಿ ಆರಂಭಿಸಿದೆ. ಆದರೆ ಇದರಿಂದ ವಾಮಂಜೂರು ಕೆಳಭಾಗದ ಕುಡಿಯುವ ನೀರಿನ ಬಾವಿಗಳ ನೀರು ಕಲುಷಿತಗೊಳ್ಳುವುದರ ಜೊತೆಗೆ ಫಲ್ಗುಣಿ ನದಿ ನೀರು ಮಲಿನವಾಗುವ ಸಾಧ್ಯತೆ ಇದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದು, ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.
ಮಳೆ ನೀರು ಸರಾಗವಾಗಿ ಹರಿಯುವ ರಾಜಕಾಲುವೆಯಲ್ಲಿ ಬೇಸಿಗೆ ಹೊತ್ತಲ್ಲಿ ದುರ್ವಾಸನೆಯಿಂದ ಕೂಡಿದ ಕೊಳಚೆ ನೀರು ಹರಿಯುತ್ತಿತ್ತು. ಮಳೆಗಾಲದಲ್ಲಿ ಈ ಸಮಸ್ಯೆ ಇರುವುದಿಲ್ಲ. ಆದರೆ ಮಳೆ ನಿಂತಾಗ ವಾಮಂಜೂರು ಜಂಕ್ಷನ್ನ ಮೇಲ್ಭಾಗದಿಂದ ಮತ್ತೆ ಕೊಳಚೆ ನೀರು ಹರಿಯುತ್ತಿದೆ. ಹೊಸ ಚರಂಡಿಯ ತ್ಯಾಜ್ಯ ನೀರು ರಾಜಕಾಲುವೆ ಸಂಪರ್ಕಿಸಿ ದರೆ ಆ ನೀರು ಕೆಳಭಾಗದ ಕೆಲರೈಕೋಡಿ, ಸಂಕೇಶ, ಮಂಜಲ್ದೋಟವಾಗಿ ಉಳಾಯಿಬೆಟ್ಟು ಭಾಗದಲ್ಲಿ ಫಲ್ಗುಣಿ ನದಿ ಸೇರುವ ಸಾಧ್ಯಯೆ ಇದೆ. ಇದರಿಂದ ಮತ್ತಷ್ಟು ಸಮಸ್ಯೆಯಾಗಲಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಕೆಲವು ಸಂದರ್ಭ ತಿರುವೈಲಿನ ಕೆಲರೈಕೋಡಿ ಮತ್ತಿತರ ಪ್ರದೇಶಗಳ ಕುಡಿಯುವ ನೀರಿನ ಬಾವಿಗಳು ಹಾಗೂ ಕೆರೆಕಟ್ಟೆಗಳ ತ್ಯಾಜ್ಯ ನೀರು ಇಂಗುತ್ತಿದೆ. ಅಲ್ಲದೆ ಬಾವಿಗಳ ನೀರು ಕಲುಷಿಗೊಳ್ಳುತ್ತಿದೆ. ಆಗ ನೀರು ಬಳಕೆಗೆ ಯೋಗ್ಯವಾಗಿರುವುದಿಲ್ಲ ಎಂದು ಸ್ಥಳೀಯರು ಜಿಲ್ಲಾಧಿಕಾರಿ, ಮನಪಾ ಸಹಿತ ಸಂಬಂಧಪಟ್ಟ ಇಲಾಖೆಗಳಿಗೆ ದೂರು ನೀಡಿದ್ದಾರೆ.
ಈಗಾಗಲೆ ಫಲ್ಗುಣಿ ನದಿಗೆ ಮರವೂರು, ಮೂಡುಶೆಡ್ಡೆ ಮತ್ತಿತರ ಕಡೆಗಳಲ್ಲಿ ವಿಷಯುಕ್ತ ತ್ಯಾಜ್ಯ ನೀರು ಸೇರುತ್ತಿದೆ. ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದರೆ ಭವಿಷ್ಯದಲ್ಲಿ ವಾಮಂಜೂರು ಭಾಗದಿಂದಲೂ ಭಾರೀ ಪ್ರಮಾಣದ ತ್ಯಾಜ್ಯ ನೀರು ಫಲ್ಗುಣಿಯ ಒಡಲು ಸೇರಲಿದೆ. ವಿಷಯುಕ್ತ ರಾಸಾಯನಿಕ ತ್ಯಾಜ್ಯ ನೀರಿಂದ ಮೀನುಗಳ ಸಾಯಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.





