- ಬಳಕೆ ಮಾಡದ ಕುಕ್ಕರ್ ನೆಲಕ್ಕೆ ಎಸೆಯುತ್ತಿರುವ ವಿಡಿಯೋ ಪೋಸ್ಟ್
- ಹಳೆಯ ಕುಕ್ಕರ್ ಸಿಡಿದಿದೆ ಎಂದು ಮತ್ತಿಬ್ಬರು ಮಹಿಳೆಯರ ಹೇಳಿಕೆ
ಅಡುಗೆ ಮಾಡುವಾಗ ಕುಕ್ಕರ್ ಸ್ಪೋಟಗೊಂಡು 17 ವರ್ಷದ ಬಾಲಕಿ ಗಂಭೀರವಾಗಿ ಗಾಯಗೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಪರ ವಿರೋಧ ಚರ್ಚೆಗಳು ನಡೆಯುತ್ತಿವೆ.
ರಾಮನಗರ ತಾಲೂಕಿನ ಕೋನಮುದ್ದನಹಳ್ಳಿ ಗ್ರಾಮದಲ್ಲಿ ನಡೆದ ಘಟನೆಯಲ್ಲಿ ಮಹಾಲಕ್ಷ್ಮಿ (17) ಎಂಬ ಬಾಲಕಿಯ ಮುಖಕ್ಕೆ ಸುಟ್ಟ ಗಾಯಗಳಾಗಿದ್ದವು.
“ಮಾಗಡಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೆಲುವು ಸಾಧಿಸಿರುವ ಎಚ್ ಸಿ ಬಾಲಕೃಷ್ಣ ಚುನಾವಣೆಗೂ ಮೊದಲು ನೀಡಿದ್ದ ಕುಕ್ಕರ್ ಸ್ಪೋಟಗೊಂಡು ಬಾಲಕಿಗೆ ಗಾಯಗಳಾಗಿವೆ” ಎಂದು ಜೆಡಿಎಸ್ ಅಭ್ಯರ್ಥಿಯಾಗಿ ಸೋಲು ಅನುಭವಿಸಿರುವ ಎ ಮಂಜುನಾಥ್ ಅವರ ಅಭಿಮಾನಿ ಬಳಗ ಮಾಗಡಿ ಎಂಬ ಹೆಸರಿನ ಫೇಸ್ಬುಕ್ ಪೇಜ್ನಲ್ಲಿ ಫೊಸ್ಟ್ ಹಂಚಿಕೊಳ್ಳಲಾಗಿದೆ.
ಮತ್ತೊಂದು ಪೋಸ್ಟ್ನಲ್ಲಿ ಇಬ್ಬರು ಮಹಿಳೆಯರ ವಿಡಿಯೋ ಹಾಕಲಾಗಿದೆ. ವಿಡಿಯೋದಲ್ಲಿ ಒಬ್ಬ ಮಹಿಳೆ, ನೀರಿನ ಕ್ಯಾನ್ ಮತ್ತೊಬ್ಬರು ಇನ್ನು ಬಳಕೆಯೇ ಮಾಡದ ಕುಕ್ಕರ್ನ್ನು ನೆಲದ ಮೇಲೆ ಎಸೆದು ಕಾಂಗ್ರೆಸ್ ಶಾಸಕ ಎಚ್ ಸಿ ಬಾಲಕೃಷ್ಣ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ವೇಳೆ ಮಾತನಾಡಿರುವ ಮಹಿಳೆಯರು “ನಮ್ಮ ಮಗಳಿಗೆ ಅನ್ಯಾಯ ಆಗಿದೆ. ಅವರೇ ಬಂದು ಈ ಎಲ್ಲವನ್ನು ಎತ್ಕೊಂಡು ಹೋಗ್ಲಿ, ಅವರ ಹೆಂಡತಿ ಮಕ್ಕಳಿಗೆ ಕೊಡಲಿ. ಈ ಸ್ಥಿತಿಯಲ್ಲಿರುವ ನಮ್ಮ ಮಗಳನ್ನು ಯಾರು ಮದುವೆ ಆಗುತ್ತಾರೆ? ಈ ರೀತಿ ಮುಖವನ್ನು ಕಲೆ ಮಾಡಿದ್ದಾರೆ. ಹೊಸ ಪಾತ್ರೆಗಳು ಎಂದು ಕೊಟ್ಟು ಈ ರೀತಿ ಆದರೆ ಏನು ಮಾಡೋಣ ನಾವು?” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದೇ ಪೋಸ್ಟ್ಗೆ ರಾಕ್ ರಂಜು ಎಂಬ ವ್ಯಕ್ತಿ, ಇಬ್ಬರು ಮಹಿಳೆಯರು ಮಾತನಾಡಿರುವ ವಿಡಿಯೋ ಕಾಮೆಂಟ್ ಮಾಡಿದ್ದು, ಅ ಮಹಿಳೆಯರು “ನನಗೂ ಕೊಟ್ಟಿರುವ ಕುಕ್ಕರ್ ಬಳಕೆ ಮಾಡ್ಬೇಕು, ಬ್ಲಾಸ್ಟ್ ಆಗಿರುವ ಕುಕ್ಕರ್ ಹಳೆಯದಾ ಹೊಸದ ಎಂದು ಕೇಳಿದ್ದೆವು, ಹಳೆಯ ಕುಕ್ಕರ್ ಎಂದು ಹೇಳಿದ್ದಾರೆ. ದಿನಾಲೂ ಅಡುಗೆ ಮಾಡುತ್ತೇವೆ ಗೊತ್ತಾಗೊಲ್ವಾ ಎಂದು ಹೇಳಿದರು. ಕುಕ್ಕರ್ ಗಾಳಿ ಹೋಗುವ ಮೊದಲೇ ಕುಕ್ಕರ್ ಮುಚ್ಚಳ ತೆಗೆಯಲು ಹೋದಾಗ ಬ್ಲಾಸ್ಟ್ ಆಗಿದೆ. ಮುಖಕ್ಕೆ ಗಾಯಗಳಾಗಿವೆ. ಹುಡುಗಿ ಆಸ್ಪತ್ರೆಯಿಂದ ಬಂದಿದ್ದಾಳೆ” ಎಂದು ಹೇಳಿಕೆ ನೀಡಿದ್ದಾರೆ.
ಈ ಪೋಸ್ಟ್ಗೆ ಪ್ರತಿಕ್ರಿಯಿಸಿರುವ ಸ್ವಾಮಿ ಆರ್ ಗೌಡ ನಾಗವಾರ ಎಂಬ ವ್ಯಕ್ತಿ ಸುದೀರ್ಘವಾಗಿ ಬರೆದು ಸ್ಪಷ್ಟನೆ ನೀಡಿದ್ದಾರೆ. “ಕುಕ್ಕರ್ಗಳನ್ನು ಬಾಲಕೃಷ್ಣ ಅವರು ತಾವೇ ತಮ್ಮ ವ್ಯಾಪ್ತಿಯಲ್ಲಿ ತಯಾರಿಸಿ ಹಂಚಲು ಸೂಚನೆ ನೀಡಿಲ್ಲ. ಬಾಲಕೃಷ್ಣ ಭಾವಚಿತ್ರವಿರುವ ಕುಕ್ಕರ್ ನ ಕಂಪನಿಯ ಹೆಸರು ಪಿಜ್ಜಾರ್ (PIZZAR), ಆದರೆ, ಬ್ಲಾಸ್ಟ್ ಆಗಿರುವ ಕುಕ್ಕರ್ ಕಂಪನಿಯ ಹೆಸರು ಗಂಗಾ(GANGA) ಪಡೆದುಕೊಂಡಿರುವ ಎಲ್ಲ ಮನೆಗಳಲ್ಲಿಯೂ ಈ ರೀತಿಯ ಅವಘಡ ನಡೆದಿದ್ದರೆ ಬಹುಶಃ ಕುಕ್ಕರ್ ಸಮಸ್ಯೆ ಎನ್ನಬಹುದಿತ್ತು” ಎಂದು ಸ್ಪಷ್ಟನೆ ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ರಾಮನಗರ | ಚುನಾವಣೆ ವೇಳೆ ಹಂಚಿದ್ದ ಕುಕ್ಕರ್ ಸ್ಪೋಟ; ಬಾಲಕಿಗೆ ಗಂಭೀರ ಗಾಯ
“ಕುಕ್ಕರ್ ಗಳನ್ನು ಬಳಸುವ ವಿಧಾನ ವೈಜ್ಞಾನಿಕವಾಗಿರಬೇಕು. ಕುಕ್ಕರ್ ಬ್ಲಾಸ್ಟ್ ಆಗಿದ್ದರೆ ಮನೆ ಛಾವಣಿಗೆ ಸಿಡಿಯ ಬೇಕಿತ್ತು. ಆ ಸಹೋದರಿ ಸಣ್ಣ ವಯಸ್ಸಿನವರು ಹೊಸದಾಗಿ ಕಲಿತ ಸಂಧರ್ಭ ಹಿರಿಯರಾದ ತಾಯಂದಿರು ಮನೆಯ ಸದಸ್ಯರು ಅಪ್ರಾಪ್ತ ಮಕ್ಕಳನ್ನು ಈ ರೀತಿಯ ಗ್ಯಾಸ್ ಹಾಗೂ ಕುಕ್ಕರ್ ಅಡುಗೆಗಳಿಂದ ಸಂಪೂರ್ಣವಾಗಿ ಕಲಿತು ಕೊಳ್ಳುವ ವರೆಗೂ ವೈಜ್ಞಾನಿಕ ವಿಧಾನ ತಿಳಿಯುವ ವರೆಗೂ ಅಡುಗೆ ಮಾಡುವ ವಿಚಾರಕ್ಕೆ ಕಳುಹಿಸಬಾರದು” ಎಂದು ಸಲಹೆ ನೀಡಿದ್ದಾರೆ.
“ದಯಮಾಡಿ ಅಭಿವೃದ್ಧಿ ವಿಚಾರವಾಗಿ ಚರ್ಚೆ ಮಾಡಿ ಆರೋಗ್ಯಕರವಾಗಿ ವಿರೋಧಿಸಿ, ತಪ್ಪುಗಳಾದರೆ ಮನ್ನಿಸಿ, ಅಭಿವೃದ್ದಿಗೆ ಕೈ ಜೋಡಿಸಿ” ಎಂದು ಮನವಿ ಮಾಡಿದ್ದಾರೆ.