“ಕ.ವಿ.ಪ್ರ.ನಿ. ಸಂಘ ಸ್ಥಳೀಯ ಸಮಿತಿ ಆಶ್ರಯದಲ್ಲಿ ವಿಶ್ವ ಕಾರ್ಮಿಕ ದಿನಾಚರಣೆಯನ್ನು ಏಳು ನೌಕರರಿಗೆ ಅತ್ಯುತ್ತಮ ಕಾರ್ಮಿಕ ಪ್ರಶಸ್ತಿ ನೀಡುವ ಮೂಲಕ ಹಾವೇರಿ ಪಟ್ಟಣದ ಹೆಸ್ಕಾಂ ಆವರಣದಲ್ಲಿ ಇರುವ ಸಮುದಾಯ ಭವನದಲ್ಲಿ ಆಚರಿಸಲಾಯಿತು.
ಬೆಳಿಗ್ಗೆ ಕಾರ್ಮಿಕ ಸ್ಮಾರಕಕ್ಕೆ ಪುಷ್ಪಾರ್ಪಣೆ ಮಾಡುವ ಮೂಲಕ ಕ.ವಿ.ಪ್ರ.ನಿ ನೌಕರರ ಸಂಘದ ಮಾಜಿ ಕಾರ್ಯಾಧ್ಯಕ್ಷರಾದ ವಿಜಯಕುಮಾರ ಮುದಕಣ್ಣನವರ ಕಾರ್ಮಿಕ ದಿನಾಚರಣೆಗೆ ಚಾಲನೆ ನೀಡಿದರು.
ನಂತರ ಪ್ರಾಶಸ್ತಿ ಪ್ರದಾನ ಸಮಾರಂಭದಲ್ಲಿ ವಿಜಯಕುಮಾರ ಮಾತನಾಡಿ, “ಸುರಕ್ಷಿತತೆಗೆ ನಮ್ಮ ನೌಕರರು ಹೆಚ್ಚಿನ ಆದ್ಯತೆ ನೀಡಬೇಕು. ಕಾರ್ಮಿಕ ಸಂಘಟನೆಗಳ ಹೊರತಾಗಿ ಆಡಳಿತ ಮಂಡಳಿಯವರೇ ಅತ್ಯುತ್ತಮ ಸೇವೆ ಸಲ್ಲಿಸಿದ ಕಾರ್ಮಿಕರನ್ನು ಗುರುತಿಸಿ ಸನ್ಮಾನಿಸುವ ಕೆಲಸವನ್ನು ಮಾಡಬೇಕು” ಎಂದರು.
ಹಿರಿಯ ಸಾಹಿತಿ ಹನುಮಂತಗೌಡ ಗೊಲ್ಲರ ಪ್ರಧಾನ ಭಾಷಣದಲ್ಲಿ ಮಾತನಾಡಿ, “ರೈತರು, ಕಾರ್ಮಿಕರು, ಸೈನಿಕರು ಮತ್ತು ಶಿಕ್ಷಕರೇ ದೇಶದ ನಾಲ್ಕು ಸ್ತಂಭಗಳು. ಯಾವುದೇ ಒಂದು ಕುಸಿದರೂ ವ್ಯವಸ್ಥೆ ಅವ್ಯಸ್ಥೆಯಾಗುತ್ತದೆ. ಹಾವೇರಿ ವೃತ್ತದ ವಿದ್ಯುತ್ ಇಲಾಖೆಯ ನೌಕರರು ಸೇವೆ ಅತ್ಯುತ್ತಮವಾಗಿದ್ದು, ಸಂಘಟನೆಯನ್ನೂ ಕಾಪಾಡಿಕೊಂಡದ್ದು ಶ್ಲಾಘನೀಯ” ಎಂದರು.
ಮುಖ್ಯ ಅತಿಥಿಯಾಗಿದ್ದ ಪ್ರಭಾರಿ ಕಾರ್ಯ ನಿರ್ವಾಹಕ ಇಂಜನೀಯರ ಸಿ.ಬಿ. ಹೊಸಮನಿ ಮಾತನಾಡಿ, “ಸದಾಕಾಲ ಅಗೋಚರ ಶಕ್ತಿಯೊಂದಿಗೆ ಕೆಲಸ ಮಾಡುವ ನಮ್ಮ ಲೈನ್ಮನ್ನರು ತಮಗೆ ಕೊಟ್ಟಿರುವ ಸುರಕ್ಷಿತಾ ಸಲಕರಣೆಗಳನ್ನು ಬಳಸಿ ಕೆಲಸ ಮಾಡಬೇಕು. ದಕ್ಷತೆಯಲ್ಲಿ ಪ್ರತಿ ಕುಟುಂಬದ ಸುರಕ್ಷತೆ ಅಡಗಿದೆ” ಎಂದರು.

ಹಾವೇರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಲಿಂಗಯ್ಯ ಹಿರೇಮಠ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು, “ಸಂಘಟನೆಯಲ್ಲಿಯೇ ಶಕ್ತಿ ಇದೆ. ಕೂಡಿ ನಡೆದರೆ ಯಶಸ್ಸು ಖಂಡಿತ. ಕಾರ್ಮಿಕರ ಒಗ್ಗಟ್ಟನ್ನು ಮುರಿಯುವ ಶಕ್ತಿಗಳಿಗಿಂತ ಕಾಯುವ ಸಂಕಲ್ಪವೇ ಮುಖ್ಯ” ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಹಾವೇರಿ ವೃತ್ತದ ಸಂಘಟನಾ ಕಾರ್ಯದರ್ಶಿ ಶಿವಾನಂದ ಬಿ ಹಾದಿಮನಿ ಅವರು ನಮ್ಮಲ್ಲಿ ಒಗ್ಗಟ್ಟಿರುವುದರಿಂದಲೇ ಎಲ್ಲ ಬೇಡಿಕೆಗಳನ್ನು ಈಡೇರಿಸಿಕೊಂಡಿರುವೆವು. ನಾವು ಸಹ ಇಲಾಖೆಯ ಉನ್ನತಿಗಾಗಿ ಪ್ರಾಮಾಣಿಕತೆಯಿಂದ ಕೆಲಸ ಮಾಡಬೇಕು. ಸಂಘ ಮತ್ತು ಆಡಳಿತ ಮಂಡಳಿ ವ್ಯವಸ್ಥೆಯ ಎರಡು ಕಣ್ಣುಗಳು ಇದ್ದಂತೆ” ಎಂದು ಹೇಳಿದರು
ಈ ಸಂದರ್ಭದಲ್ಲಿ ಏಳು ಜನ ನೌಕರರಿಗೆ ಕಾರ್ಮಿಕ ಪ್ರಶಸ್ತಿಯನ್ನು ನೀಡಲಾಯಿತು. ನಗರ ಸಭೆಯ ವಾಲ್ಮನ್ ಬಿಷ್ಟಣ್ಣ ಹನುಮಂತ ಕೊರವರ ಮತ್ತು ಮಹಿಳಾ ಪ್ರತಿನಿಧಿ ಶ್ರೀಮತಿ ನೀಲಮ್ಮ ಹಡಪದ ಅವರು ಒಳಗೊಂಡಂತೆ ಸರ್ವಶ್ರೀ ಎಸ್. ಎಂ ಹಾವೇರಿ, ದಾದಾಪೀರ ಯು ಹಾವೇರಿ, ಅನೀಲಕುಮಾರ ಪತ್ತಾರ, ಮಹೇಶ ಹುಣಸಿಕಟ್ಟಿ ಹಾಗೂ ಎಸ್.ಕೆ ಕಬ್ಬೂರ ಅವರುಗಳನ್ನು ಸನ್ಮಾನಿಸಲಾಯಿತು.
ಈ ಸುದ್ದಿ ಓದಿದ್ದೀರಾ? ಹುಲಸೂರ | ತಹಸೀಲ್ ಕಚೇರಿಯಲ್ಲಿ ಭಗವಾನ್ ಬುದ್ಧ ಜಯಂತಿ ಆಚರಣೆ
ಸಮಾರಂಭವನ್ನು ಉದ್ದೇಶಿಸಿ ಸರ್ವಶ್ರೀ ಮೊಹ್ಮದ ಅಮಾನುಲ್ಲಾ. ಎ.ಕೆ. ಯಮನೂರ, ಎನ್.ಪಿ. ಹಾವೇರಿ, ಕೆ.ಎನ್. ಅಗಡಿ. ಓ ಸತೀಶ, ಎಂ.ಕೆ. ತರಿಕೇರಿ ಮುಂತಾದವರು ಮಾತನಾಡಿದರು. ಹಿರಿಯ ಸಾಹಿತಿ ಸತೀಶ ಕುಲಕರ್ಣಿ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.
ಆರಂಭದಲ್ಲಿ ನಾಗರಾಜ ಬಿ. ಮಡ್ಲೂರ ಕಾರ್ಮಿಕ ಗೀತೆ ಹಾಡಿದರು. ಸ್ಥಳೀಯ ಸಮಿತಿಯ ಅಧ್ಯಕ್ಷರಾದ ಶಂಕರ ಕಾಳಶೆಟ್ಟಿ ಸ್ವಾಗತಿಸಿದರು. ಕಾರ್ಯಕ್ರಮವನ್ನು ಕಾರ್ಯದರ್ಶಿ ಎಚ್. ಸಿ. ಮರಿದ್ಯಾಮಣ್ಣನವರ ನಡೆಸಿಕೊಟ್ಟರು. ಕೊನೆಯಲ್ಲಿ ಸಹ ಕಾರ್ಯದರ್ಶಿ ಎಂ.ಬಿ. ಮಿಶ್ರಿಕೋಟಿ ಎಲ್ಲರನ್ನು ವಂದಿಸಿದರು.




