ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಭಾರೀ ಏರಿಕೆ ಮಾಡಿರುವುದನ್ನು ಖಂಡಿಸಿ ಯುವ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಕೇಂದ್ರ ಸರ್ಕಾರವು ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯನ್ನು ₹993ಕ್ಕೆ ಏರಿಸಿರುವುದು ಸಣ್ಣ ವ್ಯಾಪಾರಿಗಳು, ಹೋಟೆಲ್ ಉದ್ಯಮಿಗಳು ಹಾಗೂ ಸಾಮಾನ್ಯ ಜನರ ಮೇಲೆ ಮತ್ತೊಂದು ಭಾರೀ ಹೊರೆ ಆಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಯುವ ಕಾಂಗ್ರೆಸ್ ರಾಷ್ಟ್ರೀಯ ಕಾರ್ಯದರ್ಶಿ ನಾಗೇಶ್ ಕರಿಯಪ್ಪ ಮಾತನಾಡಿ, ನಿರಂತರ ಬೆಲೆ ಏರಿಕೆಗಳಿಂದ ಸಣ್ಣ ಉದ್ಯಮಗಳು ಸಂಕಷ್ಟಕ್ಕೆ ಸಿಲುಕುತ್ತಿದ್ದು, ಊಟದ ದರ ಹೆಚ್ಚಳಕ್ಕೂ ಕಾರಣವಾಗುತ್ತಿದೆ. ಇದರಿಂದ ಸಾಮಾನ್ಯ ಜನರ ಜೀವನ ಮತ್ತಷ್ಟು ಕಷ್ಟಕರವಾಗುತ್ತಿದೆ ಎಂದು ಹೇಳಿದರು. ಸರ್ಕಾರವು ಜನರ ಸಮಸ್ಯೆಗಳನ್ನು ನಿರ್ಲಕ್ಷಿಸುತ್ತಿದ್ದು, ಬೆಲೆ ನಿಯಂತ್ರಣದಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದರು. ತೆರಿಗೆಗಳ ಭಾರವೇ ಇಂತಹ ಅನಿಯಂತ್ರಿತ ಬೆಲೆ ಏರಿಕೆಗಳಿಗೆ ಕಾರಣವಾಗಿದ್ದು, ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಪ್ರತಿಭಟನಾಕಾರರು ಸರ್ಕಾರದ ಮುಂದೆ ಹಲವು ಬೇಡಿಕೆಗಳನ್ನು ಮಂಡಿಸಿದರು. ವಾಣಿಜ್ಯ ಗ್ಯಾಸ್ ಸಿಲಿಂಡರ್ ಮೇಲಿನ ಜಿಎಸ್ಟಿ ಹಾಗೂ ಇತರ ತೆರಿಗೆಗಳನ್ನು ತಕ್ಷಣ ಕಡಿಮೆ ಮಾಡಬೇಕು, ಸಣ್ಣ ವ್ಯಾಪಾರಿಗಳಿಗೆ ಸಬ್ಸಿಡಿ ನೀಡಬೇಕು ಹಾಗೂ ಗ್ಯಾಸ್ ಬೆಲೆ ಸ್ಥಿರಗೊಳಿಸಲು ಸ್ಪಷ್ಟ ನೀತಿ ರೂಪಿಸಬೇಕು ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಚಾಮರಾಜನಗರದಲ್ಲಿ ಕಾಗದರಹಿತ ನೋಂದಣಿಗೆ ಚಾಲನೆ: ಕಾವೇರಿ 2.0 ಪೋರ್ಟಲ್ ಮೂಲಕ ನೂತನ ವ್ಯವಸ್ಥೆ ಆರಂಭ
‘ಬೆಲೆ ಏರಿಕೆ ನಿಲ್ಲಿಸಿ–ಜನರ ಬದುಕು ಉಳಿಸಿ’ ಎಂಬ ಘೋಷಣೆಗಳನ್ನು ಕೂಗಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಈ ಅನ್ಯಾಯದ ವಿರುದ್ಧ ಹೋರಾಟ ಮುಂದುವರಿಸುವುದಾಗಿ ಎಚ್ಚರಿಕೆ ನೀಡಿದರು.
ಈ ವಿಶೇಷ ಸುದ್ದಿ ಓದಿದ್ದೀರಾ? ಮೈಸೂರು | ಚೆಲುವಾಂಬ ಆಸ್ಪತ್ರೆಯಲ್ಲಿ ಶಿಶುಗಳ ಸರಣಿ ಸಾವು: ವ್ಯವಸ್ಥೆಯ ವೈಫಲ್ಯವೇ?

ಪ್ರತಿಭಟನೆಯಲ್ಲಿ ಕೃಷ್ಣರಾಜ ವಿಧಾನಸಭಾ ಯುವ ಕಾಂಗ್ರೆಸ್ ಅಧ್ಯಕ್ಷ ಎಂ.ಆರ್. ಹೊಯ್ಸಳ, ನಗರ ಯುವ ಕಾಂಗ್ರೆಸ್ ಉಪಾಧ್ಯಕ್ಷ ಮೀರ್ ಕುಸ್ರು, ಗ್ರಾಮಾಂತರ ಉಪಾಧ್ಯಕ್ಷ ಶಶಾಂಕ್ ಗೌಡ, ರೋಹಿತ್ ಸಿಂಗ್, ವಿವೇಕ್, ಕರಣ್, ಶಾರುಖ್, ಸಮರ್ಥ್ ಸೇರಿದಂತೆ ಹಲವರು ಭಾಗವಹಿಸಿದ್ದರು.




