ಸಾವಿರಾರು ಮೈಲಿಗಳ ದೂರದಿಂದ ಭಾರತಕ್ಕೆ ಬಂದು ಮೃತಪಟ್ಟು ಇಲ್ಲಿಯೇ ಸಮಾಧಿಯಾದ ಯೂರೋಪಿಯನ್ನರ ಸ್ಮಶಾನವೀಗ ಅವಸಾನದ ಅಂಚಿಗೆ ತಲುಪಿದೆ ಎಂದು ಯೂರೋಪಿಯನ್ ಸ್ಮಶಾನದ ಬಗ್ಗೆ ಅಧ್ಯಯನ ಮಾಡಿರುವ ಸುರೇಶ್ ಬಾಬು ವಿಷಾದ ವ್ಯಕ್ತಪಡಿಸಿದ್ದಾರೆ.
ಕೋಲಾರ ಜಿಲ್ಲೆಯ ಕೆಜಿಎಫ್ ಗಣಿಯಲ್ಲಿ ಕೆಲಸ ಮಾಡುತ್ತಿದ್ದ ಯುರೋಪಿಯನ್ನರು ಮೃತಪಟ್ಟ ಬಳಿಕ ಅವರನ್ನು ಇಲ್ಲಿಯ ಸ್ಮಶಾನದಲ್ಲಿಯೇ ಸಮಾಧಿ ಮಾಡಲಾಗುತ್ತಿತ್ತು.
ಸ್ಮಶಾನವೆಂದರೆ ಅದು ಮೃತದೇಹವನ್ನು ಹೂಳುವ ಜಾಗವಷ್ಟೇ ಅಲ್ಲ. ಅದೊಂದು ಪವಿತ್ರವಾದ ಜಾಗ. ಅಲ್ಲಿ ಹೂಳಲಾಗಿರುವ ಆತ್ಮೀಯರನ್ನು ಎಂದಿಗೂ ಗೌರವದಿಂದಲೇ ಕಾಣಬೇಕು. ಅವರ ಆತ್ಮ ಎಂದಿಗೂ ಚಿರಾಯುವಾಗಿರುತ್ತದೆ ಎಂಬ ನಂಬಿಕೆಯನ್ನು ಯೂರೋಪಿಯನ್ನರು ಹೊಂದಿದ್ದರು ಎಂಬುದಕ್ಕೆ ನಗರದ ಹೊರವಲಯದ ಲಕ್ಷ್ಮೀಸಾಗರ ಗ್ರಾಮದ ಬಳಿ ಇರುವ ಯೂರೋಪಿಯನ್ ಸ್ಮಶಾನವೇ ಸಾಕ್ಷಿ.
“ಗಣಿಯಲ್ಲಿ ಕೆಲಸ ಮಾಡುತ್ತ ಮೃತಪಟ್ಟ ಯೂರೋಪಿಯನ್ನರು ಮತ್ತು ಅವರ ಕುಟುಂಬದವರಿಗೆ ಮಾತ್ರ ಈ ಸ್ಮಶಾನದಲ್ಲಿ ಪ್ರವೇಶವಿತ್ತು. ಭಾರತೀಯರಿಗೆ ಪ್ರವೇಶವಿರಲಿಲ್ಲ. ಯೂರೋಪಿಯನ್ನರು ಭಾರತೀಯರಿಗೆ ಹೋಲಿಸಿದರೆ ಆಧುನಿಕ ಜೀವನ ಶೈಲಿಯನ್ನು ನುಸರಿಸುತ್ತಿದ್ದರು. ಆದರೆ, ಕಾಲರ ಮತ್ತು ಮಲೇರಿಯಾ ಅವರನ್ನೂ ಬಿಡುತ್ತಿರಲಿಲ್ಲ. ರೋಗ ನಿರೋಧಕ ಶಕ್ತಿ ಇಲ್ಲದ ಯೂರೋಪಿಯನ್ನರು ಈ ರೋಗಕ್ಕೆ ಬಲಿಯಾಗುತ್ತಿದ್ದರು. ಗಣಿ ಕಾಲೋನಿಯಲ್ಲಿ ಅಲ್ಪ ಪ್ರಮಾಣದಲ್ಲಿ ಇದ್ದರೂ ಸುಮಾರು 305 ಸಮಾಧಿಗಳು ಇರುವುದು ಇದಕ್ಕೆ ನಿದರ್ಶನವಾಗಿದೆ.
ಯೂರೋಪ್ ನಲ್ಲಿ ಸ್ಮಶಾನಕ್ಕೆ ಅತ್ಯಂತ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುತ್ತದೆ. ಅದು ಸುಂದರವಾಗಿ ಮತ್ತು ಆಕರ್ಷಕವಾಗಿ ಇರಬೇಕು ಎಂದು ಅಲ್ಲಿನ ಜನ ಬಯಸುತ್ತಾರೆ. ಅದೇ ರೀತಿ ಇಂಗ್ಲೆಂಡ್, ಇಟಲಿ ಮೊದಲಾದ ದೇಶಗಳಿಂದ ಚಿನ್ನದ ಗಣಿಯಲ್ಲಿ ಅಧಿಕಾರಿಗಳಾಗಿ ಬಂದ ಯೂರೋಪಿಯನ್ನರು ತಮಗಾಗಿಯೇ ಪ್ರತ್ಯೇಕ ಸ್ಮಶಾನವನ್ನು ಹೊಂದಿದ್ದರು. ಅದಕ್ಕೆ ನೀರಿನ ಸೌಲಭ್ಯವನ್ನು ನೀಡಿ, ಸುಂದರವಾದ ಉದ್ಯಾನವನ್ನು ರಚಿಸಿದ್ದರು.
ಒಬ್ಬ ಅಧಿಕಾರಿ ತನ್ನ ಮೃತ ಮಗಳ ಕಲ್ಲಿನ ಪ್ರತಿಮೆಯನ್ನು ಇಂಗ್ಲೆಂಡಿನಿಂದ ತರಿಸಿ ಸಮಾಧಿ ಮೇಲೆ ಇರಿಸಿದ್ದ. ಅದರ ಮೇಲೆ ‘ಶಬ್ದ ಮಾಡಬೇಡ. ಮಗಳು ಪ್ರಾರ್ಥನೆ ಸಲ್ಲಿಸುತ್ತಿದ್ದಾಳೆ’ ಎಂಬ ಒಕ್ಕಣಿಕೆಯನ್ನೂ ಸಹ ಬರೆಸಿದ್ದ. ವಿಶೇಷವೆಂದರೆ ಸಾವನ್ನಪ್ಪಿದವರ ಸಂಕ್ಷಿಪ್ತ ವಿವರ ಮತ್ತು ಕಾರಣಗಳನ್ನು ಪ್ರತಿ ಗೋರಿಯ ಮೇಲೆ ಬರೆದಿರುತ್ತಿದ್ದರು. ಅದು ಈಗಲೂ ಕಂಡು ಬರುತ್ತಿದೆ. ಆದರೆ ಬಾಲಕಿಯ ಪ್ರತಿಮೆ ನಾಪತ್ತೆಯಾಗಿದೆ ಎನ್ನಲಾಗಿದೆ.
ಯೂರೋಪಿಯನ್ ಸ್ಮಶಾನದಲ್ಲಿ ಇಂದಿಗೂ ಕಂಡುಬರುವ ಗೋರಿಗಳು ಅದ್ಭುತವಾಗಿದೆ. ಇಂಗ್ಲೆಂಡಿನಿಂದ ಸಿಂಗರಿಸಿ ತಂದ ಗ್ರಾನೈಟ್ ಕಲ್ಲುಗಳಲ್ಲಿ ಗೋರಿಯನ್ನು ನಿರ್ಮಾಣ ಮಾಡಲಾಗಿತ್ತು. ಒಂದು ಗೋರಿಯನ್ನು ಹೂವಿನಂತೆ ಕೆತ್ತಲಾಗಿದೆ. ಪ್ರತಿ ಗೋರಿ ಮುಂಭಾಗದಲ್ಲಿ ಗೋರಿಯ ಕ್ರಮ ಸಂಖ್ಯೆಯನ್ನು ಕೂಡ ಬರೆಯಲಾಗಿದೆ.
ಈ ಸುದ್ದಿ ಓದಿದ್ದೀರಾ? ಆನೇಕಲ್ |ಕಾಡಾನೆ ದಾಳಿಗೆ ಕುರಿ ಕಾಯುತ್ತಿದ್ದ ಮಹಿಳೆ ಬಲಿ
ಈ ಸ್ಮಶಾನಕ್ಕೆ ಭಾರತೀಯರು ಸಾಮಾನ್ಯವಾಗಿ ಬರುತ್ತಿರಲಿಲ್ಲ. ಒಮ್ಮೆ ಯೂರೋಪಿಯನ್ನರ ಗೋರಿಯ ಕೆಳಗಿ ಅಮೂಲ್ಯವಾದ ವಸ್ತುಗಳಿವೆ ಎಂಬ ಸುಳ್ಳು ಸುದ್ದಿ ಪ್ರಚಾರವಾಗಿತ್ತು. ಈ ಹಿನ್ನೆಲೆಯಲ್ಲಿ ಕೆಲವೇ ದಿನಗಳಲ್ಲಿ ಸಮಾಧಿಗಳನ್ನು ಹಾಳುಗೆಡವಲಾಯಿತು. ಇಂಗ್ಲೆಂಡ್ ನಿಂದ ತಂದ ಗ್ರಾನೈಟ್ ಕಲ್ಲುಗಳನ್ನು ಸ್ಥಳೀಯರು ಮನೆಯಲ್ಲಿ ಬಟ್ಟೆ ಒಗೆಯಲು ಉಪಯೋಗಿಸಲಾರಂಭಿಸಿದರು ಎಂದು ವಿಷಾದಿಸಿದರು.
“ಬಿಜಿಎಂಎಲ್ ಸಂಸ್ಥೆ ಈ ಸ್ಮಶಾನವನ್ನು ಸ್ಮಾರಕವನ್ನಾಗಿ ಮಾಡಬೇಕು. ಯಾವುದೋ ದೇಶದಲ್ಲಿ ಹುಟ್ಟಿ ಇಲ್ಲಿ ಕೆಲಸ ಮಾಡಿ, ಇಲ್ಲಿಯೇ ಸಮಾಧಿಯಾದವರಿಗೆ ನಾವು ಗೌರವ ಕೊಡಬೇಕು. ಅದಕ್ಕಾಗಿ ಯೋಜನೆಯನ್ನು ರೂಪಿಸಲಾಗಿದೆ. ಅದಕ್ಕೆ ಸಹಕಾರ ಬೇಕಷ್ಟೆ” ಎಂದು ಸುರೇಶ್ ಬಾಬು ಹೇಳಿದರು.