ಕೋಲಾರ: ದೇಶದಲ್ಲಿ ಆಳುವ ಸರ್ಕಾರದ ನೀತಿಗಳಿಂದಾಗಿ ಕಾರ್ಮಿಕರ ಭದ್ರತೆಗಾಗಿ ಇರುವ ಕಾನೂನುಗಳು ಹಂತಹಂತವಾಗಿ ಮರೀಚಿಕೆಯಾಗುತ್ತಿವೆ, ಕಾರ್ಮಿಕರ ಮೇಲಾಗುತ್ತಿರುವ ಅನ್ಯಾಯ, ದಬ್ಬಾಳಿಕೆ ಶೋಷಣೆ ನಿಂತಿಲ್ಲ, ಕಾರ್ಮಿಕರ ಹಕ್ಕುಗಳು ಸಮರ್ಪಕವಾಗಿ ಜಾರಿ ಮಾಡಲು ಸಂಘಟಿತ ಹೋರಾಟ ಅನಿವಾರ್ಯವಾಗಿದೆ ಎಂದು ಐ.ಎನ್.ಟಿ.ಯು.ಸಿ ಜಿಲ್ಲಾ ಅಧ್ಯಕ್ಷ ಹೊನ್ನೇನಹಳ್ಳಿ ಯಲ್ಲಪ್ಪ ತಿಳಿಸಿದರು.
ನಗರದ ಕೋಲಾರ ಜಿಲ್ಲಾ ಕಟ್ಟಡ ಕಾರ್ಮಿಕರ ಸಂಘದ ಮುಂಭಾಗದಲ್ಲಿ ಮೇ ದಿನಾಚರಣೆಯ ಪ್ರಯುಕ್ತ ಶುಕ್ರವಾರ ಧ್ವಜಾರೋಹಣದಲ್ಲಿ ಭಾಗವಹಿಸಿ ಮಾತನಾಡಿದ ಅವರು ದೇಶದಲ್ಲಿ ಮೋದಿ ಸರ್ಕಾರ ಬಂದ ನಂತರದಲ್ಲಿ ಕಾರ್ಮಿಕರಿಗೆ ನೀಡಬೇಕಾದ ನ್ಯಾಯಯುತ ಸೌಲಭ್ಯಗಳನ್ನು ನೀಡುತ್ತಿಲ್ಲ ಕಂಪನಿಗಳ ಹಾಗೂ ಬಂಡವಾಳಶಾಹಿಗಳ ಕೋಟ್ಯಾಂತರ ರೂಪಾಯಿ ಸಾಲ ಮನ್ನಾ ಮಾಡಿದ್ದಾರೆ ದೇಶದಲ್ಲಿ ಇಂದಿಗೂ ಬಡತನ, ನಿರುದ್ಯೋಗ ಅಂತಹ ಗಂಭೀರವಾದ ಸಮಸ್ಯೆಗಳಿವೆ. ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಹೋರಾಟಕ್ಕೆ ನಾವು ಎಲ್ಲರೂ ಸಜ್ಜಾಗಬೇಕಿದೆ ಇಲ್ಲದೇ ಹೋದರೆ ಮುಂದಿನ ದಿನಗಳಲ್ಲಿ ಮತ್ತಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ತಿಳಿಸಿದರು.
ಕೇಂದ್ರ ಸರ್ಕಾರವು ಬಹುರಾಷ್ಟ್ರೀಯ ಹಾಗೂ ಬಂಡವಾಳಶಾಹಿಗಳ ಪರವಾಗಿ ಕೆಲಸ ಮಾಡುತ್ತಿದೆ ಎನ್ನುವುದಕ್ಕೆ ಇತ್ತಿಚೀನ ನಾಲ್ಕು ಕಾರ್ಮಿಕ ಸಂಹಿತೆಗಳೇ ನಿದರ್ಶನವಾಗಿವೆ ಕಾರ್ಮಿಕರಿಗೆ ಕನಿಷ್ಟ ವೇತನ ಜಾರಿಯಾಗಬೇಕಿದೆ ಕಾರ್ಮಿಕರಿಂದಾಗಿಯೇ ಕಾರ್ಖಾನೆ ಇದೆ ಎಂಬುದನ್ನು ಮಾಲೀಕರು ತಿಳಿಯಬೇಕಾಗಿದೆ ಎಂದು ತಿಳಿಸಿದರು.
ಇದನ್ನು ಓದಿದ್ದೀರಾ..? ಚಿಕ್ಕಬಳ್ಳಾಪುರ | ಕೈಗಾರಿಕೆಗೆ ರೈತರ ಜಮೀನು ಸ್ವಾಧೀನ ಜಿಲ್ಲಾಡಳಿತ ಭವನದ ಎದುರು ರೈತರು ಪೊಲೀಸರ ನಡುವೆ ಜಟಾಪಟಿ
ಈ ಸಂದರ್ಭದಲ್ಲಿ ಐ.ಎನ್.ಟಿ.ಯು.ಸಿ ಜಿಲ್ಲಾ ಕಾರ್ಯದರ್ಶಿ ಮುರಳೀಧರ್, ತಾಲೂಕು ಅಧ್ಯಕ್ಷ ವೆಂಕಟೇಶ್, ಕಾರ್ಯದರ್ಶಿ ನಾಗರಾಜ್, ಖಜಾಂಚಿ ಲಕ್ಷ್ಮಿಕಾಂತಮ್ಮ, ಮಹಿಳಾ ಘಟಕದ ತಾಲೂಕು ಅಧ್ಯಕ್ಷೆ ಮಾಲಾ, ತಾಲೂಕು ಸಮಿತಿ ಸದಸ್ಯರಾದ ಮುನಿಯಮ್ಮ, ಶಿವಣ್ಣ, ಅನಿಲ್, ಮಾಲಮ್ಮ, ಶಂಕರಪ್ಪ, ಮುರಳಿಧರ್, ಕುಮಾರ್, ಜಡೇರಿ ನಾರಾಯಣಸ್ವಾಮಿ, ಮುಂತಾದವರು ಇದ್ದರು.




