ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ʼಬಿಪರ್ಜಾಯ್ʼ ಚಂಡಮಾರುತ ಸೃಷ್ಟಿಯಾಗಿದ್ದು, ಕರ್ನಾಟಕ ಸೇರಿದಂತೆ ಕೆಲ ರಾಜ್ಯಗಳಲ್ಲಿ ಜೋರು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ.
ಮೋಚಾ ಸೈಕ್ಲೋನ್ ಬಳಿಕ ಸೃಷ್ಟಿಯಾಗಿರುವ ಬಿಪರ್ಜಾಯ್ ಚಂಡಮಾರುತದ ಪರಿಣಾಮ ಮುಂದಿನ ಮೂರು ದಿನಗಳ ಕಾಲ ಕರ್ನಾಟಕದ ಹಲವೆಡೆ ಜೋರು ಮಳೆಯಾಗುವ ನಿರೀಕ್ಷೆಯಿದೆ. ಆರಂಭದಲ್ಲಿ ಈ ಸೈಕ್ಲೋನ್ ವೇಗ ಪ್ರತಿ ಗಂಟೆಗೆ 45 ರಿಂದ 55 ಕಿಲೋ ಮೀಟರ್ ಇರಲಿದ್ದು, ಗರಿಷ್ಠ 145-155 ಕಿಲೋಮೀಟರ್ವರೆಗಿನ ವೇಗದಲ್ಲಿ ಬೀಸುವ ಸಾಧ್ಯತೆ ಇರುವುದಾಗಿ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಕರ್ನಾಟಕದ ದಕ್ಷಿಣ ಒಳನಾಡು, ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗಲಿದೆ. ಉತ್ತರ ಒಳನಾಡಿನ ಹಲವು ಭಾಗಗಳಲ್ಲಿ ಚದುರಿದಂತೆ ಸಾಧಾರಣ ಮಳೆ ಸಾಧ್ಯತೆಯಿದೆ. ಕರಾವಳಿ ಭಾಗದಲ್ಲಿ 2-3 ದಿನ ಮಳೆ ಜೊತೆಗೆ ಸಮುದ್ರದಲ್ಲಿ ಭಾರೀ ಅಲೆಗಳ ಎಚ್ಚರಿಕೆ ನೀಡಲಾಗಿದೆ. 4 ದಿನ ಮೀನುಗಾರರು ಸಮುದ್ರಕ್ಕಿಳಿಯದಂತೆ ಎಚ್ಚರಿಕೆ ನೀಡಲಾಗಿದೆ.
ಚಂಡಮಾರುತದ ಪರಿಣಾಮದಿಂದ ಮುಂಗಾರು ತಡವಾಗಲಿದ್ದು, ಮುಂಗಾರು 4 ದಿನ ತಡವಾಗಿ ಕೇರಳ ಪ್ರವೇಶ ಮಾಡಲಿದೆ. ಸಾಮಾನ್ಯವಾಗಿ ಜೂನ್ ಮೊದಲ ವಾರದಲ್ಲಿ ಮುಂಗಾರು ಕೇರಳ ಪ್ರವೇಶ ಮಾಡುತ್ತಿತ್ತು. ಈ ಬಾರಿ ಅದೂ ತಡವಾಗಿದೆ. ಚಂಡಮಾರುತ ಸೃಷ್ಟಿಸಿರುವ ಗಾಳಿಯು ತೇವಾಂಶವನ್ನು ಚದುರಿಸುವುದರಿಂದ ಈಗಾಗಲೇ ರೂಪುಗೊಂಡಿರುವ ಮೋಡಗಳು ಕೂಡ ಚದುರಲಿವೆ. ಇದರ ಪ್ರಭಾವದಿಂದ ಮುಂಗಾರು ಕೂಡ ಪ್ರಬಲವಾಗಿರದೇ ದುರ್ಬಲವಾಗುವ ಸಾಧ್ಯತೆ ಇದೆ.
ಈ ಸುದ್ದಿ ಓದಿದ್ದೀರಾ? ರಾಜ್ಯದ ಹಲವೆಡೆ ಮಳೆ ಸಾಧ್ಯತೆ: ಹವಾಮಾನ ಇಲಾಖೆ ಮುನ್ಸೂಚನೆ
ಬಿಪರ್ಜಾಯ್ ಚಂಡಮಾರುತ ನೇರವಾಗಿ ಕರಾವಳಿಯನ್ನು ಅಪ್ಪಳಿಸುವುದಿಲ್ಲ. ಸಮುದ್ರ ತೀರದಿಂದ ಸ್ವಲ್ಪ ದೂರದಲ್ಲಿರಲಿದೆ. ಆದ್ದರಿಂದ ಹೆಚ್ಚಿನ ಅಪಾಯವಿಲ್ಲ. ಆದರೆ, ಇದು ನೈರುತ್ಯ ಅರಬ್ಬೀ ಸಮುದ್ರದಲ್ಲಿ ಸೃಷ್ಟಿಯಾಗಿದ್ದು, ಮಳೆಮಾರುತಗಳನ್ನು ಭಾರತದ ತೀರದಿಂದ ಆಚೆಗೆ ಹಾರಿಸಲಿದೆ. ಹೀಗಾಗಿ ಮಳೆ ಕೊರತೆಯಾಗಲಿದೆ ಎಂದು ಹವಾಮಾನ ತಜ್ಞರು ಅಂದಾಜಿಸಿದ್ದಾರೆ.