ಇಡೀ ಉತ್ತರ ಕನ್ನಡ ಜಿಲ್ಲೆಯನ್ನೇ ಬೆಚ್ಚಿಬೀಳಿಸಿದ್ದ ಮುಂಡಗೋಡನ NMD ಜಮೀರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮತ್ತೊಬ್ಬ ಪ್ರಮುಖ ಆರೋಪಿಯನ್ನು ಬಂಧಿಸಿದ್ದಾರೆ.
ಹತ್ಯೆಗೆ ಬಳಸಲಾಗಿದ್ದ ಕಂಟ್ರಿ ಮೇಡ್ ಪಿಸ್ತೂಲ್ಗಳನ್ನು ಪೂರೈಸಲು ನೆರವಾಗಿದ್ದ ಆರೋಪಿ ದಿಲ್ರಾಜ್ನನ್ನು ದೆಹಲಿಯಲ್ಲಿ ವಶಕ್ಕೆ ಪಡೆಯಲಾಗಿದ್ದು, ಈ ಮೂಲಕ ಪ್ರಕರಣದ ಒಟ್ಟು ಬಂಧಿತರ ಸಂಖ್ಯೆ ಆರಕ್ಕೇರಿದೆ.
ಘಟನೆಯ ಹಿನ್ನೆಲೆ: ಕಳೆದ ಏಪ್ರಿಲ್ 24ರ ಶುಕ್ರವಾರ ರಾತ್ರಿ ಸುಮಾರು 11 ಗಂಟೆಯ ಸುಮಾರಿಗೆ ಮುಂಡಗೋಡಿನ ಬಸ್ ನಿಲ್ದಾಣದ ಎದುರಿಗಿರುವ ಸಾವಜಿ ಹೋಟೆಲ್ನಲ್ಲಿ NMD ಜಮೀರ್ ಎಂಬುವವರ ಮೇಲೆ ಭೀಕರ ಹತ್ಯೆ ನಡೆದಿತ್ತು. ಊಟಕ್ಕೆ ಕುಳಿತಿದ್ದ ಜಮೀರ್ ಅವರ ಕಣ್ಣಿಗೆ ಖಾರದ ಪುಡಿ ಎರಚಿ, ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು.

ಈ ವೇಳೆ ಗುಂಡಿನ ಸದ್ದೂ ಕೇಳಿಬಂದಿತ್ತು. ತನಿಖೆ ಆರಂಭಿಸಿದ್ದ ಪೊಲೀಸರು ಈಗಾಗಲೇ ಐವರು ಆರೋಪಿಗಳನ್ನು ಬಂಧಿಸಿ, ಅವರಿಂದ ಎರಡು ಪಿಸ್ತೂಲ್ ಹಾಗೂ ಆರು ಜೀವಂತ ಗುಂಡುಗಳನ್ನು ವಶಪಡಿಸಿಕೊಂಡಿದ್ದರು.
ಈಗ ಬಂಧಿತನಾಗಿರುವ ಆರೋಪಿ ದಿಲ್ರಾಜ್ ಮೂಲತಃ ಉತ್ತರಾಖಂಡದವನಾಗಿದ್ದು, ಕೆಲವು ವರ್ಷಗಳ ಹಿಂದೆ ಸಿದ್ದಾಪುರದಲ್ಲಿ ನಡೆದಿದ್ದ ಕೊಲೆ ಪ್ರಕರಣವೊಂದರಲ್ಲಿ ಶಿಕ್ಷೆಗೆ ಗುರಿಯಾಗಿದ್ದ. ಶಿರಸಿ ಜೈಲಿನಲ್ಲಿದ್ದಾಗ ಈತನಿಗೆ ಹತ್ಯೆ ಸಂಚಿನ ಪ್ರಮುಖ ವ್ಯಕ್ತಿ ಮಂಜುನಾಥ ಕಾಜಗಾರ್ ಪರಿಚಯವಾಗಿದ್ದ.
ನಂತರ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿದ್ದಾಗ ದಿಲ್ರಾಜ್ಗೆ ಜಾಮೀನು ಕೊಡಿಸಲು ಮಂಜುನಾಥ ಕಾಜಗಾರ್ ಸಹಾಯ ಮಾಡಿದ್ದ ಎನ್ನಲಾಗಿದೆ. ಈ ಸ್ನೇಹದ ಹಿನ್ನೆಲೆಯಲ್ಲಿ ಜಮೀರ್ ಹತ್ಯೆಗೆ ಮೊದಲು ದಿಲ್ರಾಜ್ಗೆ ಸುಫಾರಿ ನೀಡಲಾಗಿತ್ತು ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.
ಯಾವುದೋ ಕಾರಣಕ್ಕೆ ಜಮೀರ್ ಹತ್ಯೆ ಮಾಡಲು ದಿಲ್ರಾಜ್ ನಿರಾಕರಿಸಿದ್ದರೂ, ಹತ್ಯೆಗೆ ಅಗತ್ಯವಿದ್ದ ಪಿಸ್ತೂಲ್ಗಳನ್ನು ಎಲ್ಲಿಂದ ಪಡೆಯಬೇಕು ಎಂಬ ಮಾಹಿತಿಯನ್ನು ಆರೋಪಿಗಳಿಗೆ ನೀಡಿದ್ದ ಎನ್ನಲಾಗಿದೆ. ಈತನ ಸುಳಿವಿನ ಮೇರೆಗೆ ಆರೋಪಿಗಳು ಮುಂಬೈನಿಂದ ಎರಡು ಪಿಸ್ತೂಲ್ಗಳನ್ನು ತರಿಸಿಕೊಂಡಿದ್ದರು.
ತನಿಖೆಯ ವೇಳೆ ಸಿಕ್ಕ ಮಾಹಿತಿ ಆಧಾರದ ಮೇಲೆ ಪೊಲೀಸರ ತಂಡ ದೆಹಲಿಗೆ ತೆರಳಿ ಆರೋಪಿಯನ್ನು ಬಂಧಿಸಿ ಕರೆತಂದಿದೆ. ಪ್ರಕರಣದ ಕುರಿತು ಪೊಲೀಸರು ತನಿಖೆಯನ್ನು ಮುಂದುವರಿಸಿದ್ದು, ಜಿಲ್ಲಾದ್ಯಂತ ಈ ಕೇಸ್ ತೀವ್ರ ಕುತೂಹಲ ಕೆರಳಿಸಿದೆ.




