ಆದಿವಾಸಿಗಳಿಗೆ ವಿತರಿಸಲಾಗುವ ವಿಶೇಷ ಪೌಷ್ಟಿಕ ಆಹಾರ ಸಾಮಗ್ರಿಗಳ ಕಿಟ್ ವಿತರಣೆಯಲ್ಲಿ ಉಂಟಾಗಿರುವ ನಿರಂತರ ವಿಳಂಬವನ್ನು ತಕ್ಷಣ ಬಗೆಹರಿಸಬೇಕು ಎಂದು ಒತ್ತಾಯಿಸಿ ಮೈಸೂರು ಜಿಲ್ಲೆಯ ವಿವಿಧ ಆದಿವಾಸಿ ಹಾಡಿಗಳ ನಿವಾಸಿಗಳು ಹಾಗೂ ಜನಪರ ಸಂಘಟನೆಗಳ ಮುಖಂಡರು ಪ್ರತಿಭಟನೆ ನಡೆಸಿದರು.
ಮೈಸೂರು ಜಿಲ್ಲೆಯ ಹೆಗ್ಗಡದೇವನಕೋಟೆ, ಸರಗೂರು, ನಂಜನಗೂಡು, ಹುಣಸೂರು ಹಾಗೂ ಪಿರಿಯಾಪಟ್ಟಣ ತಾಲೂಕುಗಳಲ್ಲಿ ವಾಸಿಸುವ ಬಹುತೇಕ ಆದಿವಾಸಿಗಳು ಕೃಷಿ ಕೂಲಿಕಾರ್ಮಿಕರಾಗಿದ್ದು, ಬಡತನ ಮತ್ತು ಅಪೌಷ್ಟಿಕತೆಯ ನಡುವೆಯೇ ಜೀವನ ಸಾಗಿಸುತ್ತಿದ್ದಾರೆ. ಅವರ ಪೌಷ್ಟಿಕಾಂಶದ ಕೊರತೆಯನ್ನು ನಿವಾರಿಸಲು ಐಟಿಡಿಪಿ ಮೂಲಕ ಪ್ರತಿತಿಂಗಳು ವಿಶೇಷ ಆಹಾರ ಸಾಮಗ್ರಿಗಳ ಕಿಟ್ ವಿತರಿಸಲಾಗುತ್ತಿದೆ. ಆದರೆ ಟೆಂಡರ್ ಪ್ರಕ್ರಿಯೆಯ ವಿಳಂಬ ಸೇರಿದಂತೆ ವಿವಿಧ ಕಾರಣಗಳನ್ನು ಮುಂದಿಟ್ಟುಕೊಂಡು ಕಳೆದ ಮೂರು ತಿಂಗಳುಗಳಿಂದ (ಏಪ್ರಿಲ್, ಮೇ ಹಾಗೂ ಜೂನ್) ಆಹಾರ ಕಿಟ್ ವಿತರಣೆ ಮಾಡಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಪ್ರತಿ ವರ್ಷ ಟೆಂಡರ್ ವಿಳಂಬದ ನೆಪದಲ್ಲಿ ಒಂದು ಅಥವಾ ಎರಡು ತಿಂಗಳು ಆಹಾರ ಕಿಟ್ ವಿತರಣೆ ಸ್ಥಗಿತಗೊಳ್ಳುವುದು ಸಾಮಾನ್ಯವಾಗಿದ್ದು, ಇದರಿಂದ ಯೋಜನೆಯ ಮೂಲ ಉದ್ದೇಶವೇ ಹಾಳಾಗುತ್ತಿದೆ. ಜನವರಿ ಮತ್ತು ಫೆಬ್ರವರಿ ತಿಂಗಳ ಕಿಟ್ಗಳನ್ನೂ ವಿತರಿಸದೆ, ಮಾರ್ಚ್ ತಿಂಗಳಲ್ಲಿ ಕೇವಲ ಜನವರಿ ತಿಂಗಳ ಕಿಟ್ ಮಾತ್ರ ನೀಡಲಾಗಿದೆ ಎಂದು ದೂರಿದರು.
ಈ ಹಿಂದೆ 45 ದಿನಗಳಿಗೊಮ್ಮೆ ನೀಡಲಾಗುತ್ತಿದ್ದ ಆಹಾರ ಕಿಟ್ಗಳನ್ನು ಆದಿವಾಸಿಗಳ ಹೋರಾಟದ ಫಲವಾಗಿ ಮೂರು ವರ್ಷಗಳ ಹಿಂದೆ ಪ್ರತಿತಿಂಗಳು ವಿತರಿಸುವ ವ್ಯವಸ್ಥೆ ಜಾರಿಗೊಂಡಿತ್ತು. ಆದರೆ ಇದೀಗ ಟೆಂಡರ್ ಹಾಗೂ ಆಡಳಿತಾತ್ಮಕ ಕಾರಣಗಳಿಂದ ಆಗುತ್ತಿರುವ ವಿಳಂಬವು ಆದಿವಾಸಿಗಳ ಬದುಕಿನ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ಎಂದು ಪ್ರತಿಭಟನಾಕಾರರು ಆತಂಕ ವ್ಯಕ್ತಪಡಿಸಿದರು.
ಈ ಸಮಸ್ಯೆ ಕುರಿತು ಕಳೆದ ತಿಂಗಳು ಎಚ್.ಡಿ.ಕೋಟೆಯಲ್ಲಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದ್ದರೂ ಇದುವರೆಗೆ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಸರ್ಕಾರಿ ಯೋಜನೆಗಳ ನಿಯಮಿತ ಅನುಷ್ಠಾನಕ್ಕಾಗಿ ಆದಿವಾಸಿಗಳು ಪದೇ ಪದೇ ಹೋರಾಟ ನಡೆಸಬೇಕಾಗಿರುವುದು ವಿಷಾದನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾಕಾರರು ಏಪ್ರಿಲ್, ಮೇ ಹಾಗೂ ಜೂನ್ ತಿಂಗಳ ಪೌಷ್ಟಿಕ ಆಹಾರ ಕಿಟ್ಗಳನ್ನು ಕೂಡಲೇ ಒಟ್ಟಿಗೆ ವಿತರಿಸಬೇಕು, ಅಕ್ಕಿಯೊಂದಿಗೆ ಹೆಚ್ಚುವರಿಯಾಗಿ ರಾಗಿಯನ್ನೂ ನೀಡಬೇಕು, ಗುಣಮಟ್ಟದ ಆಹಾರ ಸಾಮಗ್ರಿಗಳನ್ನು ವಿತರಿಸಬೇಕು ಹಾಗೂ ಟೆಂಡರ್ ವಿಳಂಬದಿಂದ ಉಂಟಾಗುವ ಸಮಸ್ಯೆಗಳನ್ನು ಶಾಶ್ವತವಾಗಿ ಪರಿಷ್ಕರಿಸಬೇಕು ಎಂದು ಒತ್ತಾಯಿಸಿದರು. ಜೊತೆಗೆ ಕಳೆದ ಆರ್ಥಿಕ ವರ್ಷದಲ್ಲಿ ಬಾಕಿ ಉಳಿದಿರುವ ಎರಡು ತಿಂಗಳ ಕಿಟ್ಗಳನ್ನು ಈ ವರ್ಷ ಹೆಚ್ಚುವರಿಯಾಗಿ ವಿತರಿಸಬೇಕು ಹಾಗೂ ಆದಿವಾಸಿ ಹಾಡಿಗಳಿಗೆ ಮನೆ, ರಸ್ತೆ, ಕುಡಿಯುವ ನೀರು, ಶೌಚಾಲಯ ಮತ್ತು ವಿದ್ಯುತ್ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ?ಎಸ್ಐಆರ್ ವಿರೋಧಿಸಿ ಮೈಸೂರಿನಲ್ಲಿ ಪ್ರತಿಭಟನಾ ಜಾಥಾ: ಪ್ರಕ್ರಿಯೆ ತಕ್ಷಣ ಸ್ಥಗಿತಗೊಳಿಸಲು ಆಗ್ರಹ
ಪ್ರತಿಭಟನೆಯಲ್ಲಿ ಎಐಜೆಎಎಸ್ಸಿ ಜಿಲ್ಲಾ ಸಂಚಾಲಕ ಸುನಿಲ್, ಎಸ್ಯುಸಿಐ (ಕಮ್ಯುನಿಸ್ಟ್) ಜಿಲ್ಲಾ ಕಾರ್ಯದರ್ಶಿ ಬಿ. ರವಿ, ಮಹಿಳಾ ಸಂಘಟನೆಯ ಪದಾಧಿಕಾರಿಗಳಾದ ಸೀಮಾ, ಆಸಿಯಾ ಬೇಗಂ, ಪುಷ್ಪ, ಕಾರ್ಮಿಕ ಮುಖಂಡರಾದ ಎಂ. ಉಮಾದೇವಿ, ಶಿವಾನಂದ, ರೈತ ಮುಖಂಡ ಬಸವರಾಜ್, ಗಿರಿಜನ ಸಮಗ್ರ ಅಭಿವೃದ್ಧಿ ಯೋಜನೆ ಅಧಿಕಾರಿ ರಾಧ ಸೇರಿದಂತೆ ವಿವಿಧ ಹಾಡಿಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಸುಮಾರು 200ಕ್ಕೂ ಹೆಚ್ಚು ಆದಿವಾಸಿ ಜನರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.




