ದಕ್ಷಿಣ ಕನ್ನಡ ಜಿಲ್ಲೆಯ ಕೋಮುವಾದಿಗಳ ಅಟ್ಟಹಾಸಕ್ಕೆ ಬಲಿಯಾದ ಪ್ರವೀಣ್ ನೆಟ್ಟಾರು ಪತ್ನಿ ನೂತನ ಕುಮಾರಿಯವರಿಗೆ ಬಿಜೆಪಿ ಸರ್ಕಾರ ನೀಡಿದ್ದ ತಾತ್ಕಾಲಿಕ ನೆಲೆಯ ಗುತ್ತಿಗೆ ಆಧಾರದ ನೌಕರಿಯ ನೇಮಕವನ್ನು ಸಿದ್ದರಾಮಯ್ಯ ಅವರ ಸರ್ಕಾರ ಖಾಯಂಗೊಳಿಸುವಂತೆ ಕೆಪಿಸಿಸಿ ಮುಖ್ಯ ವಕ್ತಾರ ಟಿ ಎಂ ಶಾಹಿದ್ ತೆಕ್ಕಿಲ್ ಮನವಿ ಮಾಡಿದ್ದಾರೆ.
ಜೊತೆಗೆ ಬೆಳ್ಳಾರೆ ಮಸೂದ್, ಸುರತ್ಕಲ್ ಫಾಸಿಲ್ ಕುಟುಂಬಕ್ಕೆ ತಲಾ 25 ಲಕ್ಷ ಪರಿಹಾರ ಮತ್ತು ಅವರ ಕುಟುಂಬದ ಸದಸ್ಯರಿಗೆ ಖಾಯಂ ಸರ್ಕಾರಿ ಉದ್ಯೋಗ ನೀಡಿ ಸಾಮಾಜಿಕ ನ್ಯಾಯ ಒದಗಿಸಬೇಕು ಎಂದೂ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರನ್ನು ತೆಕ್ಕಿಲ್ ಒತ್ತಾಯಿಸಿದ್ದಾರೆ.
“ಕೋಮುವಾದಿಗಳ ಅಟ್ಟಹಾಸಕ್ಕೆ ಬಲಿಯಾದ ಮಸೂದ್ ಹಾಗೂ ಫಾಸಿಲ್ ಕುಟುಂಬಕ್ಕೆ ಬೊಮ್ಮಾಯಿ ಸರ್ಕಾರ ಅನ್ಯಾಯ ಮಾಡಿದೆ. ಅದನ್ನು ಯಾರು ಮರೆಯಲು ಅಸಾಧ್ಯ. ಸೌಜನ್ಯಕ್ಕಾದರು ಸಂತಾಪ ಸೂಚಿಸಲು ಆಗದ ಬಿಜೆಪಿ ನಾಯಕರ, ಜನಪ್ರತಿನಿಧಿಗಳ, ಸರ್ಕಾರಿ ಅಧಿಕಾರಿಗಳ ಹಾಗೂ ಸರ್ಕಾರದ ನಡವಳಿಕೆ ಮಾನವೀಯತೆಯನ್ನೇ ಪ್ರಶ್ನಿಸುವಂತೆ ಮಾಡಿತ್ತು” ಎಂದು ತೆಕ್ಕಿಲ್ ಕಿಡಿಕಾರಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಪ್ರವೀಣ್ ಪತ್ನಿಗೆ ಮತ್ತೆ ಉದ್ಯೋಗ ಕೊಡುತ್ತೇವೆ: ಸಿಎಂ ಸಿದ್ಧರಾಮಯ್ಯ
“ಪ್ರವೀಣ್ ನೆಟ್ಟಾರು, ಮಸೂದ್, ಫಾಸಿಲ್ ಸಹಿತ ಹಲವಾರು ಅಮಾಯಕ ಕುಟುಂಬದ ಶಾಪ ಬೊಮ್ಮಾಯಿ ಸರ್ಕಾರಕ್ಕೆ ತಟ್ಟಿದೆ. ಆಗಿನ ಮುಖ್ಯಮಂತ್ರಿ ಬೊಮ್ಮಾಯಿ ಸುರತ್ಕಲ್ಗೆ ಭೇಟಿ ನೀಡಿದರು ಸಮೀಪದ ಫಾಸಿಲ್ ಮನೆಗೆ ಭೇಟಿ ನೀಡಲಿಲ್ಲ. ಮಸೂದ್ ಕುಟುಂಬವನ್ನು ಭೇಟಿ ಮಾಡಲಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಎಲ್ಲರನ್ನು ಒಂದೇ ರೀತಿಯಲ್ಲಿ ಕಂಡು ಸಾಮಾಜಿಕ ನ್ಯಾಯ ಒದಗಿಸಲಿದೆ” ಎಂದು ಟಿ ಎಂ ಶಾಹಿದ್ ತೆಕ್ಕಿಲ್ ತಿಳಿಸಿದ್ದಾರೆ.