ಭ್ರಷ್ಟಾಚಾರದ ವಿರುದ್ಧ ಹೋರಾಡುವುದು, ಜನಸಾಮಾನ್ಯರಿಗೆ ನೆಮ್ಮದಿಯ ಬದುಕು ಕಟ್ಟಿಕೊಡುವುದು ನಮ್ಮ ಪ್ರಮುಖ ಉದ್ದೇಶವಾಗಿದೆ ಎಂದು ಕೆಆರ್ಎಸ್ (ಕರ್ನಾಟಕ ರಾಷ್ಟ್ರ ಸಮಿತಿ) ರಾಜ್ಯಾಧ್ಯಕ್ಷ ರವಿ ಕೃಷ್ಣಾರೆಡ್ಡಿ ಹೇಳಿದರು.
ಹಾಸನ ಜಿಲ್ಲೆಯ ಸಕಲೇಶಪುರ ವಿಧಾನಸಭಾ ಕ್ಷೇತ್ರದ ಕೆಆರ್ಎಸ್ ಅಭ್ಯರ್ಥಿ ಬಿ ವಿ ಪ್ರದೀಪ್ ಪರವಾಗಿ ನಡೆದ ಮತಯಾಚನೆ ವೇಳೆ ಮಾತನಾಡಿದರು.
“ಕೆಆರ್ಎಸ್ಗೆ ಮತ ನೀಡಿ ಗೆಲ್ಲಿಸಿ, ರಾಜ್ಯದಲ್ಲಿ ಲಂಚ ಮುಕ್ತ ಆಡಳಿತ ನೀಡಿ ತೋರಿಸುತ್ತೇವೆ” ಎಂದು ಭರವಸೆ ನೀಡಿದರು.
“ಕಳ್ಳಕಾಕರು ನಮ್ಮ ರಾಜ್ಯ, ದೇಶವನ್ನು ಆಳುತ್ತಿದ್ದು, ಜನರ ನೆಮ್ಮದಿಯನ್ನು ಕಿತ್ತುಕೊಳ್ಳುತ್ತಿದ್ದಾರೆ. ಹಾಗಾಗಿ ತಮ್ಮ ಪವಿತ್ರವಾದ ಮತಗಳನ್ನು ಅರ್ಹ ಅಭ್ಯರ್ಥಿಗೆ ನೀಡಿ, ಕೆಆರ್ಎಸ್ ಗೆಲ್ಲಿಸಿ ಸಕಲೇಶಪುರದಲ್ಲಿ ನಿಮ್ಮ ಸೇವೆ ಮಾಡಲು ಅವಕಾಶ ಮಾಡಿಕೊಡಿ” ಎಂದರು.
“ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಅಧಿಕಾರಕ್ಕೆ ಬಂದರೆ ಗೋವಿಂದ. ನಮ್ಮ ಹಣದಿಂದಲೇ ನಮ್ಮನ್ನು ಆಳುತ್ತಾರೆ. ಹಾಗಾಗಿ ಜನಸಾಮಾನ್ಯರಿಗೆ ಅನುಕೂಲವಾಗುವ ಜನರ ಸಂಕಷ್ಟಕ್ಕೆ ಸ್ಪಂದಿಸುವ ಕೆಆರ್ಎಸ್ ಪಕ್ಷಕ್ಕೆ ನಿಮ್ಮ ಮತ ನೀಡಿ ಒಂದು ಅವಕಾಶ ಕೊಡಿ” ಎಂದು ಕೋರಿದರು.
“ಕತ್ತಲೆಯಲ್ಲಿ ಆಶಾ ಬೆಳಕು ಬರಲಿದೆ. ಹಾಗಾಗಿ ಕೆಆರ್ಎಸ್ನ ಟಾರ್ಚ್ ಗುರುತಿಗೆ ನಿಮ್ಮ ಮತ ನೀಡಿ ನಮ್ಮನ್ನು ಜಯಶೀಲರನ್ನಾಗಿ ಮಾಡಿ” ಎಂದರು.
ಈ ಸುದ್ದಿ ಓದಿದ್ದೀರಾ? ಅರಸೀಕೆರೆ ಕ್ಷೇತ್ರ | ಶಿವಲಿಂಗೇಗೌಡ-ಸಂತೋಷ್ ನಡುವೆ ನೇರ ಕದನ
ಈ ವೇಳೆ ಆಲೂರು, ಸಕಲೇಶಪುರ ಕ್ಷೇತ್ರದ ಕೆಆರ್ಎಸ್ ಅಭ್ಯರ್ಥಿ ಬಿ ವಿ ಪ್ರದೀಪ್, ಪಕ್ಷದ ಕಾರ್ಯಕರ್ತರು ಸೇರಿದಂತೆ ಇತರರು ಇದ್ದರು.