ಸಿದ್ದಾಪುರ ತಾಲೂಕಿನ ಹೊಸೂರು ಗ್ರಾಮದ ನಿವೃತ್ತ ಸೈನಿಕ ಹಾಗೂ ಮಾನಸಿಕ ಅಸ್ವಸ್ಥರಾಗಿರುವ ಕೃಷ್ಣ ದ್ಯಾವ ನಾಯ್ಕ ಅವರ ಅರಣ್ಯ ಸಾಗುವಳಿ ಕ್ಷೇತ್ರವನ್ನು ಯಾವುದೇ ನಿರ್ದಿಷ್ಟ ಗಡಿರೇಖೆ ಮತ್ತು ಪೂರ್ವಸೂಚನೆ ಇಲ್ಲದೆ ಒಕ್ಕಲೆಬ್ಬಿಸಲು ಮುಂದಾದ ಅರಣ್ಯ ಹಾಗೂ ಪೊಲೀಸ್ ಇಲಾಖೆಯ ಕ್ರಮಕ್ಕೆ ಅರಣ್ಯವಾಸಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ ಘಟನೆ ಜರುಗಿದೆ.
ಇಪ್ಪತ್ತಾರು ವರ್ಷಗಳ ಕಾಲ ದೇಶಕ್ಕಾಗಿ ಸೇವೆ ಸಲ್ಲಿಸಿ, ಸದ್ಯ ಮಾನಸಿಕ ಅಸ್ವಸ್ಥರಾಗಿರುವ ಕೃಷ್ಣ ದ್ಯಾವ ನಾಯ್ಕ ಅವರ ಸಾಗುವಳಿ ಭೂಮಿಯನ್ನು ಜುಲೈ 27 ರಂದು ತಕ್ಷಣದಿಂದ ಜಾರಿಗೆ ಬರುವಂತೆ ಅರಣ್ಯ ಇಲಾಖೆಗೆ ಹಸ್ತಾಂತರಿಸಬೇಕು ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಾಧಿಕಾರದಿಂದ ಆದೇಶ ಹೊರಡಿಸಲಾಗಿತ್ತು. ಈ ಆದೇಶದ ಹಿನ್ನೆಲೆಯಲ್ಲಿ ನೂರೈವತ್ತಕ್ಕೂ ಅಧಿಕ ಪೊಲೀಸ್ ಮತ್ತು ಅರಣ್ಯ ಸಿಬ್ಬಂದಿ ಬೃಹತ್ ಸಂಖ್ಯೆಯಲ್ಲಿ ಸ್ಥಳಕ್ಕೆ ಆಗಮಿಸಿ ತೆರವು ಕಾರ್ಯಾಚರಣೆಗೆ ಮುಂದಾಗಿದ್ದರು.
ಆದರೆ, ಒಕ್ಕಲೆಬ್ಬಿಸುವ ಪ್ರಕ್ರಿಯೆಯಲ್ಲಿ ಯಾವುದೇ ಕಾನೂನು ವಿಧಿವಿಧಾನಗಳನ್ನು ಪಾಲಿಸಿಲ್ಲ, ನೋಟಿಸ್ ನೀಡಿಲ್ಲ ಹಾಗೂ ಹೈಕೋರ್ಟ್ನಲ್ಲಿ ಮೇಲ್ಮನವಿ ವಿಚಾರಣೆ ಹಂತದಲ್ಲಿರುವಾಗ ಯಾವುದೇ ಮುನ್ಸೂಚನೆ ನೀಡದೆ ಏಕಾಏಕಿ ಕಾರ್ಯಾಚರಣೆಗೆ ಬಂದಿರುವುದನ್ನು ಅರಣ್ಯವಾಸಿಗಳು ಪ್ರಶ್ನಿಸಿದರು. ಸ್ಥಳದಲ್ಲೇ ಸಾಗುವಳಿ ಕ್ಷೇತ್ರವನ್ನು ದೃಢೀಕರಿಸುವಂತೆ ಒತ್ತಾಯಿಸಿ ಅಧಿಕಾರಿಗಳೊಂದಿಗೆ ತೀವ್ರ ವಾಗ್ವಾದ ನಡೆಸಿದರು.
ಈ ಸುದ್ದಿ ಓದಿದ್ದೀರಾ? ಹಳಿಯಾಳ | ಗ್ರಾಮಗಳಿಗೆ ತೆರಳಿ ಜನರ ಸಮಸ್ಯೆಗಳಿಗೆ ಸ್ಪಂದಿಸಿ: ಅಧಿಕಾರಿಗಳಿಗೆ ಶಾಸಕ ಆರ್.ವಿ. ದೇಶಪಾಂಡೆ ಸೂಚನೆ
ಈ ಸಂದರ್ಭದಲ್ಲಿ ಸ್ಥಳಕ್ಕೆ ಡಿವೈಎಸ್ಪಿ ಗೀತಾ ಪಾಟೀಲ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶಿರಸಿ ಎಸಿಎಫ್ ಅಮಿತ್, ಆರ್ಎಫ್ಒ ಉಷಾ ಕಬ್ಬೇರ, ಸಿಪಿಐ ಸೀತಾರಾಮ, ಪಿಎಸ್ಐಗಳಾದ ಶಾಂತಿನಾಥ ಹಾಗೂ ನಾಗಪ್ಪ ಭೋವಿ, ಉಪ ತಹಶೀಲ್ದಾರ್ ಡಿ.ಎಂ. ನಾಯ್ಕ ಮತ್ತು ಸರ್ವೆ ಇಲಾಖೆಯ ಗಣೇಶ್ ಉಪಸ್ಥಿತರಿದ್ದರು. ಪೊಲೀಸ್ ಇಲಾಖೆಯ ಸಮಯೋಚಿತ ಸಲಹೆ ಹಾಗೂ ಸೂಚನೆಗಳಿಂದ ವಾತಾವರಣವು ತಿಳಿಗೊಂಡಿತು.
ಅಂತಿಮವಾಗಿ ಅತಿಕ್ರಮಣ ಕ್ಷೇತ್ರದ ಬೇಲಿ ಹಾಗೂ ಗಿಡ-ಮರಗಳನ್ನು ಕಡಿಯದೆ, ಸಾಗುವಳಿ ಕ್ಷೇತ್ರದ ಹೊರಭಾಗದಲ್ಲಿ ಅಗಳ ಹೊಡೆಯುವ ಕಾರ್ಯಕ್ಕೆ ಮಾತ್ರ ತೆರವು ಪ್ರಕ್ರಿಯೆಯನ್ನು ಸೀಮಿತಗೊಳಿಸಲಾಯಿತು ಎಂದು ಹೋರಾಟಗಾರರ ವೇದಿಕೆಯ ಪ್ರಮುಖರು ತಿಳಿಸಿದ್ದಾರೆ.
ದಿಶಾಂಕ್ ದಾಖಲೆ ಕುರಿತು ಪ್ರಶ್ನೆ: ಕಾರ್ಯಾಚರಣೆ ವೇಳೆ ಸರ್ವೆ ನಂಬರ್ 51 ರ ಸಾಗುವಳಿ ಕ್ಷೇತ್ರವೆಂದು ದಾಖಲಿಸಲಾಗಿತ್ತು. ಆದರೆ ಸ್ಥಳದಲ್ಲಿ ನಿಂತು ‘ದಿಶಾಂಕ’ ಆ್ಯಪ್ ಮೂಲಕ ಪರಿಶೀಲಿಸಿದಾಗ ಸರ್ವೆ ನಂಬರ್ 159 ಎಂದು ತೋರಿಸುತ್ತಿದೆ ಎಂದು ಹೋರಾಟಗಾರರು ಎಸಿಎಫ್ ಅಮಿತ್ ಹಾಗೂ ವಲಯ ಅರಣ್ಯಾಧಿಕಾರಿ ಉಷಾ ಕಬ್ಬೇರ್ ಅವರನ್ನು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಅಧಿಕಾರಿಗಳು, ರಾಜ್ಯ ಸರ್ಕಾರದ ‘ದಿಶಾಂಕ’ ಆ್ಯಪ್ ನಂಬಲು ಅನರ್ಹವಾದ ದಾಖಲೆಯಾಗಿದೆ ಎಂದು ತಿಳಿಸಿದರು.
ದೇಶಕ್ಕಾಗಿ 26 ವರ್ಷಗಳ ಕಾಲ ಸೇವೆ ಸಲ್ಲಿಸಿದ ನಿವೃತ್ತ ಸೈನಿಕ ಹಾಗೂ ಮಾನಸಿಕ ಅಸ್ವಸ್ಥರಾಗಿರುವ ವ್ಯಕ್ತಿಯ ಕುಟುಂಬದ ಸಾಗುವಳಿ ಜಮೀನನ್ನು ಒಕ್ಕಲೆಬ್ಬಿಸಲು ಮೀಸಲು ಪೊಲೀಸ್ ಸೇರಿದಂತೆ ನೂರಕ್ಕೂ ಅಧಿಕ ಸಿಬ್ಬಂದಿಯೊಂದಿಗೆ ಬೃಹತ್ ಸಂಖ್ಯೆಯಲ್ಲಿ ಬಂದು ಅರಣ್ಯ ಇಲಾಖೆ ನಡೆದುಕೊಂಡ ರೀತಿ ಅತ್ಯಂತ ಅಮಾನವೀಯ ಹಾಗೂ ಹೇಯ ಕೃತ್ಯವಾಗಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ತೀವ್ರವಾಗಿ ಖಂಡಿಸಿದ್ದಾರೆ.
ಈ ಪ್ರತಿಭಟನಾ ಸ್ಥಳದಲ್ಲಿ ಹೋರಾಟಗಾರರ ವೇದಿಕೆಯ ಜಿಲ್ಲಾ ಸಂಚಾಲಕ ಮಹಾಬೇಶ್ವರ ನಾಯ್ಕ ಬೇಡ್ಕಣಿ, ತಾಲೂಕಾ ಸಂಚಾಲಕ ಸಂಕೇತ್ ನಾಯ್ಕ, ಮಂಜುನಾಥ ನಾಯ್ಕ ಸುಂಕತ್ತಿ, ಕಾರ್ಲುಯಿಸ್ ಮಾವಿನಗುಂಡಿ, ರವಿ ನಾಯ್ಕ ಹಲಗೇರಿ, ಪ್ರಕಾಶ ನಾಯ್ಕ ಹೊಸೂರು, ರಾಜು ಹೊಸೂರು, ದಯಾನಂದ ಹೊಸೂರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.




