ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ಮನರೇಗಾ) ಯೋಜನೆಯನ್ನು ಸಮರ್ಪಕ ಅನುಷ್ಠಾನಕ್ಕೆ ತರಬೇಕು ಎಂದು ಒತ್ತಾಯಿಸಿ ಗ್ರಾಕೂಸ ಮುಖಂಡರು ವಿಜಯನಗರ ಜಿಲ್ಲೆಯ ಬೈಲುವದ್ದಿಗೇರಿ ಗ್ರಾಮ ಪಂಚಾಯಿತಿ ಅಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ಮನರೇಗಾ ಯೋಜನೆಯಲ್ಲಿ ಸಾಕಷ್ಟು ಸಮಸ್ಯೆಗಳು ಎದುರಾಗಿವೆ. ಪರಿಹಾರ ಇಲ್ಲದೆ ಹೈರಾಣಾಗುತ್ತಿದ್ದೇವೆ. ಹಾಗಾಗಿ ಪ್ರತಿ ಸಮಸ್ಯೆಗೂ ರಾಜ್ಯ ಮತ್ತು ಕೇಂದ್ರ ಮಟ್ಟದಲ್ಲಿ ಬಗೆಹರಿಸಬೇಕು. ಇಲ್ಲವೇ ಪರಿಹಾರ ಬಗೆಹರಿಸಲು ಸ್ಥಳೀಯ ಸರ್ಕಾರ ಗ್ರಾಮ ಪಂಚಾಯಿತಿಗೆ ಅಧಿಕಾರ ಕೊಡಬೇಕು ಎಂದು ಆಗ್ರಹಿಸಿದ್ದಾರೆ.
ಹಳೆ ಉದ್ಯೋಗ ಚೀಟಿ (ಜಾಬ್ ಕಾರ್ಡ್)ರದ್ದು ಮಾಡಿ ಹೊಸ ಜಾಬ್ ಕಾರ್ಡ್ ನೀಡುವುದು, ಆಧಾರ್ ಕಾರ್ಡ್ ಲಿಂಕ್ ಮಾಡುವುದು, ಇನ್ನಿತರ ಕೆಲಸಗಳು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ನಡೆಯಬೇಕು ಎಂದು ಒತ್ತಾಯಿಸಿದ್ದಾರೆ.
ಮನರೇಗಾ ಬಜೆಟ್ ಅತಿ ಕಡಿಮೆ ಇದೆ. ಕೆಲಸ ಮಾಡಿದ ಎರಡು ತಿಂಗಳ ಕೂಲಿ ಹಣದಲ್ಲಿ ಒಂದು ವಾರ ಮತ್ತು ಎರಡು ವಾರದ ಹಣ ಖಾತೆಗೆ ಜಮಾ ಆಗಿದ್ದು, ಕಾರ್ಮಿಕರಿಗೆ 15 ದಿನಗಳ ಒಳಗಾಗಿ ಹಣ ಪಾವತಿಸಲು ಕೇಂದ್ರ ಸರ್ಕಾರ ವಿಫಲವಾಗಿದೆ. ನಿರಂತರ 100 ದಿನಗಳ ಕೆಲಸಕ್ಕೆ ಸಮಯಕ್ಕೆ ಸರಿಯಾಗಿ ಕೂಲಿ ಪಾವತಿಸುವಂತೆ ಬಜೆಟ್ ಅನುದಾನ ಹೆಚ್ಚಿಸಬೇಕು ಎಂದು ಆಗ್ರಹಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಚಾಮರಾಜನಗರ | ಬಿಜೆಪಿ ಬದಲಿಸಿದ್ದ ಪಠ್ಯಗಳನ್ನು ಕಾಂಗ್ರೆಸ್ ತೆಗೆಯಬೇಕು: ಕುಂ.ವೀ
200 ಮಾನವ ದಿನಗಳ ಕೂಲಿ ಕೊಡಬೇಕು. ಕೂಲಿ ₹600ಕ್ಕೆ ಹೆಚ್ಚಳ ಮಾಡಬೇಕು. ಕೂಲಿ ಕೆಲಸ ಮಾಡುವಾಗ ಕಾರ್ಮಿಕರು ಮೃತಪಟ್ಟರೆ ಸರ್ಕಾರ ₹5 ಲಕ್ಷ ಪರಿಹಾರ ಘೋಷಿಸಬೇಕು ಎಂದು ಒತ್ತಾಯಿಸಿದ್ದಾರೆ.
ಈ ಸಂದರ್ಬದಲ್ಲಿ ತಾಲೂಕು ಕಾರ್ಯಕರ್ತೆ ಶೈಲಜಾ, ಸುಧಾ, ಹುಸೇನ ಬೀ, ಗಂಗಪ್ಪ, ಲಕ್ಷ್ಮಿ, ಶಾಂತಮ್ಮ, ರೇಣುಕಾ, ಭಾಗ್ಯಮ್ಮ, ಮುದಿಯಪ್ಪ ಹಾಗೂ ಇತರರು ಹಾಜರಿದ್ದರು.