ಚುನಾವಣೆಯಲ್ಲಿ ಗೆದ್ದ ಕೆಲವೇ ದಿನಗಳಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಪಕ್ಷಾಂತರಗೊಂಡು ಅದೇ ಕ್ಷೇತ್ರದಲ್ಲಿ ಮರುಚುನಾವಣೆಗೆ ಸ್ಪರ್ಧಿಸುವ ರಾಜಕೀಯ ಶೈಲಿಯ ವಿರುದ್ಧ ಮದ್ರಾಸ್ ಹೈಕೋರ್ಟ್ ತೀವ್ರ ಕಳವಳ ವ್ಯಕ್ತಪಡಿಸಿದೆ. ಇಂತಹ ನಡವಳಿಕೆಯು ‘ಪ್ರಜಾಪ್ರಭುತ್ವದ ಅಣಕ’ ಮತ್ತು ಮತದಾರರಿಗೆ ಎಸಗುವ ಮಹಾ ದ್ರೋಹ ಎಂದು ಹೈಕೋರ್ಟ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಮಿಳುನಾಡಿನ ಆಡಳಿತಾರೂಢ ಟಿವಿಕೆ ಪಕ್ಷವು ಇತ್ತೀಚೆಗೆ ಎಐಎಡಿಎಂಕೆ ತೊರೆದು ಬಂದಿದ್ದ ಇಬ್ಬರು ಮಾಜಿ ಶಾಸಕರಾದ ಮರಗತಂ ಕುಮಾರವೇಲ್ ಮತ್ತು ಪಿ. ಸತ್ಯಭಾಮ ಅವರಿಗೆ ಉಪಚುನಾವಣೆಯಲ್ಲಿ ಟಿಕೆಟ್ ಘೋಷಿಸಿತ್ತು. ಮಧುರಾಂತಕಂ ಮತ್ತು ಧಾರಾಪುರಂ ಕ್ಷೇತ್ರಗಳಿಗೆ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಟಿವಿಕೆ ಸೇರಿದ್ದ ಈ ಇಬ್ಬರೂ ನಾಯಕರು, ಅದೇ ಕ್ಷೇತ್ರಗಳಿಂದ ಮರುಸ್ಪರ್ಧೆಗೆ ಇಳಿದಿರುವುದನ್ನು ಪ್ರಶ್ನಿಸಿ ಪಿಐಎಲ್ ಸಲ್ಲಿಸಲಾಗಿತ್ತು. ಆ ಅರ್ಜಿಯನ್ನು ಹೈಕೋರ್ಟ್ ವಿಚಾರಣೆ ನಡೆಸಿದೆ.
ನ್ಯಾಯಮೂರ್ತಿಗಳಾದ ಎಸ್.ಎಂ. ಸುಬ್ರಮಣ್ಯಂ ಮತ್ತು ಕೆ. ಗೋವಿಂದರಾಜನ್ ಅವರನ್ನೊಳಗೊಂಡ ಪೀಠವು, “ಶಾಸಕರು ಜನಪ್ರತಿನಿಧಿಗಳಾಗಿ ಆಯ್ಕೆಯಾಗುವುದು ಜನರ ನಂಬಿಕೆಯ ಆಧಾರದ ಮೇಲೆ. ಅಧಿಕಾರಕ್ಕೆ ಬಂದ ತಕ್ಷಣ ರಾಜೀನಾಮೆ ನೀಡಿ, ಮತ್ತೆ ಅದೇ ಜನರೆದುರು ವೋಟಿಗಾಗಿ ನಿಲ್ಲುವುದು ಮತದಾರರಿಗೆ ಮಾಡುವ ಅಪಮಾನ” ಎಂದು ಹೇಳಿದೆ.
ಇಂತಹ ಪ್ರವೃತ್ತಿಗೆ ಕಡಿವಾಣ ಹಾಕಲು ಸೂಕ್ತ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸುವಂತೆ ಕೇಂದ್ರ ಚುನಾವಣಾ ಆಯೋಗಕ್ಕೆ ನಿರ್ದೇಶನವನ್ನೂ ನೀಡಿದೆ.
ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ಸುಧನ್, “ರಾಜಕೀಯ ಲಾಭಕ್ಕಾಗಿ ಶಾಸಕರು ನೀಡುವ ದಿಢೀರ್ ರಾಜೀನಾಮೆಗಳಿಂದಾಗಿ ಮರುಚುನಾವಣೆ ನಡೆಸಲು ತೆರಿಗೆದಾರರ ಹಣ ವ್ಯರ್ಥವಾಗುತ್ತಿದೆ. ಹೀಗೆ ರಾಜೀನಾಮೆ ನೀಡುವ ಜನಪ್ರತಿನಿಧಿಗಳಿಗೆ ಚುನಾವಣಾ ವೆಚ್ಚದ ದಂಡ ವಿಧಿಸಬೇಕು. ನಿರ್ದಿಷ್ಟ ಅವಧಿಯವರೆಗೆ ಸ್ಪರ್ಧಿಸದಂತೆ ನಿಷೇಧ ಹೇರಬೇಕು” ಎಂದು ಮನವಿ ಮಾಡಿದ್ದರು.



