ಗ್ರಾಹಕರ ಸುರಕ್ಷತೆ ಮತ್ತು ಆಹಾರ ನೈರ್ಮಲ್ಯ ಮಾನದಂಡಗಳನ್ನು ಬಲಪಡಿಸುವ ಗುರಿಯನ್ನು ಹೊಂದಿರುವ ಮಹತ್ವದ ಕ್ರಮದಲ್ಲಿ, ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ(FSSAI) ದೇಶಾದ್ಯಂತ ಆಹಾರ ಪ್ಯಾಕೇಜಿಂಗ್ನಲ್ಲಿ ಸ್ಟೇಪಲ್ ಪಿನ್ಗಳು, ಲೋಹದ ತಂತಿಗಳು ಮತ್ತು ಅಂತಹುದೇ ಲೋಹದ ವಸ್ತುಗಳ ಬಳಕೆಯನ್ನು ನಿಷೇಧಿಸಿದೆ.
ಈ ನಿರ್ದೇಶನವು ಹೋಟೆಲ್ಗಳು, ರೆಸ್ಟ್ರಂಟ್ಗಳು, ಬೇಕರಿಗಳು, ಸಿಹಿತಿಂಡಿ ಅಂಗಡಿಗಳು ಮತ್ತು ಆಹಾರ ಉತ್ಪನ್ನಗಳನ್ನು ಪ್ಯಾಕ್ ಮಾಡುವ ಹಾಗೂ ಮಾರಾಟ ಮಾಡುವ ಎಲ್ಲ ಆಹಾರ ವ್ಯಾಪಾರ ನಿರ್ವಾಹಕರಿಗೆ ಅನ್ವಯಿಸುತ್ತದೆ.
FSSAI ಪ್ರಕಾರ, “ಕೇಕ್ ಬಾಕ್ಸ್ಗಳು, ಸಿಹಿ ಪ್ಯಾಕೆಟ್ಗಳು, ತಿಂಡಿ ಪ್ಯಾಕೇಜುಗಳು ಮತ್ತು ಆರ್ಡರ್ ಬರುವ ಆಹಾರಗಳನ್ನು ಪಾರ್ಸೆಲ್ ಮಾಡುವಾಗಲೂ ಸ್ಟೇಪಲ್ ಪಿನ್ಗಳು ಮತ್ತು ಲೋಹದ ತಂತಿಗಳನ್ನು ಬಳಸಿದ ನಿದರ್ಶನಗಳು ವರದಿಯಾಗಿವೆ. ಹಲವಾರು ಸಂದರ್ಭಗಳಲ್ಲಿ, ಈ ಲೋಹದ ವಸ್ತುಗಳು ಆಹಾರ ಪದಾರ್ಥಗಳೊಂದಿಗೆ ಮಿಶ್ರಣವಾಗಿರುವುದು ಕಂಡುಬಂದಿದ್ದು, ಗ್ರಾಹಕರಿಗೆ ಗಂಭೀರ ಅಪಾಯವನ್ನುಂಟುಮಾಡುತ್ತದೆ.
ಸ್ಟೇಪಲ್ ಪಿನ್ಗಳು ಅವುಗಳ ಸಣ್ಣ ಗಾತ್ರದ ಕಾರಣದಿಂದಾಗಿ ವಿಶೇಷವಾಗಿ ಅಪಾಯಕಾರಿ ಮತ್ತು ಪ್ಯಾಕೇಜ್ಗಳನ್ನು ತೆರೆಯುವಾಗ ಆಕಸ್ಮಿಕವಾಗಿ ಆಹಾರದೊಳಗೆ ಸೇರಿಕೊಳ್ಳಬಹುದು. ಅದನ್ನು ಸೇವಿಸಿದರೆ, ಅವುಗಳು ಬಾಯಿ, ಗಂಟಲು ಮತ್ತು ಜೀರ್ಣಾಂಗ ವ್ಯವಸ್ಥೆಗೆ ಸೇರಿ ಗಂಭೀರ ಗಾಯಗಳನ್ನು ಉಂಟುಮಾಡಬಹುದು ಎಂಬುದನ್ನು ಎಂಬುದನ್ನು ಪ್ರಾದಿಕಾರವು ಗಮನಿಸಿದೆ.
ಈ ಹಿನ್ನೆಲೆಯಲ್ಲಿ ಹೊಸ ನಿರ್ದೇಶನವನ್ನು ನೀಡಿದ್ದು, ಇದನ್ನು ಉಲ್ಲಂಘಿಸುವುದು ಕಂಡುಬಂದಲ್ಲಿ ಆಹಾರ ವ್ಯವಹಾರ ನಿರ್ವಾಹಕರು ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಕಾಯ್ದೆ, 2006ರ ಅಡಿಯಲ್ಲಿ ಕಾನೂನು ಮತ್ತು ದಂಡದ ಕ್ರಮವನ್ನು ಎದುರಿಸಬೇಕಾಗುತ್ತದೆಂದು FSSAI ಎಚ್ಚರಿಸಿದೆ.
ಆಹಾರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಆಕಸ್ಮಿಕ ಮಾಲಿನ್ಯವನ್ನು ತಡೆಗಟ್ಟಲು ಸುರಕ್ಷಿತ ಪರ್ಯಾಯ ಪ್ಯಾಕೇಜಿಂಗ್ ವಿಧಾನಗಳನ್ನು ತಕ್ಷಣವೇ ಅಳವಡಿಸಿಕೊಳ್ಳುವಂತೆ ಆಹಾರ ವ್ಯಾಪಾರಸ್ಥರನ್ನು ಒತ್ತಾಯಿಸಿದೆ.
ಆಹಾರ ಸುರಕ್ಷತಾ ಪ್ರಾಧಿಕಾರವು ತೆಗೆದುಕೊಂಡ ಇಂತಹ ಕ್ರಮ ಇದೇ ಮೊದಲಲ್ಲ. ಇದಕ್ಕೂ ಮೊದಲು, ಮುದ್ರಣ ಶಾಯಿ ಮತ್ತು ಹಾನಿಕಾರಕ ರಾಸಾಯನಿಕಗಳು ಆಹಾರವನ್ನು ಕಲುಷಿತಗೊಳಿಸಬಹುದು, ಮಾನವನ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು ಎಂಬ ಕಳವಳವನ್ನು ಉಲ್ಲೇಖಿಸಿ, ಆಹಾರವನ್ನು ಪೊಟ್ಟಣ ಕಟ್ಟಲು ನ್ಯೂಸ್ ಪತ್ರಿಕೆಗಳನ್ನು ಬಳಸದಂತೆ FSSAI ಆಹಾರ ಮಾರಾಟಗಾರರಿಗೆ ಸಲಹೆ ನೀಡಿತ್ತು.
ಇದನ್ನೂ ಓದಿದ್ದೀರಾ? ಸಚಿವರ ಹೆಜ್ಜೆ ಗುರುತು ಕಾಣದ ಉತ್ತರ ಕನ್ನಡ: ಆಡಳಿತದ ಅಂತರವೇ ಅಭಿವೃದ್ಧಿಗೆ ಅಡ್ಡಿ
ಇತ್ತೀಚಿನ ನಿರ್ದೇಶನವು ಆಹಾರ ಸುರಕ್ಷತಾ ಮಾನದಂಡಗಳನ್ನು ಹೆಚ್ಚಿಸಲು ಮತ್ತು ಗ್ರಾಹಕರನ್ನು ತಡೆಗಟ್ಟಬಹುದಾದ ಆರೋಗ್ಯ ಅಪಾಯಗಳಿಂದ ರಕ್ಷಿಸಲು FSSAI ನಡೆಸುತ್ತಿರುವ ನಿರಂತರ ಪ್ರಯತ್ನಗಳ ಭಾಗವಾಗಿದೆ. ಪರಿಷ್ಕೃತ ಸುರಕ್ಷತಾ ಮಾರ್ಗಸೂಚಿಗಳನ್ನು ಅನುಸರಿಸಲು ಉದ್ಯಮದ ಪಾಲುದಾರರು ಈಗ ತಮ್ಮ ಪ್ಯಾಕೇಜಿಂಗ್ ಅಭ್ಯಾಸಗಳನ್ನು ಮಾರ್ಪಡಿಸುವ ನಿರೀಕ್ಷೆಯಿದೆ.
ಆಹಾರವು ಗ್ರಾಹಕರನ್ನು ಸುರಕ್ಷಿತ ಮತ್ತು ಮಾಲಿನ್ಯ-ಮುಕ್ತ ರೀತಿಯಲ್ಲಿ ತಲುಪುತ್ತದೆ ಎಂದು ಖಚಿತಪಡಿಸಿಕೊಳ್ಳುವ ಪ್ರಾಧಿಕಾರದ ಬದ್ಧತೆಯನ್ನು ಈ ನಿರ್ಧಾರವು ಪ್ರತಿಬಿಂಬಿಸುತ್ತದೆಂದು ಅಧಿಕಾರಿಗಳು ತಿಳಿಸಿದ್ದಾರೆ.




