ಬಿಹಾರದ ಪೂರ್ಣಿಯಾ ಕ್ಷೇತ್ರದ ಪಕ್ಷೇತರ ಸಂಸದ ಪಪ್ಪು ಯಾದವ್ ಅವರ ಮೇಲೆ ದೆಹಲಿಯಲ್ಲಿ ನಡೆದ ಪತ್ರಿಕಾಗೋಷ್ಠಿ ವೇಳೆ ದುಷ್ಕರ್ಮಿಯೊಬ್ಬ ಶೂ ಎಸೆದು ದಾಳಿ ನಡೆಸಿದ್ದಾನೆ. ಇದೇ ವೇಳೆ ಆತ ಚಾಕುವಿನಿಂದ ಹತ್ಯೆ ಮಾಡಲು ಯತ್ನಿಸಿದ್ದಾನೆ ಎಂದು ಸಂಸದರು ಹಾಗೂ ಅವರ ಬೆಂಬಲಿಗರು ಗಂಭೀರ ಆರೋಪ ಮಾಡಿದ್ದಾರೆ. ಘಟನೆಯಿಂದಾಗಿ ಸ್ಥಳದಲ್ಲಿ ತೀವ್ರ ನೂಕಾಟ, ತಳ್ಳಾಟ ಮತ್ತು ಕೋಲಾಹಲದ ವಾತಾವರಣ ನಿರ್ಮಾಣವಾಗಿತ್ತು.
ದಾಳಿಕೋರನನ್ನು ಉತ್ತರ ಪ್ರದೇಶದ ಬುಲಂದ್ಶಹರ್ ನಿವಾಸಿ ಸುಮಿತ್ ಎಂದು ಗುರುತಿಸಲಾಗಿದೆ. ಪತ್ರಿಕಾಗೋಷ್ಠಿ ನಡೆಯುತ್ತಿದ್ದ ಸ್ಥಳಕ್ಕೆ ನುಗ್ಗಿದ ಈತ ಏಕಾಏಕಿ ಶೂ ಎಸೆದಿದ್ದಾನೆ. ತಕ್ಷಣವೇ ಎಚ್ಚೆತ್ತ ಸಂಸದರ ಬೆಂಬಲಿಗರು ಆತನನ್ನು ತಡೆದು, ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ರಾಮಮಂದಿರ ದೇಣಿಗೆ ಕಳ್ಳತನಕ್ಕೆ ಸಂಬಂಧಿಸಿದ ಕಾನೂನಿನ ಕುರಿತು ಪಪ್ಪು ಯಾದವ್ ನೀಡಿದ್ದ ಹೇಳಿಕೆಯನ್ನು ವಿರೋಧಿಸಿ ಈ ಕೃತ್ಯ ಎಸಗಿರುವುದಾಗಿ ತಿಳಿದುಬಂದಿದೆ. ಸಾಧು-ಸಂತರಿಗೆ ಅವಮಾನ ಮಾಡಿದ್ದಕ್ಕೆ ಬೇಸರಗೊಂಡು ತಾನು ಈ ಕೃತ್ಯ ಎಸಗಿದ್ದಾಗಿ ಆರೋಪಿ ಸುಮಿತ್ ಪೊಲೀಸರ ವಿಚಾರಣೆ ವೇಳೆ ತಿಳಿಸಿದ್ದಾನೆ ಎನ್ನಲಾಗಿದೆ.
ತಮ್ಮ ಮೇಲಿನ ದಾಳಿ ಕುರಿತು ಪ್ರತಿಕ್ರಿಯಿಸಿರುವ ಪಪ್ಪು ಯಾದವ್, “ದಾಳಿಕೋರ ನನ್ನನ್ನು ಚಾಕುವಿನಿಂದ ಇರಿದು ಕೊಲ್ಲಲು ಬಂದಿದ್ದ. ಇದು ನನ್ನ ಹತ್ಯೆಗೆ ನಡೆದ ವ್ಯವಸ್ಥಿತ ಸಂಚು. ಪ್ರತಿದಿನ ಕೆಲವರು ನನ್ನನ್ನು ಸುಟ್ಟುಹಾಕುವಂತೆ, ಕೊಂದವರಿಗೆ 51 ಲಕ್ಷ ರೂ. ಬಹುಮಾನ ನೀಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ. ಬೆಂಬಲಿಗರು ಆರೋಪಿಯನ್ನು ಪೊಲೀಸರಿಗೆ ಒಪ್ಪಿಸುವಾಗ ಆತನ ಬಳಿಯಿದ್ದ ಎನ್ನಲಾದ ಚಾಕುವನ್ನೂ ಹಸ್ತಾಂತರಿಸಿದ್ದಾರೆ. ಆ ಚಾಕು ಎಲ್ಲಿಂದ ಬಂತು ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪಪ್ಪು ಯಾದವ್ ಅವರ ಮಾಧ್ಯಮ ಸಂಚಾಲಕ ದೆಹಲಿ ಪೊಲೀಸರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಬೆದರಿಕೆಗಳಿರುವ ಬಗ್ಗೆ ಇಂದು ಬೆಳಿಗ್ಗೆಯಷ್ಟೇ ಡಿಸಿಪಿ ಅವರನ್ನು ಖುದ್ದಾಗಿ ಭೇಟಿಯಾಗಿ ದೂರು ನೀಡಿದ್ದೆವು. ಆದರೂ ಭದ್ರತೆಗೆ ಕೇವಲ ಮೂರ್ನಾಲ್ಕು ಪೊಲೀಸರನ್ನು ನಿಯೋಜಿಸಲಾಗಿತ್ತು. ದಾಳಿ ನಡೆದಾಗ ಪೊಲೀಸರು ಸಂಸದರನ್ನು ರಕ್ಷಿಸುವ ಬದಲು ದುಷ್ಕರ್ಮಿಗಳಿಗೆ ರಕ್ಷಣೆ ನೀಡಿ, ಅವರನ್ನು ಅಲ್ಲಿಂದ ಕರೆದೊಯ್ಯುವ ಕೆಲಸ ಮಾಡಿದರು. ಅತೀಕ್ ಅಹ್ಮದ್ ಹತ್ಯೆ ಮಾದರಿಯಲ್ಲಿ (ಪ್ರಯಾಗ್ರಾಜ್ ಪಾರ್ಟ್-2) ಸಂಸದರನ್ನು ಹತ್ಯೆ ಮಾಡಲು ಬಂದಿದ್ದರು. ದಾಳಿಕೋರನನ್ನು ತಡೆಯಲು ಹೋದಾಗ ನನ್ನ ಮೇಲೂ ಹಲ್ಲೆಯಾಗಿದ್ದು, ನಾನು ಪ್ರಜ್ಞೆ ತಪ್ಪಿದ್ದೆ” ಎಂದು ಅವರು ಆರೋಪಿಸಿದ್ದಾರೆ.
ಈ ಘಟನೆ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ಪವನ್ ಖೇರಾ ದೆಹಲಿ ಪೊಲೀಸರ ಕಾರ್ಯವೈಖರಿಯನ್ನು ಟೀಕಿಸಿದ್ದಾರೆ. “ಸಾಂವಿಧಾನಿಕ ಹಕ್ಕುಗಳಿಗಾಗಿ ಶಾಂತಿಯುತವಾಗಿ ಪ್ರತಿಭಟಿಸುವ ವಿದ್ಯಾರ್ಥಿಗಳನ್ನು ಹತ್ತಿಕ್ಕುವಲ್ಲಿ ದೆಹಲಿ ಪೊಲೀಸರು ಬಹಳ ದಕ್ಷತೆ ತೋರುತ್ತಾರೆ. ಆದರೆ, ವಿರೋಧ ಪಕ್ಷದ ನಾಯಕರೊಬ್ಬರಿಗೆ (ಸಂಸದರಿಗೆ) ಅವರದೇ ನಿವಾಸದಲ್ಲಿ ರಕ್ಷಣೆ ನೀಡುವಲ್ಲಿ ವಿಫಲರಾಗಿದ್ದಾರೆ. ಪೊಲೀಸ್ ಆಯುಕ್ತರಾಗಿ ಅನುರಾಗ್ ಕುಮಾರ್ ಅಧಿಕಾರ ವಹಿಸಿಕೊಂಡ ಬಳಿಕ ದೆಹಲಿ ಪೊಲೀಸರ ಕಾರ್ಯವೈಖರಿ ಮತ್ತಷ್ಟು ಹದಗೆಟ್ಟಿದೆ” ಎಂದು ಅವರು ‘ಎಕ್ಸ್’ (X) ಖಾತೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.




