22 ವರ್ಷದ ಯುವತಿ ಮೇಲೆ ವಿವಿಧೆಡೆ ಪದೇಪದೆ ಲೈಂಗಿಕ ದೌರ್ಜನ್ಯ ಎಸಗಿದ, ಬೆದರಿಕೆ ಹಾಕಿ ಅಕ್ರಮವಾಗಿ ಬಂಧಿಸಿಟ್ಟ ಆರೋಪದಡಿ ಇಬ್ಬರು ರೈಲ್ವೆ ಪೊಲೀಸ್ ಸಿಬ್ಬಂದಿ ಸೇರಿದಂತೆ ಆರು ಮಂದಿ ವಿರುದ್ಧ ಯಾದಗಿರಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತುರ್ತು ಸ್ಪಂದನಾ ಸಿಬ್ಬಂದಿಯ ನೆರವಿನಿಂದ ಯುವತಿಯನ್ನು ರಕ್ಷಿಸಿದ ಬಳಿಕ, ಆಕೆ ನೀಡಿದ ಲಿಖಿತ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ. ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್)ಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.
ಪ್ರಕರಣದಲ್ಲಿ ಮಲ್ಲು ಅಲಿಯಾಸ್ ಮಲ್ಲಪ್ಪ, ರೈಲ್ವೆ ಪೊಲೀಸ್ ಸಿಬ್ಬಂದಿ ಶರಣಪ್ಪ, ಗುರುತು ಪತ್ತೆಯಾಗದ ಮತ್ತೊಬ್ಬ ರೈಲ್ವೆ ಪೊಲೀಸ್ ಸಿಬ್ಬಂದಿ, ಮಹೇಶ್, ಆಕಾಶ್ ಅಲಿಯಾಸ್ ಪಪ್ಪು ಹಾಗೂ ಹರ್ಷ ಅಲಿಯಾಸ್ ಸುಧಾಕರ್ ಅವರನ್ನು ಆರೋಪಿಗಳೆಂದು ಹೆಸರಿಸಲಾಗಿದೆ.
ಮದುವೆಯಾಗುವುದಾಗಿ ನಂಬಿಸಿ ಕರೆದೊಯ್ದ ಆರೋಪ
ದೂರಿನ ಪ್ರಕಾರ, ಕೌಟುಂಬಿಕ ಸಮಸ್ಯೆಗಳಿಂದ ನೊಂದಿದ್ದ ಯುವತಿ ಬೆಂಗಳೂರಿನಿಂದ ರೈಲಿನಲ್ಲಿ ಯಾದಗಿರಿಗೆ ಬಂದಿದ್ದರು. ನಸುಕಿನ ಜಾವ ಯಾದಗಿರಿ ರೈಲು ನಿಲ್ದಾಣದ ಕಾಯುವ ಸ್ಥಳದಲ್ಲಿ ಕುಳಿತಿದ್ದ ವೇಳೆ, ಅದೇ ರೈಲಿನಲ್ಲಿ ಪ್ರಯಾಣಿಸಿದ್ದಾಗಿ ಹೇಳಿಕೊಂಡ ಮಲ್ಲಪ್ಪ ಎಂಬಾತ ಆಕೆಯ ಬಳಿ ತೆರಳಿ ಸಹಾಯ ಮಾಡುವುದಾಗಿ ತಿಳಿಸಿದ್ದಾನೆ ಎನ್ನಲಾಗಿದೆ.
ಮದುವೆಯಾಗುವುದಾಗಿ ನಂಬಿಸಿ ಯುವತಿಯ ವಿಶ್ವಾಸ ಗಳಿಸಿದ ಮಲ್ಲಪ್ಪ, ಬಳಿಕ ರೈಲು ನಿಲ್ದಾಣದ ಸಮೀಪದಲ್ಲಿದ್ದ ಸಂಬಂಧಿಕರ ಮನೆ ಎಂದು ಹೇಳಲಾದ ಸ್ಥಳಕ್ಕೆ ಆಕೆಯನ್ನು ಕರೆದೊಯ್ದಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಅಲ್ಲಿ ಯುವತಿ ಪ್ರತಿರೋಧ ವ್ಯಕ್ತಪಡಿಸಿದರೂ ಮಲ್ಲಪ್ಪ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಬಳಿಕ ಸ್ಥಳಕ್ಕೆ ಬಂದ ಶರಣಪ್ಪ ಸೇರಿದಂತೆ ಇಬ್ಬರು ರೈಲ್ವೆ ಪೊಲೀಸ್ ಸಿಬ್ಬಂದಿ ಯುವತಿಗೆ ಬೆದರಿಕೆ ಹಾಕಿ, ಆಕೆಯ ಇಚ್ಛೆಗೆ ವಿರುದ್ಧವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.
ವಿವಿಧೆಡೆ ಕರೆದೊಯ್ದು ದೌರ್ಜನ್ಯ ಆರೋಪ
ಘಟನೆಯ ಬಳಿಕವೂ ಯುವತಿಗೆ ಬೆದರಿಕೆ ಹಾಕಿ ವಿವಿಧೆಡೆ ಕರೆದೊಯ್ದು ಪದೇಪದೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ವೇಳೆ ಆಕೆಯನ್ನು ಅಕ್ರಮವಾಗಿ ಬಂಧಿಸಿಟ್ಟಿದ್ದರು ಎಂಬ ಆರೋಪವೂ ಇದೆ.
ನಂತರ ತುರ್ತು ಸ್ಪಂದನಾ ಸಿಬ್ಬಂದಿಯ ನೆರವಿನಿಂದ ಯುವತಿಯನ್ನು ರಕ್ಷಿಸಲಾಗಿದ್ದು, ಬಳಿಕ ಯಾದಗಿರಿ ಮಹಿಳಾ ಪೊಲೀಸ್ ಠಾಣೆಗೆ ತೆರಳಿ ಲಿಖಿತ ದೂರು ನೀಡಿದ್ದಾರೆ.
ಇದನ್ನು ಓದಿದ್ದೀರಾ? ಕಲಬುರಗಿ | ಹೈಕೋರ್ಟ್ ವೃತ್ತದ ಬಳಿ ರಾತ್ರೋರಾತ್ರಿ ಸಿದ್ದರಾಮಯ್ಯ ಪ್ರತಿಮೆ ಪ್ರತ್ಯಕ್ಷ
ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ವಿರುದ್ಧ ಮಾಡಲಾಗಿರುವ ಆರೋಪಗಳ ಕುರಿತು ತನಿಖೆ ನಡೆಸುತ್ತಿದ್ದಾರೆ. ಪ್ರಕರಣದ ತನಿಖೆಯ ಬಳಿಕ ಆರೋಪಗಳ ಸತ್ಯಾಸತ್ಯತೆ ಹಾಗೂ ಘಟನೆಯ ಸಂಪೂರ್ಣ ವಿವರಗಳು ಸ್ಪಷ್ಟವಾಗಬೇಕಿದೆ.




