ಸಂವಿಧಾನದ 371(ಜೆ) ವಿಶೇಷ ಸ್ಥಾನಮಾನ ಸಮರ್ಪಕವಾಗಿ ಅನುಷ್ಠಾನಗೊಳ್ಳುವುದರ ಜತೆಗೆ ಕಲ್ಯಾಣ ಕರ್ನಾಟಕದಲ್ಲಿನ ಶಿಕ್ಷಣ, ಆರೋಗ್ಯ, ಉದ್ಯೋಗ, ನೀರಾವರಿ, ರಸ್ತೆ ಹಾಗೂ ಮೂಲಸೌಕರ್ಯಗಳ ಕೊರತೆ ನಿವಾರಿಸಲು ಸರ್ಕಾರ ಸಮಗ್ರ ಅಭಿವೃದ್ಧಿ ಕಾರ್ಯಯೋಜನೆ ರೂಪಿಸಬೇಕು ಎಂದು ಕಲ್ಯಾಣ ಕರ್ನಾಟಕ ಪ್ರಾದೇಶಿಕ ಅಭಿವೃದ್ಧಿ ಹೋರಾಟ ಸಮಿತಿ ಒತ್ತಾಯಿಸಿದರು.
ನಗರದ ದೊಡ್ಡಪ್ಪ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ‘ಪ್ರಾದೇಶಿಕ ಅಸಮತೋಲನ ನಿವಾರಣಾ ಸಂಕಲ್ಪ ಸಮಾವೇಶ’ ದಲ್ಲಿ ಮಾತನಾಡಿದ ವಿವಿಧ ಮುಖಂಡರು, ‘371(ಜೆ)ಯನ್ನು ಕೇವಲ ಮೀಸಲಾತಿಯ ಸಾಧನವಾಗಿ ನೋಡದೆ, ಈ ಭಾಗದ ಸಮಗ್ರ ಅಭಿವೃದ್ಧಿಗೆ ಪರಿಣಾಮಕಾರಿ ಅಸ್ತ್ರವಾಗಿ ಬಳಸಬೇಕು’ ಎಂದು ಆಗ್ರಹಿಸಿದರು.
ಸಮಾವೇಶದಲ್ಲಿ ಸಮಬಾಳಿಕೆ ಅಭಿವೃದ್ಧಿ, ನೀರು, ನದಿ, ನೀರಾವರಿ, ಶಿಕ್ಷಣ, ಆರೋಗ್ಯ, ಉದ್ಯೋಗ ಹಾಗೂ ಸಮಾನ ಅವಕಾಶಗಳಿಗಾಗಿ ಸರ್ಕಾರದ ಮೇಲೆ ಒತ್ತಡ ಹೇರುವ ಸಂಕಲ್ಪ ಮಾಡಲಾಯಿತು.
‘ಕಲ್ಯಾಣ ಕರ್ನಾಟಕದವರು ದಡ್ಡರಲ್ಲ’
ಸಮಾವೇಶದಲ್ಲಿ ಮಾತನಾಡಿದ ರಜಾಕ್ ಉಸ್ತಾದ್, ‘ಕಲ್ಯಾಣ ಕರ್ನಾಟಕವನ್ನು ಅಭಿವೃದ್ಧಿಯ ವಿಚಾರದಲ್ಲಿ ನಿರ್ಲಕ್ಷಿಸಲಾಗುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
‘ಈ ಭಾಗದ ವಿದ್ಯಾರ್ಥಿಗಳು ಹಾಗೂ ಯುವಕರಿಗೆ ಗುಣಮಟ್ಟದ ಶಿಕ್ಷಣ ಮತ್ತು ಉದ್ಯೋಗದ ಸಮಾನ ಅವಕಾಶಗಳು ದೊರೆಯಬೇಕು. ಸಾವಿರಾರು ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿದ್ದು, ಖಾಲಿ ಹುದ್ದೆಗಳನ್ನು ಭರ್ತಿ ಮಾಡದೆ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸಲು ಸಾಧ್ಯವಿಲ್ಲ. ಕಲ್ಯಾಣ ಕರ್ನಾಟಕದಲ್ಲಿ 30 ಸಾವಿರಕ್ಕೂ ಅಧಿಕ ಶಿಕ್ಷಕರ ಹುದ್ದೆಗಳು ಖಾಲಿ ಇರುವುದಾಗಿ’ ಎಂದು ಅವರು ಉಲ್ಲೇಖಿಸಿದರು.
“ಕಲ್ಯಾಣ ಕರ್ನಾಟಕದವರು ದಡ್ಡರಲ್ಲ. ಈ ನೆಲ ಕನ್ನಡ ಸಾಹಿತ್ಯಕ್ಕೆ ಮಹತ್ವದ ಕೊಡುಗೆ ನೀಡಿದೆ. ಆದರೂ ಅಭಿವೃದ್ಧಿಯಲ್ಲಿ ನಮಗೆ ಏಕೆ ಹಿಂದುಳಿದ ಸ್ಥಿತಿ?” ಎಂದು ಪ್ರಶ್ನಿಸಿದ ಅವರು, ಪ್ರಾದೇಶಿಕ ಅಸಮಾನತೆಯ ವಿರುದ್ಧ ಜನರು ಒಗ್ಗೂಡಿ ತಮ್ಮ ಹಕ್ಕುಗಳಿಗಾಗಿ ಧ್ವನಿ ಎತ್ತಬೇಕು ಎಂದು ಕರೆ ನೀಡಿದರು.
‘ಕಲ್ಯಾಣ ಕರ್ನಾಟಕದಲ್ಲಿ ಆಸ್ಪತ್ರೆಗಳು ಹಾಗೂ ವೈದ್ಯಕೀಯ ಸೌಲಭ್ಯಗಳ ಕೊರತೆಯಿದ್ದು, ಬೆಂಗಳೂರು–ಮೈಸೂರು ಭಾಗಕ್ಕೆ ದೊರೆಯುವ ಮಟ್ಟದ ಆರೋಗ್ಯ ಸೇವೆಗಳು ಈ ಭಾಗಕ್ಕೂ ದೊರೆಯಬೇಕು. ಜನಸಂಖ್ಯೆಗೆ ಅನುಗುಣವಾಗಿ ಆಸ್ಪತ್ರೆಗಳು, ವೈದ್ಯರು ಹಾಗೂ ಮೂಲಸೌಕರ್ಯ ಒದಗಿಸಬೇಕು’ ಎಂದರು.
‘371(ಜೆ) ಒಂದೇ ಸಮಸ್ಯೆಗೆ ಪರಿಹಾರ ನೀಡುವ ಸಾಧನವಲ್ಲ. ಸರ್ಕಾರದ ಎಲ್ಲ ಅಭಿವೃದ್ಧಿ ನೀತಿಗಳಲ್ಲಿಯೂ ಈ ಭಾಗದ ಹಿಂದುಳಿದಿರುವಿಕೆಯನ್ನು ಪರಿಗಣಿಸಿ ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು’ ಎಂದು ಹೇಳಿದರು.
13 ವರ್ಷಗಳಾದರೂ ಪ್ರಶ್ನೆಗಳು ಉಳಿದಿವೆ
‘371(ಜೆ) ಅನುಷ್ಠಾನಕ್ಕೆ ಸಂಬಂಧಿಸಿದಂತೆ ಕಳೆದ 13 ವರ್ಷಗಳಲ್ಲಿ ಸುಮಾರು ಒಂದು ಸಾವಿರ ಪ್ರಕರಣಗಳನ್ನು ಎದುರಿಸುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ 371(ಜೆ) ನಿಯಮಗಳ ಅನುಷ್ಠಾನದಲ್ಲಿನ ಗೊಂದಲಗಳನ್ನು ನಿವಾರಿಸಿ, ಅರ್ಹರಿಗೆ ಸೌಲಭ್ಯಗಳು ತಲುಪುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂದು ರಜಾಕ್ ಉಸ್ತಾದ್ ಒತ್ತಾಯಿಸಿದರು.
‘ಕೆಕೆಆರ್ಡಿಬಿಗೆ ಸಾವಿರಾರು ಕೋಟಿ ರೂಪಾಯಿ ಅನುದಾನ ನೀಡಿರುವುದು ಈ ಭಾಗದ ಅಭಿವೃದ್ಧಿಯ ಅಂತಿಮ ಪರಿಹಾರವಲ್ಲ. ಮಂಡಳಿಯ ಅನುದಾನವನ್ನು ಮೂಲಭೂತ ಅಸಮಾನತೆ ನಿವಾರಿಸುವ ರೀತಿಯಲ್ಲಿ ಬಳಸಬೇಕು. ಹಲವು ವರ್ಷಗಳಿಂದ ಅನುದಾನ ಬಿಡುಗಡೆಯಾದರೂ ಇನ್ನೂ ನೂರಾರು ಗ್ರಾಮಗಳಿಗೆ ಸಮರ್ಪಕ ಸಾರಿಗೆ ಸೌಲಭ್ಯವಿಲ್ಲದಿರುವುದು ಅಸಮಾನತೆಯ ಗಂಭೀರತೆಯನ್ನು ತೋರಿಸುತ್ತದೆ’ ಎಂದರು.
‘ಶಾಲೆ, ಆಸ್ಪತ್ರೆ, ಅಂಗನವಾಡಿ ಹಾಗೂ ಇತರ ಮೂಲಸೌಕರ್ಯಗಳನ್ನು ನಿರ್ಮಿಸುವ ಜವಾಬ್ದಾರಿ ಸಂಬಂಧಿಸಿದ ಇಲಾಖೆಗಳು ಮತ್ತು ಸರ್ಕಾರದ್ದಾಗಿದೆ. ಕೆಕೆಆರ್ಡಿಬಿ ಅನುದಾನವು ಪ್ರದೇಶದ ಹಿಂದುಳಿದಿರುವಿಕೆ ನಿವಾರಣೆ ಹಾಗೂ ಮಾನವ ಅಭಿವೃದ್ಧಿಗೆ ಪೂರಕವಾಗಿರಬೇ’ಕು ಎಂದು ಹೇಳಿದರು.
‘ಸರ್ಕಾರ ಉದ್ಯೋಗ ಸೃಷ್ಟಿಯ ಲೆಕ್ಕ ನೀಡಲಿ’
ಕಾರ್ಯಕ್ರಮದಲ್ಲಿ ಮಾತನಾಡಿದ ಮೀನಾಕ್ಷಿ ಬಾಳಿ, ‘ಕಲ್ಯಾಣ ಕರ್ನಾಟಕದ ಇತಿಹಾಸ, ಭಾಷೆ ಹಾಗೂ ಸಾಮಾಜಿಕ ಕೊಡುಗೆಗಳನ್ನು ನೆನಪಿಸಿದರು. ಈ ಭಾಗವು ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಗೆ ನೀಡಿರುವ ಕೊಡುಗೆಯನ್ನು ನಿರ್ಲಕ್ಷಿಸಲಾಗದು’ ಎಂದರು.
‘ಕಲ್ಯಾಣ ಕರ್ನಾಟಕದಲ್ಲಿ ಹತ್ತಿ, ತೊಗರಿ, ಚಿನ್ನ ಹಾಗೂ ಅಕ್ಕಿ ಸೇರಿದಂತೆ ವಿವಿಧ ಸಂಪನ್ಮೂಲಗಳಿದ್ದರೂ ವರ್ಷವಿಡೀ ಸ್ಥಳೀಯವಾಗಿ ಉದ್ಯೋಗ ದೊರೆಯದ ಕಾರಣ ಜನರು ವಲಸೆ ಹೋಗುವ ಪರಿಸ್ಥಿತಿ ಮುಂದುವರಿದಿದೆ. ಸರ್ಕಾರ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡಿದೆ. ಅದರಿಂದ ಎಷ್ಟು ಉದ್ಯೋಗ ಸೃಷ್ಟಿಯಾಗಿದೆ ಎಂಬುದರ ಕುರಿತು ಸರ್ಕಾರ ಸ್ಪಷ್ಟ ಲೆಕ್ಕ ನೀಡಬೇಕು’ ಎಂದು ಆಗ್ರಹಿಸಿದರು.
‘ಬಾಲ್ಯವಿವಾಹ ಹೆಚ್ಚಿರುವ ಪ್ರದೇಶಗಳಲ್ಲಿ ಶಿಕ್ಷಣ, ಉದ್ಯೋಗ, ಉತ್ತಮ ವಸತಿ ಹಾಗೂ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಮೂಲಕ ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ, ದುಡಿಯುವ ವರ್ಗಕ್ಕೆ ಉದ್ಯೋಗ ಹಾಗೂ ಕುಟುಂಬಗಳಿಗೆ ಅಗತ್ಯ ಸೌಲಭ್ಯ ದೊರೆತಾಗ ಮಾತ್ರ ವಲಸೆ ಮತ್ತು ಬಾಲ್ಯವಿವಾಹದಂತಹ ಸಮಸ್ಯೆಗಳನ್ನು ತಗ್ಗಿಸಲು ಸಾಧ್ಯ’ ಎಂದು ಹೇಳಿದರು.
‘ಜನರನ್ನು ವೈಜ್ಞಾನಿಕವಾಗಿ ಬೆಳೆಸುವ ಶಿಕ್ಷಣ ವ್ಯವಸ್ಥೆ ರೂಪಿಸುವುದು ಸರ್ಕಾರದ ಜವಾಬ್ದಾರಿ. ಧರ್ಮದ ಹೆಸರಿನಲ್ಲಿ ಜನರನ್ನು ವಿಭಜಿಸುವ ಬದಲು ವೈಜ್ಞಾನಿಕ ಮನೋಭಾವ ಮತ್ತು ಸಾಮಾಜಿಕ ಸಮಾನತೆಗೆ ಆದ್ಯತೆ ನೀಡಬೇಕು’ ಎಂದು ಅವರು ಹೇಳಿದರು.
371(ಜೆ) ಸಮರ್ಪಕ ಅನುಷ್ಠಾನಕ್ಕೆ 16 ಬೇಡಿಕೆ
ಸಮಾವೇಶದಲ್ಲಿ ಮಾತನಾಡಿದ ಚಾಮರಾಜ ಮಾಲಿಪಾಟೀಲ್, 371(ಜೆ) ಸಮರ್ಪಕ ಅನುಷ್ಠಾನ ಸೇರಿದಂತೆ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಸಂಬಂಧಿಸಿದ 16 ಪ್ರಮುಖ ಬೇಡಿಕೆಗಳ ಮನವಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುತ್ತಿದೆ ಎಂದು ತಿಳಿಸಿದರು.
‘ಕಲ್ಯಾಣ ಕರ್ನಾಟಕದಲ್ಲಿ ಖಾಲಿ ಇರುವ ಸುಮಾರು 30 ಸಾವಿರ ಶಿಕ್ಷಕರ ಹುದ್ದೆ ಹಾಗೂ ವಿವಿಧ ಇಲಾಖೆಗಳ ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು. 371(ಜೆ)ಗೆ ಸಂಬಂಧಿಸಿದ ನೇಮಕಾತಿ ಮತ್ತು ಬಡ್ತಿ ಪ್ರಕರಣಗಳ ವಿಚಾರಣೆಗೆ ಕಲಬುರಗಿಯಲ್ಲಿ ಪ್ರತ್ಯೇಕ ಆಡಳಿತಾತ್ಮಕ ನ್ಯಾಯಮಂಡಳಿ ಸ್ಥಾಪಿಸಬೇಕು’ ಎಂದು ಒತ್ತಾಯಿಸಲಾಗಿದೆ.
‘ಕೆಪಿಎಸ್ಸಿ ಮತ್ತು ಕೆಇಎ ಪ್ರಾದೇಶಿಕ ಕಚೇರಿಗಳನ್ನು ಕಲ್ಯಾಣ ಕರ್ನಾಟಕದಲ್ಲಿ ಸ್ಥಾಪಿಸುವುದು, ಗುಲ್ಬರ್ಗಾ, ರಾಯಚೂರು ಹಾಗೂ ಬಳ್ಳಾರಿ ವಿಶ್ವವಿದ್ಯಾಲಯಗಳ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವುದು, ಹೊಸ ವಿಶ್ವವಿದ್ಯಾಲಯಗಳಿಗೆ ವಿಶೇಷ ಅನುದಾನ ನೀಡುವುದು ಹಾಗೂ 371(ಜೆ)
ಅನುಷ್ಠಾನ ಪ್ರಾಧಿಕಾರ ರಚಿಸುವ ಬೇಡಿಕೆಯನ್ನೂ ಮುಂದಿಡಲಾಗಿದೆ’ ಎಂದು ತಿಳಿಸಿದರು.
‘ಸ್ಥಳೀಯ ವೃಂದದ ನೌಕರರ ಬಡ್ತಿ ಸಮಸ್ಯೆ ಪರಿಹರಿಸಬೇಕು. ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆಗೆ ಕೇಂದ್ರದ ಮೇಲೆ ಒತ್ತಡ ಹೇರಬೇಕು. ಬಳ್ಳಾರಿಯ ಜೀನ್ಸ್ ಘಟಕಗಳನ್ನು ಬಲಪಡಿಸಿ ಇತರ ಜಿಲ್ಲೆಗಳಿಗೂ ವಿಸ್ತರಿಸಬೇಕು. ಕಲಬುರಗಿಯ ಪಿಎಂ ಮೆಗಾ ಟೆಕ್ಸ್ಟೈಲ್ ಪಾರ್ಕ್ನ್ನು ಕಾಲಮಿತಿಯಲ್ಲಿ ಆರಂಭಿಸಿ ಉದ್ಯೋಗ ಸೃಷ್ಟಿಸಬೇಕು’ ಎಂದು ಆಗ್ರಹಿಸಲಾಗಿದೆ.
‘ಕಲ್ಯಾಣ ಕರ್ನಾಟಕಕ್ಕೆ ಹಂಚಿಕೆಯಾಗಿರುವ ಕೃಷ್ಣಾ ನದಿ ನೀರಿನ ಸದ್ಬಳಕೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ರಾಯಚೂರು ಭಾಗದ ಚಿನ್ನದ ನಿಕ್ಷೇಪಗಳನ್ನು ಬಳಸಿಕೊಂಡು ಉದ್ಯೋಗ ಸೃಷ್ಟಿಸಬೇಕು. ಹೈನುಗಾರಿಕೆಗೆ ವಿಶೇಷ ಯೋಜನೆ ರೂಪಿಸಬೇಕು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರು ಮತ್ತು ಸಿಬ್ಬಂದಿಯನ್ನು ನೇಮಿಸಬೇಕು’ ಎಂದು ಬೇಡಿಕೆ ಇಡಲಾಗಿದೆ.
‘ಕೆಕೆಆರ್ಡಿಬಿ ಅನುದಾನವನ್ನು ತಾಲೂಕುವಾರು ಹಂಚಿಕೆ ಮಾಡುವ ಬದಲು ಪ್ರದೇಶದ ಹಿಂದುಳಿದಿರುವಿಕೆ ಮತ್ತು ಮಾನವ ಅಭಿವೃದ್ಧಿಯ ಆಧಾರದ ಮೇಲೆ ದೀರ್ಘಾವಧಿಯ ಕ್ರಿಯಾಯೋಜನೆ ರೂಪಿಸಬೇಕು. ಮಂಡಳಿಯ ಯೋಜನೆ ರೂಪಿಸುವ ಪ್ರಕ್ರಿಯೆಗೆ ಹೆಚ್ಚಿನ ಸ್ವಾಯತ್ತತೆ ನೀಡಬೇಕು ಹಾಗೂ ರಾಜ್ಯದ ಅನುದಾನಕ್ಕೆ ಸಮಾನವಾಗಿ ಕೇಂದ್ರದಿಂದಲೂ ಅನುದಾನ ಪಡೆಯಲು ಕ್ರಮ ಕೈಗೊಳ್ಳಬೇಕು’ ಎಂದು ಸಮಿತಿ ಒತ್ತಾಯಿಸಿದೆ.
‘ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಕೇವಲ ಅನುದಾನ ಘೋಷಣೆ ಅಥವಾ 371(ಜೆ) ಮೀಸಲಾತಿಗೆ ಸೀಮಿತವಾಗದೆ, ಶಿಕ್ಷಣ, ಆರೋಗ್ಯ, ಉದ್ಯೋಗ, ನೀರಾವರಿ ಮತ್ತು ಮಾನವ ಅಭಿವೃದ್ಧಿಯನ್ನು ಒಳಗೊಂಡ ಸಮಗ್ರ ಯೋಜನೆಯಾಗಬೇಕು. ಪ್ರಾದೇಶಿಕ ಅಸಮಾನತೆ ನಿವಾರಣೆಯಾಗುವವರೆಗೆ ಹೋರಾಟ ಮುಂದುವರಿಸಲಾಗುವುದು’ ಎಂದು ಸಮಿತಿ ಮುಖಂಡರು ಎಚ್ಚರಿಸಿದರು.
ಕಾರ್ಯಕ್ರಮದಲ್ಲಿ ಕೆ ನೀಲಾ, ಪ್ರೊ ಆರ್ ಕೆ ಹುಡಗಿ, ಬಡಗಲಪುರ್ ನಾಗೇಂದ್ರಪ್ಪ, ಜೆ ಎಂ ವೀರಸಂಗ್ಯ, ಲವಿತ್ರ, ಸುಜಾತ ಸೇರಿದಂತೆ ಮಾತನಾಡಿದರು.
ಸಮಾವೇಶದಲ್ಲಿ ದಸಂಸ ಹಿರಿಯ ಮುಖಂಡ ಅರ್ಜುನ ಭದ್ರೆ, ಮರಿಯಪ್ಪ ಹಳ್ಳಿ, ಹರವಿ ನಾಗನಗೌಡ, ರಾಘವೇಂದ್ರ ಕುಷ್ಟಗಿ, ಸಿ.ಪನ್ನರಾಜ್, ಜಾನ್ವೆಸ್ಲಿ, ಬಿ.ಬಸವರಾಜ, ಹರವಿ ನಾಗನಗೌಡ, ಮಲ್ಲಯ್ಯ, ಮಲ್ಲಿಕಾರ್ಜುನ ಸತ್ಯಂಪೇಟೆ, ಪಂಡೀತ ರಾವ್ ಚಿದ್ರಿ, ನಾಗೇಂದ್ರ ತಂಬೆ, ಕರುಣ ನಿಧಿ, ಮಲ್ಲಿಕಾರ್ಜುನ ರೆಡ್ಡಿ, ಸಂತೋಷ ದೇಶಪಾಂಡೆ, ಬುಡ್ಡನಗೌಡ ಜಾಗಟಗಲ, ಬೂದೆಯ್ಯಸ್ವಾಮಿ, ಕೆ.ಜಿ ವೀರೇಶ, ಚನ್ನಬಸವ ಜಾನೆಕಲ್ಲ, ವಿದ್ಯಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.





